Advertisement

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

03:41 PM Apr 27, 2024 | Nagendra Trasi |

ಹುಟ್ಟಿದಾಗ ಸಂಪೂರ್ಣ ಪರಾವಲಂಬಿ ಆಗಿರುವ ಮಗು ನಿಧಾನವಾಗಿ ತನ್ನ ಪರಿಸರದಿಂದ ಜೀವಿಸಲು ಬೇಕಾದ ಎಲ್ಲ ವಿದ್ಯೆಗಳನ್ನು ಅನುಕರಣೆಯಿಂದ ಕಲಿಯುತ್ತಾ ಹೋಗುತ್ತದೆ. ಅವುಗಳಲ್ಲಿ ಭಾಷೆ ಮುಖ್ಯವಾದದ್ದು . ತನ್ನ ಸುತ್ತಮುತ್ತಲ ಪರಿಸರದಲ್ಲಿ ಆಡುವ ಭಾಷೆಯನ್ನು ಕಲಿಯುವ ಮಗುವಿಗೆ ಅದೇ ಮಾತೃಭಾಷೆಯಾಗುತ್ತದೆ. ಈ ಭಾಷೆಯು ನಾವು ಯಾವುದೇ ಹೊಸ ಭಾಷೆಯನ್ನು ಕಲಿತರೂ ನಮ್ಮ ಹೃದಯಕ್ಕೆ ಹತ್ತಿರವಾಗಿ, ನಮ್ಮ ಆಪ್ತ ಭಾಷೆಯಾಗಿ ಉಳಿದುಕೊಳ್ಳುತ್ತದೆ. ನಾವು ದೇಶವನ್ನು ಬಿಟ್ಟು ಒಂದು ಪರಕೀಯ ಸ್ಥಳಕ್ಕೆ ಬಂದಾಗ ನಮಗೆ ನಮ್ಮ ಭಾಷೆ ಕಿವಿಯ ಮೇಲೆ ಬಿ¨ªಾಗ ಆಗುವ ಸಂತಸವನ್ನು ವರ್ಣಿಸಲು ಸಾಧ್ಯವಾಗುವುದಿಲ್ಲ. ಆಗಲೇ ಗೊತ್ತಾಗುವುದು ನಮ್ಮ ಮಾತೃಭಾಷೆಯ ಬೆಲೆ.

Advertisement

ನಮ್ಮ ಭಾಷೆಯನ್ನು ಮಾತನಾಡುವವರು ಬಹಳ ಬೇಗ ನಮಗೆ ಆಪ್ತರಾಗುತ್ತಾರೆ, ಒಟ್ಟಿಗೆ ನಮ್ಮ ಸಂಘ ಹುಟ್ಟುತ್ತದೆ. ಹೀಗೆ ನಾವು ಎಲ್ಲೇ ಹೋದರೂ ನಮ್ಮ ವ್ಯಕ್ತಿತ್ವದ ಭಾಗವಾಗಿ ಮಾತೃಭಾಷೆ ನಮ್ಮೊಂದಿಗೆ ಇರುತ್ತದೆ. ನಾವು ಕನ್ನಡವನ್ನು ನಮ್ಮ ಮಕ್ಕಳಿಗೆ ಅಥವಾ ಯಾರಾದರೂ ಯಾವುದೋ ದೇಶದಲ್ಲಿದ್ದುಕೊಂಡು ತಮ್ಮ ಭಾಷೆಯನ್ನು ತಮ್ಮ ಮಕ್ಕಳಿಗೆ ಕಲಿಸಲು ಯಾಕೆ ಶ್ರಮ ಪಡುತ್ತಾರೆ ಎಂದು ಹೇಳಲು ಇಷ್ಟು ದೊಡ್ಡ ಪೀಠಿಕೆ ಕೊಡಬೇಕಾಯಿತು. ಎಲ್ಲರಿಗೂ ಈ ಭಾವನೆಗಳು ಇಷ್ಟು ಬಲವಾಗಿ ಇರಬೇಕೆಂದೇನಿಲ್ಲ, ಲೋಕೋ ಭಿನ್ನರುಚಿ.

ಆದರೆ ಭಾಷೆಯ ಬಗೆಗೆ ಇಂತಹ ಭಾವನೆಗಳಿರುವವರ ಗುಂಪು ತಮ್ಮ ಮುಂದಿನ ತಲೆಮಾರು ಈ ಭಾವನೆಗಳಿಂದ ವಂಚಿತರಾಗಬಾರದೆಂದು ತಮ್ಮ ಭಾಷೆಯನ್ನು ಮಕ್ಕಳಿಗೆ ಕಲಿಸಲು ಆರಂಭಿಸುತ್ತಾರೆ. ಇಂತಹ ಸಮಮನಸ್ಕ ಕನ್ನಡಿಗರ ಪ್ರಯತ್ನದ ಫ‌ಲವೇ ಮಸ್ಕತ್‌ನ ಕನ್ನಡ ತರಗತಿಗಳು.

