Advertisement

ಮಳೆ ಬಂದ್ರೆ ಕೆರೆಯಂತಾಗುವ ಬಿ.ರಾಚಯ್ಯ ಜೋಡಿ ರಸ್ತೆ

02:13 PM May 30, 2023 | Team Udayavani |

ಚಾಮರಾಜನಗರ: ಜೋರು ಮಳೆ ಬಂದ ಸಂದರ್ಭದಲ್ಲಿ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಕಾಲುವೆಯಂತೆ ನೀರು ನಿಂತು, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಸರಿ ಸುಮಾರು 10 ವರ್ಷಗಳಿಂದಲೂ ಈ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ವಿಫ‌ಲರಾಗಿದ್ದಾರೆ.

Advertisement

2013ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಿ.ರಾಚಯ್ಯ ಜೋಡಿ ರಸ್ತೆಯನ್ನು 80 ಅಡಿಯಿಂದ 100 ಅಡಿಗೆ ಅಗಲ ಮಾಡಲಾಯಿತು. ಡಾಂಬರು ರಸ್ತೆಯನ್ನು ಸಿಮೆಂಟ್‌ ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸಲಾಯಿತು. ಈ ಸಂದರ್ಭದಲ್ಲಿ ಅವೈಜ್ಞಾನಿ‌ಕ ತರಾತುರಿಯ ಕಾಮಗಾರಿ ನಡೆಯಿತು. ಜೋಡಿ ರಸ್ತೆಯನ್ನು ಅಗಲ ಮಾಡುವುದಕ್ಕೆ ಆದ್ಯತೆ ನೀಡಲಾಯಿತೇ ಹೊರತು, ಕೈಗೊಳ್ಳಬೇಕಾದ ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

ರಸ್ತೆ ಅಗಲ ಮಾಡುವ ಸಂದರ್ಭದಲ್ಲಿ ರಸ್ತೆಯಡಿ ಹಾದು ಹೋಗಿರುವ ನೀರು ಸರಬರಾಜು ಪೈಪುಗಳನ್ನು ಸ್ಥಳಾಂತರಿಸಿ ಪಕ್ಕಕ್ಕೆ ಹಾಕಲಿಲ್ಲ. ಮತ್ತು ಹಳೆಯ ಪೈಪುಗಳನ್ನೇ ಉಳಿಸಲಾಯಿತು. ಹೀಗಾಗಿ ಪ್ರತಿ ಬಾರಿ ಮನೆ ಮನೆಗಳಿಗೆ ನೀರು ಬಿಟ್ಟಾಗಲೂ, ಜೋಡಿ ರಸ್ತೆ ಮಧ್ಯ ಇರುವ ಅತ್ಯಂತ ಹಳೆಯ ಪೈಪುಗಳು ಒಡೆದು ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ನೀರು ಸರಬರಾಜು ಮಾಡಿದಾಗಲೆಲ್ಲಾ ಸಾವಿರಾರು ಲೀಟರ್‌ ನೀರು ವ್ಯರ್ಥವಾಗುತ್ತಿದೆ. ಇದು ಒಂದು ಸಮಸ್ಯೆ.

ಸಮಸ್ಯೆ ಬಗೆ ಹರಿಸಲು ಆಸಕ್ತಿ ವಹಿಸದ ಶಾಸಕ: ಆರೋಪ: 2013ರಲ್ಲಿ ದ್ದ ಕಾಂಗ್ರೆಸ್‌ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲಿಲ್ಲ. ನಂತರ 2018ರಲ್ಲಿ ಬಂದ ಬಿಜೆಪಿ ಸರ್ಕಾರವೂ ಈ ಸಮಸ್ಯೆ ಬಗೆ ಹರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿಪರ್ಯಾಸವೆಂದರೆ, ಮೂರು ಅವಧಿಯಲ್ಲೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರೇ ಅಧಿಕಾರದಲ್ಲಿದ್ದಾರೆ. ಈ ಸಮಸ್ಯೆ ಬಗೆ ಹರಿಸಲು ಆಸಕ್ತಿಯನ್ನೇ ವಹಿಸಿಲ್ಲ ಎಂದು ನಾಗರಿಕರು ದೂರುತ್ತಾರೆ. ವಿಪರ್ಯಾಸವೆಂದರೆ, ಇಂಥ ತೀವ್ರ ಸಮಸ್ಯೆ ಜಿಲ್ಲಾಡಳಿತ ಭವನದ ಮುಂದೆಯೇ ನಡೆದರೂ ಅಧಿಕಾರಿಗಳು ಇದನ್ನು ಬಗೆಹರಿಸಲು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಒಮ್ಮೆ ಭಾರಿ ಮಳೆ ಬಂದು ಇಡೀ ಜೋಡಿ ರಸ್ತೆ ನೀರು ಜಿಲ್ಲಾಡಳಿತ ಭವನದ ಆವರಣಕ್ಕೇ ನುಗ್ಗಿ, ಜಿಲ್ಲಾಡಳಿತ ಭವನದ ಆವರಣ ನದಿಯೋಪಾದಿ ಕಾಣುತ್ತಿತ್ತು. ಇಷ್ಟಾದರೂ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಲು ಯತ್ನಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜನರು. ಈಗ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ಸರ್ಕಾರದ ಅವಧಿಯಲ್ಲಿ, ನಡೆದ ಜೋಡಿ ರಸ್ತೆಯ ಕೆಟ್ಟ ಕಾಮಗಾರಿಯೇ ಈ ಸಮಸ್ಯೆಗೆ ಕಾರಣ. ಇದನ್ನು ಆ ಸರ್ಕಾರವೇ ಸರಿಪಡಿಸಬೇಕಿದೆ. ಶಾಸಕ ಪುಟ್ಟರಂಗಶೆಟ್ಟಿಯವರು ಇದನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಈ ಸಮಸ್ಯೆಯನ್ನು ಬಗೆಹರಿಸಿ ಮಳೆಗಾಲದಲ್ಲಿ ಜೋಡಿ ರಸ್ತೆಯಲ್ಲಿ ಸಂಚಾರ ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹ.

