Advertisement

ಭೂಮಿ ಪೂಜೆ: ನವ ಭಾರತದ ನವೋತ್ಥಾನಕ್ಕೆ ನಾಂದಿ

03:32 AM Aug 07, 2020 | Hari Prasad |

ಚರಿತ್ರೆಯ ಎಲ್ಲ ಅನ್ಯಾಯಗಳನ್ನು, ಅಪಮಾನಗಳನ್ನು ಅಳಿಸುವುದಕ್ಕಾಗುವುದಿಲ್ಲ. ಆದರೆ ನೋವಿನ ನೆನಪು ಮಾಡುವ, ಸಾಮರಸ್ಯದ ವಾತಾವರಣ ನಿರ್ಮಿಸಲು ಅಡ್ಡಿ ಮಾಡುವ ಸಂಗತಿಗಳನ್ನು ನಿವಾರಿಸಿಕೊಂಡು ಸದ್ಭಾವನೆಯಿಂದ ಪರಸ್ಪರ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಇಂಥ ನಿರ್ಮಾಣ ಕಾರ್ಯವನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕಿದೆ.

Advertisement

– ಮಹಾದೇವಯ್ಯ ಕರದಳ್ಳಿ, ಕಲಬುರಗಿ

ರಾಮಜನ್ಮಭೂಮಿ ಹೋರಾಟದಿಂದ ದೇಶದಲ್ಲಿ ಮನೆಮಾತಾಗಿದ್ದ ಅಯೋಧ್ಯೆ ವಿಚಾರವು ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಭೂಮಿ ಪೂಜನದಿಂದ ಈಗ ವಿಶ್ವಾದ್ಯಂತ ಸುದ್ದಿಯಲ್ಲಿದೆ.

ಲಾಕ್‌ಡೌನ್‌ ಅವಧಿಯಲ್ಲಿ ದೂರದರ್ಶನ ರಾಮಾಯಣ ಧಾರಾವಾಹಿ ಮರುಪ್ರಸಾರ ಮಾಡಿದ್ದರಿಂದ ಶ್ರೀರಾಮನ ಬಗ್ಗೆ ಎಲ್ಲ ವಿವರಗಳು ಜನಸಾಮಾನ್ಯರಿಗೆ ತಲುಪಿವೆ.

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಆವಶ್ಯಕತೆಯನ್ನು, ಮಹತ್ವವನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಆವಶ್ಯಕತೆ ಇದೆ. ಅವರ ಮನದಲ್ಲಿನ ಹತ್ತಾರು ಪ್ರಶ್ನೆ-ಸಂಶಯಗಳಿಗೆ ಸಮಾಧಾನ ಹೇಳಬೇಕಿದೆ.

Advertisement

ಅಯೋಧ್ಯೆ ನೋಡಿದವರಿಗೆಲ್ಲ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದು ಗೊತ್ತು. ಅಯೋಧ್ಯೆಯ ಭೇಟಿಗೆ ಹೋದವರಿಗೆ, ಸ್ವಾತಂತ್ರ್ಯ ಬಂದು ಇಷ್ಟು ದಶಕಗಳು ಕಳೆದರೂ ಪರಸ್ಪರ ಕಚ್ಚಾಟ, ಕಾದಾಟ, ಕೆಸರೆರ ಚಾಟದಿಂದಾಗಿ ಮಹಾನ್‌ ರಾಷ್ಟ್ರೀಯ ಪುರುಷನಿಗೆ ಒಂದು ಗೌರವಪೂರ್ಣ ಮಂದಿರ ನಿರ್ಮಿಸಲು ಆಗಲಿಲ್ಲವಲ್ಲ ಎಂದೆನಿಸುತ್ತಲೇ ಇತ್ತು.

