Advertisement

ಒತ್ತುವರಿ ತೆರವು ಕಾರ್ಯಾಚರಣೆಗೆ ಹಿನ್ನಡೆ

12:03 PM Aug 07, 2018 | Team Udayavani |

ಬೆಂಗಳೂರು: ಕಳೆದೊಂದು ವರ್ಷದಿಂದ ಸ್ಥಗಿತಗೊಂಡಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭಿಸಲು ಬಿಬಿಎಂಪಿ ಸಿದ್ಧವಾಗಿದೆ. ಆದರೆ, ಭೂಮಾಪನ ಇಲಾಖೆಯ ಅಧಿಕಾರಿಗಳು ನಕ್ಷೆ ಹಾಗೂ ಒತ್ತುವರಿ ಜಾಗ ಗುರುತು ಮಾಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ.

Advertisement

ಕಳೆದ ಒಂದೂವರೆ ತಿಂಗಳಿನಿಂದ ನಗರದ ಹೊರವಲಯದ ನಾಲ್ಕು ವಲಯಗಳಲ್ಲಿ ಸರ್ವೆ ನಡೆಸಿದ ಅಧಿಕಾರಿಗಳು 434 ಪ್ರಕರಣಗಳಲ್ಲಿ ರಾಜಕಾಲುವೆ ಒತ್ತುವರಿಯನ್ನು ಗುರುತಿಸಿ ಪಾಲಿಕೆಗೆ ವರದಿ ಸಲ್ಲಿಸಿದ್ದಾರೆ. ಆದರೆ, ಕಾಲುವೆಯ ನಕ್ಷೆ ಹಾಗೂ ಒತ್ತುವರಿ ಭಾಗವನ್ನು ಗುರುತಿಸದೆ ಸರ್ವೆಯರ್‌ಗಳು ಇಲಾಖೆಗೆ ವಾಪಸಾಗಿರುವುದರಿಂದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಸಾಧ್ಯವಾಗದಂತಾಗಿದೆ. ಪರಿಣಾಮ ಮಳೆಗಾಲದಲ್ಲಿ ಹಲವು ಪ್ರದೇಶಗಳಲ್ಲಿ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ. 

ಸರ್ವೆ ನಡೆದರೂ ಪ್ರಯೋಜನವಿಲ್ಲ: ಭೂ ಮಾಪನ ನಿರ್ದೇಶನಾಲಯ ಅಧಿಕಾರಿಗಳಿಗೆ ಹತ್ತಾರು ಬಾರಿ ಪತ್ರ ಬರೆದು ಸರ್ವೆಯರ್‌ಗಳನ್ನು ಪಡೆದು, 434 ಕಡೆಗಳಲ್ಲಿ ಸರ್ವೆ ನಡೆಸಿದರೂ ತೆರವು ಕಾರ್ಯಾಚರಣೆ ನಡೆಸಲು ಪಾಲಿಕೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಸರ್ವೆಯರ್‌ಗಳು ಸರ್ವೆ ಕಾರ್ಯ ಮುಗಿಸಿ ವಾಪಸ್‌ ಹೋಗಿದ್ದು, ರಾಜಕಾಲುವೆಯ ನಕ್ಷೆ ಹಾಗೂ ಒತ್ತುವರಿ ತೆರವುಗೊಳಿಸಬೇಕಾದ ಭಾಗವನ್ನು ಗುರುತಿಸಿಲ್ಲ. ಸರ್ವೆಯರ್‌ಗಳು ಇಂತಹ ಜಾಗವನ್ನು ಹೊಡೆಯುವಂತೆ ಗುರುತು ಮಾಡಿಕೊಟ್ಟರೆ ಮಾತ್ರ ಪಾಲಿಕೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ.

ಸಿಎಂ ಆದೇಶ: ರಾಜಕಾಲುವೆ ಒತ್ತುವರಿ ತೆರವು ಹಿನ್ನೆಲೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ ಪರಿಣಾಮ 2016ರಲ್ಲಿ ನಗರದಲ್ಲಿ ಸುರಿದ ಭಾರಿ ಮಳೆಗೆ ಕಾಲುವೆಗಳಲ್ಲಿ ನೀರು ಹರಿಯಲಾಗದೆ ಹಲವು ಪ್ರದೇಶಗಳು ಅಕ್ಷರಶಃ ಕೆರೆಗಳಂತಾಗಿದ್ದವು. ಆ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಅಂದಿನ ಮುಖ್ಯಮಂತ್ರಿಗಳು ಪಾಲಿಕೆಗೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳ ಆದೇಶದಂತೆ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಹಲವು ಬಡಾವಣೆಗಳಲ್ಲಿ ಕಟ್ಟಡಗಳನ್ನು ತೆರವುಗೊಳಿಸಿ ಕಾಲುವೆ ನಿರ್ಮಿಸಿದ್ದರು.

ಕಾಲುವೆಯಲ್ಲಿ ಪ್ರಭಾವಿಗಳ ಕಟ್ಟಡಗಳಿರುವ ವಿಷಯ ಬೆಳಕಿಗೆ ಬಂದ ಕೂಡಲೇ ಪಾಲಿಕೆಯ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಕಳೆದ ಮೂರು ವರ್ಷಗಳಲ್ಲಿ ನಗರದ 339 ಭಾಗಗಳು ಮಳೆಯಿಂದ ಅನಾಹುತಕ್ಕೆ ಒಳಗಾಗಿ ಜನರು ತೀವ್ರ ತೊಂದರೆ ಅನುಭವಿಸಿದ್ದು, 200 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆರಂಭಿಸಿದ ಪರಿಹಾರ ಕಾಮಗಾರಿಗಳು ಈವರೆಗೆ ಪೂರ್ಣಗೊಂಡಿಲ್ಲ. 

