Advertisement

ಎಟಿಎಂ ಹೊರೆ: ಸೌಲಭ್ಯ ಹಿಂದೆಗೆತ ಸರಿಯಲ್ಲ

06:00 AM Nov 23, 2018 | |

ದೇಶಾದ್ಯಂತ ಮುಂಬರುವ ಮಾರ್ಚ್‌ ವೇಳೆ ಒಂದು ಲಕ್ಷಕ್ಕೂ ಅಧಿಕ ಎಟಿಎಂಗಳು ಮುಚ್ಚುವ ಸಾಧ್ಯತೆಯಿದೆ ಎನ್ನುವುದು ಜನಸಾಮಾನ್ಯರಿಗೆ ಖುಷಿ ಕೊಡುವ ಸುದ್ದಿಯಲ್ಲ. ಆರ್‌ಬಿಐ ಇತ್ತೀಚೆಗೆ ಎಟಿಎಂಗಳ ಸಾಫ್ಟ್ವೇರ್‌ ಮತ್ತು ಹಾರ್ಡ್‌ವೇರ್‌ ಮೇಲ್ದರ್ಜೆಗೇರಿಸಲು ಹಾಗೂ ಎಟಿಎಂ ಸುರಕ್ಷತೆಯನ್ನು ಸುಧಾರಿಸಲು ಕ್ರಮಕೈಗೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದು, ಇದನ್ನು ಯಥಾವತ್ತು ಅನುಷ್ಠಾನಿಸಲು ಭಾರೀ ಪ್ರಮಾಣದ ಖರ್ಚು ತಗಲುತ್ತದೆ. ಅಲ್ಲದೆ ಎಟಿಎಂಗಳ ನಿರ್ವಹಣಾ ವೆಚ್ಚವೂ ಏರಲಿದೆ. ಈಗಾಗಲೇ ವಸೂಲಾಗದ ಸಾಲ ಮತ್ತು ವ್ಯವಹಾರ ಕುಸಿತದಿಂದ ಲಾಭಾಂಶ ಕಡಿಮೆಯಾಗಿ ತತ್ತರಿಸುತ್ತಿರುವ ಬ್ಯಾಂಕ್‌ಗಳಿಗೆ ಈ ಹೊಸ ಖರ್ಚು ಇನ್ನೊಂದು ಹೊರೆಯಿಂದಾಗಿ ಕಂಡಿದ್ದು, ಇದರಿಂದ ಪಾರಾಗಲು ಅವುಗಳು ಈಗಿರುವ ಅರ್ಧದಷ್ಟು ಎಟಿಎಂಗಳನ್ನೇ ಮುಚ್ಚಲು ಮುಂದಾಗುವ ಸಾಧ್ಯತೆಯಿದೆ ಎಂದು ಎಟಿಎಂ ಉದ್ಯಮದ ಮಹಾ ಒಕ್ಕೂಟವಾಗಿರುವ ಕ್ಯಾಟ್ಮಿ ಹೇಳಿದೆ. 

Advertisement

ರಸ್ತೆ ಬದಿಯಲ್ಲೇ ಹಣದ ಪೆಟ್ಟಿಗೆ ಎಂಬ ಅಚ್ಚರಿಯೊಂದಿಗೆ ಪ್ರಾರಂಭವಾದ ಎಟಿಎಂ ಸೌಲಭ್ಯಕ್ಕೆ ಜನರು ಬಹಳ ಬೇಗ ಒಗ್ಗಿಕೊಂಡಿದ್ದರು. ತುರ್ತು ಸಂದರ್ಭದಲ್ಲಿ ನಗದು ಹಣ ಪಡೆದುಕೊಳ್ಳಲು ಇರುವ ಸೌಲಭ್ಯ ಎಂದು ಆರಂಭದಲ್ಲಿ ಭಾವಿಸಲಾಗಿದ್ದರೂ ಅನಂತರ ಎಟಿಎಂ ದೈನಂದಿನ ವ್ಯವಹಾರದ ಅವಿಭಾಜ್ಯ ಅಂಗವೇ ಆಗಿತ್ತು. ಬ್ಯಾಂಕ್‌ಗಳಿಗೆ ನಾಲ್ಕೈದು ಸರಣಿ ರಜೆ ಬರುವ ಸಂದರ್ಭದಲ್ಲಂತೂ ಎಟಿಎಂಗಳೇ ಆಪತಾºಂಧವ. 500-1000 ರೂ.ಯಂಥ ಚಿಕ್ಕ ಮೊತ್ತಕ್ಕಾಗಿಯೂ ಬ್ಯಾಂಕಿಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಫಾರ್ಮ್ ತುಂಬಿಸಿ ಹಣ ಪಡೆಯುವ ಕಷ್ಟವನ್ನು ನಿವಾರಿಸುವ ಎಟಿಎಂ ಯಂತ್ರಗಳು ನಗರಗಳಲ್ಲೂ ಹಳ್ಳಿಗಳಲ್ಲೂ ಏಕಪ್ರಕಾರವಾಗಿ ಜನಪ್ರಿಯವಾಗಿದ್ದವು. ಹೀಗೆ ಜನರಿಗೆ ಹಲವು ಅನುಕೂಲತೆಗಳನ್ನು ಒದಗಿಸಿದ್ದ ಎಟಿಎಂಗಳ ಸಂಖ್ಯೆಯನ್ನು ಏಕಾಏಕಿ ಅರ್ಧಕ್ಕಿಳಿಸಿದರೆ ಖಂಡಿತ ಅದು ಪ್ರತಿಕೂಲ ಪರಿಣಾಮ ಬೀರಲಿದೆ. ಇದರಿಂದ ನೋಟು ಅಪನಗದೀಕರಣದಂಥ ಪರಿಸ್ಥಿತಿ ಮತ್ತೂಮ್ಮೆ ಸೃಷ್ಟಿಯಾದೀತು ಎಂಬ ಎಚ್ಚರಿಕೆಯನ್ನು ನಮ್ಮನ್ನಾಳುವವರು ಗಂಭೀರವಾಗಿ ಪರಿಗಣಿಸಬೇಕು. 

