Advertisement

‘ಬಹುಮತ ಬಾರದಿದ್ದರೆ ವಿಪಕ್ಷವಾಗಿ ಕೂರಲು ಸಿದ್ಧ’

11:53 AM Aug 29, 2018 | Team Udayavani |

ಬಂಟ್ವಾಳ : ಪುರಸಭೆಯ ಚುನಾವಣೆಯಲ್ಲಿ ಬಹುಮತ ಬಾರದಿದ್ದರೆ ಆಡಳಿತಕ್ಕಾಗಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್‌- ಮತ್ತು ಬಿಜೆಪಿ ಪ್ರತಿನಿಧಿಗಳು ಹೇಳಿದ್ದಾರೆ. ಸಂದರ್ಭ ಬಂದಾಗ ಮಾತುಕತೆ ಮೂಲಕ ಆಡಳಿತಕ್ಕಾಗಿ ಪ್ರಯತ್ನ ನಡೆಸುವುದಾಗಿ ಎಸ್‌ಡಿಪಿಐ ಪ್ರತಿನಿಧಿ ಹೇಳಿದ್ದು, ನಮ್ಮ ಅಭ್ಯರ್ಥಿ ಆಯ್ಕೆಯಾದಾಗ ಸಂದರ್ಭ ನೋಡಿ ಮುಂದಿನ ಹೆಜ್ಜೆ ಇಡು ವರು ಎಂದು ಜೆಡಿಎಸ್‌ ಪ್ರತಿನಿಧಿ ಹೇಳಿಕೊಂಡಿದ್ದಾರೆ.

Advertisement

ಅವರು ಆ. 27ರಂದು ಬಿ.ಸಿ. ರೋಡ್‌ ನಲ್ಲಿ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಪಕ್ಷದ ನಿಲುವನ್ನು ವೇದಿಕೆಯಲ್ಲಿ ಪ್ರಕಟಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ನಮ್ಮದೇ ಪಕ್ಷ ಬಹುಮತ ಬರುವುದಾಗಿ ಪ್ರತಿಪಾದಿಸಿದರು.

ಉತ್ತಮ ಆಡಳಿತ ನೀಡಿದೆ
ಕಳೆದ ಅವಧಿಯಲ್ಲಿ ಪುರಸಭೆಯಲ್ಲಿ ಕಾಂಗ್ರೆಸ್‌ ಆಡಳಿತವಿತ್ತು. ಉತ್ತಮ ಆಡಳಿತ ನೀಡಿದೆ. ಮಾಜಿ ಸಚಿವರ ಸಹಕಾರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಆಗಿದೆ. ಕೋಟಿಯ ಮೊತ್ತದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಪ್ರಗತಿ ಸಾಧಿಸಿದೆ. ಮುಂದಿನ ಆಡಳಿತದಲ್ಲಿ ಇನ್ನಷ್ಟು ಕೆಲಸ ಮಾಡಲು ಈಗಾಗಲೇ ತನ್ನ ಪ್ರಣಾಳಿಕೆಯಲ್ಲಿ ಯೋಜನೆ ಪ್ರಕಟಿಸಿದೆ ಎಂದು ಕಾಂಗ್ರೆಸ್‌ ಪ್ರತಿನಿಧಿಸಿದ ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಅಭ್ಯರ್ಥಿ ಪಿ. ರಾಮಕೃಷ್ಣ ಆಳ್ವ ಪಕ್ಷದ ಪರವಾದ ತನ್ನ ನಿಲುವನ್ನು ಪ್ರಕಟಿಸಿದರು.

ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ನನ್ನ ಆಡಳಿತ ಅವಧಿಯಲ್ಲಿ ಜಾಗ ಗುರುತಿಸಲಾಗಿದ್ದು, ಚುನಾವಣಾ ಘೋಷಣೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ತ್ಯಾಜ್ಯ ವಿಲೇವಾರಿಗಾಗಿ ಪೈರೋಲಿಸಿಸ್‌ ಯಂತ್ರ ಅಳವಡಿಸಿ ಸಮಗ್ರ ತ್ಯಾಜ್ಯ ವಿಲೇವಾರಿ ನಡೆಸುವುದಕ್ಕೆ ಯೋಜನೆ ರೂಪಿಸಿದೆ. ಆಡಳಿತಕ್ಕೆ ಬಂದಾಗ ಬಂಟ್ವಾಳ ಪೇಟೆ ವಿಸ್ತರಣೆ ವ್ಯವಸ್ಥೆ ಮಾಡಿಯೇ ಸಿದ್ಧ ಎಂದರು.