ಮಸ್ಕತ್‌ ಕನ್ನಡ ಶಾಲೆಯ ಇತಿಹಾಸ
ಈ ಕನ್ನಡ ತರಗತಿಗಳ ಇತಿಹಾಸದತ್ತ ಗಮನ ಹರಿಸಿದರೆ ನಾವು ಸುಮಾರು 16 ವರ್ಷಗಳು ಹಿಂದೆ ಸರಿಯಬೇಕಾಗುತ್ತದೆ. ಮಸ್ಕತ್‌ ಕನ್ನಡಿಗರ ಗುಂಪಿನ ಯೋಗಾನಂದ್‌ ಅವರ ಸತತ ಪ್ರಯತ್ನದ ಅನಂತರ 2006ರಲ್ಲಿ ಮಸ್ಕತ್‌ ಭಾರತೀಯ ಶಾಲೆಯಲ್ಲಿ ಕನ್ನಡ ತರಗತಿಗಳನ್ನು ನಡೆಸಲು ಕರ್ನಾಟಕ ಸಂಘಕ್ಕೆ ಅನುಮತಿ ದೊರೆಯಿತು. ಪ್ರಥಮ ವರ್ಷ ಸುಮಾರು ನೂರು ವಿದ್ಯಾರ್ಥಿಗಳು ಕನ್ನಡ ಕಲಿಯಲು ನೋಂದಾಯಿಸಿದರು.

Advertisement

ಕರ್ನಾಟಕ ಸಂಘದ ಸದಸ್ಯರಲ್ಲಿ ಕೆಲವರು ಮಕ್ಕಳಿಗೆ ಕನ್ನಡ ಕಲಿಸಲು ಮುಂದಾದರು. ಹೀಗೆ ಪ್ರಾರಂಭವಾದ ಕನ್ನಡ ಶಾಲೆ ಇಂದಿಗೂ ಮಸ್ಕತ್‌ನಲ್ಲಿ ನೆಲಸಿರುವ ಅನಿವಾಸಿ ಕರ್ನಾಟಕ ರಾಜ್ಯದ ಭಾರತೀಯರ ಪಾಲಿಗೆ ಒಂದು ವರವಾಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ದಾರಿದೀಪವಾಗಿದೆ.

ಕನ್ನಡ ತರಗತಿಗಳು ಕಳೆದ 16 ವರ್ಷಗಳ ಇತಿಹಾಸದಲ್ಲಿ ಅನೇಕ ಏರಿಳಿತಗಳನ್ನು ಕಂಡಿದೆ. ಭಾರತೀಯ ಶಾಲೆ, ಮಸ್ಕತ್‌ನಲ್ಲಿ ಆರಂಭವಾದ ತರಗತಿಗಳು ಪ್ರತಿ ಶುಕ್ರವಾರ ಬೆಳಗ್ಗೆ ನಡೆಯುತ್ತಿತ್ತು. ಸ್ವಯಂ ಸೇವಕ ಶಿಕ್ಷಕರು ಭಾರತದಿಂದ ಪಠ್ಯ ಪುಸ್ತಕಗಳನ್ನು ತಂದು ತಮ್ಮದೇ ಪಠ್ಯಕ್ರಮವನ್ನು ಮಾಡಿಕೊಂಡು ಪಾಠ ಮಾಡುತ್ತಿದ್ದರು.

ಹೀಗೆ ಅನೌಪಚಾರಿಕವಾಗಿ ನಡೆಯುತ್ತ ಬಂದ ತರಗತಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಒಂದು ಪಠ್ಯಕ್ರಮಕ್ಕೆ ಅಳವಡಿಸಿದ್ದು 2014 ರಲ್ಲಿ ಜಾನಕಿನಾಥ್‌ ಅವರ ಮುಂದಾಳತ್ವದಲ್ಲಿ. ಈ ವರ್ಷ ಕನ್ನಡ ತರಗತಿಗಳ ವಿದ್ಯಾರ್ಥಿಗಳನ್ನು ಅವರು ಕಲಿಯುತ್ತಿದ್ದ ಪಠ್ಯಕ್ಕನುಗುಣವಾಗಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರಾಧಿಕಾರದ ಪ್ರಮಾಣ ಪತ್ರಗಳನ್ನು ನೀಡಲು ಆರಂಭಿಸಿದೆವು. ಇದು ವಿದ್ಯಾರ್ಥಿಗಳು ಕನ್ನಡ ಕಲಿಕೆಯನ್ನು ಗಂಭೀರವಾಗಿ ಮಾಡುವಂತೆ ಮಾಡಿತು.