ಎಟಿಎಂ ಕಡಿಮೆಯಾದರೆ ಜನರು ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನು ಹೆಚ್ಚು ಅವಲಂಬಿಸುತ್ತಾರೆ ಎನ್ನುವ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಈಗಲೂ ಬಹುತೇಕ ವ್ಯವಹಾರ ನಡೆಯುವುದು ನಗದಿನಲ್ಲೇ. ಅಲ್ಲದೆ, ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಇನ್ನೂ ಜನರು ಪೂರ್ತಿಯಾಗಿ ಒಗ್ಗಿಕೊಂಡಿಲ್ಲ. ಅದಕ್ಕಿನ್ನೂ ಬಹಳ ಸಮಯ ಬೇಕು. ಡಿಜಿಟಲ್‌ ಇಂಡಿಯಾದ ಮೂಲಸೌಲಭ್ಯಗಳೂ ಇನ್ನೂ ಪೂರ್ತಿಯಾಗಿ ಅನುಷ್ಠಾನಗೊಂಡಿಲ್ಲ. ಹೀಗಿರುವಾಗ ದಿಢೀರ್‌ ಎಂದು ಎಟಿಎಂಗಳನ್ನು ಮುಚ್ಚಿದರೆ ಎಲ್ಲವೂ ಗೊಂದಲಮಯವಾಗಬಹುದು. ಮಾತ್ರವಲ್ಲದೆ, ಎಟಿಎಂ ನಿರ್ವಹಣೆಯಲ್ಲಿರುವ ಲಕ್ಷಾಂತರ ಮಂದಿಯ ನೌಕರಿಯೂ ನಷ್ಟವಾಗಲಿದೆ. 

ಎಟಿಎಂಗಳಿಂದ ಬ್ಯಾಂಕ್‌ಗಳಿಗೆ ಲಾಭವಿಲ್ಲ ಎನ್ನುವುದು ನಿಜ. ಆದರೆ ಇದೇ ವೇಳೆ ಇದು ಬ್ಯಾಂಕ್‌ಗಳ ನಗದು ವಿದ್‌ಡ್ರಾ ಹೊರೆಯನ್ನೂ ಕಡಿಮೆಗೊಳಿಸಿದೆ. ಎಟಿಎಂ ಬರುವ ಪೂರ್ವದಲ್ಲಿ ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವುದು ಎಲ್ಲ ಬ್ಯಾಂಕ್‌ಗಳಲ್ಲಿ ಕಾಣಸಿಗುವ ಸಾಮಾನ್ಯ ನೋಟವಾಗಿತ್ತು. ಅಲ್ಲದೆ, ಬ್ಯಾಂಕ್‌ಗಳ ಸ್ಟೇಷನರಿ ಖರ್ಚುವೆಚ್ಚಗಳೂ ಎಟಿಎಂನಿಂದಾಗಿ ಕಡಿಮೆಯಾಗಿತ್ತು. ಹೀಗೆ ಒಂದು ದೃಷ್ಟಿಯಿಂದ ನೋಡಿದರೆ ಎಟಿಎಂ ಜನರಿಗೆ ಮಾತ್ರವಲ್ಲದೆ ಬ್ಯಾಂಕ್‌ಗಳಿಗೂ ಅನುಕೂಲಕರವಾಗಿದ್ದವು. ಆದರೆ ಎಟಿಎಂಗಳಿಗೆ ಸಂಬಂಧಿಸಿದ ನಿಯಮಗಳು ಬಿಗುವಾಗುವಾಗ ಬ್ಯಾಂಕ್‌ಗಳಿಗೆ ಅವುಗಳು ಬಿಳಿಯಾನೆಗಳಂತೆ ಕಾಣಲಾರಂಭಿಸಿರುವುದು ವಿಪರ್ಯಾಸ. 

