Advertisement

ಮಾಜಿ ಪತಿಯ ಮದುವೆಯಲ್ಲಿ ನಾನು, ಮಕ್ಕಳು

06:00 AM Dec 08, 2018 | |

ಫ‌ರ್ಹಾನ್‌, ಲೈಲಾರನ್ನು ಮದುವೆಯಾಗಲು ನಿರ್ಧರಿಸಿದಾಗ ನಾನು ತುಂಬಾ ಖುಷಿಪಟ್ಟೆ. ಸತ್ಯವೇನೆಂದರೆ, ಆಕೆಯನ್ನು ಮದುವೆಯಾಗು ಎಂದು ನಾನೇ ಆತನಿಗೆ ಹುರಿದುಂಬಿಸಿದ್ದು. ಜನರಿಗೆ ಇದೆಲ್ಲ ವಿಚಿತ್ರವೆನಿಸಿತು, ಆದರೆ ನನಗಲ್ಲ. ನನ್ನ ಮಕ್ಕಳೊಡನೆ ಅವರ ಮದುವೆಗೆ ಹೋಗಿದ್ದೆ. ತನಗೆ ಸರಿಹೊಂದುವಂಥ ವ್ಯಕ್ತಿಯನ್ನು ಫ‌ರ್ಹಾನ್‌ ಆಯ್ಕೆಮಾಡಿಕೊಂಡ ಎಂಬ ಕಾರಣಕ್ಕಾಗಿ ನನಗೆ ಸಂತೋಷವಾಗಿತ್ತು.

Advertisement

ನನ್ನ ಮಾಜಿ ಪತಿ ಫ‌ರ್ಹಾನ್‌ ಈಗಷ್ಟೇ 50ನೇ ಸಂವತ್ಸರಕ್ಕೆ ಕಾಲಿಟ್ಟ. ಫ‌ರ್ಹಾನ್‌ನ ಹೆಂಡತಿ ಲೈಲಾ ಆತನಿಗಾಗಿ ಅದ್ಭುತ ಪಾರ್ಟಿ ಆಯೋಜಿಸಿದ್ದರು. ಹೌದು, ಆ ಪಾರ್ಟಿಗೆ ನನ್ನನ್ನೂ ಆಹ್ವಾನಿಸಲಾಗಿತ್ತು.  ಫ‌ರ್ಹಾನ್‌ ಹುಟ್ಟುಹಬ್ಬಕ್ಕೆ ನಾನು ಬಂದದ್ದನ್ನು ನೋಡಿ ಅಲ್ಲಿ ನೆರೆದಿದ್ದವರ ಮುಖದಲ್ಲಿ ಹೊಮ್ಮುತ್ತಿದ್ದ ಬಗೆಬಗೆಯ ಭಾವನೆಗಳನ್ನು ನೋಡಿ ಆಶ್ಚರ್ಯವಾಯಿತು. ಸತ್ಯವೇನೆಂದರೆ, ನಾನು ಅಂದು ನಿಜಕ್ಕೂ ಸಂತೋಷವಾಗಿದ್ದೆ, ಜೋರಾಗಿ ನಗುತ್ತಾ, ಅದ್ಭುತವಾಗಿ ಅಲ್ಲಿ ಸಮಯ ಕಳೆದೆ. “ಅಂಥ ಸನ್ನಿವೇಶದಲ್ಲಿ ನಾನು ಅದ್ಹೇಗೆ ಅಷ್ಟೊಂದು ಖುಷಿಯಾಗಿದ್ದೆ?’ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇತ್ತು. 

