Advertisement

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

12:34 PM Mar 23, 2024 | Team Udayavani |

ಜೀವನದಲ್ಲಿ ಹಲವಾರು ವಿಚಾರಗಳು ಇರುತ್ತವೆ. ಅವುಗಳ ಪ್ರಮಾಣ ಚಿಕ್ಕದು ಅಂತ ಮೇಲ್ನೋಟಕ್ಕೆ ಅನಿಸಿದರೂ ಅದರ ಹಿಂದಿನ ವಿಚಾರಗಳು ಗಾಢವಾಗಿಯೇ ಇರುತ್ತದೆ ಎಂಬುದು ನನ್ನ ಅನಿಸಿಕೆ. ಒಂದಷ್ಟು ವಿಷಯಗಳನ್ನು ಮತ್ತು ಅದರ ಹಿಂದಿರುವ ವಿಚಾರಗಳನ್ನು ನೋಡೋಣ. ಬಹುಶ: ನಿಮಗೂ ಹೌದು ಎನ್ನಿಸಬಹುದು ಅಥವಾ ಇಲ್ಲಾ ಅನ್ನಿಸಬಹುದೆನೋ ಎಂಬುದು ನನ್ನ ಭಾವನೆ.

Advertisement

ಪೆನ್ಸಿಲ್‌ ಸ್ಕೆಚ್‌ ಕಲೆಯನ್ನು ಎಲ್ಲರೂ ನೋಡಿರುತ್ತೇವೆ. ಬಿಳಿಯ ಹಾಳೆಯ ಮೇಲೆ ಕಪ್ಪು ಗೆರೆಗಳಿಂದ ಮೂಡಿದ ಒಂದು ಚಿತ್ರವು ಖಾಲಿ ಇರುವ ಜಾಗದಲ್ಲಿ ಅದಾವುದೇ ಬಣ್ಣವಿರದಿದ್ದರೂ ಬಲು ಸೊಗಸಾಗಿಯೇ ಕಾಣುತ್ತದೆ. ಇಂತಹ ಚಿತ್ರವನ್ನು ಯಾರಾದರೂ ತೋರಿಸಿದಾಗ ಮೆಚ್ಚುತ್ತೇವೆ, ಫೇಸ್‌ಬುಕ್‌ನಂತಹ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಾಗ ಲೈಕ್‌ ಒತ್ತುವುದೋ ಅಥವಾ ಶ್ಲಾಘನೀಯ ಪದಗಳನ್ನೋ ಬಳಸಿ ಕಾಮೆಂಟ್‌ ಮಾಡಿ ಮುಂದೆ ಸಾಗುತ್ತೇವೆ. ಆದರೆ ಆ ಪೆನ್ಸಿಲ್‌ ಸ್ಕೆಚ್‌ನಲ್ಲಿ ಜೀವನದ ಅರ್ಥವೇ ಅಡಗಿದೆ ಎಂದು ಅನ್ನಿಸಿದೆಯೇ?

ಮೊದಲಿಗೆ ಅಲ್ಲಿದ್ದುದು ಒಂದು ಬಿಳೀ ಹಾಳೆ ಅಷ್ಟೇ. ಒಂದೂ ಚುಕ್ಕೆ ಇರದ ಒಂದು ಬಿಳಿ ಹಾಳೆ. ಒಂದೊಂದೂ ಗೆರೆಗಳು ಮೂಡಿದಂತೆ ಅ‌ಲ್ಲೊಂ ದು ಗಡಿ ಅಥವಾ ಬೇಲಿ ಏರ್ಪಾಡಾಗುತ್ತಾ ಹೋಗಿತ್ತು. ಅಲ್ಲೊಂದು ಸಮ್ಮಿತೀಯ ಅಥವಾ Symmetry ಮೂಡಿಸುತ್ತಿದ್ದಂತೆ ರಚನೆಯಲ್ಲಿ ಶಿಸ್ತು ಕಾಣತೊಡಗುತ್ತದೆ. ಈ ಸಮ್ಮಿತೀಯ ಹೇಗೆ ಎಂದರೆ ಒಬ್ಬ ವ್ಯಕ್ತಿಯ ಮೊಗದ ಚಿತ್ರ ರಚಿಸುವಾಗ ಭ್ರೂಮಧ್ಯೆ ಎಂಬುದನ್ನೇ ಮಧ್ಯಭಾಗ ಎಂದುಕೊಂಡರೆ ಎರಡೂ ಕಣ್ಣುಗಳು, ಎರಡೂ ಕಿವಿಗಳು ಸಮಾನ ದೂರದಲ್ಲಿರಬೇಕು. ಒಂದು ವೇಳೆ ಬಣ್ಣವನ್ನೇ ತುಂಬುವುದಾದರೆ ಸಮರ್ಪಕವಾದ ಬಣ್ಣಗಳನ್ನೇ ಬಳಸಬೇಕಾಗುತ್ತದೆ. ಹೀಗೆ ಒಂದೊಂದೂ ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆ ಚಿತ್ರದಲ್ಲಿ ಮೂಡಿಸಿದಾಗ ಅಲ್ಲೊಂದು ಮಾಸ್ಟರ್‌ ಪೀಸ್‌ ತಯಾರಾಗುತ್ತದೆ.

