Advertisement

ವೇಸ್ಟ್‌ ಟು ಎನರ್ಜಿಗೆ ವೇಗ ನೀಡದ ಬಿಬಿಎಂಪಿ

10:47 AM May 03, 2022 | Team Udayavani |

ಬೆಂಗಳೂರು: ಈ ಮೊದಲು ಕಸದಿಂದ ವಿದ್ಯುತ್‌ ಉತ್ಪಾದಿಸುವ ಕನಸಿನ ಯೋಜನೆಗೆ ಖಾಸಗಿ ಕಂಪನಿಗಳು ಮುಂದೆ ಬರುತ್ತಿರಲಿಲ್ಲ. ಈಗ ಸ್ವತಃ ಸರ್ಕಾರದ ಅಂಗಸಂಸ್ಥೆ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌)ವೇ ಯೋಜನೆ ಕೈಗೆತ್ತಿಕೊಂಡಿದೆ. ಆದರೆ, ಇದಕ್ಕೆ ಬಿಬಿಎಂಪಿ ನಿಯಮಿತವಾಗಿ ತನ್ನ ಪಾಲಿನ ಹಣವನ್ನೇ ನೀಡುತ್ತಿಲ್ಲ. ಇದು ಮತ್ತೊಂದು ರೀತಿಯ ಸಮಸ್ಯೆ ಸೃಷ್ಟಿಗೆ ಎಡೆಮಾಡಿಕೊಡುವ ಲಕ್ಷಣಗಳು ಕಂಡುಬರುತ್ತಿವೆ.

Advertisement

ಸುಮಾರು 260 ಕೋಟಿ ರೂ. ವೆಚ್ಚದಲ್ಲಿ ಬಿಡದಿಯಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನೆ (ವೇಸ್ಟ್‌ ಟು ಎನರ್ಜಿ) ಮಾಡುವ ಯೋಜನೆಗೆ 2020ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಿದ್ದು, ವರ್ಷಾಂತ್ಯಕ್ಕೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಕೆಪಿಸಿಎಲ್‌ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೇ. 50ರಷ್ಟು ಅಂದರೆ ತಲಾ 130 ಕೋಟಿ ವೆಚ್ಚ ಭರಿಸುವ ಮೂಲಕ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಇದನ್ನು ಯೋಜನೆಗಳ ಪ್ರಗತಿಗೆ ಅನುಗುಣವಾಗಿ ಎರಡೂ ಸಂಸ್ಥೆಗಳು ಹಂತ-ಹಂತವಾಗಿ ಹಣ ನೀಡಬೇಕಾಗುತ್ತದೆ. ಆರಂಭದಲ್ಲಿ ತಲಾ 10 ಕೋಟಿ ವಿನಿಯೋಗಿಸಿದ್ದು, ಇದಕ್ಕೆ ಪ್ರತಿಯಾಗಿ “ಯುಟಿಲೈಸೇಷನ್‌ ಪ್ರಮಾಣಪತ್ರ’ ಕೂಡ ದೊರೆತಿದೆ.

ಎರಡನೇ ಹಂತದಲ್ಲಿ ತಲಾ 30 ಕೋಟಿ ನೀಡಬೇಕಿದ್ದು, ಕೆಪಿಸಿಎಲ್‌ ತನ್ನ ಪಾಲಿನ ಹಣ ಬಿಡುಗಡೆ ಮಾಡಿದೆ. ಆದರೆ, ಪಾಲಿಕೆಯಿಂದ ನಾಲ್ಕು ತಿಂಗಳಾದರೂ ಹಣ ಬಿಡುಗಡೆ ಆಗಿಲ್ಲ. ಈ ಸಂಬಂಧ ಮೂರು ಬಾರಿ ಕೆಪಿಸಿಎಲ್‌ನಿಂದ ಪತ್ರ ಬರೆಯಲಾಗಿದೆ. ತಿಂಗಳ ಹಿಂದಷ್ಟೇ ಸರ್ಕಾರದಿಂದ ಪಾಲಿಕೆಗೆ ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಿಂದಲೂ ಯೋಜನೆಗೆ ಹಣ ಬಿಡುಗಡೆ ಆಗಿಲ್ಲ. ಈ ವಿಳಂಬ ಧೋರಣೆ ಮುಂದುವರಿದರೆ, ಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಯೋಜನೆ ಅಡಿ ಪುನರ್‌ಬಳಕೆ ಸಾಧ್ಯವಿಲ್ಲದ ಕಸ (ಆರ್‌ಡಿಎಫ್)ವನ್ನು ಸುಟ್ಟು ಅದರಿಂದ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಸುಮಾರು 600 ಟನ್‌ ನಗರದ ತ್ಯಾಜ್ಯವು ಇದಕ್ಕೆ ಪೂರೈಸಲಾಗುತ್ತದೆ. ಇದರಿಂದ 11.5 ಮೆ.ವಾ. ವಿದ್ಯುತ್‌ ಉತ್ಪಾದಿಸಿ, ಸರಬರಾಜು ಮಾಡಲಾಗುತ್ತದೆ. 2023ರ ಮಾರ್ಚ್‌ ವೇಳೆಗೆ ಇದನ್ನು ಲೋಕಾರ್ಪಣೆ ಮಾಡುವ ಗುರಿಯನ್ನು ಕೆಪಿಸಿಎಲ್‌ ಹೊಂದಿದೆ. ಪ್ರಸ್ತುತ ಶೇ. 35ರಿಂದ 40ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 35-40 ಕೋಟಿ ರೂ. ಖರ್ಚಾಗಿದೆ. ಕೆಪಿಸಿಎಲ್‌ ಈ ಯೋಜನೆಗಾಗಿ ತನ್ನ ಪಾಲಿನ ಹಣ ಭರಿಸಲು ಬ್ಯಾಂಕ್‌ನಿಂದ ಸಾಲ ಮಾಡಿದೆ ಎಂದು ನಿಗಮದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಸರ್ಕಾರಿ ಸಂಸ್ಥೆ ಎಂಬ ಉದಾಸೀನ?