ಫ‌ರ್ಹಾನ್‌ನನ್ನು ಮೊದಲು ಭೇಟಿಯಾದಾಗ ನನಗೆ 20ರ ಹರೆಯ. ನಾವು ಮದುವೆಯಾದೆವು, ಆ ಸಂಸಾರದಲ್ಲಿ ನಮಗೆ ಇಬ್ಬರು ಮಕ್ಕಳಾದರು. ನನ್ನ 32ನೇ ವಯಸ್ಸಿನಲ್ಲಿ ಫ‌ರ್ಹಾನ್‌ನೊಂದಿಗೆ ವಿಚ್ಛೇದನ ಪಡೆದೆ. ವಿಚ್ಛೇದನ ಪ್ರಕ್ರಿಯೆಯೇನೋ ಸುಸೂತ್ರವಾಗಿ ನಡೆಯಿತು. ಆದರೆ “ಸಂಸಾರ ಸುಸೂತ್ರವಾಗಿರಲಿಲ್ಲ, ಸರಿಪಡಿಸಲಾಗದಷ್ಟು ಹಾನಿಯಾಗಿತ್ತು’ ಎನ್ನುವ ಕಾರಣಕ್ಕೇ ವಿಚ್ಛೇದನ ನಡೆಯುವುದು. ವಿಚ್ಛೇದನವೆನ್ನುವುದು ಒಂದು ಕನಸಿನ ಅಂತ್ಯವಿದ್ದಂತೆ. ಅದೇನೋ ಅನ್ನುತ್ತಾರಲ್ಲ, ಕೆಲವೊಮ್ಮೆ “ಅಂದುಕೊಳ್ಳದ್ದು ಆಗಿಹೋಗುತ್ತದೆ!’ ಆದರೆ ನೀವು ವಿಚ್ಛೇದನದ ನಂತರ, ಹಿಂದಾದದ್ದನ್ನು ಮತ್ತು ಮುಂದಿನ ದಿನಗಳನ್ನು ಹೇಗೆ ನೋಡುತ್ತೀರಿ ಎನ್ನುವುದು ಸಂಪೂರ್ಣವಾಗಿ ನಿಮಗೇ ಬಿಟ್ಟದ್ದು. 

ಅನೇಕರು ಮುರಿದು ಹೋದ ಸಂಬಂಧವನ್ನು ನೆನಪಿಸಿಕೊಂಡು ವ್ಯಗ್ರರಾಗುತ್ತಾರೆ, ನೋವನುಭವಿಸುತ್ತಾರೆ, ಅಸಮಾಧಾನಗೊಳ್ಳುತ್ತಾರೆ ಅಥವಾ ತಪ್ಪಿತಸ್ಥ ಭಾವನೆ ಸೇರಿದಂತೆ ಅನೇಕಾನೇಕ ಋಣಾತ್ಮಕ ಭಾವನೆಗಳನ್ನು ಅನುಭವಿಸುತ್ತಾರೆ. ಸತ್ಯವೇನೆಂದರೆ, ಒಂದು ಸಂಬಂಧ ರೂಪುಗೊಳ್ಳುವುದೇ ಅದ್ಭುತ ಸಂಗತಿಗಳಿಂದ. ಆದರೆ ಅದ್ಭುತ ಸಂಗತಿಗಳನ್ನು ಮರೆತು ಕೇವಲ “ಕಹಿ ಅಂತ್ಯ’ವೇ ಮೇಲುಗೈ ಸಾಧಿಸಿದಾಗ ಈ ರೀತಿಯ ನೆಗೆಟಿವ್‌ ಅನುಭವಗಳು ಎದುರಾಗುತ್ತವೆ. ಒಳ್ಳೆಯದನ್ನು ನೆನಪುಮಾಡಿ ಕೊಂಡು, ಹಿಂದೆ ತಪ್ಪುಗಳು ಹೇಗಾದವು ಎನ್ನುವುದನ್ನು ಅವಲೋಕಿಸಿ, ಮುಂದೆ ಸಂತೋಷಕರ ಹಾದಿಯಲ್ಲಿ ಹೇಗೆ ಸಾಗುವುದು ಎಂದು ತೀರ್ಮಾನಿಸುವುದೇ ಯಶಸ್ಸಿನ ಫಾರ್ಮುಲಾ. ಆದದ್ದು ಆಗಿಹೋಯಿತು ಎನ್ನುವುದನ್ನು ವಿಚ್ಛೇದಿತರು ನೆನಪಿಟ್ಟುಕೊಳ್ಳಬೇಕು. ನಮ್ಮ ಮಾಜಿ ಸಂಗಾತಿ ಇನ್ಯಾರನ್ನೋ ಇಷ್ಟಪಡುತ್ತಿದ್ದಾರೆ ಎಂದು ಹೊಟ್ಟೆಕಿಚ್ಚು ಪಡುವುದಿದೆಯಲ್ಲ, ಅದು, ನೀವು ಇನ್ನೂ ಭೂತಕಾಲಕ್ಕೇ ಜೋತುಬಿದ್ದಿದ್ದೀರಿ ಎನ್ನುವುದನ್ನು ತೋರಿಸುತ್ತದೆ. ಹೀಗಾಗಿ, ನೀವೂ ಮುಂದುವರಿಯಿರಿ, “ಆ ವ್ಯಕ್ತಿಗೂ’ ಮುಂದುವರಿಯಲು ಬಿಡಿ! “ಆ ವ್ಯಕ್ತಿ’ ತನ್ನ ಜೀವನದಲ್ಲಿನ ಅಭಾವವನ್ನು ತುಂಬಿಕೊಂಡ ಕಾರಣಕ್ಕಾಗಿ ದ್ವೇಷಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ನೀವೇ ಅಲ್ಲವೇ ಅವರಲ್ಲಿ ಆ ಅಭಾವವನ್ನು ಸೃಷ್ಟಿಸಲು ನಿರ್ಧರಿಸಿದ್ದು?  

