Advertisement

ಒಬಿಸಿಗಳಿಗೆ ಮೀಸಲಾತಿ ಅವಕಾಶವಿಲ್ಲದೆ ತಾ.ಪಂ. ಜಿ.ಪಂ ಚುನಾವಣೆ ನಡೆಸಲ್ಲ: ಈಶ್ವರಪ್ಪ

06:35 PM Mar 11, 2022 | Team Udayavani |

ವಿಧಾನಪರಿಷತ್ತು: “ಇತರೆ ಹಿಂದುಳಿದ ವರ್ಗ’ (ಒಬಿಸಿ)ಗಳಿಗೆ ಮೀಸಲಾತಿ ಅವಕಾಶ ಇಲ್ಲದೆ ತಾ.ಪಂ. ಹಾಗೂ ಜಿ.ಪಂ. ಚುನಾವಣೆಗಳನ್ನು ಮಾಡುವುದಿಲ್ಲ. ಇದು ನಮ್ಮ ಸರ್ಕಾರದ ಸ್ಪಷ್ಟ ನಿರ್ಧಾರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಸರ್ಕಾರ ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡಲ್ಲ. ಅವರಿಗೆ ಮೀಸಲಾತಿಯ ಅವಕಾಶ ಇಲ್ಲದೇ ತಾ.ಪಂ., ಜಿ.ಪಂ ಚುನಾವಣೆಗಳನ್ನು ನಡೆಸುವುದಿಲ್ಲ ಎಂದರು.

ಸುಪ್ರೀಂಕೋರ್ಟ್‌ ಇತ್ತಿಚಿಗೆ ಹೇಳಿರುವ ಪ್ರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಬೇಕು. ಅದರಂತೆ ಸದ್ಯ ಒಬಿಸಿಗಳಿಗೆ ಮೀಸಲಾತಿ ನೀಡುವಂತಿಲ್ಲ. ಇದು ದೊಡ್ಡ ಆಘಾತ ತಂದಿದೆ. ಒಬಿಸಿಗಳ ನಿಖರ ಜನಸಂಖ್ಯೆ ಬಗ್ಗೆ ಮಾಹಿತಿ ನೀಡುವಂತೆ 2010ರಲ್ಲಿ ಸುಪ್ರೀಂಕೋರ್ಟ್‌ ಹೇಳಿತ್ತು. ಯಾರೂ ಅದನ್ನು ಗಮನಿಸಿಲ್ಲ. ಅದರಿಂದ ಒಬಿಸಿ ಮೀಸಲಾತಿ ನೆಗೆದುಬಿದ್ದು ಹೋಯಿತು. ಈ ಬಗ್ಗೆ ಮುಖ್ಯಮಂತ್ರಿಯವರು ಕಾನೂನು ತಜ್ಞರ ಜೊತೆ ಚರ್ಚಿಸಿದ್ದಾರೆ. ಒಬಿಸಿಗಳಿಗೆ ಅವಕಾಶ ಇಲ್ಲದೇ ಚುನಾವಣೆ ಮಾಡುವುದಿಲ್ಲ ಎಂದರು.

ಜಿ.ಪಂ. ಹಾಗೂ ತಾ.ಪಂ.ಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ, ರಾಜ್ಯ ಚುನಾವಣಾ ಆಯೋಗ ಕ್ಷೇತ್ರಗಳ ಗಡಿಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಿತ್ತು. ಅದಕ್ಕೆ 800ಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿದ್ದವು. ಅದನ್ನು ಇತ್ಯರ್ಥಪಡಿಸದೆ ಚುನಾವಣೆಗಳನ್ನು ನಡೆಸಲು ಸಾಧ್ಯವಿರಲ್ಲ. ಅದಕ್ಕಾಗಿ ಸೀಮಾ ನಿರ್ಣಯ ಆಯೋಗ ರಚನೆ ಮಾಡಲಾಗಿದೆ. ಆಯೋಗ ಕಾರ್ಯಪ್ರವೃತ್ತವಾಗಿದೆ. ಬೇಗ ವರದಿ ಕೊಡಿ ಎಂದು ಷರತ್ತು ಹಾಕಲು ಆಗುವುದಿಲ್ಲ. ಮನವಿ ಮಾಡಬಹುದು. ಆದಷ್ಟು ಬೇಗ ಆಯೋಗ ವರದಿ ಕೊಡಬಹುದು ಎಂಬ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:ಭಾರತ ಬೌದ್ಧಿಕ ಸಂಪತ್ತಿನಲ್ಲಿ ವಿಶ್ವಗುರು: ಓಂ ಬಿರ್ಲಾ

