Advertisement

ಗೋವಧೆ ನಿಷೇಧ; ರಾಷ್ಟ್ರ ಮಟ್ಟದಲ್ಲಿ ತೀರ್ಮಾನವಾಗಲಿ: ಸಚಿವ ಖಾದರ್‌

07:00 AM Apr 10, 2018 | Team Udayavani |

ಮಂಗಳೂರು: ಗೋವಧೆ ನಿಷೇಧದ ಬಗ್ಗೆ ಕೇಂದ್ರ ಸರಕಾರ ರಾಷ್ಟ್ರ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಿ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಇಡೀ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಗೋಮಾಂಸ ರಫ್ತು ಭಾರತದಿಂದ ಆಗುತ್ತಿದೆ. ದೇಶದಲ್ಲಿ ಅದರಲ್ಲೂ ಮುಖ್ಯ ವಾಗಿ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ ಮತ್ತು ತ್ರಿಪುರಾ ರಾಜ್ಯಗಳಿಂದ ಅತ್ಯಧಿಕ ಗೋಮಾಂಸ ರಫ್ತಾಗುತ್ತಿದೆ. ಗೋಮಾಂಸ ಸೇವನೆಗೆ ಸಂಬಂಧಿಸಿ ಕೇರಳ, ಗೋವಾ ಮತ್ತಿತರ ಕೆಲವು ರಾಜ್ಯಗಳಿಗೆ ವಿನಾಯಿತಿ ನೀಡಲಾಗಿದೆ. ಹೀಗೆ ಕೆಲವು ರಾಜ್ಯಗಳಲ್ಲಿ ವಿನಾಯಿತಿ, ಕೆಲವು ರಾಜ್ಯಗಳಲ್ಲಿ ನಿಷೇಧ ಏಕೆ? ಇಡೀ ದೇಶಕ್ಕೆ ಅನ್ವಯವಾಗುವಂತೆ ಗೋವಧೆ ನಿಷೇಧದ ಬಗ್ಗೆ ನೀತಿಯನ್ನು ರೂಪಿಸಲಿ ಎಂದು ಸಚಿವರು ಸೋಮವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

Advertisement

ಗೋಕಳ್ಳರ ರಕ್ಷಣೆ ಮಾಡಿಲ್ಲ
ಚುನಾವಣೆ ಬಂದಾಗ ಬಿಜೆಪಿಗೆ ಮಾತನಾಡಲು ಬೇರೆ ವಿಷಯವಿಲ್ಲ. ಹಾಗಾಗಿ ಗೋವುಗಳ ವಿಷಯವನ್ನು ಎತ್ತಿಕೊಂಡು ರಾಜಕೀಯ ಮಾಡುತ್ತಿದೆ. ಗೋಕಳ್ಳರ ರಕ್ಷಣೆಗೆ ನಾನೆಂದೂ ಮುಂದಾಗಿಲ್ಲ. ಕೈರಂಗಳ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸುವಂತೆ ಗೃಹ ಸಚಿವರನ್ನು ಕೋರಿದ್ದೇನೆ ಎಂದರು.

ಭಟ್‌ ಹೇಳಿಕೆ ತರವಲ್ಲ
“ಯು.ಟಿ. ಖಾದರ್‌ ಭೇಟಿ ನೀಡಿದ ದೇವಸ್ಥಾನಗಳಲ್ಲೆಲ್ಲ ಬ್ರಹ್ಮಕಲಶ ನಡೆಸಬೇಕು’ ಎಂಬುದಾಗಿ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ನನ್ನ ಕ್ಷೇತ್ರದ ಜನರು ತಾವಾಗಿಯೇ ತಮ್ಮ ದೇವಸ್ಥಾನಗಳಿಗೆ ಭೇಟಿ ನೀಡುವಂತೆ ನನಗೆ ಆಹ್ವಾನ ನೀಡುತ್ತಿದ್ದಾರೆ ಎಂದರು. ದೇಶದ ಸಂಸ್ಕೃತಿ ಸಂಸ್ಕಾರವನ್ನು ಚೆನ್ನಾಗಿ ತಿಳಿದುಕೊಂಡವರು ಎಲ್ಲ ಧರ್ಮೀಯರೂ ಸೌಹಾರ್ದದಿಂದ ಬದುಕುತ್ತಿರುವ ಜಿಲ್ಲೆಯಲ್ಲಿ ಇಂತಹ ಹೇಳಿಕೆ ಕೊಡಬಾರದಿತ್ತು, ಅವರಿಗೆ ಇದು ಶೋಭೆ ತಾರದು ಎಂದು ಹೇಳಿದರು.

ಕೇರಳದ ಗಡಿ ಪ್ರದೇಶಗಳಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಿದರೆ ಎಲ್ಲ ಅಕ್ರಮ ಗಳಿಗೂ ಕಡಿವಾಣ ಬಿದ್ದೀತು ಎಂದರು. ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಗ್ಗೆ ಪ್ರಶ್ನಿಸಿದಾಗ, ಚುನಾವಣೆಯಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದರು. ಸೌದಿ ಅರೇಬಿಯಾದಲ್ಲಿ ಸಭೆ ನಡೆಸಿದ ಬಗ್ಗೆ ಪ್ರಸ್ತಾವಿಸಿದಾಗ, ಉಮ್ರಾ ಪ್ರವಾಸಕ್ಕೆ ಹೋಗಿದ್ದಾಗ ರಾಜ್ಯ ಕರಾವಳಿಯ ಯುವಜನರು ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದು, ಅದರಲ್ಲಿ ಭಾಗ ವಹಿಸಿದ್ದೆ ಎಂದು ವಿವರಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಗಂಗಾಧರ ಉಳ್ಳಾಲ, ಸದಾಶಿವ ಉಳ್ಳಾಲ, ಧನಂಜಯ ಅಡ³ಂಗಾಯ, ಮಮತಾ ಡಿ.ಎಸ್‌. ಗಟ್ಟಿ, ಪದ್ಮನಾಭ ನರಿಂಗಾನ, ಸಂತೋಷ್‌ ಕುಮಾರ್‌ ಶೆಟ್ಟಿ, ಎನ್‌.ಎಸ್‌. ಕರೀಂ, ಮಹಮದ್‌ ಮೋನು, ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು. 

Advertisement

ನೀತಿ ಸಂಹಿತೆ: ಮಾಹಿತಿ ಬೇಕು
ಚುನಾವಣಾ ನೀತಿ ಸಂಹಿತೆ ಸಂಬಂಧ ಜನರಲ್ಲಿರುವ ಗೊಂದಲ ನಿವಾರಣೆಗೆ ಜಿಲ್ಲೆಯ ಎಲ್ಲ ಧಾರ್ಮಿಕ ಸಂಘ ಸಂಸ್ಥೆಗಳು ಮತ್ತು ಯುವಜನ ಸಂಘಟನೆಗಳನ್ನು ಕರೆಸಿ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಅಧಿಕಾರಿಗಳನ್ನು ಕೇಳಿಕೊಳ್ಳಲಾಗಿದೆ ಎಂದರು ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next