ತಮ್ಮನ್ನು ಸಂತೋಷವಾಗಿಡುವ ಸಂಗಾತಿಯನ್ನು ನಿಮ್ಮ “ಮಾಜಿ’ಗಳು ಹುಡುಕಿಕೊಂಡಿದ್ದಾರೆ ಎನ್ನುವುದಕ್ಕೆ ಸಂತೋಷಪಡಿ. ಇನ್ನೊಬ್ಬರ ಸಂತೋಷ ವನ್ನು ಕಂಡು ದುಃಖೀಸುವುದು, ನಿಮ್ಮ ಗುಣವನ್ನೇ ಎತ್ತಿ ತೋರಿಸುತ್ತದೆ. ಫ‌ರ್ಹಾನ್‌, ಲೈಲಾರನ್ನು ಮದುವೆಯಾಗಲು ನಿರ್ಧರಿಸಿದಾಗ ನಾನು ತುಂಬಾ ಖುಷಿಪಟ್ಟೆ. ಸತ್ಯವೇನೆಂದರೆ, ಆಕೆಯನ್ನು ಮದುವೆಯಾಗು ಎಂದು ನಾನೇ ಆತನಿಗೆ ಹುರಿದುಂಬಿಸಿದ್ದು. ಜನರಿಗೆ ಇದೆಲ್ಲ ವಿಚಿತ್ರವೆನಿಸಿತು, ಆದರೆ ನನಗಲ್ಲ. ನನ್ನ ಮಕ್ಕಳೊಡನೆ ಅವರ ಮದುವೆಗೆ ಹೋಗಿದ್ದೆ. ತನಗೆ ಸರಿಹೊಂದುವಂಥ ವ್ಯಕ್ತಿಯನ್ನು ಫ‌ರ್ಹಾನ್‌ ಆಯ್ಕೆಮಾಡಿಕೊಂಡ ಎಂಬ ಕಾರಣಕ್ಕಾಗಿ ನನಗೆ ಸಂತೋಷವಾಗಿತ್ತು. ಏಕೆಂದರೆ, ನಮ್ಮಿಬ್ಬರಲ್ಲಿ ಸಾಮರಸ್ಯವಿರಲಿಲ್ಲ. ಅದೂ ಅಲ್ಲದೆ ಲೈಲಾ ಅದ್ಭುತ ಮಹಿಳೆ. ಅವರು ನನ್ನ ಮಕ್ಕಳೊಂದಿಗೆ ತುಂಬಾ ಚೆನ್ನಾಗಿ ವರ್ತಿಸುವುದನ್ನು ನೋಡಿ ಆನಂದವಾಗುತ್ತದೆ. ನನ್ನ ಎರಡೂ ಚಿಣ್ಣಾರಿಗಳಿಗೂ ಲೈಲಾ-ಫ‌ರ್ಹಾನ್‌ರ ಮಕ್ಕಳೊಂದಿಗೆ ಒಳ್ಳೇ ಗೆಳೆತನವಿರುವುದನ್ನು ನೋಡಿ ಖುಷಿಯಾಗುತ್ತದೆ. ಇದೆಲ್ಲ ನಿಮಗೆ ಭೂತ ಮತ್ತು ಭವಿಷ್ಯತ್‌ ಕಾಲದ ಬಗ್ಗೆ ಪಾಸಿಟಿವ್‌ ಧೋರಣೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. 