ಹಾಗೆಂದು ದೇಶದಲ್ಲಿ ಎಟಿಎಂ ಜಾಲ ಪರಿಪೂರ್ಣವಾಗಿದೆ ಎಂದು ಹೇಳುವಂತಿಲ್ಲ. ವರ್ಷದ ಯಾವುದೇ ದಿನದಲ್ಲಿ ಶೇ. 10ರಷ್ಟು ಎಟಿಎಂಗಳು ನಿಷ್ಕ್ರಿಯವಾಗಿರುತ್ತವೆ ಎನ್ನುತ್ತದೆ ಒಂದು ವರದಿ. ಇದೊಂದೆಡೆಯಾದರೆ ಎಟಿಎಂಗಳ ಹಂಚಿಕೆಯೂ ಅವ್ಯವಸ್ಥಿತವಾಗಿದೆ. ಎಟಿಎಂಗಳು ಹೆಚ್ಚು ಕೇಂದ್ರೀಕೃತವಾಗಿರುವುದು ನಗರ ಪ್ರದೇಶಗಳಲ್ಲಿ. ಶೇ.80ರಷ್ಟು ಎಟಿಎಂಗಳು ನಗರದ ನಾಗರಿಕರ ಸೇವೆಗಾಗಿಯೇ ಇವೆ. ಇನ್ನುಳಿದ ಶೇ. 20 ಎಟಿಎಂಗಳು ಹಳ್ಳಿ ಭಾಗಗಳಲ್ಲಿ ಹಂಚಿಹೋಗಿವೆ. ಉತ್ತರ ಪ್ರದೇಶ, ಬಿಹಾರದಂಥ ರಾಜ್ಯಗಳಲ್ಲಿ ಈಗಲೂ ಜನರು ಎಟಿಎಂಗಾಗಿ 40 ಕಿ. ಮೀ ದೂರ ಹೋಗಬೇಕು ಎನ್ನುವುದು ಎಟಿಎಂಗಳ ಅವ್ಯವಸ್ಥಿತ ಹಂಚಿಕೆಗೊಂದು ಉದಾಹರಣೆ. 

Advertisement

ಎಟಿಎಂಗಳ ಸೌಲಭ್ಯವನ್ನು ಸಮರ್ಪಕವಾಗಿ ಮಾಡಿದರೆ ಈಗ ಎದುರಾಗಿರುವ ಸಮಸ್ಯೆ ಅರ್ಧ ಪರಿಹಾರವಾಗಬಹುದು. ನಗರಗಳಲ್ಲಿ ಸಾಲಾಗಿ ಒಂದರ ಪಕ್ಕ ಇನ್ನೊಂದು ಎಟಿಎಂ ಇದೆ. ಅದೇ ನಗರ ವ್ಯಾಪ್ತಿಯಿಂದ ಹೊರಗೆ ಹೋದರೆ ಕೆಲವೊಮ್ಮೆ ನಾಲ್ಕೈದು ಕಿ.ಮೀ. ದೂರ ಹೋದರೂ ಎಟಿಎಂಗಳು ಸಿಗುವುದಿಲ್ಲ. ಈ ಅವ್ಯವಸ್ಥೆಯನ್ನು ತಪ್ಪಿಸಲು ಜನಸಂಖ್ಯೆ ಆಧಾರದಲ್ಲಿ ಇಂತಿಷ್ಟು ದೂರಕ್ಕೊಂದು ಎಟಿಎಂ ಇರಬೇಕೆಂಬ ನಿಯಮ ರೂಪಿಸಿದರೆ ಉತ್ತಮ. ಆದರೆ ಹೀಗೆ ಮಾಡಿದ ಬಳಿಕ ಎಟಿಎಂಗಳು ದಿನದ 24 ತಾಸು ಯಾವುದೇ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಾದದ್ದು ಬ್ಯಾಂಕ್‌ಗಳ ಹೊಣೆ. ಲಾಭವಿಲ್ಲ ಅಥವಾ ಖರ್ಚು ಹೆಚ್ಚಾಗುತ್ತದೆ ಎಂದು ಸೌಲಭ್ಯವನ್ನು ಹಿಂದೆಗೆದುಕೊಳ್ಳುವುದು ವ್ಯಾವಹಾರಿಕ ಚಿಂತನೆಯಾಗಿದ್ದು, ಅಭಿವೃದ್ಧಿಪರವಲ್ಲ. ಸೌಲಭ್ಯವನ್ನು ಲಾಭದ ದೃಷ್ಟಿಯಿಂದಲೂ ನೋಡಬಾರದು. 

Advertisement

Udayavani is now on Telegram. Click here to join our channel and stay updated with the latest news.

Next