Advertisement

ಪ್ರಜಾಪ್ರಭುತ್ವ ಪರಿಕಲ್ಪನೆ ನೀಡಿದ ಬಸವಣ್ಣವರು

05:51 PM Nov 29, 2021 | Team Udayavani |

ಲೋಕಾಪುರ: ಒಂದು ಸಾವಿರ ವರ್ಷದ ಹಿಂದೆಯೇ ರಾಜ ಮಹಾರಾಜರು ಆಳುವ ಕಾಲದಲ್ಲಿಯೇ ಪ್ರಜಾಪ್ರಭುತ್ವದ ಧರ್ಮವನ್ನು ಮೊಟ್ಟ ಮೊದಲು ತಂದವರು ಬಸವಣ್ಣನವರು ಎಂದು ಮುಂಡರಗಿಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುಬಸವ ಸತ್ಸಂಗ ಸಮಿತಿ ಸಹಯೋಗದಲ್ಲಿ ಚೆನ್ನಬಸವಣ್ಣನವರ ಜಯಂತಿ ಹಾಗೂ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನ ಎಂದರೆ ಪ್ರಜಾಪ್ರಭುತ್ವದ ಧರ್ಮ ಗ್ರಂಥ, ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದೆ. ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ.

ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಪ್ರಪಂಚಕ್ಕೆ ಕೊಟ್ಟವರು. ಅದನ್ನು ಜಾರಿಗೆ ತಂದವರು ಬಸವಣ್ಣನವರು ಎಂದರು. ಅಸಮಾನತೆ ತೊಡೆದು ಹಾಕಿ ಸಮಸಮಾಜ ನಿರ್ಮಾಣ ಮಾಡುವ ಸಲುವಾಗಿ ಬಸವಣ್ಣನವರು ಕ್ರಾಂತಿಯನ್ನೇ ಮಾಡಿದರು, ಜಾತಿ, ಲಿಂಗ ಹಾಗೂ ಮೇಲು ಕೀಲು ಎಂಬ ಭಾವನೆಗಳನ್ನು ದೂರ ಮಾಡಿ ಎಲ್ಲರೂ ಒಂದೇ ಎಂಬ ಭಾವದಿಂದ ಬದುಕುವುದನ್ನು ಕಲಿಸಿಕೊಟ್ಟವರು ಬಸವಣ್ಣನವರು ಎಂದರು.

ರಾಜಕಾರಣಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಬಸವಣ್ಣನವರ ವಚನವಾದ ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮ ದೇವರ ನೆಲೆಸುವ ಪರಿ ಎಂಬ ವಚನವನ್ನುಹೇಳುವಂತಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಇಳಕಲ್ಲದ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಬಸವಣ್ಣ ಸರ್ವ ಸಮಾನತೆಯ ಧರ್ಮವನ್ನು ಸ್ಥಾಪಿಸುವ ಜತೆಗೆ ಧರ್ಮ ಸ್ವೀಕಾರ ಮಾಡುವ ಪ್ರತಿಯೊಬ್ಬರಿಗೂ ಇಷ್ಟಲಿಂಗ ದೀಕ್ಷೆಯನ್ನು ನೀಡುವ ಕಾರ್ಯ ಬಸವಣ್ಣನವರು ಮಾಡಿದರು ಎಂದು ಹೇಳಿದರು.

Advertisement

ಹಾರೂಗೇರಿಯ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಆಯ್‌.ಆರ್‌.ಮಠಪತಿ ಮಾತನಾಡಿ, ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ. ಜತೆಗೆ ಸಕಲ ಜೀವಾತ್ಮರೆಲ್ಲರಿಗೂ ಲೇಸು ಬಯಸಿದ ಜಗತ್ತಿನ ಮೊಟ್ಟ ಮೊದಲ ಸಮತವಾದಿ ಬಸವಣ್ಣನವರು ಎಂದರು.