ರಚಿಸುವಾಗ ಯಾವುದೇ ಕಲೆಯೂ ಇರದಂತೆ ರಚಿಸುವುದೂ ಕಲೆಯೇ ಸರಿ. ಇದಿಷ್ಟೂ ವಿಚಾರಗಳನ್ನು ಜೀವನಕ್ಕೆ ಹೋಲಿಸಿದಾಗ ಒಂದು ಹಂತದವರೆಗೆ ಮಾತಾ-ಪಿತೃಗಳು ನಮ್ಮನ್ನು ರೂಪಿಸಿದರೂ, ಮುಂದಿನ ಹಂತಗಳಲ್ಲಿ ನಮ್ಮನ್ನು ರೂಪಿಸಿಕೊಳ್ಳುವ ಕಲೆಗಾರ ನಾವೇ ಆಗಿರುತ್ತೇವೆ ಅಲ್ಲವೇ? ಕೈಯಲ್ಲಿ ಹಿಡಿವ ಒಂದು ಪೊರಕೆಯನ್ನು ನೋಡಿದಾಗ ಶಿಸ್ತಾಗಿ ಇರುವ ಕಡ್ಡಿಗಳು ಒಂದು ಹಂತದವರೆಗೆ ಬಂದು ಮುಂದೆ ಅಗಲವಾಗಿ ಹರಡಿಕೊಳ್ಳುತ್ತದೆ. ಆರಂಭದಲ್ಲಿ ಒಟ್ಟು ಸಂಸಾರದಲ್ಲೇ ಇರುವ ಮಕ್ಕಳು ತಾವು ಬೆಳೆದಂತೆಲ್ಲ ಮತ್ತು ತಮ್ಮದೇ ಸಂಸಾರ ಮೂಡಿದಂತೆಲ್ಲ ಒಬ್ಬೊಬ್ಬರೂ ಒಂದೊಂದು ದಿಕ್ಕು ಎಂಬಂತೆ ಆಗುತ್ತದೆ ಅಲ್ಲವೇ? ಇದು ತಪ್ಪೋ ಒಪ್ಪೋ ಪ್ರಶ್ನೆಯಲ್ಲ ಆದರೆ ಹಿಡಿದಿಟ್ಟಿರುವ ಆ ಹಿಡಿಯೇ ಹಿರಿಯರು. ಮೊಂಡಾಗುವ, ಮುರಿಯುವ, ಆಚೀಚೆ ಚಾಚಿಕೊಳ್ಳುವ ಕಡ್ಡಿಗಳು ಮಕ್ಕಳು ಎನ್ನಬಹುದೇ ? ಇರಲಿ ಬಿಡಿ, ಪೊರಕೆಯನ್ನು ಫಿಸಿಕ್ಸ್‌ ಪ್ರಕಾರ ನೋಡಿದರೆ Concave ಲೆನ್ಸ್‌ಗೆ ಉದಾಹರಣೆ ಎನ್ನಬಹುದು.