Advertisement

ಒಬಿಸಿಗಳಿಗೆ ಅನ್ಯಾಯ ಮಾಡಿದ್ದು ಸಿದ್ದು:
ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಮಧ್ಯಪ್ರವೇಶಿಸಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳ ಆಯೋಗದಿಂದ ಎಲ್ಲಾ ವರ್ಗಗಳ ಸಮೀಕ್ಷೆ ಮಾಡಿದ್ದಾರೆ. ಆ ಮಾಹಿತಿಯನ್ನು ಸುಪ್ರೀಂಕೋರ್ಟ್‌ಗೆ ಕೊಡಿ ಎಂದು ಹೇಳಿದರು.

ಅದಕ್ಕೆ, ಸಿದ್ದರಾಮಯ್ಯ ಮಾಡಿದರು ಎಂದು ಪದೇ ಪದೇ ಹೇಳುತ್ತಿದ್ದೀರಿ, ಅವರು ಸಿಎಂ ಆಗಿದ್ದಾಗ ನಾನು ವಿಧಾನಪರಿಷತ್‌ ಪ್ರತಿಪಕ್ಷ ನಾಯಕನಾಗಿದ್ದೆ. ಆಗ ಹಿಂದುಳಿದ ವರ್ಗಗಳ ಆಯೋಗದ ವರದಿ ಬಿಡುಗಡೆ ಮಾಡಿ ಎಂದು ಪರಿ ಪರಿಯಾಗಿ ಕೇಳಿಕೊಂಡೆ, ಇವತ್ತು, ನಾಳೆ ಎಂದು ಅವರು ಕಾಲ ಸಾಗ ಹಾಕಿದರು. ಹಾಗಾಗಿ, ಹಿಂದುಳಿದ ವರ್ಗದವರಿಗೆ ಮೋಸ ಮಾಡಿದ್ದು ಸಿದ್ದರಾಮಯ್ಯ ಎಂದು ಈಶ್ವರಪ್ಪ ತಿರುಗೇಟು ನೀಡಿದರು.

ಮಾತೆತ್ತಿದರೆ ಸಿದ್ದರಾಮಯ್ಯ ಹೆಸರು ಹೇಳ್ತಿರಿ, ನಿಮ್ಮದು, ಸಿದ್ದರಾಮಯ್ಯನವರದ್ದು ಏನ್‌ ಮ್ಯಾಚ್‌ ಫಿಕ್ಸಿಂಗ್‌ ಅನ್ನೋದೆ ಗೊತ್ತಾಗಲ್ಲ ಎಂದು ಹರಿಪ್ರಸಾದ್‌ ಕಾಲೆಳೆದರು.

“ನನ್ನ ಮತ್ತು ಸಿದ್ದರಾಮಯ್ಯ ನಡುವಿನ ಮ್ಯಾಚ್‌ ಫಿಕ್ಸಿಂಗ್‌ ಈ ಜನ್ಮದಲ್ಲಿ ನಿಮಗೆ ಗೊತ್ತಾಗಲ್ಲ ಬಿಡಿ’ ಎಂದು ಈಶ್ವರಪ್ಪ ಮಾರುತ್ತರ ನೀಡಿದರು. ಒಬಿಸಿಗಳಿಗೆ ಮೀಸಲಾತಿ ಬೇಡ ಎಂದು ರಾಮಾಜೋಯಿಸ್‌ ಅವರು ಸುಪ್ರೀಂಕೋರ್ಟ್‌ಗೆ ಹೋಗಿದ್ದರು, ಅದು ನಿಮಗೆ ತಿಳಿದಿರಲಿ ಎಂದು ಹರಿಪ್ರಸಾದ್‌ ಟಾಂಗ್‌ ಕೊಟ್ಟರು. ಒಬಿಸಿಗಳಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದು ಎಂದು ಈಶ್ವರಪ್ಪ ಹೇಳಿರುವುದು ಸರಿಯಲ್ಲ ಎಂದು ಪ್ರಕಾಶ್‌ ರಾಥೋಡ್‌ ಆಕ್ಷೇಪಿಸಿದರು. ಅವರಿಬ್ಬರೂ ಒಂದೇ ನಿಮಗೆ ಗೊತ್ತಾಗಲ್ಲ ಸುಮ್ನೆ ಕೂರಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿ ಚರ್ಚೆಗೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next