Advertisement

ನಾನು ನನ್ನ ಲೇಖನಗಳಲ್ಲಿ “ದೊಡ್ಡ ವ್ಯಕ್ತಿಯಾಗಬೇಕು’ ಎನ್ನುವುದರ ಬಗ್ಗೆ ಅನೇಕ ಬಾರಿ ಬರೆದಿದ್ದೇನೆ. ದೊಡ್ಡ ವ್ಯಕ್ತಿಯಾಗುವುದು ಎಂದರೆ ಅವರಿಗಿಂತ ದೊಡ್ಡ ವ್ಯಕ್ತಿ ಎಂದಲ್ಲ. ನಮ್ಮ ಸಣ್ಣತನಗಳು, ಋಣಾತ್ಮಕ ಗುಣ ಮತ್ತು ಅಹಂಕಾರಗಳನ್ನು ಮೀರಿದ ದೊಡ್ಡ ವ್ಯಕ್ತಿಯಾಗಬೇಕು ಎಂದರ್ಥ. ನಾನು ಬೋಧಿಸುತ್ತೇನೆ, ಬೋಧಿಸಿದ್ದನ್ನು ಪಾಲಿಸುತ್ತೇನೆ. ನೀವೂ ಪಾಲಿಸಬಲ್ಲಿರಿ!

ಮದುವೆ ಎಂಬ ಹೊಸ ಸುಲಿಗೆ ದಂಧೆ!
ನಾನು ಮೊದಲಿನಿಂದಲೂ ಮಹಿಳಾವಾದಿಯಾಗಿ ಗುರುತಿಸಿಕೊಂಡ ವಳು. ಮಹಿಳೆಯರ ಹಕ್ಕುಗಳನ್ನು ಬಲಿಷ್ಠಗೊಳಿಸುವಂಥ ಅನೇಕ ಚಳವಳಿ ಗಳಲ್ಲಿ, ಚರ್ಚೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಮಹಿಳೆಯರು ತಮ್ಮ ಸಹಾಯಕ್ಕೆ ಇರುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ತೀರಾ ಆಘಾತಗೊಳಿಸುವಂಥ ವಿಷಯ. ಕಳೆದ ಕೆಲವು ದಿನಗಳಲ್ಲಿ ಇಂಥ 7-8 ಘಟನೆಗಳು ನನ್ನ ಗಮನಕ್ಕೆ ಬಂದವು. 

ಆರ್ಥಿಕವಾಗಿ ಸ್ವತಂತ್ರವಾಗಿರುವ, ತನ್ನ ಹೆಸರಲ್ಲಿ ದೊಡ್ಡ ಸ್ವತ್ತನ್ನು ಹೊಂದಿರುವ ಮತ್ತು ಒಳ್ಳೆಯ ಬ್ಯಾಂಕ್‌ ಬ್ಯಾಲೆನ್ಸ್‌ ಇರುವ ಮಹಿಳೆಯೊಬ್ಬಳು ಶ್ರೀಮಂತನಂತೆ ಕಾಣಿಸುತ್ತಿದ್ದ ಪುರುಷನೊಂದಿಗೆ ಡೇಟ್‌ ಮಾಡಲಾರಂಭಿಸಿದಳು. ಕೆಲ ತಿಂಗಳ ನಂತರ “ಬೇಗ ಮದುವೆಯಾಗೋಣ’ ಎಂದು ಆತನ ಮೇಲೆ ಒತ್ತಡ ಹೇರಲಾರಂಭಿಸಿದಳು. ಗ್ರಹಗತಿ, ನಕ್ಷತ್ರ, ಒಳ್ಳೇ ಟೈಮ್‌ ಇದೆ ಎನ್ನುವುದು ಆಕೆಯ ನೆಪವಾಗಿತ್ತು. 