ಒಂದೊಂದೂ ಬೆಳಕಿನ ಕಿರಣಗಳು Convex ಲೆನ್ಸ್‌ ಮೇಲೆ ಬಿದ್ದಾಗ ಹೊರಬರುವಾಗ ಅದು ಒಂದೆಡೆ ಸೇರುತ್ತವೆ. ಇಂಥಾ ಮಸೂರವನ್ನು ಬಾಲ್ಯದಲ್ಲಿ ಆಟಕ್ಕೆ ಬಳಸಿ ಯಾರನ್ನಾದರೂ ಬಲಿಪಶುವಾಗಿಸಿದ್ದೂ ಉಂಟು. ಅಂಗೈ ಮೇಲೋ, ತೊಡೆಯ ಮೇಲೆ ಬಿಸಿಲಿಗೆ ಹಿಡಿದ ಮಸೂರವು ಚರ್ಮ ಸುಡುವಾಗ ಬೊಬ್ಬೆ ಹೊಡೆಯುವ ಹಾಗೆ ಆಗುತ್ತಿತ್ತು. ಈ ಚರ್ಮವನ್ನೇ ವೈರಿಪಡೆ ಎಂದುಕೊಂಡರೆ ಐವರು ಪರಾಕ್ರಮಿಗಳು ಪಾಂಡವರು ಎಂಬ Convex ಮಸೂರದಂತೆ ಒಂದಾದಾಗ ಶತ್ರುಪಾಳ್ಯವು ಬೊಬ್ಬೆ ಹೊಡೆಯುತ್ತಿದ್ದರು. ಏಳು ಸ್ವರವು ಸೇರಿ ಸಂಗೀತವಾಗುವುದೇ ಹೀಗೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತನ್ನೇ ಈ ಮಸೂರವು ತಿಳಿಸುವ ವಿಚಾರ.

Advertisement

ಒಬ್ಬ ತಾಯಿಯ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಎಂಬ ನುಡಿಗಳನ್ನು ಕೇಳಿದ್ದೀರಿ ಅಲ್ಲವೇ? ಹಾಗೆಂದ ಮಾತ್ರಕ್ಕೆ ಎಲ್ಲರೂ ಒಂದೇ ರೀತಿ ಅಲ್ಲ ಎಂಬ ಮಾತನ್ನೂ ಕೇಳಿರುತ್ತೀರಿ. ಒಂದು ಹಸ್ತದ ಬೆರಳುಗಳೂ ಒಂದೇ ರೀತಿ ಇರುವುದಿಲ್ಲ ಎಂದ ಮೇಲೆ ಎಲ್ಲ ಮಕ್ಕಳು ಒಂದೇ ರೀತಿ ಇರಲು ಸಾಧ್ಯವೇ ಎಂಬ ಮಾತುಗಳೂ ಒಟ್ಟೊಟ್ಟಾಗಿ ಸಾಗುತ್ತದೆ. ಒಬ್ಬರ ಹಿಂದೆ ಮತ್ತೂಬ್ಬರು ಎಂಬ ಮಾತುಗಳನ್ನೂ ಈ ಸಂಬಂಧದಲ್ಲಿ ಕೇಳಿರುತ್ತೀರಿ. ಹಿರಿಯವರ ಬೆನ್ನಲ್ಲಿ ಬಿದ್ದವರೇ ಮಿಕ್ಕ ಕಿರಿಯರು.

ಇಲ್ಲೊಂದೆರಡು ಪ್ರಶ್ನೆಗಳು ಏಳುತ್ತದೆ ಜತೆಗೆ ಚಿಂತನೆಗೂ ಮನವನ್ನು ದೂಡುತ್ತದೆ. ಒಂದೇ ರಕ್ತ ಹಂಚಿಕೊಂಡು ಹುಟ್ಟಿರುವ ಮಕ್ಕಳು ಎಂದ ಮೇಲೆ ಎಲ್ಲರ ರಕ್ತದ ಗುಂಪು ಒಂದೇ ಆಗಿರಬೇಕಲ್ಲವೇ? ಹಾಗೇನಿಲ್ಲ ಎಂದ ಮೇಲೆ ರಕ್ತ ಹಂಚಿಕೊಂಡು ಹೇಗೆ ಹುಟ್ಟಲು ಸಾಧ್ಯ. ಒಂದೇ ಉದರದಲ್ಲಿ ಹುಟ್ಟಿದವರು ಎಂಬ ಮಾತು ಸರಿಯಾಗುತ್ತದೆ. ಒಂದೇ ಉದರ ಹಂಚಿಕೊಂಡು ಹುಟ್ಟಿದವರು ಸರಿಯಾಗುತ್ತದೆ. ಅವಳಿ-ಜವಳಿ ಅಂತಾದರೆ ಒಂದೇ ಸಮಯದಲ್ಲಿ ಒಂದೇ ಉದರವನ್ನು ಹಂಚಿಕೊಂಡು ಹುಟ್ಟಿದವರು. ಇಂಥಾ ಮಕ್ಕಳು ತಮ್ಮ ತಾಯಿಯನ್ನು ಒಂದು ತೂಕ ಹೆಚ್ಚಾಗಿಯೇ ಗೌರವಿಸಬೇಕು.

