Advertisement

ಮೈತ್ರಿ Vs ಕಾಂಗ್ರೆಸ್‌ ಪ್ರತಿಷ್ಠೆಯ ಕದನ; ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

11:48 PM Oct 15, 2024 | Team Udayavani |

ಬೆಂಗಳೂರು: ನಿರೀಕ್ಷೆಯಂತೆ ಚನ್ನಪಟ್ಟಣ ಸೇರಿ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ಉಪಚುನಾವಣೆ ಘೋಷಣೆಯಾಗಿದ್ದು ಇದರ ಬೆನ್ನಲ್ಲೇ ಮೂರೂ ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಎಲ್ಲ ರೀತಿಯ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.

Advertisement

ಲೋಕಸಭಾ ಚುನಾವಣೆಯಲ್ಲಾದ ತೀವ್ರ ಹಿನ್ನಡೆಯನ್ನು ಇಲ್ಲಿ ಸರಿದೂಗಿಸಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್‌ ಹವಣಿಸುತ್ತಿದೆ. ಅತ್ತ ಲೋಕಸಭಾ ಚುನಾವಣೆಯಲ್ಲಿನ ಗೆಲುವಿನ ಓಟವನ್ನು ಮುಂದುವರಿಸುವುದರೊಂದಿಗೆ ಕಾಂಗ್ರೆಸ್‌ಗೆ ಗಾಯದ ಮೇಲೆ ಬರೆ ಎಳೆಯಲು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ “ಹೋರಾಟ’ಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿವೆ.

ಈ ಮೊದಲು ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಕ್ರಮವಾಗಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ತೆಕ್ಕೆಯಲ್ಲಿದ್ದವು. ಈಗ ಉಪಚುನಾವಣೆಯಲ್ಲಿ ಮೂರನ್ನೂ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಆ ಮೂಲಕ ರಾಜ್ಯಕ್ಕೆ ಸಂದೇಶ ರವಾನಿಸುವ ಲೆಕ್ಕಾಚಾರ ಆಡಳಿತ ಮತ್ತು ಮೈತ್ರಿಪಕ್ಷಗಳ ಲೆಕ್ಕಾಚಾರವಾಗಿದೆ. ಆಯಾ ಕ್ಷೇತ್ರಗಳಲ್ಲಿನ ಜಾತಿ, ಸ್ಥಳೀಯರ ಪ್ರಾಬಲ್ಯ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತಿತರ ಅಂಶಗಳ ಆಧಾರದಲ್ಲಿ ಈ ಲೆಕ್ಕಾಚಾರ ನಡೆದಿದೆ.

ಸಿಎಂ ಮತ್ತು ಡಿಸಿಎಂ ಸೇರಿದಂತೆ ಕಾಂಗ್ರೆಸ್‌ ಪಾಲಿಗಂತೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಯಾಕೆಂದರೆ ಒಂದೆಡೆ ಮುಡಾ ನಿವೇಶನ ಹಂಚಿಕೆ ಹಗರಣದ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಕೂಗು ಕೇಳಿಬರುತ್ತಿದೆ. ಮುಂಗಾರು ಅಧಿವೇಶನದ ನಂತರದಿಂದ ಬಿಜೆಪಿ-ಜೆಡಿಎಸ್‌ ಪಾದಯಾತ್ರೆಯಿಂದ ಹಿಡಿದು ಅಭಿಯೋಜನೆಗೆ ಅನುಮತಿ ನೀಡುವವರೆಗೂ ಜೀವಂತವಾಗಿಟ್ಟುಕೊಂಡು ಬರುವಲ್ಲಿ ಯಶಸ್ವಿಯಾಗಿವೆ.

“ಕೈ’ ಪಾಳಯದಲ್ಲೂ ಇದೊಂದು ರೀತಿ ಸಂಚಲನ ಮೂಡಿಸಿದ್ದೂ ನಿಜ. ಈ ಸಂದರ್ಭದಲ್ಲೇ ಉಪಚುನಾವಣೆ ಘೋಷಣೆಯಾಗಿದೆ. ಹಾಗಾಗಿ ಶತಾಯಗತಾಯ “ಕ್ಲೀನ್‌ಸಿÌàಪ್‌’ ಮಾಡಿ ಸಿಎಂ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವುದರ ಜತೆಗೆ ವಿಪಕ್ಷಗಳಿಗೆ ಪ್ರತ್ಯುತ್ತರ ನೀಡಲು ತಂತ್ರ ಹೆಣೆಯುತ್ತಿದ್ದಾರೆ.