ಮದುವೆಯಾದ ಕೆಲವೇ ತಿಂಗಳಲ್ಲಿ ಆಕೆ ಗಂಡನೊಂದಿಗೆ ಜಗಳವಾಡುವುದು, ರೇಗಾಡುವುದು ಮಾಡತೊಡಗಿದಳು. ಒಂದು ದಿನ ಜೋರು ಗದ್ದಲ ಮಾಡಿ ಮನೆಯಿಂದ ಹೊರನಡೆದುಬಿಟ್ಟಳು. ಅದಾದ ಕೆಲ ತಿಂಗಳಲ್ಲಿ ತನಗೆ ವಿಚ್ಛೇದನ ಬೇಕೆಂದು ಗಂಡನನ್ನು ಪೀಡಿಸಲಾರಂಭಿಸಿದಳು. ಆಕೆ ತನ್ನ ವಕೀಲರ ಮಾತು ಕೇಳಿ ಹಾಗೆ ಮಾಡಿದಳ್ಳೋ ಅಥವಾ ಕುಟುಂಬದ ಮಾತು ಕೇಳಿಯೋ ತಿಳಿಯದು, ಒಟ್ಟಲ್ಲಿ  ತವರು ಮನೆಯಿಂದ ಗಂಡನ ಮನೆಗೆ ಹೋಗುವುದು ಅವನನ್ನು ಪೀಡಿಸುವುದು, ವಾಪಸ್‌ ತವರು ಮನೆಗೆ ಬರುವುದು ರೊಟೀನ್‌ ಆಯಿತು. ಈ ತಾಪತ್ರಯದಿಂದ ಮುಕ್ತಿ ಬೇಕೆಂದರೆ “ದೊಡ್ಡ ಮೊತ್ತ ಕೊಡು’ ಎಂದು ಪತಿಯನ್ನು ಪೀಡಿಸಲಾರಂಭಿಸಿದಳು. ಆದರೆ ಆತನ ಬಳಿ ಹೇಳಿಕೊಳ್ಳುವಂಥ ಆಸ್ತಿಯಿರಲಿಲ್ಲ, ಸ್ವಂತ ಬ್ಯುಸಿನೆಸ್‌ ಇತ್ತಾದರೂ ಮೈತುಂಬಾ ಸಾಲವಿತ್ತು. 

ಆಗ ಈ ಮಹಿಳೆ “ನಿನ್ನ ಅಪ್ಪ-ಅಮ್ಮನಿಂದ ಹಣ ಪಡೆದು ನನಗೆ ಕೊಡು. ನಿನಗೆ ತಾಪತ್ರಯ ತಪ್ಪುತ್ತದೆ’ ಎಂದು ಡಿಮ್ಯಾಂಡ್‌ ಮಾಡಲಾರಂಭಿಸಿದಳು. ಪತಿ ಇದನ್ನು ವಿರೋಧಿಸಿದ ತಕ್ಷಣ, ಆತನ ಅಪ್ಪ-ಅಮ್ಮನ ಮೇಲೆ ಮಹಿಳಾ ಸುರಕ್ಷಾ ಕಾನೂನಿನಡಿಯಲ್ಲಿ ವಿವಿಧ ಕೇಸು ಜಡಿಯುವುದಾಗಿ ಹೆದರಿಸುತ್ತಿದ್ದಳು. 

ಇದು ನನಗೆ ನಿಜಕ್ಕೂ ಭಯ, ಜುಗುಪ್ಸೆ ಹುಟ್ಟಿಸುತ್ತದೆ. ಇದು ಲೀಗಲ್‌ ಸುಲಿಗೆಯಲ್ಲದೇ ಮತ್ತೇನೂ ಅಲ್ಲ! ಮದುವೆಗೂ ಮುನ್ನವೇ ಆಕೆ ಹಣ ಗಳಿಸುತ್ತಿದ್ದಳು. ಮದುವೆಯ ಸಮಯದಲ್ಲೂ ಕೆಲಸ ಮಾಡಿ ಹಣ ಗಳಿಸುತ್ತಿದ್ದಳು. ಆದರೆ ಈಗ ಅವಳು, “ನನಗೆ ಹಣ ಕೊಡು. ಇಲ್ಲದಿದ್ದರೆ ನಿನ್ನ ವಿರುದ್ಧ ಎಲ್ಲಾ ಕಾನೂನನ್ನು ಬಳಸುತ್ತೇನೆ’ ಎನ್ನುತ್ತಾಳೆ. 