ಇನ್ನು ಬೆನ್ನಲ್ಲಿ ಬಿದ್ದವರು. ಮೊದಲಲ್ಲಿ ಇರುವವರನ್ನು ನೋಡಿ ಕಲಿಯುವವರೇ ಬೆನ್ನಲ್ಲಿ ಬಿದ್ದವರು. ಶಾಲೆಗಳಲ್ಲಿ ಸಾಲಾಗಿ ನಿಂತ ವಿದ್ಯಾರ್ಥಿಗಳು, ಪ್ರಾರ್ಥನೆಯ ಅನಂತರ ಒಬ್ಬರ ಹಿಂದೆ ಮತ್ತೂಬ್ಬರು ಹೋಗುವುದನ್ನೂ ಬೆನ್ನಲ್ಲಿ ಬಿದ್ದವರು ಎನ್ನಬಹುದು. ಈ ಬೆನ್ನಲ್ಲಿ ಬಿದ್ದವರಿಗೆ ಎರಡು ಕೆಲಸಗಳು ಇರುತ್ತವೆ. ಒಂದು ಆ ಮುಂದಿರುವವರನ್ನು ಹಿಂಬಾಲಿಸುವುದು. ತಪ್ಪೋ ಒಪ್ಪೋ ಅಂತ ಅರಿವಿಲ್ಲದೇ ಹಿಂಬಾಲಿಸುವುದು ಎಂದರೆ ಕುರಿಯ ಮಂದೆಯಂತೆ ಅಷ್ಟೇ. ಮತ್ತೂಂದು ಕೆಲಸ ಎಂದರೆ, ತಮ್ಮ ಬೆನ್ನು ಕಾಣದ ಮಂದಿಗೆ ಆ ಹಿಂದಿನವರು ತಿಳಿ ಹೇಳುವುದು. ನೂರಕ್ಕೆ ತೊಂಬತ್ತೂಂಬತ್ತು ಭಾಗ ಇದು ನಡೆಯೋದಿಲ್ಲ.

ದೊಡ್ಡವರು ಎನಿಸಿಕೊಂಡವರಿಗೆ ಆ ಚಿಕ್ಕವರು ಎಂದಿಗಿದ್ದರೂ ಚಿಕ್ಕವರೇ. ನಾವು ಬೆನ್ನಲ್ಲಿ ಬೀಳುವವರೇ ಆಗಿದ್ದರೆ, ಆ ಬೆನ್ನಿನ ವ್ಯಕ್ತಿತ್ವ ಹೇಗೆ ಎಂದು ಮೊದಲು ಅರಿತು ಅನಂತರ ಬೆನ್ನ ಹಿಂದೆ ಬೀಳಬೇಕು. ಬೆನ್ನ ಹಿಂದೆ ಇರುವವರೆಲ್ಲ ಬೆಂಬಲಿಗರಲ್ಲ, ಆಡಿಕೊಳ್ಳುವವರೂ ಇರುತ್ತಾರೆ.

ನೀವು ಹುಟ್ಟುಹಬ್ಬ ಆಚರಿಸಿಕೊಳ್ಳುವಿರಾ? ಆಚರಿಸಿಕೊಂಡರೂ, ಆಚರಿಸಿಕೊಳ್ಳದಿದ್ದರೂ ವಯಸ್ಸಂತೂ ಏರುತ್ತಲೇ ಇರುತ್ತದೆ ಅಲ್ಲವೇ? ಗಂಡು ಅಥವಾ ಹೆಣ್ಣಿನ ಮದುವೆಯ ವಿಷಯದಲ್ಲಿ ಈ ಏರುವಿಕೆ ಎಂಬುದು ನಿಜಕ್ಕೂ ಆತಂಕಕಾರಿ. ವಯಸ್ಸು ದಿನೇ ದಿನೇ ಏರುತ್ತಾ ಇದೆ. ವಯಸ್ಸಾದ ಮೇಲೆ ಯಾರು ಹೆಣ್ಣು ಕೊಡ್ತಾರೆ, ಯಾರು ಗಂಡು ಕೊಡ್ತಾರೆ ಎಂಬುದೆಲ್ಲ ನಿತ್ಯದಲ್ಲಿ ಕೇಳುವ ಮಾತೇ. ಪ್ರತೀ ವರ್ಷವೂ ವಯಸ್ಸು ಏರುವುದೇ ನಿಜವಾದರೆ, ಇಳಿವಯಸ್ಸು ಎಂದರೇನು? ವಯಸ್ಸಂತೂ ಇಳಿಯುವುದಿಲ್ಲ ಬದಲಿಗೆ ಏರುತ್ತದೆ. ವಯಸ್ಸು ಏರಿದಂತೆಲ್ಲ ಶಕ್ತಿ ಉಡುಗುತ್ತದೆ ಎಂಬುದು ಸತ್ಯ. ಹಾಗಿದ್ದ ಮೇಲೆ ಇಳಿವಯಸ್ಸು ಎನ್ನುವ ಬದಲು “ಇಳಿಶಕ್ತಿ’ ಅಥವಾ “ಇಳಿಚೈತನ್ಯ’ ಎನ್ನಬೇಕೇ? ಇಂದಿನ ಬರಹದ ಅರ್ಥಾತ್‌ ಸದ್ಯದ ಕೊನೆಯ ವಿಷಯ ಎಂದರೆ ಜ್ಞಾನ. ಮೇಲೆ ಹೇಳಿರುವ ವಿಚಾರಗಳು ಬೇಕೋ ಬೇಡವೋ ಗೊತ್ತಿಲ್ಲ.

