Advertisement

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

12:31 PM Apr 13, 2024 | Team Udayavani |

ದುಬೈ:ಸಮುದಾಯ ಸಂಘಟನೆಯ ಚಟುವಟಿಕೆಗಳು ಇಲ್ಲಿನ ಸ್ಥಾನೀಯ ಕಾಯಿದೆಯ ಪ್ರಕಾರ ಕಠಿನ ನಿರ್ಬಂಧಗಳಿಗೆ ಬದ್ಧವಾಗಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ಪರವಾನಿಗೆ ಕಡ್ಡಾಯ. ಸ್ಥಳೀಯ ಕಾನೂನಿನ ಪರಿಪಾಲನೆ ಅನಿವಾರ್ಯ. ಇಂತಹ ಪ್ರತಿಕೂಲ ವಾತಾವರಣದ ಮಧ್ಯೆ ಲಾಭರಹಿತ ಸಮಾಜ ಸಂಘಗಳ ನಿರ್ವಹಣೆ ಒಂದು ನಿರಂತರ ಸಾಹಸ. ಸಾಮಾನ್ಯವಾಗಿ ವರ್ಷ ಒಂದರಲ್ಲಿ ಗರಿಷ್ಠ ಮೂರು-ನಾಲ್ಕು ಕಾರ್ಯಕ್ರಮಗಳಷ್ಟೇ ನಡೆಸುವುದಕ್ಕೆ ಸಾಧ್ಯವಾಗುತ್ತಿರುವ ವಾಸ್ತವ್ಯದಲ್ಲಿ ಯುಎಇ ಬ್ರಾಹ್ಮಣ ಸಮಾಜ ಶೋಭಕೃತ್‌ ಸಂವತ್ಸರದ ಉದ್ದಕ್ಕೂ 20 ಮೌಲ್ಯಭರಿತ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಅಭೂತಪೂರ್ವ ದಾಖಲೆ.

Advertisement

ಉದ್ಯೋಗಾರ್ಥವಾಗಿ ಯುಎಇಯಲ್ಲಿ ನೆಲಸಿರುವ ಕರ್ನಾಟಕ ಕರಾವಳಿ ಮೂಲದ ಸಮಗ್ರ ಬ್ರಾಹ್ಮಣರ ವೇದಿಕೆ – ಯುಎಇ ಬ್ರಾಹ್ಮಣ ಸಮಾಜ. ಇಲ್ಲಿ ಶಿವಳ್ಳಿ, ಹವ್ಯಕ, ಕೋಟ, ಸ್ಮಾರ್ಥ, ವೈಷ್ಣವ ….. ಹೀಗೆ ಎಲ್ಲ ವರ್ಗದ ಸಮಾನ ಮನಸ್ಕ ಬ್ರಾಹ್ಮಣರಿಗೆ ಪ್ರವೇಶ. ಸದಸ್ಯತ್ವಕ್ಕೆ ಶುಲ್ಕವಿಲ್ಲ. ಭಾಗವಹಿಕೆಗೆ ನಿರ್ಬಂಧವಿಲ್ಲ. ಅನುಕೂಲಕ್ಕೆ ಅನುಗುಣವಾಗಿ ಸೇರಿಕೊಳ್ಳಬಹುದಾದ ಮುಕ್ತ ಕುಟುಂಬ ವೇದಿಕೆ.

ಧ್ಯೇಯ ವಾಕ್ಯ “ಸರ್ವೇ ಜನಃ ಸುಖಿನೋ ಭವಂತು’ ಎನ್ನುವ ಧ್ಯೇಯ ವಾಕ್ಯದ ಪಥದಲ್ಲಿ – ಸಮಸ್ತ ಮಾನವ ಕುಲಕ್ಕೆ ಒಳಿತನ್ನು ಬಯಸುವ ಇತರ ಸಮಾನ ಮನಸ್ಕ ಸಮಾಜದ ಕಾರ್ಯಕ್ರಮಗಳಲ್ಲೂ ತಮನ್ನು ತೊಡಗಿಸಿಕೊಳ್ಳಲು ಯುಎಇ ಬ್ರಾಹ್ಮಣ ಸಮಾಜ ಸದಾ ಸಿದ್ಧ. ಸೌಹಾರ್ದತೆಯ ನೆಲೆಯಲ್ಲಿ ಸಹ ಸಮುದಾಯಗಳನ್ನು ಜತೆಗೂಡಿಸಿಕೊಳ್ಳಲು ಸದಾ ಬದ್ಧ.