ಶಿರೂರದ ವಿಜಯ ಮಹಾಂತೇಶ್ವರ ನಿಸರ್ಗಧಾಮದ ಡಾ| ಬಸವಲಿಂಗ ಸ್ವಾಮೀಜಿ ಮಾತನಾಡಿ ,ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ಸಪ್ತಶೀಲದ ವಚನವನ್ನು ಜೀವನದಲ್ಲಿ ಅಳವಡಿಸಕೊಂಡಲ್ಲಿ ಅಪರಾಧಗಳು ಈ ಜಗತ್ತಿನಲ್ಲಿ ನಡೆಯಲು ಸಾಧ್ಯವಿಲ್ಲ. ಈ ವಚನದ ಆಶಯವನ್ನೇ ನಮ್ಮ ಸಂವಿಧಾನ ತಿಳಿಸುತ್ತದೆ ಎಂದರು.

ಬಸವೇಶ್ವರ ವೃತ್ತದಲ್ಲಿ ವಚನ ಗ್ರಂಥಗಳ ಮೆರವಣಿಗೆಗೆ ಅಕ್ಕ ಅನ್ನಪೂರ್ಣ ತಾಯಿಯವರು ಚಾಲನೆ ನೀಡಿದರು. ಸದಲಗಾ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ವೀರೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವಚನ ವಿಜಯೋತ್ಸವದಲ್ಲಿ ಸಾವಿರಾರು ಶರಣಭಕ್ತರು ಮೆರವಣಿಗೆಯಲ್ಲಿ ಬಸವಣ್ಣನವರ ವಚನ ಗ್ರಂಥವನ್ನು ತಲೆಯ ಮೇಲೆ ಹೊತ್ತು ಸಾಗಿದರು. ಹೂವಿನಿಂದ ಅಲಂಕರಿಸಿದ ರಥದಲ್ಲಿ ಬಸಣ್ಣನವರ ವಚನ ಗ್ರಂಥ ಮೆರವಣಿಗೆ
ಮಾಡಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಎಪಿಎಂಸಿವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ವಚನ ವಿಜಯೋತ್ಸವದಲ್ಲಿ ಹಲವು ಕಲಾ ತಂಡಗಳು ನೃತ್ಯ ಪ್ರದರ್ಶನ ಮಾಡುವ ಮೂಲಕ ಜನರ ಗಮನ ಸಳೆಯಿತು.

ಲೋಕಣ್ಣ ಉದಪುಡಿ, ಎಸ್‌.ಎನ್‌.ಹಿರೇಮಠ, ಎಂ.ಎಂ.ವಿರಕ್ತಮಠ, ವ್ಹಿ.ಎಂ.ತೆಗ್ಗಿ, ಕೆ.ಆರ್‌ .ಬೋಳಿಶೆಟ್ಟಿ, ಶಿವಾನಂದ ಉದಪುಡಿ, ರವಿ ಬೋಳಿಶೆಟ್ಟಿ, ಮಲ್ಲಪ್ಪ ಅಂಗಡಿ, ಷಣ್ಮೂಕಪ್ಪ ಕೋಲ್ಹಾರ, ಪ್ರಕಾಶ ಚುಳಕಿ, ಸದಾಶಿವ ಉದಪುಡಿ, ಅಣ್ಣಪ್ಪ ಪಡಸಲಗಿ, ಅಪ್ಪಣಗೌಡ ಕೊಳಚಿ, ಹಣಮಂತ ಬುದ್ನಿ, ಮುತ್ತಪ್ಪ ಗಡದವರ, ಬಸವರಾಜ ಉದಪುಡಿ, ನಿಂಗಪ್ಪ ದಾದನಟ್ಟಿ, ಶ್ರೀಕಾಂತ ನರಗಟ್ಟಿ, ಲಕ್ಷ್ಮಣ ಮುದ್ದಾಪುರ, ಲೋಕಣ್ಣ ಹುಲಸದ, ರವಿ ಉಪ್ಪಾರ ಸಂಗಪ್ಪ ಪರಣ್ಣವರ, ಭೀಮಶೆಪ್ಪ ತೆಗ್ಗಿ, ಲೋಕಣ್ಣ ಸಕ್ರಿ, ಲೋಕಣ್ಣ ಮುದ್ದಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next