ವಿಷಯದ ಅರಿವು ಮೂಡಿಸಿಕೊಳ್ಳಬೇಕೋ ಬೇಡವೋ ಅದೂ ಸಹ ಗೊತ್ತಿಲ್ಲ. ನಮ್ಮ ಸುತ್ತಲೂ ನೂರಾರು ವಿಷಯಗಳು ಇರುತ್ತದೆ ಮತ್ತು ಕಿವಿಗೆ ಬೀಳುತ್ತಲೇ ಇರುತ್ತದೆ. ಆದರೆ ಅದರ ಬಗ್ಗೆ ಆಲೋಚಿಸಲು ಹೋಗೋದಿಲ್ಲ. ಉದಾಹರಣೆಗೆ ಕುದುರೆಯೂ ವೇಗವಾಗಿ ಓಡುತ್ತದೆ. ಜಿಂಕೆಯೂ ವೇಗವಾಗಿ ಸಾಗುತ್ತದೆ. ಆದರೆ ವೇಗ ಎಂದಾಗ Horsepower ಏಕೆ ಬಳಸುತ್ತಾರೆ. ಅಶ್ವಶಕ್ತಿ ಎನ್ನುವ ಬದಲಿಗೆ ಜಿಂಕೆಶಕ್ತಿ ಎಂದೇಕೆ ಕರೆಯಬಾರದು? ಯಾರೋ ಏನೋ ಕರೀತಾರೆ ಹೋಗ್ಲಿ ಬಿಡಿ ಎನಿಸಿದರೂ, ಸುಮ್ಮನೆ ಒಂದು ಹೆಜ್ಜೆ ಮುಂದೆ ಹೋಗಿ ಆಲೋಚಿಸಿದಾಗ ಹೆಚ್ಚಿನ ವಿಚಾರಗಳು ತಿಳಿಯುತ್ತದೆ.

ಅದರಂತೆಯೇ ಹಲವರು ಸಾಮಾಜಿಕ ತಾಣದಲ್ಲಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಅದನ್ನು ಓದಿದಾಗ ಈ ವಿಷಯ ನನಗೆ ಬೇಕೇ ಎಂಬಂತೆ ಇರುತ್ತದೆ. ಇರುವೆಗಳು ಸಾಲಿನಲ್ಲಿ ಸಾಗುವಾಗ ಎದುರಿಗೆ ಸಿಕ್ಕ ಪ್ರತೀ ಇರುವೆಯನ್ನೂ ಚುಂಬಿಸುವುದು ಏಕೆ ಗೊತ್ತೇ? ಪುಣ್ಯಕ್ಕೆ ಇರುವೆಯ ಜಗತ್ತಿನಲ್ಲಿ ವಾಹನಗಳು ಇಲ್ಲ. ಪ್ರತೀ ಬಾರಿ ಮಗದೊಂದು ವಾಹನ ಎದುರಾದಾಗ ಕೆಳಕ್ಕಿಳಿದು ಹೀಗೆ ಚುಂಬಿಸುತ್ತಾ ಸಾಗಿದರೆ ಟ್ರಾಫಿಕ್‌ ಜ್ಯಾಮ್‌ ಆಗುವುದಿಲ್ಲವೇ? ಅಂದ ಹಾಗೆ ಈವರೆಗೂ ಹಲವಾರು ಚಿಕ್ಕಚಿಕ್ಕ ವಿಷಯಗಳನ್ನು ಹೇಳಿದೆ. ಏನಾದರೂ ಉಪಯೋಗವಿದೆ ಎನಿಸಿದೆಯೇ?

* ಶ್ರೀನಾಥ್‌ ಭಲ್ಲೇ

Advertisement

Udayavani is now on Telegram. Click here to join our channel and stay updated with the latest news.

Next