ಪ್ರತೀ ವರ್ಷ ಆಗಸ್ಟ್‌ ತಿಂಗಳಿನಲ್ಲಿ ತರಗತಿಗಳು ಆರಂಭವಾಗುತ್ತದೆ, ಮುಂದಿನ ವರ್ಷದ ಮೇ ತಿಂಗಳಿನಲ್ಲಿ ವಾರ್ಷಿಕ ಪರೀಕ್ಷೆಯ ಬಳಿಕ ಶೈಕ್ಷಣಿಕ ವರ್ಷ ಮುಕ್ತಾಯವಾಗುತ್ತದೆ.
ಈಗ ಮಸ್ಕತ್‌ ಕನ್ನಡ ತರಗತಿಯಲ್ಲಿ ಒಟ್ಟು 130 ವಿದ್ಯಾರ್ಥಿಗಳು ಇದ್ದಾರೆ. 6 ಮಟ್ಟದಲ್ಲಿ 8 ಸ್ವಯಂ ಸೇವಕ ಶಿಕ್ಷಕಿಯರು ನಿಸ್ವಾರ್ಥವಾಗಿ ಕನ್ನಡ ಕಲಿಸುತ್ತಿದ್ದಾರೆ.

2017ರಲ್ಲಿ ಕನ್ನಡ ತರಗತಿಗಳಿಗೆ ಭಾರತೀಯ ಶಾಲೆಯಲ್ಲಿ ತರಗತಿಗೆ ಸ್ಥಳವನ್ನು ಕೊಡುವುದನ್ನು ಕಾರಣಾಂತರಗಳಿಂದ ನಿಲ್ಲಿಸಿದರು. ಇದ್ದಕ್ಕಿದ್ದಂತೆ ಕನ್ನಡ ತರಗತಿಗಳಿಗೆ ಸ್ಥಳವಿಲ್ಲದಂತಾಯಿತು. ಕನ್ನಡ ತರಗತಿಗಳು ಮತ್ತೂಂದು ಹಿನ್ನೆಡೆಯನ್ನು ಎದುರಿಸಬೇಕಾಯಿತು. ಸಂಘದ ಕೆಲವು ಸದಸ್ಯರ ಪ್ರಯತ್ನದಿಂದ (National Training Institute) ನ ತರಗತಿಗಳು ಇಲ್ಲಿನ ವಾರದ ರಜಾ ದಿನವಾದ ಶುಕ್ರವಾರ ಮಧ್ಯಾಹ್ನ ದೊರೆಯಿತು. ಎಲ್ಲ ಶಿಕ್ಷಕಿಯರು, ವಿದ್ಯಾರ್ಥಿಗಳು ಈ ಸಮಯಕ್ಕೂ ಒಪ್ಪಿ ತರಗತಿಗಳು ನಡೆಯಲು ಆರಂಭವಾಯಿತು. ಹೊಸ ಸ್ಥಳದ ಶುಲ್ಕ ದುಬಾರಿಯಿದ್ದು ಕನ್ನಡ ಸಂಘದ ಹಣಕಾಸಿನ ಸ್ಥಿತಿಗೆ ನಿಲುಕದಿ¨ªಾಗ ಕೆಲವು ಉತ್ಸಾಹಿ ಸದಸ್ಯರ ಧನ ಸಹಾಯದಿಂದ ಮಸ್ಕತ್‌ನ ಕನ್ನಡ ಮಕ್ಕಳ ಕನ್ನಡ ಕಲಿಕೆ ಮುಂದುವರಿದಂತಾಯಿತು ಮುಂದೆ 2020ರ ಕೊರೊನಾ ಲಾಕ್‌ಡೌನ್‌ ತನಕ ಕನ್ನಡ ತರಗತಿಗಳು ಈ ಹೊಸ ಸ್ಥಳದಲ್ಲಿ ನಡೆಯಿತು.