Advertisement

ಸರ್ವೆಯರ್‌ ನಿಯೋಜನೆ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ ಪಾಲಿಕೆಯ ಕ್ರಮಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ತೆರವು ಕಾರ್ಯ ಆರಂಭಿಸಲು ಪಾಲಿಕೆ ನಿರ್ಧರಿಸಿತ್ತು. ಜತೆಗೆ ಉಪಮುಖ್ಯಮಂತ್ರಿಗಳು ಸಹ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ಸೂಚಿಸದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಭೂ ಮಾಪನ ವಿಭಾಗದಿಂದ ಒತ್ತುವರಿಯನ್ನು ಗುರುತಿಸಲು ಸರ್ವೆಯರ್‌ಗಳನ್ನು ಪಾಲಿಕೆಗೆ ನಿಯೋಜಿಸಲಾಗಿತ್ತು. 

405 ಕಡೆ ಮಾತ್ರ ತೆರವು: ಬಿಬಿಎಂಪಿ ವ್ಯಾಪ್ತಿಯ 800 ಕಿ.ಮೀ. ಉದ್ದದ ರಾಜಕಾಲುವೆಯ 1953 ಕಡೆಗಳಲ್ಲಿ ಒತ್ತುವರಿಯಾಗಿದ್ದು, ಇದನ್ನು ನಾಲ್ಕು ವರ್ಷಗಳ ಹಿಂದೆಯೇ ಅಧಿಕಾರಿಗಳು ಸರ್ವೆ ಮೂಲಕ ಗುರುತಿಸಿದ್ದಾರೆ. 2016ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವ ಮೊದಲೇ ಪಾಲಿಕೆಯ ಅಧಿಕಾರಿಗಳು 820 ಕಡೆಗಳಲ್ಲಿ ತೆರವುಗೊಳಿಸಿದ್ದರು. ಉಳಿದ 1,133 ಪ್ರಕರಣಗಳ ಪೈಕಿ ಕಳೆದ ಎರಡು ವರ್ಷಗಳಲ್ಲಿ ಕೇವಲ 405 ಕಡೆಗಳಲ್ಲಿನ ಒತ್ತುವರಿ ತೆರವುಗೊಳಿಸಿದ್ದು, ಇನ್ನೂ 728 ಕಡೆಗಳಲ್ಲಿ ಒತ್ತುವರಿ ತೆರವು ಬಾಕಿಯಿದೆ.

ಕಂದಾಯ ಇಲಾಖೆಯಿಂದ ಪಾಲಿಕೆಗೆ ಬಂದ ಸರ್ವೆಯರ್‌ಗಳು 434 ಕಡೆಗಳಲ್ಲಿ ಸರ್ವೆ ನಡೆಸಿ ವರದಿಯನ್ನು ನೀಡಿದ್ದಾರೆ. ಆದರೆ, ರಾಜಕಾಲುವೆ ನಕ್ಷೆ ಹಾಗೂ ಒತ್ತುವರಿ ಭಾಗವನ್ನು ಗುರುತು ಮಾಡಿಕೊಟ್ಟಿಲ್ಲ. ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿಲ್ಲ. ಒತ್ತುವರಿ ಗುರುತು ಮಾಡಿಕೊಡುವಂತೆ ಭೂ ಮಾಪನ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅವರು ಗುರುತು ಮಾಡಿಕೊಟ್ಟ ಕೂಡಲೇ ಕಾರ್ಯಾಚರಣೆ ಆರಂಭಿಸಲಾಗುವುದು. 
-ಬೆಟ್ಟೇಗೌಡ, ಮುಖ್ಯ ಎಂಜಿನಿಯರ್‌, ಬೃಹತ್‌ ಮಳೆನೀರು ಕಾಲುವೆ ವಿಭಾಗ

ಸರ್ವೆ ಕಾರ್ಯ ನಡೆಸಿದ ಸ್ಥಳಗಳು
* ಮಹದೇವಪುರ ವಲಯ:
ಮೇಡಹಳ್ಳಿ, ದೇವಸಂದ್ರ, ಜುನ್ನಸಂದ್ರ, ದೊಡ್ಡಕನ್ನಳ್ಳಿ, ವಿಭೂತಿಪುರ, ಕೊತ್ತನೂರು, ರಾಮಗೊಂಡನಹಳ್ಳಿ, ಹೂಡಿ, ಹಗದೂರು.
* ಬೊಮ್ಮನಹಳ್ಳಿ ವಲಯ: ಬೇಗೂರು, ತುರಹಳ್ಳಿ. ಯಲಹಂಕ ವಲಯ: ಥಣಿಸಂದ್ರ, ಹಾರೋಹಳ್ಳಿ, ವೆಂಕಟಾಲ, ಯಲಹಂಕ ಅಮಾನಿಕೆರೆ, ಯಲಹಂಕ. 
* ಆರ್‌.ಆರ್‌.ನಗರ ಹಾಗೂ ದಾಸರಹಳ್ಳಿ ವಲಯಗಳು: ದೊಡ್ಡಬಿದರಕಲ್ಲು, ಸಿಡೇದಹಳ್ಳಿ, ಹಾರೋಹಳ್ಳಿ, ಬಾಗಲಗುಂಟೆ, ಕರಿಹೋಬನಹಳ್ಳಿ. 

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next