Advertisement

ಪನ್ನೆಯ ಎರಡು ಕುಟುಂಬಗಳಿಗೆ ಕತ್ತಲೆಯೇ ಬದುಕು

08:05 AM May 18, 2018 | Karthik A |

ಸುಬ್ರಹ್ಮಣ್ಯ: ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಾಳುಗೋಡು ಗ್ರಾಮದ ಪನ್ನೆ ಎಂಬಲ್ಲಿ ಪರಿಶಿಷ್ಟ ಜಾತಿಯ ಎರಡು ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳಿಗೆ ಮೂಲಸೌಕರ್ಯಗಳೇ ಇಲ್ಲದೆ ಕತ್ತಲೆಯೇ ಬದುಕಾಗಿದೆ. ಕಾಳಿ (80) ಎಂಬ ವೃದ್ಧೆ ತನ್ನ ಕುಟುಂಬದ ಜತೆ ಇಲ್ಲಿ ವಾಸವಿದ್ದರೆ, ಪಕ್ಕದಲ್ಲೇ ಮಗ ಚಂದ್ರಶೇಖರ್‌ ಕುಟುಂಬದ ಮನೆಯಿದೆ. ದಶಕಗಳಿಂದ ಇಲ್ಲಿ ವಾಸವಿರುವ ಈ ಕುಟುಂಬಗಳ ಬಳಿಗೆ ಸೌಕರ್ಯಗಳು ಸುಳಿದಿಲ್ಲ. ಈ ಕುಟುಂಬಗಳಲ್ಲಿ ಎಳೆಯ ವಯಸ್ಸಿನ ಮಕ್ಕಳು, ವೃದ್ಧೆ, ಪುರುಷರು, ಮಹಿಳೆಯರ ಸಹಿತ 10ಕ್ಕೂ ಅಧಿಕ ಜನರಿದ್ದಾರೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳೂ ಇದ್ದಾರೆ. ಮಳೆಗಾಲದಲ್ಲಿ ಒಳನುಗ್ಗುವ ಮಳೆ ನೀರು ಇವರ ನಿದ್ದೆಗೆಡಿಸುತ್ತಿದೆ.

Advertisement

ಹಲವು ವರ್ಷಗಳಿಂದ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಿದ್ದರೂ ಸೌಲಭ್ಯಗಳು ಸಿಕ್ಕಿಲ್ಲ. ಕೆಲ ದಿನಗಳ ಹಿಂದೆಯಷ್ಟೆ ವಿಧಾನಸಭಾ ಚುನಾವಣೆ ನಡೆದಿದೆ. ಮತ ಕೇಳಲು ಬಂದವರ ಬಳಿಯೂ ಇವರು ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಬಾರಿ ಖಂಡಿತ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಭರವಸೆಯೂ ದೊರಕಿದೆ. ಇನ್ನಾದರೂ ನಮ್ಮ ಕುಟುಂಬಗಳಿಗೆ ಬೆಳಕು ಹರಿಯಬಹುದು, ಸಮಸ್ಯೆ ಸುಧಾರಿಸ ಬಹುದು ಎಂಬ ನಿರೀಕ್ಷೆ ಯಲ್ಲಿ ಮನೆ ಮಂದಿ ಇದ್ದಾರೆ.


ಶೌಚಾಲಯ, ನೀರು, ವಿದ್ಯುತ್ತಿಲ್ಲ

ರಸ್ತೆಗೆ ಹೊಂದಿಕೊಂಡೆ ಮನೆಗಳಿವೆ. ಆದರೂ ಸೌಕರ್ಯಗಳು ಇಲ್ಲ. ಕಾಲನಿಯಲ್ಲಿ ಶೌಚಾಲಯವಿದ್ದರೂ ನೆಪಕ್ಕಷ್ಟೇ ಎಂಬಂತಿದೆ. ಅದು ಸೂಕ್ತವಾಗಿಲ್ಲ. ನಿರಂತರ ನೀರು, ವಿದ್ಯುತ್‌ ವ್ಯವಸ್ಥೆ ಇಲ್ಲ.  ಇನ್ನೂ ವಿಶೇಷವೆಂದರೆ, ಈ ಮನೆಗಳಿಗೆ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಸಲ್ಲಿಸಿರುವ ಅರ್ಜಿಯ ಸ್ಥಿತಿಗತಿ ಏನು ಎಂಬ ಬಗ್ಗೆಯೂ ಮಾಹಿತಿಯಿಲ್ಲ. 

ಪಡಿತರ ಚೀಟಿ ಹೊರತುಪಡಿಸಿದರೆ ಬೇರಾವ ಸೌಕರ್ಯವೂ ಒದಗಿಲ್ಲ. ಕುಡಿಯುವ ನೀರೇನೋ ಬರುತ್ತಿದೆ. ಆದರೆ, ಬಟ್ಟೆ ಒಗೆಯಲು, ಸ್ನಾನಕ್ಕೆ ಸಮೀಪದ ಹೊಳೆಗೋ ಯಾರದಾದರೂ ಮನೆಗೋ ಹೋಗಬೇಕು. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಸರಕಾರ, ಸ್ಥಳೀಯಾಡಳಿತ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ನಮ್ಮ ಸಮಸ್ಯೆಗೂ ಸ್ಪಂದಿಸಿ ಎನ್ನುತ್ತಾರೆ ಸ್ಥಳೀಯರು.