ವಿದೇಶಿ ನಾಯಕರು, ಪ್ರವಾಸಿಗರು ಬಂದರೆ ರಾಜ್‌ ಘಾಟ್‌ಗೆ ಕರೆದೊಯ್ಯುವ ನಾವು, ಅವರು ರಾಮಾಯಣದ ಕೀರ್ತಿ ಕೇಳಿ ರಾಮ ಜನ್ಮಭೂಮಿ ತೋರಿಸಿ ಎಂದು ಕೇಳಿದರೆ ತೋರಿಸಲು ಅಲ್ಲಿ ಏನಿತ್ತು? ಸರಳುಗಳ ಮಧ್ಯೆ, ಸುಸಜ್ಜಿತ ಶಸ್ತ್ರಗಳಿಂದ ರಕ್ಷಿಸಲ್ಪಟ್ಟ, ಭಕ್ತರನ್ನು ಭಗವಂತನಿಂದ ದೂರ ಇಟ್ಟ ಬೇಲಿ ದಾಟಿ ಹೋಗಲು ಕಿರಿಕಿರಿ ಅನ್ನಿಸುವ ಒಂದು ತಾತ್ಕಾಲಿಕ ಜಾಗ ತೋರಿಸಬೇಕಲ್ಲ ಎಂಬ ವೇದನೆ ಆಗುತ್ತಿತ್ತು.

ನಮ್ಮ ಸನಾತನ, ಪುರಾತನ ಕಾವ್ಯಗಳಲ್ಲಿ ಮನೋಜ್ಞವಾಗಿ ವರ್ಣಿಸಲ್ಪಟ್ಟ, ಶತಮಾನಗಳಿಂದ, ಪೀಳಿಗೆ ಪೀಳಿಗೆಯವರು ನಂಬಿಕೊಂಡು ಬಂದ ರಾಮಜನ್ಮಸ್ಥಾನದ ಬಗ್ಗೆ ಇನ್ನೂ ವಾದ – ವಿವಾದ ಇದೆ ಎಂದು ಹೇಳಿಕೊಳ್ಳುವ ಪರಿಸ್ಥಿತಿ ಇದ್ದದ್ದು ಭಾರತ ದಂತಹ ಭವ್ಯ ಇತಿಹಾಸವುಳ್ಳ ರಾಷ್ಟ್ರಕ್ಕೆ ಶೋಭೆ ತರುವ ಸಂಗತಿಯಲ್ಲ ಎಂದು ಮನಸ್ಸಿಗೆ ಕಿರಿಕಿರಿ ಆಗುತ್ತಿತ್ತು.


ಗಾಂಧೀಜಿಯವರು ಪ್ರತಿಪಾದಿಸುತ್ತಿದ್ದ ರಾಮರಾಜ್ಯದ ಮೌಲ್ಯಗಳನ್ನು ನೀಡಿದ ಹಾಗೂ ರಾಷ್ಟ್ರೀಯತೆಯ ಮೌಲ್ಯಗಳ ಪ್ರತಿಬಿಂಬವಾದ ಮರ್ಯಾದಾ ಪುರುಷೋತ್ತಮನಿಗಿಂತ, ಡಾಂಭಿಕ ಜಾತ್ಯತೀತತೆ ನಮಗೆ ಹೆಚ್ಚು ಪ್ರಿಯವಾಗಿ ಬಿಟ್ಟಿದೆ ಎಂಬುದನ್ನು ಅಯೋಧ್ಯೆ ವಿವಾದ ಸಾರುತ್ತಾ ಬಂದಿತ್ತು.

ಅಮಾಯಕ ಮುಸಲ್ಮಾನರು ರಾಜಕೀಯದ ಮಿಥ್ಯಾ ಪ್ರಚಾರದ ಪ್ರಭಾವದಿಂದ ನಮ್ಮ ರಾಷ್ಟ್ರೀಯ ಪರಂಪರೆಯನ್ನು ವಿರೋಧಿಸುವುದನ್ನು ಕಂಡು ಸಾಮಾನ್ಯ ಭಾರತೀಯರ ಮನ ಮರುಗುತ್ತಿತ್ತು. ರಾಮಜನ್ಮ ಮಂದಿರ ನಿರ್ಮಾಣ ಕೇವಲ ಮತಶ್ರದ್ಧೆಯ ಅಥವಾ ಪೂಜಾವಿಧಾನದ ಭಾಗವಲ್ಲ ಎಂಬುದು ಬೇಗ ಎಲ್ಲರಿಗೂ ಅರ್ಥವಾಗಲಿ ಎಂಬುದು ಭಾರತೀಯರ ಆಶಯವಾಗಿತ್ತು.