ಉದ್ದೇಶ – ಚಟುವಟಿಕೆ
2003ರಿಂದ ಸದಾ ಚಟುವಟಿಕೆಯಲ್ಲಿರುವ ಈ ಸಮಾಜದ ಪ್ರಾಥಮಿಕ ಉದ್ದೇಶ – ನಮ್ಮ ಸಂಸ್ಕೃತಿ – ಸಂಪ್ರದಾಯಗಳನ್ನು ಜಾಗೃತವಾಗಿರಿಸುವುದು – ತನ್ಮೂಲಕ ಇಲ್ಲಿ ಹುಟ್ಟಿ ಬೆಳೆಯುತ್ತಿರುವ ನಮ್ಮ ಮುಂದಿನ ಪೀಳಿಗೆಗೆ ಅವುಗಳ ಅರಿವು ಮೂಡಿಸುವುದು – ದೂರದಲ್ಲಿದ್ದರೂ ಅವುಗಳಿಂದ ವಂಚಿತರಾಗದಂತೆ, ಆಚರಣೆಗೆ – ಅನುಷ್ಠಾನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಡುವುದು.

Advertisement

ಯುಗಾದಿ ಸಂದರ್ಭದಲ್ಲಿ ಸತ್ಯನಾರಾಯಣ ಪೂಜೆ, ನವರಾತ್ರಿಯಲ್ಲಿ ದುರ್ಗಾ ನಮಸ್ಕಾರ, ವಾರ್ಷಿಕ ವಿಹಾರ ಕೂಟ – ಹೀಗೆ 3 ನಿಗದಿತ ಕಾರ್ಯಕ್ರಮಗಳಿಂದ ಆರಂಭಗೊಂಡು, ಮುಂದೆ ಸದಸ್ಯರ ಉತ್ತೇಜನದಿಂದ ಕಾಲ ಕ್ರಮೇಣ ಉಪಾಕರ್ಮ, ಮಕರ ಮಾಸದಲ್ಲಿ ಶನಿ ಪೂಜೆ, ರಮ್ಜಾನ್‌ ತಿಂಗಳಿನಲ್ಲಿ ರಕ್ತದಾನ ಶಿಬಿರ, ಪ್ರತಿಭಾ ಅನ್ವೇಷಣೆ, ವಿದ್ಯಾ ಪುರಸ್ಕಾರ, ಊರಿನಿಂದ ಬರುವ ನಮ್ಮ ಸಮಾಜದ ಗಣ್ಯ, ಕಲಾವಿದರುಗಳಿಗೆ ವೇದಿಕೆ – ಸಮ್ಮಾನ, ವಿಶಿಷ್ಟ ಕಾರ್ಯಕ್ರಮಗಳಿಗೆ ಧನ ಸಹಾಯ ಹೀಗೆ ವೈದಿಕದ ಜತೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ವೃದ್ಧಿಸಿಕೊಂಡು ವರ್ಷದಲ್ಲಿ ಸರಾಸರಿ 6ರಿಂದ 7 ಕಾರ್ಯಕ್ರಮಗಳನ್ನು ಆಯೋಜಿ ಸುವುದರ ಮೂಲಕ ಕಳೆದ 20 ವರ್ಷಗಳಲ್ಲಿ 150ಕ್ಕೂ ಮಿಕ್ಕಿದ ಕಾರ್ಯಕ್ರಮಗಳನ್ನು ನೀಡಿದೆ ಹಾಗೂ 500ಕ್ಕೂ ಮಿಕ್ಕಿದ ಸದಸ್ಯ ಕಲಾವಿದರುಗಳಿಗೆ ವೇದಿಕೆ ಕಲ್ಪಿಸಿದೆ.