ಚರಂಡಿ ವ್ಯವಸ್ಥೆಯೇ ಇಲ್ಲ : ಇದಕ್ಕಿಂತಲೂ ತೀವ್ರ ರೀತಿಯ ಸಮಸ್ಯೆಯೆಂದರೆ, ಮಳೆ ನೀರು ಹರಿದುಹೋಗಲು, ಚರಂಡಿ ವ್ಯವಸ್ಥೆ ಮಾಡದಿರುವುದು. ಜೋಡಿ ರಸ್ತೆ ಅಗಲ ಮಾಡುವ ಕಾಮಗಾರಿ ನಡೆಸಿದ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳ ಜಾಗವನ್ನು ಒಡೆಯಲಾಯಿತು. ಆ ಸಂದರ್ಭದಲ್ಲಿ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡಲಿಲ್ಲ. ಆಗ ನಗರಸಭೆಯಿಂದ ಬಲಾತ್ಕಾರವಾಗಿ ಜಾಗವನ್ನು ತೆರವುಗೊಳಿಸಲಾಯಿತು. ಈ ಬೆದರಿಕೆಗೆ ಜಗ್ಗದ ಕೆಲವರು ನ್ಯಾಯಾಲಯದ ಮೊರೆ ಹೊಕ್ಕರು. ಹಾಗೆ ನ್ಯಾಯಾಲಯದ ಮೊರೆ ಹೋದವರ ಕಟ್ಟಡಗಳ ಮುಂದೆ ರಸ್ತೆ ಅಗಲ ಮಾಡಲಿಲ್ಲ. ಹಾಗಾಗಿ ಅಲ್ಲಿ ಚರಂಡಿ ನಿರ್ಮಾಣ ಮಾಡಿಲ್ಲ. ಹೀಗೆ ಒಂದಷ್ಟು ದೂರ ಚರಂಡಿ ಇದ್ದು, ಇನ್ನೊಂದಿಷ್ಟು ದೂರ ಚರಂಡಿ ಇಲ್ಲ. ಹೀಗಾಗಿ ಜೋಡಿ ರಸ್ತೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇಲ್ಲ.

