Advertisement

ಇಲ್ಲೇ ನಡೆಯುತ್ತಾ ಏರ್‌ ಶೋ?

06:31 AM Feb 25, 2019 | |

ಬೆಂಗಳೂರು: ಸೂತಕಗಳ ನಡುವೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ-2019’ಕ್ಕೆ ಭಾನುವಾರ ತೆರೆಬಿದ್ದಿತು. ಆದರೆ, “ಮುಂಬರುವ ವೈಮಾನಿಕ ಪ್ರದರ್ಶನ ಎಲ್ಲಿ’ ಎಂಬ ಪ್ರಶ್ನೆಯನ್ನು ಹಾಗೇ ಬಿಟ್ಟುಹೋಯಿತು.

Advertisement

ಸಾಮಾನ್ಯವಾಗಿ ಮುಂದಿನ ಪ್ರದರ್ಶನ ನಡೆಯುವ ಸ್ಥಳವನ್ನು ಹಿಂದಿನ ಅಂದರೆ ಪ್ರಸ್ತುತ ವೈಮಾನಿಕ ಪ್ರದರ್ಶನದಲ್ಲೇ ಘೋಷಿಸುವುದು ವಾಡಿಕೆ. ಆದರೆ, 2017ರಿಂದ ಈ ಸಂಪ್ರದಾಯಕ್ಕೆ ತಿಲಾಂಜಲಿ ಇಡಲಾಗಿದೆ. ಈ ಬೆಳವಣಿಗೆ ನಂತರದಿಂದ ಪ್ರತಿ ಬಾರಿ ಸ್ಥಳಾಂತರದ ಕೂಗು ಜೋರಾಗುತ್ತಿದೆ.

ಅದರಲ್ಲೂ ಆಗಾಗ್ಗೆ ಗಾಳಿಸುದ್ದಿಯಂತೆ ಬಂದು-ಹೋಗುತ್ತಿದ್ದ “ಸ್ಥಳಾಂತರ ಕೂಗು’ ಇದೇ ಮೊದಲ ಬಾರಿ ಅಧಿಕೃತವಾಗಿ ಕೇಳಿಬಂದಿತ್ತು. ಇದು ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಇದೆಲ್ಲದರ ನಡುವೆ 12ನೇ ಪ್ರದರ್ಶನ ಉಳಿಸಿಕೊಳ್ಳುವಲ್ಲಿ ಬೆಂಗಳೂರು ಯಶಸ್ವಿಯಾಯಿತು. ಆದರೆ, 13ನೇ ಪ್ರದರ್ಶನಕ್ಕೂ ಉದ್ಯಾನ ನಗರಿ ವೇದಿಕೆ ಆಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. 

2019ನೇ ವೈಮಾನಿಕ ಪ್ರದರ್ಶನವನ್ನು ಲಖನೌನ ಬಕ್ಷಿ ಕಾ ತಲಾಬ್‌ ಏರೋಸ್ಟೇಷನ್‌ನಲ್ಲಿ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ಎಂದು ಪತ್ರ ಬರೆದಿದ್ದರು.

ಈ ಪ್ರಸ್ತಾವನೆಗೆ ರಾಜ್ಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೂಡ ಬೆಂಗಳೂರಿನಲ್ಲೇ ನಡೆಸಬೇಕು ಎಂದು ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಅಂತಿಮ ಕ್ಷಣದಲ್ಲಿ ರಾಜ್ಯದಲ್ಲೇ ನಡೆಸಲು ತೀರ್ಮಾನಿಸಲಾಯಿತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ 13ನೇ ಪ್ರದರ್ಶನದ ಸ್ಥಳ ಕುತೂಹಲ ಕೆರಳಿಸಿದೆ. 