ಭರವಸೆ ಇಲ್ಲದಂತಾಗಿದೆ
ಸೌಲಭ್ಯ ದೊರೆಯುತ್ತದೆ ಎಂದು ನಂಬಿದ್ದೆವು ಹಕ್ಕು ಪತ್ರಕ್ಕೆ 94 ಸಿ ಮೂಲಕ ಅರ್ಜಿ ಸಲ್ಲಿಸಿದ್ದೆವು. ಅದಾದರೂ ದೊರೆಯುತ್ತದೆ ಎಂಬ ಆಶಾವಾದವಿತ್ತು. ಈಗ ಭರವಸೆ ಕಳೆದುಹೋಗುತ್ತಿದೆ ಎನ್ನುತ್ತಾರೆ, ಕುಟುಂಬದ ನಿವಾಸಿ ಚಂದ್ರಶೇಖರ ಪನ್ನೆ.

Advertisement

ಚುನಾವಣೆ ವೇಳೆ ಎಲ್ಲರೂ ಬಂದು ಭರವಸೆಗಳನ್ನು ನೀಡುತ್ತಾರೆ. ಎಲ್ಲ ಸೌಲಭ್ಯ ಕಲ್ಪಿಸುತ್ತೇವೆಂದು ಹೇಳುತ್ತಾರೆ. ಚುನಾವಣೆ ಮುಗಿದ ಮೇಲೆ ಇತ್ತ ಗಮನ ಹರಿಸುವುದಿಲ್ಲ. ಇದು ಬೇಸರ ತರಿಸುತ್ತಿದೆ ಎನ್ನುತ್ತಾರೆ ವೃದ್ಧೆ ಕಾಳಿ ಅವರು. ಈ ಬಾರಿ ಕುಟುಂಬದ ಸದಸ್ಯರೆಲ್ಲರೂ ಮತ ಚಲಾಯಿಸಿದ್ದಾರೆ. ಅದೇ ರೀತಿ, ಜನಪ್ರತಿನಿಧಿಗಳೂ ತಮ್ಮ ಜವಾಬ್ದಾರಿ ನಿರ್ವಹಿಸಲಿ ಎಂದು ಆಗ್ರಹಿಸಿದ್ದಾರೆ.

ಮುರುಕು ಜೋಪಡಿಗಳು
ಎರಡು ಮನೆಗಳಲ್ಲಿ ಛಾವಣಿಗೆ ಟಾರ್ಪಲ್‌ ಹಾಸಿಕೊಂಡಿವೆ. ಮಣ್ಣಿನಿಂದ ನಿರ್ಮಿಸಿದ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯೊಳಕ್ಕೆ ಹೊಕ್ಕು ಮೇಲಕ್ಕೆ ನೋಡಿದರೆ ಛಾವಣಿಯಲ್ಲಿನ ರಂಧ್ರಗಳು ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸಲು ಅನುಕೂಲವಾದಂತಿವೆ. ಧರೆಗುರುಳಲು ಸಿದ್ಧವಾದ ಜೋಪಡಿಗಳ ಒಳಗೆ ದಶಕಗಳಿಂದ ಎರಡೂ ಕುಟುಂಬಗಳು ಅಸಹಾಯಕ ಸ್ಥಿತಿಯಲ್ಲಿ ದಿನ ದೂಡುತ್ತಿವೆ.

ಪರಿಶೀಲಿಸುವೆ
ಸೌಕರ್ಯ ವಂಚಿತ ಎರಡು ಕುಟುಂಬಗಳು ಮೂಲ ಸವಲತ್ತು ಕೋರಿ ಪಂಚಾಯತ್‌ ಗೆ ಅರ್ಜಿ ಸಲ್ಲಿಸಿವೆಯೇ ಎಂಬ ಕುರಿತು ಪರಿಶೀಲಿಸುತ್ತೇನೆ. ಅರ್ಜಿ ಸಲ್ಲಿಸದೆ ಇದ್ದಲ್ಲಿ ಅವರ ಗಮನಕ್ಕೆ ತಂದು ಅರ್ಜಿ ಸಲ್ಲಿಸುವಂತೆ ತಿಳಿಸುತ್ತೇನೆ. ಸಮಸ್ಯೆಗಳಿದ್ದಲ್ಲಿ ಈ ಬಗ್ಗೆ ಗಮನ ಹರಿಸುತ್ತೇನೆ.
-ವಿದ್ಯಾಧರ, ಪಿಡಿಒ, ಹರಿಹರ ಗ್ರಾ.ಪಂ.

— ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next