ಕರೋನ ಸವಾಲು
ಕರೋನದ ಅವಧಿಯಲ್ಲೂ ವರ್ಷಂಪ್ರತಿಯ ಪೂಜಾರಾಧನೆಯನ್ನು ನಿಲ್ಲಿಸದೆ, ಪುರೋಹಿತರ ಮನೆಯಲ್ಲಿ ನೆರವೇರಿಸಿ, ಜತೆಗೆ 20ಕ್ಕೂ ಮಿಕ್ಕಿದ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣ ಮೂಲಕ ಸಂಯೋಜಿಸಲಾಗಿತ್ತು. ಪೇಜಾವರ, ಪುತ್ತಿಗೆ, ಸುಬ್ರಹ್ಮಣ್ಯ ಶ್ರೀಗಳ ಪ್ರವಚನದ ಸಹಿತ ಅನೇಕ ವಿದ್ವಾಂಸರ ಭಾಷಣ, ವಿಶಿಷ್ಟ ಕಲಾವಿದರ ಹರಿಕಥೆ, ಸಂಗೀತ, ಅರೋಗ್ಯ ಸಲಹೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಗೃಹ ಬಂಧನದಲ್ಲಿದ್ದ ನಮ್ಮ ಸದಸ್ಯರ ಆತ್ಮ ಬಲವನ್ನು ಸದಾ ಜಾಗೃತಿಯಲ್ಲಿರಿಸುವ ಪ್ರಯತ್ನ ಮಾಡಲಾಗಿತ್ತು.

ಹುಟ್ಟೂರ ಸಂಬಂಧ ಸೇತು
ಪೇಜಾವರ ಹಿರಿಯ ಶ್ರೀಗಳ ಪರ್ಯಾಯ ಅವಧಿಯಲ್ಲಿ ಪಾಜಕದಲ್ಲಿನ ವಿದ್ಯಾರ್ಥಿ ಕೇಂದ್ರಕ್ಕೆ 10 ಲಕ್ಷ ರೂ. ದೇಣಿಗೆ, ಪಲಿಮಾರು ಶ್ರೀಗಳ ಪರ್ಯಾಯ ಅವಧಿಯಲ್ಲಿ ಕೃಷ್ಣ ಗುಡಿಯ ಮೇಲ್ಛಾವಣಿಗೆ ಚಿನ್ನದ ಹೊದಿಕೆಯ ಧನ ಸಹಾಯ, ಕಳೆದ 5 ವರ್ಷಗಲ್ಲಿ 2 ಭಾರಿ ಭೇಟಿ ನೀಡಿದ ಪುತ್ತಿಗೆ ಶ್ರೀಗಳ ಯುಎಇ ಸಂಚಾರದ ಉಸ್ತುವಾರಿ, ಉಡುಪಿಯ ತುಶಿಮಾಮ ತಂಡದ ಆನಂದ ತೀರ್ಥ ಜ್ಞಾನ ಯಾತ್ರೆಗೆ ದುಬೈಯಲ್ಲಿ ಆಶ್ರಯ ಇವುಗಳಲ್ಲಿ ಉಲ್ಲೇಖನೀಯ.

ಜನ್ಮ ಭೂಮಿಯ ಸಂಬಂಧವನ್ನು ಸದೃಢವಾಗಿರಿಸುವ ದೃಷ್ಟಿಯಲ್ಲಿ, ಹುಟ್ಟೂರಿನ ಸಾಧಕರು ಇತ್ತ ಬಂದಾಗ ಅವರನ್ನು ಗುರುತಿಸಿ ಆಧರಿಸುವ ಕಾರ್ಯಕ್ರಮವನ್ನು ನಮ್ಮ ಸಮಾಜ ಸದಾ ನಡೆಸಿಕೊಂಡು ಬಂದಿದೆ. ಇವರಲ್ಲಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ, ಎ.ಎಸ್‌.ಎನ್‌. ಹೆಬ್ಬಾರ್‌, ರಂಗಭೂಮಿ – ಚಲನಚಿತ್ರ ನಟಿ ಜಯಶ್ರೀ, ವಿದ್ಯಾಭೂಷಣ, ಡಾ| ಕೆ.ಪಿ. ಪುತ್ತೂರಾಯ, ಹರಿಕೃಷ್ಣ ಪುನರೂರು, ಹರಿಕಥಾ ವಿದೂಷಿ ರುಕ್ಮಿಣಿ ಹಂಡೆ ಕೆಲವು ಪ್ರಮುಖರು.