Advertisement

ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿಗಳು
-ಶಿಗ್ಗಾವಿ- ಯಾಸೀರ್‌ ಅಹಮ್ಮದ್‌ ಪಠಾಣ್‌, ಸಂಜೀವ್‌ ಕುಮಾರ್‌ ನೀರಲಿ, ರಾಜೇಶ್ವರಿ ಪಾಟೀಲ
-ಸಂಡೂರು- ಬಳ್ಳಾರಿ ಸಂಸ ದ ತುಕಾರಾಂ ಪುತ್ರಿ ಸೌಪರ್ಣಿಕಾ
-ಚನ್ನಪಟ್ಟಣ- ಮಾಜಿ ಸಂಸದ ಡಿ.ಕೆ. ಸುರೇ ಶ್‌ ಇಲ್ಲ ವೇ ರಘುನಂದನ್‌ ರಾಮಣ್ಣ

ಉಪಚುನಾವಣೆ ಯನ್ನು ಎದುರಿಸಲು ಕಾಂಗ್ರೆಸ್‌ ಪಕ್ಷ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ತಯಾರಿಗಳನ್ನೂ ಮಾಡಿಕೊಂಡಿದ್ದು, ಸಮರ್ಥವಾಗಿ ಎದುರಿಸುತ್ತೇವೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಉಪ ಚುನಾವಣೆಗೆ ಸಾಕಷ್ಟು ಹೋಂವರ್ಕ್‌ ಮಾಡಿದ್ದೇವೆ. ಈ ಕ್ಷೇತ್ರಗಳ ಜನ ಸರಕಾರದ ಜತೆ ಇರುತ್ತಾರೋ ಅಥವಾ ಸರಕಾರದ ವಿರುದ್ಧ ನಿಲ್ಲುತ್ತಾರೋ ಎಂಬುದು ಮುಖ್ಯ. ಅಭಿವೃದ್ಧಿ ದೃಷ್ಟಿಯಿಂದ ಸರಕಾ ರದ ಜತೆ ಇರುವ ವಿಶ್ವಾ ಸವಿದೆ.
-ಡಿ.ಕೆ. ಶಿವಕುಮಾರ್‌, ಡಿಸಿಎಂ

ಬಿಜೆಪಿಗೆ 2- ಜೆಡಿಎಸ್‌ಗೆ 2,
ಯೋಗೇಶ್ವರ ನಡೆ ನಿಗೂಢ
ಬಹುತೇಕ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಸ್ಪರ್ಧೆ ಖಚಿತವಾಗಿದೆ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ ಎಂದು ಬಿಜೆಪಿ ಮೂಲಗಳು ಹೇಳುತ್ತಿದ್ದು, ಮಾಜಿ ಸಚಿವ ಯೋಗೇಶ್ವರ ನಡೆ ಎತ್ತ ? ಎಂಬ ಪ್ರಶ್ನೆ ಉದ್ಭವವಾಗಿದೆ. ಇದೇ ತಿಂಗಳು 23ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಆದರೆ ಅದಕ್ಕೆ ಮುಂಚಿತವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಲ್ಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲಿದ್ದಾರೆ. ಇದೆಲ್ಲದರ ಮಧ್ಯೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೂ ಅಚ್ಚರಿಯ ಹೆಸರೊಂದು ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸಂಡೂರಲ್ಲಿ ರೆಡ್ಡಿ ನಡೆ ನಿರ್ಣಾಯಕ
ಸಂಡೂರು ಕ್ಷೇತ್ರದಿಂದ ಸ್ಪರ್ಧೆಗೆ ಬಿಜೆಪಿಯಲ್ಲಿ ಸದ್ಯಕ್ಕೆ ಯಾವುದೇ ಹೈಪ್ರೊಫೈಲ್‌ ಹೆಸರಿಲ್ಲ. ಉಪಚುನಾವಣೆಗೆ ಸ್ಪರ್ಧೆ ಇಲ್ಲ ಎಂದು ಬಿ.ಶ್ರೀರಾಮುಲು ಈಗಾಗಲೇ ಘೋ‰ಸಿದ್ದಾರೆ. ಮಾಜಿ ಸಂಸದ ದೇವೇಂದ್ರಪ್ಪ ಸ್ಪರ್ಧೆಗೆ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಡಾರು ಹನುಮಂತು ಕಣಕ್ಕೆ ಇಳಿಸುವುದಕ್ಕೆ ರಾಜ್ಯ ಘಟಕದ ಬೆಂಬಲವಿದೆ. ಆದರೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಡೆ ಈ ವಿಚಾರದಲ್ಲಿ ನಿರ್ಣಾಯಕವಾಗಲಿದೆ.