ಕೊರೊನಾ ಕಳೆದೆರಡು ವರ್ಷಗಳಲ್ಲಿ ನಮ್ಮ ಜೀವನಕ್ರಮವನ್ನು ಸಂಪೂರ್ಣ ಬದಲಾಯಿಸಿದಂತೆ ನಮ್ಮ ಕನ್ನಡ ತರಗತಿಗಳ ಮೇಲೂ ತನ್ನ ಪರಿಣಾಮ ಬೀರಿತು. ಎಲ್ಲ ಕಡೆ ಶಾಲೆಗಳು, ತರಗತಿಗಳು ಅಂತರ್ಜಾಲಕ್ಕೆ ವರ್ಗಾವಣೆಯಾದಂತೆ ಕನ್ನಡ ತರಗತಿಗಳೂ ಸ್ವಲ್ಪಕಾಲ ಸ್ಥಗಿತಗೊಂಡು ಅಂತರ್ಜಾಲದಲ್ಲಿ 2020ರ ಮೇ ತಿಂಗಳಲ್ಲಿ ಆರಂಭವಾಯಿತು. ನಿಧಾನವಾಗಿ ಶಿಕ್ಷಕ- ಶಿಕ್ಷಕಿಯರೂ ಈ ಹೊಸ ಪದ್ಧತಿಗೆ ಹೊಂದಿಕೊಂಡರು. ವಾರ್ಷಿಕ ಪರೀಕ್ಷೆಗಳು ಅಂತರ್ಜಾಲದಲ್ಲಿ ನಡೆಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಾಗಾಭರಣ ಅವರ ಅಧ್ಯಕ್ಷತೆಯಲ್ಲಿ ಪ್ರಪಂಚದಾದ್ಯಂತದ ಕನ್ನಡ ಶಿಕ್ಷಕರನ್ನು ಒಂದುಗೂಡಿಸಿ ಒಂದು ವಾಟ್ಸ್‌ಆ್ಯಪ್‌ ಗುಂಪು ಮಾಡಿ ಪ್ರಪಂಚದ ಎಲ್ಲ ಕನ್ನಡ ತರಗತಿಗಳನ್ನು ಒಂದುಗೂಡಿಸಿದರು.

ಉತ್ತಮ ಲೇಖಕರಿಂದ, ಶಿಕ್ಷಣ ತಜ್ಞರಿಂದ ಆನ್‌ಲೈನ್‌ ಕನ್ನಡ ಕಲಿಸುವ ಶಿಕ್ಷಕರಿಗೆ ಕೊರೊನಾ ಸಮಯದಲ್ಲಿ ಕೆಲವು ಕಾರ್ಯಾಗಾರಗಳನ್ನು ನಡೆಸಿದರು. ಈ ಎಲ್ಲ ಚಟುವಟಿಕೆಗಳು ಮಸ್ಕತ್‌ ಕನ್ನಡ ಶಿಕ್ಷಕರಲ್ಲಿ ಹೊಸ ಹುರುಪನ್ನು ತುಂಬಿತು. ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಅಂತರ್ಜಾಲದಲ್ಲಿ ನಡೆಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ನಿರೂಪಣೆಯ ತನಕ ಎಲ್ಲವನ್ನೂ ಅಂತರ್ಜಾದ ಕಾರ್ಯಕ್ರಮಗಳಲ್ಲಿ ಮಾಡತೊಡಗಿದರು. ಹೊಸ ಸ್ಥಿತಿಗೆ ಹೊಂದಿಕೊಂಡ ಮಸ್ಕತ್‌ ಕನ್ನಡ ಮಕ್ಕಳ ಕನ್ನಡ ಕಲಿಕೆ ಅಂತರ್ಜಾಲದಲ್ಲಿ ನಿರಾತಂಕವಾಗಿ ಮುಂದುವರಿಯುತ್ತಿದೆ. ಈಗ ಕೊರೊನಾ ತಗ್ಗಿ ಜೀವನದ ಎಲ್ಲ ಚಟುವಟಿಕೆಗಳು ಮೊದಲಿನಂತೆ ನಡೆಯತೊಡಗಿದರೂ ಕನ್ನಡ ತರಗತಿಗಳು ಬಹುತೇಕ ಅಂತರ್ಜಾಲದಲ್ಲಿ ನಡೆಯುತ್ತಿದೆ. ಆದರೆ ಚಟುವಟಿಕೆಗಳು, ಪರೀಕ್ಷೆಗಳು ಗುರುವಿನ ಸಮ್ಮುಖದಲ್ಲಿ ನಡೆಯುತ್ತಿದೆ.

ಮಸ್ಕತ್‌ ಕನ್ನಡ ತರಗತಿಗಳ 17 ವರ್ಷಗಳ ಇತಿಹಾಸದಲ್ಲಿ ಅನೇಕ ಸ್ವಯಂಸೇವಕ ಶಿಕ್ಷಕ ಶಿಕ್ಷಕಿಯರು ತಮ್ಮ ಸೇವೆಯನ್ನು ಕೊಡುಗೆಯಾಗಿ ನೀಡಿ¨ªಾರೆ. ಇಲ್ಲಿ ಬೆಳೆಯುವ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಭಾಷೆಯ ಬಗೆಗೆ ಆಸಕ್ತಿ ಮೂಡಿಸಲು ನಿಸ್ವಾರ್ಥವಾಗಿ ಪ್ರಯತ್ನಿಸಿದ್ದಾರೆ.

