Advertisement

ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ನಟಿ, ಮಾಡೆಲ್ ರೇಖಾ ಸಿಂಧು ಸಾವು

12:27 PM May 05, 2017 | Team Udayavani |

ವೆಲ್ಲೂರು : ತಮಿಳು ನಾಡಿನ ವೆಲ್ಲೂರು ಬಳಿಯ ವೆಂಟ್ರಂಪಲ್ಲಿ ಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಮಾಡೆಲ್‌, ಫ್ಯಾಶನ್‌ ಡಿಸೈನರ್‌ ಮತ್ತು ಕಿರುತೆರೆ ನಟಿ ರೇಖಾ ಸಿಂಧು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಮೃತ ರೇಖಾ ಸಿಂಧು 21 ರ ಹರೆಯದವರಾಗಿದ್ದು, ಫ್ಯಾಶನ್‌ ಡಿಸೈನರ್‌ ಆಗಿ ಗುರುತಿಸಿಕೊಂಡಿದ್ದು, ಕೆಲ ಧಾರವಾಹಿಗಳಲ್ಲೂ  ನಟಿಸಿದ್ದರು. ಬೆಂಗಳೂರಿನ ಬಾಣಸವಾಡಿ ನಿವಾಸಿ ಎಂದು ತಿಳಿದು ಬಂದಿದೆ. 

ಚೆನ್ನೈಗೆ ಡಿಸೈನಿಂಗ್‌ ಕಾರ್ಯಕ್ರಮಕ್ಕೆ ತೆರಳಿ ಬೆಂಗಳೂರಿಗೆ ವಾಪಾಸಾಗುವ ವೇಳೆ ರಸ್ತೆಯ ವಿಭಾಜಕಕ್ಕೆ ಢಿಕ್ಕಿಯಾಗಿ ಕಾರು ಪಲ್ಟಿಯಾಗಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. 

ತಿರುಪತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಿಂಧು ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

ಗಾಯಾಳುಗಳು ಸಿಂಧು ಅವರ ಸಹಾಯಕರಾದ ಅಭಿಷೇಕ್‌ ಕುಮಾರನ್‌(22),ಜಯನ್‌ಕಂದ್ರನ್‌(23) ಮತ್ತು ಚೆನ್ನೈನ ರಕ್ಷಣ್‌(20) ಎಂದು ತಿಳಿದು ಬಂದಿದೆ. 

ರೇಖಾ ಕೃಷ್ಣಪ್ಪ ಎಂದು ತಪ್ಪು ಕಲ್ಪನೆ


ಅಪಘಾತದಲ್ಲಿ  ಕನ್ನಡ ಮತ್ತು ತಮಿಳು ಧಾರಾವಾಹಿಗಳ ಜನಪ್ರಿಯ ನಟಿ ರೇಖಾ ಕೃಷ್ಣಪ್ಪ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಮೊದಲು ಸುದ್ದಿಯಾಗಿತ್ತು. ಆ ಬಳಿಕ ಫೇಸ್‌ಬುಕ್‌ನಲ್ಲಿ  ನಾನು ಕ್ಷೇಮವಾಗಿದ್ದೇನೆ,ಕುಟುಂಬ ಸದಸ್ಯರೊಂದಿಗೆ ಶೃಂಗೇರಿಗೆ ಪ್ರಯಾಣಿಸುತ್ತಿದ್ದೇನೆ ಎಂದು ಬರೆದು ಗೊಂದಲಗಳಿಗೆ ಅಂತ್ಯ ಹಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next