Advertisement

ಬಸವ ಜಯಂತಿ; ಮುಷ್ಟಿ ಅಕ್ಕಿ ಅಭಿಯಾನಕ್ಕೆ ಚಾಲನೆ

01:16 PM May 03, 2022 | Team Udayavani |

ಹುಬ್ಬಳ್ಳಿ: ಬಸವ ಜಯಂತಿ ಉತ್ಸವ ಅಂಗವಾಗಿ ಅಶ್ವಾರೂಢ ಶ್ರೀ ಬಸವೇಶ್ವರ ಪುತ್ಥಳಿಯ ಭವ್ಯ ಮೆರವಣಿಗೆಯು ಸೋಮವಾರ ಅಮರಗೋಳದ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಒಂದನೇ ಗೇಟ್‌ನಿಂದ ಆಹಾರಧಾನ್ಯ ವರ್ತಕರ ಮಾರುಕಟ್ಟೆ ವರೆಗೆ ನಡೆಯಿತು.

Advertisement

ಎಪಿಎಂಸಿ ಬಸವ ಜಯಂತಿ ಉತ್ಸವ ಸಮಿತಿ, ಎಪಿಎಂಸಿಯ ಎಲ್ಲ ಸಂಘ-ಸಂಸ್ಥೆಗಳು ಹಾಗೂ ಬಸವ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಮೂರುಸಾವಿರ ಮಠದ ಜಗದ್ಗುರು ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.

ನಂತರ ನಡೆದ ಬಸವ ಜಯಂತಿ ಉತ್ಸವ ಕಾರ್ಯಕ್ರಮ ಹಾಗೂ ಮುಷ್ಟಿ ಅಕ್ಕಿ ಅಭಿಯಾನಕ್ಕೆ ವಿವಿಧ ಶ್ರೀಗಳು, ಗಣ್ಯರು ಚಾಲನೆ ನೀಡಿದರು.

ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿ, ಮೂರು ಸಾವಿರ ಮಠದ ಕರ್ತೃ ಗುರುಸಿದ್ಧ ಶ್ರೀಗಳನ್ನು ಹುಚ್ಚನೆಂದು ಕರೆಯುತ್ತಿದ್ದರು. ಅವರ ಹೆಸರಿನಲ್ಲೇ ಹುಚ್ಚನ ಪ್ಯಾಟಿ ಅನ್ನುತ್ತಿದ್ದರು. ಕಾಳು-ಕಡಿ ವ್ಯಾಪಾರಸ್ಥರೆಲ್ಲ ಆ ಪ್ಯಾಟಿಯ ವ್ಯಾಪಾರಿಗಳಾಗಿದ್ದರು. ಅವರೆಲ್ಲ ಪ್ರತಿದಿನ ವ್ಯಾಪಾರಕ್ಕೂ ಮೊದಲು ಮೂರುಸಾವಿರ ಮಠದ ಹುಚ್ಚನ ದಾಸೋಹಕ್ಕೆ ಎಂದು ಒಂದು ಮುಷ್ಟಿ ಇರಿಸುತ್ತಿದ್ದರು. ಅದನ್ನೆ ಮಠದಿಂದ ಹೋಗಿ ಸಂಗ್ರಹಿಸಿ ದಾಸೋಹ ಮಾಡಲಾಗುತ್ತಿತ್ತು. ಈ ಪರಂಪರೆ 300-400 ವರ್ಷಗಳ ಹಿಂದೆ ನಡೆದುಕೊಂಡದ್ದಾಗಿದೆ. ಈಗ ಎಪಿಎಂಸಿ ವ್ಯಾಪಾರಸ್ಥರು ಮುಷ್ಟಿ ಅಕ್ಕಿ ಅಭಿಯಾನ ಆರಂಭಿಸಿದ್ದು ಶ್ಲಾಘನೀಯ.ಪ್ರತಿದಿನ ಶ್ರೀಮಠದಲ್ಲಿ 800-1000 ಜನ ಪ್ರಸಾದ ಮಾಡುತ್ತಿದ್ದಾರೆ. ಅದು ಎಪಿಎಂಸಿ ಮಾರುಕಟ್ಟೆಯಿಂದಲೇ ನಿರಂತರವಾಗಿ ನಡೆಯಬೇಕೆಂಬುದು ನನ್ನ ಆಸೆ ಎಂದರು.

ಭೈರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣ ಜನಿಸದಿದ್ದರೆ ನಾವಿಂದು ಮೌಡ್ಯತೆ, ಕಂದಾಚಾರ, ವರ್ಣಾಶ್ರಮದ ವ್ಯವಸ್ಥೆಯಲ್ಲೇ ಬದುಕಬೇಕಿತ್ತು. ಅವರು ಬಂದಿದ್ದರಿಂದಲೇ ಮನುಷ್ಯರು ಮನುಷ್ಯರಂತೆ ಕಾಣಲು ಸಾಧ್ಯವಾಯಿತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟರು. ವರ್ಗಭೇದ, ವರ್ಣಭೇದ, ಲಿಂಗ ಭೇದ ತೊಡೆದು ಹಾಕುವಲ್ಲಿ ಅವರ ಪಾತ್ರ ದೊಡ್ಡದು ಎಂದರು.

Advertisement

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬಸವಣ್ಣನವರು ಕಾಯಕದ ಜೊತೆ ದಾಸೋಹಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿದ್ದರು. ಗುಜರಾತಿನ ವ್ಯಾಪಾರಿಗಳು ತಮ್ಮ ಲಾಭದಲ್ಲಿ ಮತ್ತು ಮುಸ್ಲಿಮರು ಜಕಾತ್‌ನಲ್ಲಿ ಒಂದಿಷ್ಟು ಹಣ ಮೀಸಲಿಡುವಂತೆ ಈ ಭಾಗದ ವ್ಯಾಪಾರಿಗಳು ತಮ್ಮ ಲಾಭದ ಒಂದಿಷ್ಟು ಹಣವನ್ನು ಸಮಾಜಕ್ಕಾಗಿ ಮೀಸಲಿಡಬೇಕು ಎಂದು ಹೇಳಿದರು.

ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಗಂಗನಗೌಡ (ಮುತ್ತು) ಪಾಟೀಲ, ಅಜ³ಪ್ಪ ಬೆಂಡಿಗೇರಿ, ರಾಜು ಶೀಲವಂತರ, ಮಲ್ಲು ಬುರಟ್ಟಿ, ಶಿವಾನಂದ ಸಣ್ಣಕ್ಕಿ, ಬಸವರಾಜ ಯಕಲಾಸಪೂರ, ಅಜಯ ಕೆಸರಪ್ಪನವರ, ಎಪಿಎಂಸಿ-ನವನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಬಿ.ಎಂ. ಮಂಟೂರ ಮೊದಲಾದವರಿದ್ದರು.

ಎಪಿಎಂಸಿ ಅಧ್ಯಕ್ಷ ಬಸನಗೌಡ ಚನ್ನಗೌಡರ ಅಧ್ಯಕ್ಷತೆ ವಹಿಸಿದ್ದರು. ರಾಜು ಶೆಟ್ಟರ ಸ್ವಾಗತಿಸಿದರು. ಎಪಿಎಂಸಿ ಸದಸ್ಯ ಚನ್ನು ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಭುದೇವ ಹುಗ್ಗಿಶೆಟ್ಟರ, ಕೃಷ್ಣ ಬಡಿಗೇರ ಸಂಗಡಿಗರು ವಚನ ಸಂಗೀತ ಪ್ರಸ್ತುತ ಪಡಿಸಿದರು. ರಾಮು ಮೂಲಗಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next