ಸಂಸ್ಥಾಪಕರಾದ ಯೋಗಾನಂದ್‌, ರಮೇಶ್‌ ಬೆಂಗಳೂರು ಮತ್ತು ಸುಜಾತ ದಂಪತಿಗಳು, ಕಿರಣ್‌ ಮಂಜುನಾಥ್‌, ಶಿವಣ್ಣನವರು ಇವರನ್ನೆಲ್ಲ ಇಲ್ಲಿ ನೆನೆಯಲೇಬೇಕು. ಪ್ರಸ್ತುತ ಜಯಾ ಛಬ್ಬಿ, ಸ್ಮಿತಾ ಹೊಳ್ಳ, ಪ್ರೀತಿ ಶಿವಯೋಗಿ, ನಿರ್ಮಲ ಅಮರೇಶ, ಕವಿತಾ ಜಗದೀಶ್‌, ಜ್ಯೋತಿ ಹೆಗ್ಡೆ ಮತ್ತು ಸುಧಾ ಶಶಿಕಾಂತ್‌ ಶಿಕ್ಷಕಿಯರ ತಂಡದಲ್ಲಿದ್ದು ಮಸ್ಕತ್‌ನ ಕನ್ನಡ ಶಾಲೆಯನ್ನು ಮುನ್ನೆಡುಸುತ್ತಿದ್ದೇವೆ.

ಕನ್ನಡ ಕಮ್ಮಟಗಳು
ನಮ್ಮ ಕನ್ನಡ ತರಗತಿಗಳ ಮಕ್ಕಳು ಕೇವಲ ಕನ್ನಡ ಓದಿ ಬರೆದರೆ ಸಾಲದು ಅವರಲ್ಲಿ ಕನ್ನಡ ಪ್ರಜ್ಞೆ ಬೆಳೆಯಬೇಕು, ಅವರು ಕರ್ನಾಟಕದ ಸಂಸ್ಕೃತಿ, ಭೂಗೋಳ ಮುಂತಾದ ವಿಷಯಗಳನ್ನು ತಿಳಿಯಬೇಕು; ಅವರು ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ಯೋಚಿಸಬೇಕು ಎನ್ನುವ ಆಶಯದೊಂದಿಗೆ 10 ದಿನಗಳ ಚಳಿಗಾಲದ ಕನ್ನಡ ಶಿಬಿರವನ್ನು ಚಳಿಗಾಲದ ರಜೆಯಲ್ಲಿ 2014ರಿಂದ ಮಾಡಲು ಆರಂಭಿಸಿದೆವು. ಈ ಶಿಬಿರಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕನ್ನಡ ಮಾತನಾಡಲು ಬಂದರೆ ಸಾಕು ಓದಲು ಬರಬೇಕೆಂದಿಲ್ಲ ಎಂಬ ನಿಯಮದೊಂದಿಗೆ ಕನ್ನಡ ಅರ್ಥವಾಗುವ ಆಸಕ್ತ ಮಕ್ಕಳನ್ನು ಸೇರಿಸಿಕೊಂಡು ಮಾಡಿಸುವ ಈ ಶಿಬಿರದಲ್ಲಿ ಪ್ರತೀ ದಿನ ವಿದ್ಯಾರ್ಥಿಗಳಿಗೆ ಕನ್ನಡದ ಹಾಡುಗಳು, ಕಥೆಗಳು, ಗಾದೆಗಳು, ಒಗಟುಗಳು, ಕನ್ನಡ ಭಾಷಾ ಆಟಗಳು, ಕನ್ನಡ ಭಾಷೆ, ರಾಜ್ಯದ ಬಗೆಗಿನ ವಿವಿಧ ಮಾಹಿತಿಗಳನ್ನು ವಿವಿಧ ಚಟುವಟಿಕೆಗಳ ಮೂಲಕ ತಿಳಿಸುತ್ತಿದ್ದೇ ವು. ಮಕ್ಕಳ ಕನ್ನಡ ಭಾಷೆಯ.ಮಟ್ಟದ ಪ್ರಕಾರ ಆವರಿಗೆ ಪಾತ್ರಗಳನ್ನು ನೀಡಿ ನಾಟಕವನ್ನು ಅಭ್ಯಾಸ ಮಾಡಿಸುತ್ತಿದ್ದೇವು. ಆಶು ಭಾಷಣ, ನೀಡಿದ ವಿಷಯಗಳ ಮೇಲೆ ಅಭ್ಯಾಸ ಮಾಡಿದ ಭಾಷಣ, ಕನ್ನಡದ ಜಾನಪದ ಆಟಗಳಾದ ಹಸು-ಹುಲಿ, ಟೊಪ್ಪಿ ಆಟ- ಮುಂತಾದ ಆಟಗಳು, ಕನ್ನಡದ ಪ್ರಸಿದ್ಧ ಚಲನಚಿತ್ರಗಳ ಪ್ರದರ್ಶನ – ಹೀಗೆ ವಿವಿಧ ಚಟುವಟಿಕೆಗಳ ಮೂಲಕ ಅವರ ಕನ್ನಡದ ಜ್ಞಾನವನ್ನು ಹೆಚ್ಚಿಸುವ ಪ್ರಯತ್ನ ಈ ಕಮ್ಮಟದಲ್ಲಿ ಆಗುತ್ತಿತ್ತು.