ವಿಂಶತಿ ಉತ್ಸವ
ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರ ಶುಭಹಾರೈಕೆ ಜತೆ – ಶೋಭಕೃತ್‌ ಯುಗಾದಿಯ ಸತ್ಯನಾರಾಯಣ ಪೂಜೆಯೊಂದಿಗೆ ಆರಂಭವಾದ ವಿಂಶತಿ ಉತ್ಸವದಲ್ಲಿ, ಸಂವತ್ಸರದ ಉದ್ದಕ್ಕೂ 20 ವಿಭಿನ್ನ, ವೈವಿಧ್ಯ, ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪೂಜಾರಾಧನೆಯ ಜತೆ, ಸಮಾಜದ ಎಲ್ಲ ವಯೋಮಾನದ ಸದಸ್ಯರ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಿಣ್ಣರ ಕರಕುಶಲತೆಗೆ – “ಕಿಶೋರ ಕೌಶಲ್ಯ’ ಮತ್ತು ರಂಗ ಪ್ರದರ್ಶನಕ್ಕೆ – “ಮಕ್ಕಳ ಮನದಂಗಳ’, ಹಿರಿಯರ ನೃತ್ಯ ಸಾಮರ್ಥ್ಯಕ್ಕೆ – “ನಾಟ್ಯ ಸಿಂಚನ’, ಸ್ವರ ವಿಕಸನಕ್ಕೆ – “ಮುಸ್ಸಂಜೆ ಮಾಧುರ್ಯ’, ಜಾನಪದ ಕಲೆಯ ಉದ್ದೀಪನಕ್ಕೆ “ಯಕ್ಷ ಮದ್ದಳೆ’ (ತಾಳ ಮದ್ದಳೆ ), ಡಾ| ಪ್ರಭಾಕರ ಜೋಶಿಯವರ ಉಪನ್ಯಾಸ “ಜೋಶಿಯವರ ಜತೆಯಲ್ಲಿ”, “ಸಾಧಕ ಸಮ್ಮಾನ’ ವಾಗಿ – ಮಾಜಿ ಶಾಸಕ ರಘುಪತಿ ಭಟ್‌, ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದ್ವಾನ್‌ ಚಂದ್ರಶೇಖರ ನಾವಡ , ಹಿರಿಯ ಯಕ್ಷಗಾನ ವೇಷಧಾರಿ ಮಧೂರು ರಾಧಾಕೃಷ್ಣ ನಾವಡ, ಚೆಂಡೆ ವಾದಕ ಪದ್ಮನಾಭ ಉಪಾಧ್ಯಾಯ, ಮದ್ದಳೆಗಾರ ಚೈತನ್ಯ ಪದ್ಯಾಣ, ಬಹುಮುಖ ಪ್ರತಿಭೆಯ ಯಕ್ಷಾರಾಧಕಿ ಸುಮಂಗಲಾ ರತ್ನಾಕರ, “ಗುರು ಗೌರವ’ವಾಗಿ ವೈದಿಕ ಪುರೋಹಿತರುಗಳ ಸಮ್ಮಾನ, ವಿಶೇಷ ಆರಾಧನೆಯಾಗಿ ವರಮಹಾಲಕ್ಷ್ಮೀ ಪೂಜೆ, ತುಳಸಿ ಹಬ್ಬ, ಸಹ ಸಮುದಾಯದ ಒಳಗೊಳ್ಳುವಿಕೆಗೆ ರಂಗೋಲಿ ಸ್ಪರ್ಧೆ….ಹೀಗೆ ಮೂಡಿ ಬಂದ ಕಾರ್ಯಕ್ರಮಗಳ ದಿಬ್ಬಣಕ್ಕೆ ಅದ್ದೂರಿಯ ಸಮಾರೋಪವಾಗಿ “ವಿಂಶತಿ ವೈಭವ’, ಈ ಸಂವತ್ಸರದ ಕೊನೆಯ ದಿನ – ಎಪ್ರಿಲ್‌ 13ಕ್ಕೆ ಆಯೋಜಿಸಲಾಗಿದ್ದು, ಭರದ ಸಿದ್ಧತೆಗಳು ನಡೆಯುತ್ತಿವೆ.

ಡುಂಡಿರಾಜ್‌ ಗೌರವ ಆತಿಥ್ಯ
ದಿನಪೂರ್ತಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ದೇಶದುದ್ದಕ್ಕೂ ನೆಲೆಸಿರುವ ಸದಸ್ಯರ ಸಮಾಗಮದ ಜತೆ, ಸಹ ಸಮಾಜದ ಪ್ರಮುಖರು ಭಾಗವಹಿಸಲಿದ್ದು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ, ಅದೃಷ್ಟ ಚೀಟಿ, ಬಹುಮಾನ ಇತ್ಯಾದಿ ಏರ್ಪಡಿಸಲಾಗಿದೆ.