ಅಯೋಧ್ಯೆ ರಾಮಮಂದಿರ ಹೋರಾಟಕ್ಕೆ ಶತಮಾನದ ಇತಿಹಾಸವಿದೆ. ವಿಶ್ವದಲ್ಲಿ ಒಂದು ಮಂದಿರ ನಿರ್ಮಾಣಕ್ಕಾಗಿ ಇಷ್ಟು ದೀರ್ಘ‌ಕಾಲ ಹೋರಾಟ ನಡೆದ ನಿದರ್ಶನಗಳಿಲ್ಲ. ವಿರೋಧ ಎಷ್ಟೇ ಪ್ರಬಲವಾಗಿದ್ದರೂ, ಜನಪರ ಆಂದೋಲನವನ್ನು ಹತ್ತಿಕ್ಕಲಾಗದು ಎನ್ನುವುದಕ್ಕೆ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಸಾಕ್ಷಿಯಾಗಿದೆ.

ಬ್ರಿಟಿಷರು ಅದನ್ನು ಹತ್ತಿಕ್ಕುವ ಪ್ರಯತ್ನ ಮಾಡಿದಂತೆ ಹೋರಾಟ ಹತ್ತು ಹಲವು ರೂಪಗಳಲ್ಲಿ ಪುಟಿದೇಳುತ್ತಿತ್ತು. ಯಾವುದೇ ಆಂದೋಲನವಾಗಿರಲಿ, ಅದರಲ್ಲಿ ಭಾಗವಹಿಸುವವರಿಗೆ ತೊಂದರೆ, ಅಡ್ಡಿ ಆತಂಕ ಉಂಟುಮಾಡಿ ಅದರ ವಿಜಯವನ್ನು ತಾತ್ಕಾಲಿಕವಾಗಿ ಮುಂದೂಡಬಹುದೇ ವಿನಾ ಶಾಶ್ವತವಾಗಿ ಸಾಧ್ಯವಿಲ್ಲ ಎಂಬುದನ್ನು ವಿಶ್ವದಲ್ಲಿ ನಡೆದ ಅನೇಕ ಹೋರಾಟಗಳು ಸ್ಪಷ್ಟಪಡಿಸಿವೆ.


ಪರ್ವತಗಳು ನಿಂತಿರುವ ತನಕ, ನದಿಗಳು ಹರಿಯುವ ತನಕ, ರಾಮನ ಸಾಹಸಗಾಥೆಗಳು ಪೃಥ್ವಿಯಲ್ಲಿ ಹೇಳಲ್ಪಡುವವು, ಹಾಡಲ್ಪಡುವವು, ಹೃದಯದಲ್ಲಿ ಉಳಿಯುವವು ಎಂಬ ಮಾತು ಸಂಸ್ಕೃತ ಶ್ಲೋಕದಲ್ಲಿದೆ. ರಾಮಾಯಣದ ಪ್ರಸಿದ್ಧಿ ಮತ್ತು ಪ್ರಭಾವ ಭಾರತ ಮಾತ್ರವಲ್ಲ ಸುತ್ತಲಿನ ಅನೇಕ ರಾಷ್ಟ್ರಗಳಿಗೂ ವ್ಯಾಪಿಸಿದೆ. ವಾಲ್ಮೀಕಿ ರಾಮಾಯಣ ಸೇರಿದಂತೆ ನೂರಾರು ಭಾಷೆಗಳಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಚರಿತ್ರೆ ರಚಿತವಾಗಿದೆ. ಅಮರ ಕಾವ್ಯ ವನ್ನಾಗಿಸಿದೆ.

ಪ್ರಾಪಂಚಿಕ ಜನರ ದುಃಖ ದುಮ್ಮಾನಗಳಿಗೆಲ್ಲ ರಾಮಾಯಣದಲ್ಲಿ ಉತ್ತರ ಸಿಗುತ್ತದೆ. ಆದರ್ಶ ಬಾಲಕ, ಯುವಕ, ವಿದ್ಯಾರ್ಥಿ, ಶಿಷ್ಯ, ಮಗ, ಸೋದರ, ಪತಿ, ರಾಜ, ಗೆಳೆಯ, ಗುರು, ಮಾರ್ಗದರ್ಶಕ ಮುಂತಾದ ಅನೇಕ ಸಂಬಂಧಗಳಿಗೆ ಅದರ್ಶವಾಗಿ ಶ್ರೀರಾಮ ಜನಮಾನಸದಲ್ಲಿ ಸ್ಥಾಪಿತವಾಗಿದ್ದಾನೆ. ಗ್ರಾಮ, ನಗರ, ಜಾತಿ, ಮತ, ಪಂಥ, ಪಂಗಡ, ಪ್ರದೇಶ ಎಲ್ಲವನ್ನೂ ಮೀರಿ ಜನ ಶ್ರೀರಾಮನನ್ನು ಆರಾಧಿಸುತ್ತಾರೆ.