Advertisement

ಚುನಾವಣೆ ಹಿನ್ನೆಲೆ; ಮತ್ತಷ್ಟು ಸೂಕ್ಷ್ಮ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಗೊಂದಲ ನಿವಾರಣೆ ಮಾಡಬಹುದಿತ್ತು. ಆದರೆ, ಈ ಬಗ್ಗೆ ಪ್ರಸ್ತಾಪಿಸಲಿಲ್ಲ. ಭಾರತೀಯ ವಾಯುಸೇನೆ ಸೇರಿದಂತೆ ರಕ್ಷಣಾ ಇಲಾಖೆಯೂ ಇದನ್ನು ಗೌಪ್ಯವಾಗಿಯೇ ಇಟ್ಟಿದೆ. ಲೋಕಸಭೆ ಚುನಾವಣೆ ಕೂಡ ಹೊಸ್ತಿಲಲ್ಲಿ ಇರುವುದರಿಂದ ಈ ವಿಚಾರ ಮತ್ತಷ್ಟು ಸೂಕ್ಷ್ಮವಾಗಿದೆ. ಈ ಮಧ್ಯೆ ವೈಮಾನಿಕ ಪ್ರದರ್ಶನದ ಆಸುಪಾಸು ನಡೆದ ಅಹಿತಕರ ಘಟನೆಗಳು ಸ್ಥಳಾಂತರದ ಕೂಗಿಗೆ ಪುಷ್ಠಿ ನೀಡಿದಂತಾಗಿದೆ.

ಫೆಬ್ರವರಿ 1ರಂದು “ಮಿರಾಜ್‌-2000′ ತರಬೇತಿ ಯುದ್ಧವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದರು. ತದನಂತರ ಪ್ರದರ್ಶನದ ಹಿಂದಿನ ದಿನವೇ ಸೂರ್ಯಕಿರಣ ತಂಡದ ಎರಡು ತರಬೇತಿ ಯುದ್ಧವಿಮಾನಗಳು ಡಿಕ್ಕಿಹೊಡೆದು, ಪೈಲಟ್‌ವೊಬ್ಬರು ಮೃತಪಟ್ಟರು. ಪ್ರದರ್ಶನದ ನಾಲ್ಕನೇ ದಿನ ನಿಲುಡೆ ಪ್ರದೇಶದಲ್ಲಿ 300ಕ್ಕೂ ಅಧಿಕ ಕಾರುಗಳು ಬೆಂಕಿಗಾಹುತಿಯಾದವು.  

“ಬೆಂಗಳೂರು ಶಾಶ್ವತ ನೆಲೆ ಆಗಲಿ’; ವಿಜಯ್‌ ಭಾಸ್ಕರ್‌: ವೈಮಾನಿಕ ಕ್ಷೇತ್ರದ ರಾಜಧಾನಿ ಬೆಂಗಳೂರು. ಹಾಗಾಗಿ, ವೈಮಾನಿಕ ಪ್ರದರ್ಶನ ನಡೆಯುವ ಶಾಶ್ವತ ನೆಲೆಯನ್ನಾಗಿ ಉದ್ಯಾನ ನಗರಿಯನ್ನು ಘೋಷಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಮನವಿ ಮಾಡಿದರು. ಐದು ದಿನಗಳ 12ನೇ “ಏರೋ ಇಂಡಿಯಾ ಶೋ’ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಬೆಂಗಳೂರು ಮಾತ್ರವಲ್ಲ; ಈಚೆಗೆ ಬೆಳಗಾವಿಗೆ ಕೂಡ ಏರೋಸ್ಪೇಸ್‌ ಪಾರ್ಕ್‌ ಬರುತ್ತಿದೆ. ಪ್ರತಿ ಪ್ರದರ್ಶನದಲ್ಲಿ ಪ್ರದರ್ಶಕರ ಸಂಖ್ಯೆ ಮತ್ತು ಹೂಡಿಕೆ ಪ್ರಮಾಣ ಹೆಚ್ಚುತ್ತಿದೆ. ಈ ಎಲ್ಲ ದೃಷ್ಟಿಯಿಂದ ಬೆಂಗಳೂರನ್ನು ವೈಮಾನಿಕ ಪ್ರದರ್ಶನದ ಶಾಶ್ವತ ನೆಲೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next