ಕನ್ನಡದ ಅತ್ಯಂತ ಜನಪ್ರಿಯ ಹಾಸ್ಯ ಪ್ರಹಸನಕಾರ, ಕವಿ, ನಾಟಕಕಾರ ಶ್ರೀ ಡುಂಡಿರಾಜ್‌ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶೇಷ ಕಾರ್ಯಕ್ರಮವಾಗಿ ಯಕ್ಷಗಾನ “ದಕ್ಷಾಧ್ವರ’ದಲ್ಲಿ ಸ್ಥಳೀಯ ಕಲಾವಿದರ ಜತೆ ಯಕ್ಷಗಾನದ ಉದಯೋನ್ಮುಖ ಭಾಗವತ ಶ್ರೀ ಚಿನ್ಮಯ ಭಟ್‌ ಕಲ್ಲಡ್ಕ, ಪ್ರತಿಭಾವಂತ ಕಲಾವಿದೆ ವಿದ್ಯಾ ಕೊಳ್ಳೂರು , ಸರ್ವಸಾಚಿ ಪಾತ್ರದಾರಿ ದೀಪಕ್‌ ಪೇಜಾವರ ಭಾಗವಹಿಸಲಿದ್ದಾರೆ.

ವಿಪ್ರ ಸ್ಪಂದನ
ಈ ಇಪ್ಪತ್ತು ವರ್ಷದ ಸವಿನೆನಪುಗಳನ್ನು ಜೀವನದುದ್ದಕ್ಕೂ ಅಭಿಮಾನದಿಂದ ಕಾದಿರಿಸಿಕೊಳ್ಳುವ ಸಲುವಾಗಿ ವಿಂಶತಿ ವೈಭವದ ಸ್ಮರಣ ಸಂಚಿಕೆಯನ್ನು “ವಿಪ್ರ ಸ್ಪಂದನ’ವಾಗಿ ಹೊರತರಲು ಸಂಘ ಉದ್ದೇಶಿಸಿದೆ. ಸಾಹಿತ್ಯಾಸಕ್ತ ಸದಸ್ಯರ ಮತ್ತು ನಮ್ಮ ಸದಸ್ಯರೊಂದಿಗೆ ಸಂಪರ್ಕದಲ್ಲಿರುವ ಆಹ್ವಾನಿತರ ಸಾಹಿತ್ಯ ಪ್ರತಿಭೆಗೂ ಅವಕಾಶ ಮಾಡಿಕೊಟ್ಟು ಸಂಚಿಕೆಯನ್ನು ಸಂಗ್ರಹಯೋಗ್ಯವನ್ನಾಗಿ ಹೊರತರಲು ನಿಶ್ಚಯಿಸಿದೆ.

ವಿಪ್ರ ಸಂಚಯ
20ನೇ ವರ್ಷದ ವಿಶೇಷ ಸಂದರ್ಭದಲ್ಲಿ ಇಲ್ಲಿ ನೆಲೆಸಿರುವ ಸಮಗ್ರ ಬ್ರಾಹ್ಮಣರ ಕೈಪಿಡಿಯನ್ನು “ವಿಪ್ರ ಸಂಚಯ’ವಾಗಿ ಹೊರತರುವ ವಿಶೇಷ ಯೋಜನೆಯನ್ನು ಹಾಕಿಕೊಂಡಿದೆ. ಇದರಲ್ಲಿ ಕೇವಲ ಹೆಸರು ನೋಂದಾವಣೆ ಮಾತ್ರವಲ್ಲ, ಬದಲಾಗಿ, ವ್ಯವಹಾರ, ಉದ್ಯೋಗ, ಆಸಕ್ತಿ, ಸಾಧನೆ …ಹೀಗೆ ಎಲ್ಲ ವಿವರಗಳನ್ನು ಹಂಚಿಕೊಳ್ಳುವ ಉದ್ದೇಶವಿದೆ. ಸರ್ವೇ ಜನಃ ಸುಖೀನೋ ಭವಂತು.

Advertisement

Udayavani is now on Telegram. Click here to join our channel and stay updated with the latest news.

Next