Advertisement

Asia Cup ; ಫೈನಲ್ ಗೂ ಮುನ್ನ ರೋಹಿತ್ ಬಳಗಕ್ಕೆ ಸೋಲಿನ ಕಹಿ ಉಣಿಸಿದ ಬಾಂಗ್ಲಾ

11:08 PM Sep 15, 2023 | Team Udayavani |

ಕೊಲಂಬೊ: ಇಲ್ಲಿ ಶುಕ್ರವಾರ ನಡೆದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಬದಲಾವಣೆಗಳೊಂದಿಗೆ ಆಡಲಿಳಿದಿದ್ದ ಭಾರತ ತಂಡಕ್ಕೆ ಬಾಂಗ್ಲಾದೇಶ ಸೋಲಿನ ಶಾಕ್ ನೀಡಿದೆ. ಫೈನಲ್ ನಲ್ಲಿ ಆಡಲಿರುವ ಭಾರತಕ್ಕೆ ಗಿಲ್ ಅವರ ಅಮೋಘ ಶತಕದ ಹೊರತಾಗಿಯೂ ಅನುಭವಿಸಿದ ಸೋಲು ಕಹಿಯಾದರೆ, ಅಮೋಘ ಆಟವಾಡಿದ ಬಾಂಗ್ಲಾಕ್ಕೆ ಗೆಲುವು ಸ್ಮರಣೀಯವಾಗಿದೆ.

Advertisement

ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಾಂಗ್ಲಾದೇಶ ತಂಡ ನಾಯಕ ಶಕೀಬ್ ಅಲ್ ಹಸನ್ ಮತ್ತು ತೋವಿದ್ ಹೃದಯ್ ಅವರ ಅರ್ಧಶತಕಗಳ ನೆರವಿನಿಂದ ಭಾರತದ ವಿರುದ್ಧ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು.

266 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಎದುರಿಸಿತು.49.5 ಓವರ್ ಗಳಲ್ಲಿ 259 ರನ್ ಗಳಿಗೆ ಆಲೌಟಾಗುವ ಮೂಲಕ ಸೋಲಿನ ಕಹಿ ಉಂಡಿತು. ಬಾಂಗ್ಲಾದೇಶ 6 ರನ್‌ಗಳ ಜಯ ಸಾಧಿಸಿತು.

ಫೈನಲ್ ಆಡಲಿರುವ, ಹೊಸ ಪ್ರಯೋಗ ಮಾಡಿ ಆಡುತ್ತಿದ್ದ ರೋಹಿತ್ ಬಳಗಕ್ಕೆ ಬಾಂಗ್ಲಾ ಬೌಲರ್ ಗಳು ಒಂದಾದರ ಮೇಲೆ ಒಂದು ಶಾಕ್ ನೀಡುತ್ತಾ ಹೋದರು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಅವರನ್ನು ತಂಝಿಮ್ ಹಸನ್ ಸಾಕಿಬ್ ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಪದಾರ್ಪಣಾ ಪಂದ್ಯವಾಡಿದ ತಿಲಕ್ ವರ್ಮಾ ಅವರನ್ನೂ 5 ರನ್ ಗಳಿಸಿದ್ದ ವೇಳೆ ಸಾಕಿಬ್ ಬೌಲ್ಡ್ ಮಾಡಿದರು.

ಕೆ.ಎಲ್. ರಾಹುಲ್ 39 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 5 ರನ್ ಗಳಿಸಿದ್ದ ವೇಳೆ ಮೆಹಿದಿ ಹಸನ್ ಮಿರಾಜ್ ಎಲ್ಬಿಡಬ್ಲ್ಯೂ ಮೂಲಕ ಬಲೆಗೆ ಹಾಕಿದರು. ಸೂರ್ಯಕುಮಾರ್ ಯಾದವ್ 26 ರನ್ ಗಳಿಸಿದ್ದ ವೇಳೆ ಶಕಿಬ್ ಬೌಲ್ಡ್ ಮಾಡಿದರು. ರವೀಂದ್ರ ಜಡೇಜಾ 7 ರನ್ ಗಳಿಸಿದ್ದ ವೇಳೆ ಮುಸ್ತಫಿಜುರ್ ಬೌಲ್ಡ್ ಮಾಡಿದರು.

Advertisement

9 ಬಾಲ್ ಗೆ 12 ರನ್ ಅಗತ್ಯವಿದ್ದ ವೇಳೆ 42 ರನ್ ಗಳಿಸಿ ಭರವಸೆಯಾಗಿ ಆಡುತ್ತಿದ್ದ ಅಕ್ಷರ್ ಪಟೇಲ್ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ನಿರ್ಗಮಿಸಿದರು. ಶಮಿ ಅವರಿಗೆ ಕೊನೆಯಲ್ಲಿ ದೊಡ್ಡ ಹೊಡೆತಗಳ ಮೂಲಕ ಗೆಲುವು ತಂದುಕೊಡುವುದು ಸಾಧ್ಯವಾಗಲಿಲ್ಲ.

ಅಮೋಘ ಶತಕ ಸಿಡಿಸಿದ ಗಿಲ್

ಆರಂಭಿಕನಾಗಿ ಬಂದ ಶುಭಮನ್ ಗಿಲ್ ಒಂದೊಂದೇ ವಿಕೆಟ್ ಉದುರುತ್ತಿದ್ದರೂ ನೆಲಕಚ್ಚಿ ನಿಂತು ಜವಾಬ್ದಾರಿಯುತ ಆಟವಾಡಿದರು. 121(133 ಎಸೆತ) ರನ್ ಗಳಿಸುವ ಮೂಲಕ ಈ ಏಷ್ಯಾ ಕಪ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಮಹೇದಿ ಹಸನ್ ಎಸೆದ ಚೆಂಡನ್ನು ತೌಹಿದ್ ಹೃದಯ್ ಕೈಗಿತ್ತು ನಿರ್ಗಮಿಸಿದರು. ಗಿಲ್ ಅವರ ಇನ್ನಿಂಗ್ಸ್ ನಲ್ಲಿ 8 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಒಳಗೊಂಡಿತ್ತು.

ಶಕೀಬ್, ಹೃದಯ್ ಅರ್ಧ ಶತಕ
ಶಕೀಬ್ (85 ಎಸೆತಗಳಲ್ಲಿ 80) ಮತ್ತು ಟೋವಿಡ್ ಹೃದಯ್ (81 ಎಸೆತಗಳಲ್ಲಿ 54 ರನ್ ) ಆರಂಭಿಕ ವಿಕೆಟ್‌ಗಳು ಪತನ ಗೊಂಡ ಬಳಿಕ ತಂಡಕ್ಕೆ ಆಧಾರವಾದರು. ನಸುಮ್ ಅಹ್ಮದ್ 44, ಮಹೇದಿ ಹಸನ್ 29 ಮತ್ತು ತಂಜಿಮ್ ಹಸನ್ ಸಾಕಿಬ್ 14 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ಪರ ವೇಗಿಗಳಾದ ಮೊಹಮ್ಮದ್ ಶಮಿ (2/32), ಶಾರ್ದೂಲ್ ಠಾಕೂರ್ (3/65) ಮತ್ತು ಪ್ರಸಿದ್ಧ್ ಕೃಷ್ಣ (1/43) ಆರು ವಿಕೆಟ್‌ಗಳನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next