Advertisement

ಮಳೆ ಬಂದರೆ ಸಾಕು ರಸ್ತೆಯಲ್ಲೇ ಹರಿಯುವ ನೀರು: ಈ ಕಾರಣದಿಂದ ಮಳೆ ಬಂದಾಗ ಮಳೆ ನೀರು ಚರಂಡಿಗೆ ಹೋಗದೇ ರಸ್ತೆಯಲ್ಲೇ ಹರಿಯುತ್ತದೆ. ಇದರ ಪರಾಕಾಷ್ಠೆ ಎಂದರೆ, ನಗರದ ಶ್ರೀನಿವಾಸ ಹೋಟೆಲ್‌ ಬಳಿ ರಾಜಕಾಲುವೆಯಿದ್ದು, ಇದರಲ್ಲಿ ನಗರದ ಅನೇಕ ಬೀದಿಗಳ ನೀರು ಹರಿದುಬರುತ್ತದೆ. ಈ ರಾಜಕಾಲುವೆ ಜೋಡಿ ರಸ್ತೆ ಸೇರುವ ಜಾಗದಲ್ಲಿ ದೊಡ್ಡ ಪೈಪನ್ನು ಹಾಕದ ಕಾರಣ, ರಾಜ ಕಾಲುವೆ ನೀರು ಜೋಡಿ ರಸ್ತೆಯ ಮೇಲೆ ಹರಿಯುತ್ತದೆ. ಒಂದೆಡೆ ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ನಿಂತ ನೀರು, ಇನ್ನೊಂದೆಡೆ ರಾಜಕಾಲುವೆಯ ನೀರು ಎರಡೂ ಸೇರಿ, ಜಿಲ್ಲಾಡಳಿತ ಭವನ, ಅಧ್ಯಕ್ಷ ಹೋಟೆಲ್‌ ಬಳಿ ಮಳೆ ಬಂದಾಗ ಕೊಳಚೆ ನೀರಿನ ಸರೋವರ ಸೃಷ್ಟಿಯಾಗುತ್ತದೆ. ಹೀಗಾಗಿ ಜೋರು ಮಳೆ ಬಂದಾಗ ಈ ಜಾಗವನ್ನು ದಾಟಲಾಗದೇ, ವಾಹನ ಸವಾರರು, ಪಾದಚಾರಿಗಳು ನಿಲ್ಲಬೇಕಾಗುತ್ತದೆ. ಈ ಸಂದರ್ಭದಲ್ಲಿ ಜೋಡಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ಜನರು ನಗರಸಭೆಯನ್ನೂ, ಅಧಿಕಾರಿಗಳನ್ನೂ, ಜನಪ್ರತಿನಿಧಿಗಳನ್ನು ಶಪಿಸುತ್ತಾ ನಿಂತಿರುತ್ತಾರೆ. ಇದು ಪ್ರತಿ ಬಾರಿ ಮಳೆ ಬಂದಾಗಲೂ ಜೋಡಿ ರಸ್ತೆಯಲ್ಲಿ ನಡೆಯುವ ನಿರಂತರ ಪ್ರಹಸನ.

ಕಳೆದ 10 ವರ್ಷಗಳಿಂದಲೂ ಬಿ. ರಾಚಯ್ಯ ಜೋಡಿ ರಸ್ತೆಯ ಅವ್ಯವಸ್ಥೆ ಯನ್ನು, ಮಳೆಗಾಲದಲ್ಲಾಗುವ ಅವಾಂತ ರವನ್ನು ಸರಿಪಡಿಸಲು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಧ್ಯವಾಗಲಿಲ್ಲ ಎಂಬುದು ಅತ್ಯಂತ ಬೇಸರದ ಸಂಗತಿ. ಹಾಗಾದರೆ, ಓಟು ಕೊಟ್ಟು ಇವರನ್ನು ಗೆಲ್ಲಿಸುವುದು ಯಾತಕ್ಕಾಗಿ? -ಮಹದೇವು, ರಾಮಸಮುದ್ರ

ಜಿಲ್ಲಾಧಿಕಾರಿ ಕಚೇರಿ ಬಳಿ ರಾಜಕಾಲುವೆ ಕೆಳಗೆ ಕಾವೇರಿ ನೀರಿನ ಪೈಪ್‌ ಹಾದು ಹೋಗಿದೆ. ಮಳೆ ಬಂದಾಗ ಪೈಪ್‌ ಗೆ ಕಸ ಸಿಕ್ಕಿಕೊಂಡು ನೀರು ರಸ್ತೆಗೆ ಹರಿಯುತ್ತದೆ. ಆ ಪೈಪ್‌ ಅನ್ನು ಸ್ಥಳಾಂತರಿ ಸಲು 30 ಲಕ್ಷ ರೂ.ಗಳಿಗೆ ಎಸ್ಟಿಮೇಟ್‌ ಮಾಡ ಲಾಗಿದೆ. ಸರ್ಕಾರದ ಅನುದಾನ ನಿರೀಕ್ಷಿಸುತ್ತಿದ್ದೇವೆ. ಅನುದಾನ ಬಂದ ಬಳಿಕ ಪೈಪ್‌ ಅನ್ನು ಮೇಲೆ ಸ್ಥಳಾಂತರಿಸಿದರೆ ಸಮಸ್ಯೆ ಬಗೆ ಹರಿಯಲಿದೆ. -ಎಸ್‌.ವಿ.ರಾಮದಾಸ್‌, ಪೌರಾಯುಕ್ತ, ನಗರಸಭೆ

-ಕೆ.ಎಸ್‌. ಬನಶಂಕರ ಆರಾಧ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next