ಕೊನೆಯ ದಿನ ಸಮಾರೋಪ ಸಮಾರಂಭ ಮಾಡಿ ಶಿಬಿರದಲ್ಲಿ ಕಲಿತ ನಾಟಕದ ಪ್ರದರ್ಶನ, ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ ರಸಪ್ರಶ್ನೆ ಸ್ಪರ್ಧೆ, ಶಿಬಿರದಲ್ಲಿ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆ ಮುಂತಾದ ಕಾರ್ಯಕ್ರಮ ಮಾಡಿ ಪೋಷಕರ ಎದುರು ಪ್ರದರ್ಶಿಸಿ ಶಿಬಿರ ಮುಕ್ತಾಯವಾಗುತ್ತಿತ್ತು. ಶಿಬಿರದ ಕಾರ್ಯಕ್ರಮಗಳ ನಿರೂಪಣೆಯನ್ನೂ ವಿದ್ಯಾರ್ಥಿಗಳು ಮಾಡುತ್ತಿದ್ದರು. ಈ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಆಯೋಜಿಸಿದ ಶಿಕ್ಷಕರು ಅದರ ಅನುಭವಗಳನ್ನು ಈಗಲೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ.

ಮಾಸಿಕ ಪೂರಕ ಚಟುವಟಿಕೆಗಳು
ಕಳೆಡೆರದು ವರ್ಷಗಳಿಂದ ಅಂತರ್ಜಾಲದ ಮೂಲಕ ನಡೆಯುತ್ತಿರುವ ಕನ್ನಡ ತರಗತಿಗಳನ್ನು ಮಕ್ಕಳಿಗೆ ಆಸಕ್ತಿಕರವನ್ನಾಗಿಸಲು ಶಿಕ್ಷಕಿಯರು ಅನೇಕ ವಿಧದಲ್ಲಿ ಪ್ರಯತ್ನಿಸುತ್ತಿದ್ದೇವೆ. ಪ್ರತೀ ತಿಂಗಳು ತರಗತಿವಾರು ಅವರ ಮಟ್ಟಕ್ಕೆ ಸರಿಯಾಗಿ ಸ್ಪರ್ಧೆಗಳನ್ನು ಆಯೋಜಿಸಿ ತರಗತಿ ಮಟ್ಟದ ಸ್ಪರ್ಧೆಗಳನ್ನು ಅಂತರ್ಜಾಲದಲ್ಲಿ ನಡೆಸುತ್ತಿದ್ದೇವೆ.

ನಮ್ಮ ಸಂಘದ ಸಹೃದಯ ಬಂಧುಗಳು ತೀರ್ಪುಗಾರರಾಗಿ ಇದಕ್ಕೆ ಸಹಕರಿಸುವುದರ ಮೂಲಕ ಭಾಗವಹಿಸುವ ವಿದ್ಯಾರ್ಥಿಗಳ ಉತ್ಸಾಹವನ್ನು ಹೆಚ್ಚಿಸುತ್ತಾರೆ. ಅಶುಭಾಷಣ, ಚಿತ್ರ ನೋಡಿ ಕನ್ನಡದಲ್ಲಿ ಬರೆ, ತಯಾರಿಸಿದ ಭಾಷಣ, ಕನ್ನಡದ ಗಾದೆಗಳ ವಿವರಣೆ, ಕನ್ನಡದ ಒಗಟುಗಳನ್ನು ವಿವರಿಸುವುದು, ಪ್ರಬಂಧ ಸ್ಪರ್ಧೆ, ಕಥೆ ಕಟ್ಟುವ ಆಟ, ಕನ್ನಡದ ಕವಿತೆ, ವಚನಗಳ ವಾಚನ- ಮುಂತಾದ ಚಟುವಟಿಕೆಗಳನ್ನು ಮಾಸಿಕ ಚಟುವಟಿಕೆಗಳಾಗಿ ಇಲ್ಲಿಯವರೆಗೆ ಆಯೋಜಿಸಿದ್ದೇವೆ.