ಸುಪ್ರಸಿದ್ಧ ಆಂಗ್ಲ ಲೇಖಕ ಕೆ.ಆರ್‌. ಶ್ರೀನಿವಾಸ ಅಯ್ಯಂಗಾರ್‌ ಅವರ ಪ್ರಕಾರ ರಾಮಾಯಣದ ಕೃತಿಗಳ ಸಂಖ್ಯೆ ಮೂರರಿಂದ ಮೂವತ್ತು ಸಹಸ್ರ ಇರಬಹುದು! ಎಲ್ಲ ಭಾಷೆಗಳಲ್ಲಿ, ಆಡುನುಡಿಗಳಲ್ಲಿ ರಾಮಾಯಣ ಕಥಾಶ್ರವಣ ಶತಮಾನಗಳಿಂದ ಅವಿಚ್ಛಿನ್ನವಾಗಿ ನಡೆದು ಬಂದಿದೆ. ಹಿಂದೂ, ಬುದ್ಧ, ಜೈನ ಪಾಠಗಳಲ್ಲಿನ ರಾಮಾಯಣ ಗಾಥೆ ಅವುಗಳಲ್ಲಿನ ರೂಪಾಂತರ, ಪಠಣಗಳಲ್ಲಿನ ವೈವಿಧ್ಯ ಏಷ್ಯಾ ಖಂಡ ಮೀರಿ ಪ್ರಚಲಿತವಿದೆ.

ರಾಮ, ಲಕ್ಷ್ಮಣ, ಸೀತೆ, ರಾವಣರ ಮೂಲ ಕಥೆ ತನ್ನ ಸ್ವಂತಿಕೆ ಯನ್ನು, ಸ್ಫಟಿಕದಂತಹ ನಿರ್ಮಲತೆಯನ್ನು ವೈಶಿಷ್ಟ್ಯ ಪೂರ್ಣವಾಗಿ ಉಳಿಸಿಕೊಂಡಿದೆ. ಭಾರತದ ಸರ್ವೋಚ್ಚ ಆದರ್ಶಗಳನ್ನು, ನೈತಿಕ ಮೌಲ್ಯಗಳನ್ನು, ದುಷ್ಟಶಕ್ತಿಗಳ ಮೇಲಿನ ವಿಜಯ ಶಿಷ್ಟಶಕ್ತಿಯದ್ದೇ ಆಗಿರುತ್ತದೆ ಎಂಬ ನಂಬಿಕೆಯ ಶ್ರೇಷ್ಠ ದಾಖಲೆ ರಾಮಾಯಣ ಮಹಾಕಾವ್ಯವಾಗಿದೆ. ಲಲನ್‌ ಪ್ರಸಾದ ವ್ಯಾಸ್‌- “ರಾಮಾಯಣದ ವಿಶ್ವ ಪ್ರಭಾವ ಮತ್ತು ಜಾಗತಿಕ ಪಾತ್ರ’ ಎಂಬ ತಮ್ಮ ಕೃತಿಯಲ್ಲಿ “ರಾಮಾಯಣ ಜನ್ಮ ತಳೆದದ್ದು ಭಾರತದಲ್ಲಿ, ಪುರಾತನ ಕಾಲದಲ್ಲಿ ಎಂಬುದು ನಿಜವಾದರೂ ಈಗ ಅದು ಇಡೀ ಜಗತ್ತಿಗೆ ಸೇರಿದ ನೈತಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಅದ್ವಿತೀಯ ನಿಧಿ” ಎಂದಿದ್ದಾರೆ.