ಕಳೆದ ಎರಡು ವರ್ಷಗಳಲ್ಲಿ ಹೆಣ್ಣುಮಕ್ಕಳು ಸೆಕ್ಷನ್‌ 498 ಎ ಅಡಿಯಲ್ಲಿ 31,000 ನಕಲಿ ಕೇಸ್‌ಗಳನ್ನು ದಾಖಲಿಸಿದ್ದಾರೆ ಎನ್ನುವುದನ್ನು ಸಂಶೋಧನೆಗಳು ಬಹಿರಂಗಪಡಿಸಿವೆ. ಮಹಿಳಾ ಪರ ಕಾನೂನನ್ನು ಸ್ವಾರ್ಥಿ ಮತ್ತು  ಹಗೆತುಂಬಿದ ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಸುಪ್ರೀಂ ಕೋರ್ಟ್‌ ಕೂಡ ಹಲವು ತೀರ್ಪುಗಳನ್ನು ನೀಡಬೇಕಾಯಿತು. ತತಲವಾಗಿ ನಿಜಕ್ಕೂ ಅನ್ಯಾಯಕ್ಕೊಳಗಾಗುತ್ತಿರುವ ಮಹಿಳೆಯರಿಗೆ ದೊಡ್ಡ ಹೊಡೆತ ಬಿದ್ದಿದೆ. 

ವಿಚ್ಛೇದನದ ಮೇಲೆ ಸಹಿ ಮಾಡಿದಾಕ್ಷಣ ಒಬ್ಬ ವ್ಯಕ್ತಿ ಮತ್ತು ಆತನ ಕುಟುಂಬ ಹಣ ಕಕ್ಕಬೇಕೇನು? ನಾವು ಸ್ತ್ರೀ ಧನದ ಬಗ್ಗೆ ಮಾತನಾಡುತ್ತೇವೆ. ಹಾಗಿದ್ದರೆ ಪುರುಷ ಧನದ ಕಥೆಯೇನು? ಸುಳ್ಳು ಪ್ರಕರಣಗಳನ್ನು ದಾಖಲಿಸುವ ಹೆಣ್ಣುಮಕ್ಕಳಿಗೆ ಯಾವ ಶಿಕ್ಷೆ ನೀಡಬೇಕು? ಗಂಡು ಮತ್ತು ಆತನ ಮನೆಯವರನ್ನು ರಕ್ಷಿಸಲು ಯಾವ ರೀತಿಯ ಹೊಸ ಕಾನೂನುಗಳನ್ನು ರಚಿಸಬೇಕು? ಮದುವೆಯೆನ್ನುವುದನ್ನು “ಸುಲಿಗೆ ದಂಧೆ’ ಆಗದಂತೆ ತಡೆಯಲು ಏನು ಮಾಡಬೇಕು?

ಆಸೆಬುರುಕ ಹೆಣ್ಣುಮಕ್ಕಳಿಂದಾಗಿ ನಿಜ ಸಂತ್ರಸ್ತರಿಗೆ, ಮಹಿಳಾಪರ ಹೋರಾಟಕ್ಕೆ ಆಗುತ್ತಿರುವ ಹಾನಿಯನ್ನು ತಪ್ಪಿಸೋದು ಹೇಗೆ? ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇದೆಯೇ?

ಪೂಜಾ ಬೇಡಿ ಬಾಲಿವುಡ್‌ ನಟಿ
ದಿ. ಪ್ರೊತಿಮಾ ಬೇಡಿ ಪುತ್ರಿ

Advertisement

Udayavani is now on Telegram. Click here to join our channel and stay updated with the latest news.

Next