ಕಾಂಗ್ರೆಸ್‌ ವಿಫಲ
ಬಿಜೆಪಿ ಪ್ರತಿನಿಧಿಸಿದ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಮಾತನಾಡಿ, ಕಳೆದ ಅವಧಿಯಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರ, ಜನ ವಿರೋಧಿ, ಕಳಪೆ ಆಡಳಿತ ನೀಡಿದೆ. ಬ್ರೋಕರ್‌ ವ್ಯವಹಾರಗಳಿಂದ ವ್ಯವಸ್ಥೆ ಲೋಪ ಎದುರಿಸಿತ್ತು ಎಂದು ಆರೋಪಿಸಿದರು. ಅನುದಾನದಲ್ಲಿ ನಿರ್ದಿಷ್ಟ ಮೊತ್ತವು ಕೇಂದ್ರದಿಂದ ಮಂಜೂರಾದದ್ದು ಎಂದು ಲಿಖಿತ ದಾಖಲೆ ನೀಡಿದರು. 56 ಲಕ್ಷ ರೂ. ವೆಚ್ಚದ ಲೆಕ್ಕಪತ್ರ ಇನ್ನೂ ಸಿಕ್ಕಿಲ್ಲ ಎನ್ನುವುದು ಕಳೆದ ಅವಧಿಯ ಕಾಂಗ್ರೆಸ್‌ ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿ. ಮಫತ್‌ಲಾಲ್‌ 75 ಸೆಂಟ್ಸ್‌ ಜಮೀನು ಎಲ್ಲಿ ಹೋಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಸ ಸಂಗ್ರಹಣೆಯಲ್ಲಿ ಮನೆಮನೆಯಿಂದ ಸಂಗ್ರಹವಾಗಿರುವ ಮೊತ್ತ ಎಷ್ಟು ಎಂಬುದು ಇನ್ನೂ ತಿಳಿದಿಲ್ಲ. ಇದನ್ನು ಆಡಳಿತ ಪಕ್ಷದ ಸದಸ್ಯರೇ ಲಿಖಿತವಾಗಿ ಪುರಸಭೆಗೆ ದಾಖಲೆ ಸಹಿತ ನೀಡಿದ್ದಾರೆ ಎಂದು ಸಂವಾದ ಸಂದರ್ಭ ಎದುರಿಟ್ಟರು. ಬಿಜೆಪಿ ಆಡಳಿತಕ್ಕೆ ಬಂದು ಬಂಟ್ವಾಳವನ್ನು ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ಆಡಳಿತ ನಡೆಸುವುದು ನಮ್ಮ ಸಂಕಲ್ಪವನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾಗಿ ತಿಳಿಸಿದರು. ವಾರದ ಸಂತೆ ನಡೆಸುವುದು, ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.

Advertisement

ಗುರುತಿಸಿಕೊಳ್ಳುವ ಸಾಧನೆ ಮಾಡಿಲ್ಲ
ಎಸ್‌ಡಿಪಿಐ ಪ್ರತಿನಿಧಿಸಿದ, ಹಾಲಿ ಅಭ್ಯರ್ಥಿ ಮೊನೀಶ್‌ ಅಲಿ ಮಾತನಾಡಿ, ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಆಡಳಿತ ವ್ಯವಸ್ಥೆಯಲ್ಲಿ ಪುರಸಭೆಯ ಆಡಳಿತ ಗುರುತಿಸಿಕೊಳ್ಳುವ ಸಾಧನೆ ಮಾಡಿಲ್ಲ. ಈ ಸಲ ಮತದಾರರು ಎಸ್‌ಡಿಪಿಐಗೆ ಒಮ್ಮೆ ಅಧಿಕಾರ ನೀಡಿ. ಜನಸ್ನೇಹಿ, ಜನರಿಗೆ ಮನಮುಟ್ಟುವ ಜನಪರ ಆಡಳಿತ ನೀಡುತ್ತೇವೆ ಎಂದರು.