Advertisement

ಎರಡೂ ಸರ್ಕಾರಿ ಸಂಸ್ಥೆಗಳೇ ಆಗಿದ್ದರಿಂದ ಹಣ ಬಿಡುಗಡೆ ವಿಳಂಬದಿಂದ ಯೋಜನೆಗೆ ಯಾವುದೇ ಸಮಸ್ಯೆ ಆಗದು ಎಂಬ ಉದಾಸೀನ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ, ಯೋಜನೆಗಳಿಗೆ ಜೇಷ್ಠತೆ ಆಧಾರದಲ್ಲಿ ಹಣ ನೀಡಲಾಗುತ್ತಿದೆ. ಉದ್ದೇಶಿತ ವೇಸ್ಟ್‌ ಟು ಎನರ್ಜಿ ಯೋಜನೆಗೆ ಹಣ ಬಿಡುಗಡೆಯಾಗದಿರಲು ಇದು ಕೂಡ ಕಾರಣ ಇರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.

“ಈಗಾಗಲೇ ತನ್ನ ಪಾಲಿನ ಹಣ ಬಿಡುಗಡೆ ಮಾಡುವಂತೆ ಪಾಲಿಕೆಗೆ ಮೂರು ಬಾರಿ ಪತ್ರ ಬರೆಯಲಾಗಿದೆ. ಖುದ್ದು ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರಿಗೂ ಮನವಿ ಮಾಡಿದ್ದೇವೆ. ಈ ಮಧ್ಯೆ ಯೋಜನೆಗೆ ಯಾವುದೇ ತೊಂದರೆ ಯಾಗಿಲ್ಲ. ನಿಗದಿತ ಗುರಿಯಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಸ್ಪಷ್ಟಪಡಿಸಿದರು.

“ಕೆಪಿಸಿಎಲ್‌ನಿಂದ ಪಾಲಿಕೆಗೆ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆಯಲಾಗಿದೆ. ಎಷ್ಟು ಕೇಳಿದ್ದಾರೆ ಎಂಬುದು ನಿಖರವಾಗಿ ತಕ್ಷಣಕ್ಕೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಆದ್ಯತೆ ಮೇರೆಗೆ ಹಣ ಬಿಡುಗಡೆ ಮಾಡಲಾಗುವುದು. ಇದರಿಂದ ಯೋಜನೆಗೆ ಯಾವುದೇ ಅಡತಡೆಯಾಗದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ತುಳಸಿ ಮದ್ದಿನೇನಿ ತಿಳಿಸಿದರು.

ಯೋಜನೆ ಜಾರಿಯಾದರೆ 35 ಸಾವಿರ ಮನೆಗೆ ವಿದ್ಯುತ್‌! “ಆತ್ಮನಿರ್ಭರ ಭಾರತ’ ಯೋಜನೆ ಅಡಿ ನಿರ್ಮಾಣ ಗೊಳ್ಳಲಿರುವ ಈ ವಿದ್ಯುತ್‌ ಸ್ಥಾವರದಿಂದ ಒಂದು ವಿಧಾನಸಭಾ ಕ್ಷೇತ್ರದ ಮನೆಗಳಿಗೆ ಬೇಕಾಗುವಷ್ಟು ವಿದ್ಯುತ್‌ ಬೇಡಿಕೆಯನ್ನು ಪೂರೈಸಬಹುದು. 600 ಟನ್‌ ಕಸದಿಂದ ಸುಮಾರು 11.5 ಮೆ.ವಾ. ವಿದ್ಯುತ್‌ ಉತ್ಪಾದನೆ ಆಗುತ್ತದೆ. ಇದರಿಂದ 35 ಸಾವಿರ ಮನೆಗಳಿಗೆ ವಿದ್ಯುತ್‌ ಪೂರೈಸಬಹುದಾಗಿದ್ದು, ಇದು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮನೆಗಳಿಗೆ ಸಮ ಎಂದು ಅಂದಾಜಿಸಲಾಗಿದೆ.

ವಾರ್ಷಿಕ 14 ಕೋಟಿ ಪಾಲಿಕೆಗೆ ಉಳಿತಾಯ

ನಗರದಲ್ಲಿ ನಿತ್ಯ 4,000ರಿಂದ 4,500 ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇ. 60ರಷ್ಟು ಹಸಿ ಮತ್ತು ಶೇ. 40ರಷ್ಟು ಒಣತ್ಯಾಜ್ಯ ಬರುತ್ತದೆ. ವಿದ್ಯುತ್‌ ಸ್ಥಾವರಕ್ಕೆ 600 ಟನ್‌ ಪೂರೈಸುವುದರಿಂದ ಇದರ ವಿಲೇವಾರಿ ವೆಚ್ಚ ವಾರ್ಷಿಕ 14 ಕೋಟಿ ರೂ. ಪಾಲಿಕೆಗೆ ಉಳಿತಾಯ ಆಗಲಿದೆ.

ವಿಜಯಕುಮಾರ್ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next