ಮಸ್ಕತ್‌ ಕನ್ನಡ ಶಾಲೆಯ ಶಿಕ್ಷಕಿಯಾಗಿ ನನ್ನ ಅನುಭವ 2008ರಿಂದ ಈಗಿನ ತನಕ ಇಲ್ಲಿಯ ಕನ್ನಡ ಶಿಕ್ಷಣದ ಭಾಗವಾಗಿರುವ ನಾನು, ನನ್ನ ಅನುಭವಗಳನ್ನು ಇಲ್ಲಿ ದಾಖಲಿಸಲೇಬೇಕಾಗುತ್ತದೆ. ಇದೊಂದು ವಿಶಿಷ್ಟ ಅನುಭವ. ಮೊದಲಿಗೆ ಮಗಳಿಗೆ ಕನ್ನಡ ಕಲಿಸಲು ತರಗತಿಗೆ ಸೇರಿಸಿದ ನಾನು, ಕೆಲವೇ ದಿನಗಳಲ್ಲಿ ನಾನೂ ಕನ್ನಡ ಕಲಿಸಲು ಸೇರಿಕೊಂಡೆ.

ಕ್ರಮೇಣ ಇದು ನನ್ನ ಜೀವನದ ಭಾಗವಾಯಿತು. ಇಲ್ಲಿನ ತರಗತಿಗಳಲ್ಲಿ ನಾನು ಯಾವಾಗಲೂ ಹಿರಿಯ ತರಗತಿಯನ್ನೇ ತೆಗೆದುಕೊಳ್ಳುತ್ತಿ¨ªೆ. ಪ್ರತೀ ವರ್ಷದ ನನ್ನ ವಿದ್ಯಾರ್ಥಿಗಳೊಡನೆ ಒಂದು ಆತ್ಮೀಯ ಭಾವನೆ ಬೆಳೆಯುತ್ತಿತ್ತು ಹಿರಿಯ ತರಗತಿಯಾಗಿದ್ದರಿಂದ ಓದಿ ಬರೆಯಲು ನನ್ನ ವಿದ್ಯಾರ್ಥಿಗಳಿಗೆ ಸರಿಯಾಗಿ ಬರುತ್ತಿದ್ದುದರಿಂದ ವಿದ್ಯಾರ್ಥಿಗಳ ಆಸಕ್ತಿಗೆ ಸರಿಯಾಗಿ ಅವರಿಗೆ ಪಾಠಗಳನ್ನು ಮಾಡುತ್ತಿದ್ದ. ಕೆಲವು ವಿದ್ಯಾರ್ಥಿಗಳು ಬಹಳ ಆಸ್ಥೆಯಿಂದ ಕಲಿತು ಕಾವ್ಯ ವಾಚನವನ್ನೂ ಕನ್ನಡ ಸಂಘದ ವೇದಿಕೆಯಲ್ಲಿ ಪ್ರದರ್ಶಿಸಿದ್ದು ನನಗೆ ಹೆಮ್ಮೆಯ ವಿಷಯ.

ಈ ಮಕ್ಕಳಿಂದ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ, ರಸಪ್ರಶ್ನೆಗಳನ್ನು ಮಾಡಿಸಿದ್ದು, ವಿದ್ಯಾರ್ಥಿಗಳನ್ನೆಲ್ಲ ಸೇರಿಸಿಕೊಂಡು ನಾಟಕಗಳನ್ನು ಮಾಡಿಸಿದ್ದು- ಎಲ್ಲವೂ ಶಿಕ್ಷಕಿಯಾಗಿ ನನ್ನ ನೆನಪಿನಲ್ಲಿ ಯಾವಾಗಲೂ ಉಳಿಯುವ ಘಟನೆಗಳು. ಇಲ್ಲಿ ಶಾಲೆಯನ್ನು ಮುಗಿಸಿ ಮುಂದೆ ಓದಲು ಭಾರತಕ್ಕೆ ಹೋಗಿರುವ ನನ್ನ ಕನ್ನಡ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಗೆ ನನ್ನನ್ನು ನೆನಪಿಸಿ ಕೊಂಡು ಸಂದೇಶವನ್ನು ಕಳುಹಿಸಿದಾಗ ಮನಸ್ಸಿಗೆ ಆಗುವ ಸಂತೋಷ ಬಣ್ಣಿಸಲು ಆಗುವುದಿಲ್ಲ.

ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳು ಕನ್ನಡ ಓದಲು ಬರೆಯಲು ತಡವರಿಸುತ್ತಿರುವಾಗ ಇಲ್ಲಿ ಬೆಳೆದ ಮಕ್ಕಳು ಆತ್ಮವಿಶ್ವಾಸದಿಂದ ಕನ್ನಡವನ್ನು ಓದಲು ಬರೆಯಲು ಕಲಿತಿರುವುದು, ಆ ಭಾಷೆಯ ಬಗೆಗೆ ಗೌರವವನ್ನು ಬೆಳೆಸಿಕೊಂಡಿರುವುದು, ಈ ಕೆಲಸದಲ್ಲಿ ನಾನು ಭಾಗಿಯಾಗಿರುವುದು ಇವೆಲ್ಲ ನನ್ನ ಜೀವನದ ಒಂದು ಸಾರ್ಥಕ ಭಾಗವಾಗಿ ನನ್ನ ಹೃದಯಕ್ಕೆ ಹತ್ತಿರವಾದ ಸುಂದರ ಅನುಭವಾಗಳಾಗಿ ನನ್ನೊಂದಿಗೆ ಇರುತ್ತದೆ. ಹೀಗೆ ಮಸ್ಕತ್‌ನಲ್ಲಿ ಕನ್ನಡ ಪಾಠ ಒಂದು ವಾರಾಂತ್ಯದ ಒಂದು ಚಿಕ್ಕ ಚಟುವಟಿಕೆಯಾಗಿ ನನ್ನ ದಿನಚರಿಯ ಭಾಗವಾಗಿ ಆರಂಭವಾಗಿದ್ದು ನನ್ನ ಲೋಕವೇ ಆಗಿ ಪರಿವರ್ತಿತವಾಗಿದೆ ಎಂದು ಈ ಲೇಖನ ಬರೆಯುವಾಗಲೇ ನನ್ನ ಅರಿವಿಗೆ ಬಂದಿದ್ದು. ಈ ಒಂದು ಚಟುವಟಿಕೆಯು ವೃತ್ತಿಯಿಂದ ಶಿಕ್ಷಕಿಯಲ್ಲದ ನನಗೆ ಜೀವನವಿಡೀ ನೆನಪಿನಲ್ಲಿಡುವಂತಹ ಒಳ್ಳೆಯ ವಿದ್ಯಾರ್ಥಿಗಳನ್ನು, ಅನೇಕ ಸ್ನೇಹಿತರನ್ನು ನೀಡಿದ್ದಲ್ಲದೇ ಒಂದು ಭಾಷೆಯನ್ನು ಪಾಠ ಮಾಡುವ ರೀತಿಯನ್ನು ಕಲಿಸಿದೆ.

ವಿದೇಶದಲ್ಲಿದ್ದು ಇಷ್ಟು ವರ್ಷ ಇಲ್ಲಿ ಬೆಳೆಯುವ ಮಕ್ಕಳಿಗೆ ನಮ್ಮ ಮಾತೃಭಾಷೆ ಕನ್ನಡದ ಬಗ್ಗೆ ಅರಿವು ಮೂಡಿಸುವ ಅವಕಾಶ ಮಾಡಿಕೊಟ್ಟ ಈ ಕನ್ನಡ ತರಗತಿಗಳ ಸಾಧನೆ ನಿಜವಾಗಿ ಶ್ಲಾಘನೀಯ. ಯಾವುದೇ ಭಾಷೆ ಸಮರ್ಥವಾಗಿ ಮುಂದುವರಿಯಬೇಕಾದರೆ ಅದನ್ನು ನಮ್ಮ ಮುಂದಿನ ತಲೆಮಾರು ಚೆನ್ನಾಗಿ ಕಲಿತಿರಬೇಕು. ನಮ್ಮ ಭಾಷೆಯನ್ನೂ ನಮ್ಮ ಮುಂದಿನ ತಲೆಮಾರಿಗೆ ನಾವು ಕಲಿಸುವ ಒಂದು ಚಿಕ್ಕ ಪ್ರಯತ್ನವನ್ನು ವಿದೇಶದಲ್ಲಿದ್ದು ಮಾಡಿ ಯಶಸ್ವಿಯಾಗಿರುವ ತೃಪ್ತಿ ಮಸ್ಕತ್‌ ಕನ್ನಡ ಶಾಲೆಯ ಭಾಗವಾಗಿರುವ ಎಲ್ಲರಿಗೂ ಇದೆ.

ಸುಧಾ ಶಶಿಕಾಂತ್‌, ಮಸ್ಕತ್‌

Advertisement

Udayavani is now on Telegram. Click here to join our channel and stay updated with the latest news.

Next