ಪುರಸಭೆಯಿಂದ ಮನೆ, ಮಳಿಗೆಗಳಿಂದಲೇ ತ್ಯಾಜ್ಯವನ್ನು ಸಮರ್ಪಕವಾಗಿ ತೆಗೆದುಕೊಂಡು ಹೋಗುವ ವ್ಯವಸ್ಥೆ ನಿರ್ಮಾಣ ಆಗಿಲ್ಲ. ಎಸ್‌ಡಿಪಿಐ ಅಧಿಕಾರಕ್ಕೆ ಬಂದಾಗ ತಮ್ಮ ಆಡಳಿತ ಅವದಿಯಲ್ಲಿ ಕಸ ವಿಲೇವಾರಿಯನ್ನು ಸುಸಜ್ಜಿತಗೊಳಿಸುವುದಕ್ಕೆ ಆದ್ಯತೆ ನೀಡುವುದು. ಕಂಚಿನಡ್ಕಪದವು ತ್ಯಾಜ್ಯ ಸಂಗ್ರಹಣ ಕೇಂದ್ರವನ್ನು ಮಾತುಕತೆ ಮೂಲಕ ಪುನರ್‌ಚಾಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎರಡನೇ ಸುತ್ತಿನಲ್ಲಿ ಕಾಂಗ್ರೆಸ್‌ ಪ್ರತಿನಿಧಿಯವರು ಬಿ.ಸಿ. ರೋಡ್‌ ರಾ.ಹೆ. ಸರ್ವಿಸ್‌ ರಸ್ತೆಯ ಕಾಮಗಾರಿಯಿಂದ ಸಾರ್ವಜನಿಕವಾಗಿ ಆಗಿರುವ ಅವ್ಯವಸ್ಥೆಯ ಬಗ್ಗೆ ಪ್ರಸ್ತಾವಿಸಿದರು. ಬಿಜೆಪಿ ಪ್ರತಿನಿಧಿ ಪ್ರತಿ ಉತ್ತರ ನೀಡಿ ಹೆದ್ದಾರಿ ಇಲಾಖೆಯು ಸದ್ರಿ ರಸ್ತೆಯ ಬಗ್ಗೆ ಲಿಖಿತವಾಗಿ ನೀಡಿದ ವಿವರದಲ್ಲಿ ಇಲ್ಲಿನ ಪೈಪ್‌ಲೈನ್‌ ಒಡೆಯುವ ಮೂಲಕ ರಸ್ತೆ ನಿರ್ವಹಣೆ ಕಷ್ಟವಾಗಿದೆ. ಕಳಪೆ ಕಾಮಗಾರಿ ಇದಕ್ಕೆ ಕಾರಣ, ಪುರಸಭೆಯೇ ಅದನ್ನು ನಿರ್ವಹಿಸಬೇಕು ಎಂದು ಸ್ಪಷ್ಟವಾಗಿ ಮೂರು ಸಲ ಪತ್ರದಲ್ಲಿ ಆಡಳಿತಕ್ಕೆ ತಿಳಿಸಿದೆ. ಅದರ ಬಗ್ಗೆ ತಿಳಿದೂ ಅದನ್ನು ಮುಚ್ಚುಮರೆ ಮಾಡುವುದು ಯಾಕೆ ಎಂದು ಪ್ರಶ್ನಿಸಿದರು. ಇದೇ ಹಂತದಲ್ಲಿ ವಿಷಯಾಂತರ ಆಗುವ ಮೂಲಕ ಪ್ರಮುಖ ವಿಚಾರವೇ ನೇಪಥ್ಯತೆ ಸರಿಯಿತು. ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಸಮನ್ವಯಕಾರರಾಗಿ ನಿರೂಪಿಸಿದರು. ಕಾರ್ಯದರ್ಶಿ ಮುಹಮ್ಮದ್‌ ಆಲಿ ವಂದಿಸಿದರು.

ಫ‌ಲಿತಾಂಶ ಬಳಿಕ ನಿರ್ಧಾರ
ಜೆಡಿಎಸ್‌ ಪ್ರತಿನಿಧಿಸಿದ ಹಾಲಿ ಅಭ್ಯರ್ಥಿ ಹಾರೂನ್‌ ರಶೀದ್‌ ಮಾತನಾಡಿ, ನಾವು ಐದು ಮಂದಿಯನ್ನು ಕಣಕ್ಕೆ ಇಳಿಸಿದ್ದೇವೆ. ಫಲಿತಾಂಶ ಬಂದ ಅನಂತರ ನಿರ್ಧಾರವನ್ನು ಪಕ್ಷದ ಮಟ್ಟದಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next