ಯುಗಯುಗಳಿಂದ ನಮ್ಮ ಸನಾತನ ರಾಷ್ಟ್ರೀಯ ಜೀವನಕ್ಕೆ ತಮ್ಮ ತಾತ್ವಿಕ ಬಲ ನೀಡಿ ಪೋಷಿಸಿದ ಧರ್ಮಾಚಾರ್ಯರು, ಅವತಾರ ಪುರುಷರ ಮಂದಿರಗಳಿದ್ದರೆ ಆ ಮೌಲ್ಯಗಳ ಪುನರುಜ್ಜೀವನ, ಸಂರಕ್ಷಣೆ ಜನಮಾನಸದಲ್ಲಿ ಪ್ರಬಲವಾಗಿ ಇರುತ್ತವೆ. ಬಾಬರನಿಲ್ಲದೆ ಭಾರತ ಭಾರತವಾಗಿರಬಹುದು. ಆದರೆ ಶ್ರೀರಾಮನಿಲ್ಲದ ಭಾರತ ಭಾರತವಾಗಿರಲಾರದು! ಅಯೋಧ್ಯೆಯ ರಾಮಮಂದಿರ ಭಾರತದ ಭವಿಷ್ಯತ್ತಿನ ದೃಷ್ಟಿಯಿಂದ ನಿರ್ಣಾಯಕವಾಗಿರುವುದು ಈ ಎಲ್ಲ ಮೌಲ್ಯಯುತ ಚಿಂತನೆಗಳಿಂದಾಗಿ ಎಂಬುದನ್ನು ಪ್ರತಿ ಭಾರತೀಯನೂ ಅರಿತುಕೊಳ್ಳಬೇಕು. ಜಾತಿ, ಮತ, ಪ್ರದೇಶ, ಭಾಷೆ, ಪಂಥ, ಪಂಗಡ ಎಲ್ಲ ಮರೆತು ಪ್ರತಿಯೊಬ್ಬ ಭಾರತೀಯನೂ ರಾಮಮಂದಿರ ನಿರ್ಮಾಣವನ್ನು ಬೆಂಬಲಿಸಬೇಕು. ನಿಜ ಭಾರತೀಯತೆಯನ್ನು ಮೆರೆಯಬೇಕು.

ತತ್ವಜ್ಞಾನಿ ಟಾಯ್ನಬಿ ಹೇಳಿದಂತೆ ಪ್ರತಿಯೊಬ್ಬ ವಿಜಯೀ ಆಕ್ರಮಣಕಾರಿಯೂ ಎಲ್ಲೆಡೆ ಮಾಡಿರುವುದು ಸೋತವರ ಸಂಸ್ಕೃತಿ, ಪೂಜಾಸ್ಥಾನಗಳನ್ನು ನಾಶಮಾಡಿ ಅದರ ಜಾಗದಲ್ಲಿ ತಮ್ಮ ಪೂಜಾ ಸ್ಥಳಗಳನ್ನು ಕಟ್ಟಿರುವು ದು. ಆದರೆ ಅವು ಅವರಿಗೆ ಪ್ರಾರ್ಥನಾ ಮಂದಿರಗಳಲ್ಲ, ಕೇವಲ ವಿಜಯದ ಸ್ಮಾರಕಗಳು. ಸೋತವರಿಗೆ ಅವಮಾನ ನೆನಪಿಸುವ ಸ್ಮಾರಕಗಳು. ಸದ್ಭಾವನೆ ಯಿಂದ ಪರಸ್ಪರ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ರಾಮ ಮಂದಿರದಂಥ ನಿರ್ಮಾಣ ಕಾರ್ಯವನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕಿದೆ. ಅಯೋಧ್ಯೆಯ ರಾಮ ಮಂದಿರ ಕೆಲವೇ ವರ್ಷಗಳಲ್ಲಿ ಭವ್ಯವಾಗಿ ಎದ್ದು ನಿಲ್ಲಲಿದೆ. ಅದನ್ನು ನೋಡುವ ಸೌಭಾಗ್ಯ ನಮಗೆ ಕರುಣಿಸಿದ್ದಕ್ಕೆ ಪರಮೇಶ್ವರನಿಗೆ ಧನ್ಯವಾದ ಅರ್ಪಿಸೋಣ.

ವಿವೇಕಾನಂದರು ಹೇಳುವಂತೆ ತನ್ನ ಚರಿತ್ರೆಯ ಬಗ್ಗೆ ನಾಚಿಕೆ ಪಡುವ ದೇಶಕ್ಕೆ ಭವಿಷ್ಯವೇ ಇಲ್ಲ. ನಮ್ಮ ದೇಶದ ಗೌರವಕ್ಕೆ, ಹೆಮ್ಮೆಗೆ ಕಾರಣರಾದ ಮಹಾಪುರುಷರ ಬಗ್ಗೆ, ಮಾನಬಿಂದುಗಳ ಬಗ್ಗೆ ದೇಶದ ಪ್ರತಿ ಪ್ರಜೆ ಹೆಮ್ಮೆಪಡಬೇಕು.

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು edit@udayavani.comಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next