ಚನ್ನಪಟ್ಟಣಕ್ಕಿಂತ ಶಿಗ್ಗಾವಿ ಕುತೂಹಲ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರಕ್ಕೆ ಸಂಬಂಧಪಟ್ಟಂತೆ ಯಥೇತ್ಛ ಚರ್ಚೆ ನಡೆಯುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾದ ಶಿಗ್ಗಾವಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಜೋರಾಗಿ ನಡೆಯುತ್ತಿದೆ. ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಮಧ್ಯೆ ಮುಸುಕಿನ ಗುದ್ದಾಟ ಜೋರಾಗಿದ್ದು ಅಚ್ಚರಿಯ ಅಭ್ಯರ್ಥಿಯಾಗಿ ಮಾಜಿ ಸಂಸದ ಶಿವಕುಮಾರ್‌ ಉದಾಸಿಯವರನ್ನೇ ಕಣಕ್ಕಿಳಿಸಬಹುದೆಂಬ ಮಾತುಗಳು ಬಿಜೆಪಿ ವಲಯದಲ್ಲಿ ಜೋರಾಗಿದೆ. ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಸ್ಪರ್ಧೆಗೆ ಉತ್ಸುಕರಾಗಿದ್ದಾರೆ. ಆದರೆ ಪುತ್ರನನ್ನು ಉಪ ಚುನಾವಣೆಯ ಮೂಲಕ ರಾಜಕೀಯ ರಂಗಪ್ರವೇಶ ಮಾಡುವ ಬಗ್ಗೆ ಬೊಮ್ಮಾಯಿ ಪ್ರಾರಂಭದಲ್ಲಿ ಆಸಕ್ತರಾಗಿರಲಿಲ್ಲ. ಆದರೆ ಟಿಕೆಟ್‌ ವಿಚಾರದಲ್ಲಿ ವಿಜಯೇಂದ್ರ ಮೂಗು ತೂರಿಸಿದರೆ ಭವಿಷ್ಯದಲ್ಲಿ ಶಿಗ್ಗಾವಿ ಕ್ಷೇತ್ರ ಶಾಶ್ವತವಾಗಿ ಕೈ ಬಿಡಬಹುದೆಂಬ ಕಾರಣಕ್ಕೆ ಈಗ ಬೊಮ್ಮಾಯಿ ಚುರುಕುಗೊಂಡಿದ್ದಾರೆ.

ಚನ್ನಪಟ್ಟಣ ಎನ್‌ಡಿಗೆ ಖಾತ್ರಿ?
ಚನ್ನಪಟ್ಟಣ ಟಿಕೆಟ್‌ ಬಹುತೇಕ ಎನ್‌ಡಿಎಗೆ ಖಾತ್ರಿಯಾಗಿದೆ. ಆದರೆ ಅಭ್ಯರ್ಥಿ ಯಾರೆಂಬುದು ಇನ್ನೂ ಗುಟ್ಟಾಗಿದೆ. ಮಾಜಿ ಸಚಿವ ಸಿ.ಪಿ. ಯೋಗೇಶ್ವರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಕ್ಷೀಣಿಸಿದ್ದು, ಅವರ ಮುಂದಿನ ನಡೆ ತೀವ್ರ ಕುತೂಹಲ ಸೃಷ್ಟಿಸಿದೆ. ಬಂಡಾಯ ಸ್ಪರ್ಧೆಯೋ, ಕಾಂಗ್ರೆಸ್‌ನತ್ತ ವಲಸೆಯೋ ? ಎಂಬುದು ದೃಢಪಟ್ಟಿಲ್ಲ. ಈ ವಿಚಾರದಲ್ಲಿ ಬಿಜೆಪಿ ವರಿಷ್ಠರು ಎಚ್‌.ಡಿ. ಕುಮಾರಸ್ವಾಮಿಯವರ ಪರ ನಿಲ್ಲುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next