Advertisement

Bankಸಾಲಕ್ಕೆ ಭದ್ರತೆಯಾಗಿಟ್ಟ ದಾಖಲೆ ಹಿಂದಿರುಗಿಸದ ಬ್ಯಾಂಕ್‌: 53.14 ಲ.ರೂ. ಪಾವತಿಸಲು ಆದೇಶ

12:22 AM Jul 16, 2024 | Team Udayavani |

ಮಂಗಳೂರು: ಸಾಲಕ್ಕೆ ಭದ್ರತೆಯಾಗಿ ನೀಡಿದ ಮೂಲ ದಾಖಲೆಗಳನ್ನು ಹಿಂದಿರುಗಿಸದ ಬ್ಯಾಂಕ್‌ 53.14 ಲ.ರೂ. ಪಾವತಿಸ ಬೇಕು ಎಂದು ದ.ಕ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ನೀಡಿದೆ.

Advertisement

ಪ್ರಕರಣದ ವಿವರ
ಮಂಗಳೂರು ತಾಲೂಕು ಕೆಂಜಾರಿನ ಸುನೀತಾ ಲಕ್ಷ್ಮಣ್‌ ಪೂಜಾರಿ ಅವರು ಕಂಕನಾಡಿಯಲ್ಲಿರುವ ಐಡಿಬಿಐ ಬ್ಯಾಂಕ್‌ನಿಂದ 12 ಲ.ರೂ. ಗೃಹಸಾಲ ಪಡೆದಿದ್ದರು. ಸಾಲದ ಬಾಬ್ತು ತಮ್ಮ ಮನೆಯ ಎಲ್ಲ ಮೂಲ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಿದ್ದರು. ಸಾಲದ ಮರುಪಾವತಿಯನ್ನು ನಿಗದಿತ ಅವಧಿಯ ಮುಂಚಿತವಾಗಿಯೇ ಮರುಪಾವತಿಸಿ, ಬಳಿಕ ತನ್ನ ಮಗಳಿಗೆ ಶಿಕ್ಷಣದ ಸಲುವಾಗಿ 9.90 ಲ.ರೂ. ಸಾಲ ಪಡೆದಿದ್ದರು. ಅದಕ್ಕೆ ಬ್ಯಾಂಕ್‌ನವರು ಭದ್ರತೆಯಾಗಿ ಮನೆಯ ಮೂಲ ದಾಖಲೆಗಳನ್ನು ವಶದಲ್ಲಿರಿಸಿಕೊಂಡಿದ್ದರು.

ಸುನೀತಾ ಅವಧಿಯ ಮುಂಚೆಯೇ ಶಿಕ್ಷಣ ಸಾಲವನ್ನೂ ಮರುಪಾವತಿ ಮಾಡಿದ್ದರು. ಆದರೆ ಮೂಲ ದಾಖಲೆಗಳನ್ನು ಬ್ಯಾಂಕ್‌ನವರು ಹಿಂದಿರುಗಿಸಲಿಲ್ಲ. ಸುನೀತಾ ಅವರು ಪದೇಪದೆ ಬ್ಯಾಂಕ್‌ಗೆ ಅಲೆದಾಡಿದರೂ ಬ್ಯಾಂಕ್‌ನವರು ಅನೇಕ ಕಾರಣಗಳನ್ನು ನೀಡುತ್ತಿದ್ದರು. ಕೊನೆಗೆ ಅವರ ಮೂಲ ದಾಖಲೆಗಳು ಬ್ಯಾಂಕ್‌ನಲ್ಲಿ ಬೆಂಕಿಗಾಹುತಿಯಾಗಿವೆ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸುನೀತಾ ಮಂಗಳೂರಿನ ದ.ಕ. ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ನ್ಯಾಯಾ ಲಯ ಪ್ರಕರಣವನ್ನು ಪರಿಶೀಲಿಸಿ ಐಡಿಬಿಐ ಬ್ಯಾಂಕ್‌ನವರು ಆಸ್ತಿಯ ಮೂಲದಾಖಲೆಗಳನ್ನು ಹಿಂದಿರುಗಿಸದೆ ಇರುವುದಕ್ಕೆ ಸುನೀತಾ ಅವರಿಗೆ 48,14,980 ರೂ. ಪಾವತಿಸಬೇಕು. ಅಲ್ಲದೆ ಪರಿಹಾರ ಧನವಾಗಿ 5 ಲ.ರೂ.ಗಳನ್ನು ನೀಡಬೇಕು ಎಂದು ಆದೇಶ ನೀಡಿದೆ. ದೂರುದಾರರ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಚಂದ್ರಹಾಸ್‌ ಕದ್ರಿ ಮತ್ತು ದೀನನಾಥ ಶೆಟ್ಟಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next