Advertisement

ಭಾರತದ ಸೇನಾಶಕ್ತಿ ಚೀನಕ್ಕೂ ಚಿಂತೆ ತಂದಿದೆ : ನಿವೃತ್ತ ಏರ್‌ ಕಮಡೋರ್‌ ದೇವರಾಜನ್‌

09:07 AM Jun 01, 2022 | Team Udayavani |

ಉಡುಪಿ: ಬೆಂಗಳೂರಿನಲ್ಲಿ ವಾಸವಿರುವ ಧರ್ಮಸ್ಥಳ ಮೂಲದ ದೇವರಾಜನ್‌ ಬಾಲ ಮುರಳಿ ಭಾರತೀಯ ವಾಯುಸೇನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಕೊನೆಯಲ್ಲಿ ಏರ್‌ ಕಮಡೋರ್‌ ಆಗಿ ಸೇವಾ ನಿವೃತ್ತಿ ಹೊಂದಿದರು. ಭಾರತೀಯ ಸೇನೆಯ ಮೂರು ಮಹತ್ವದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಇವರು ಕಾರ್ಗಿಲ್‌ ಯುದ್ಧ, ಅಪರೇಶನ್‌ ಪರಾಕ್ರಮ್‌, ಕೊಲ್ಲಿ ಯುದ್ಧದಲ್ಲಿ ಭಾರತೀಯರ ಸ್ಥಳಾಂತರ ಕಾರ್ಯ ಚರಣೆಯಲ್ಲಿ ಭಾಗವಹಿಸಿ ಅನನ್ಯ ಸಾಧನೆ ಮಾಡಿದವರು.

Advertisement

ಬಾಲ್ಯದಿಂದಲೇ ಭಾರತೀಯ ಸೇನೆಗೆ ಸೇರ್ಪಡೆ ಯಾಗುವ ಮಹದಾಸೆಯಿಂದಾಗಿ ಮನೆಯವರ ಮನಸ್ಸಿಗೆ ತುಸು ಬೇಸರವಾದರೂ ನನ್ನ ಆಯ್ಕೆ ಸೇನೆಯೇ ಆಗಿತ್ತು. ಅದರಲ್ಲೂ ಹೆಮ್ಮೆಯ ಭಾರತೀಯ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಭಾಗ್ಯ ನನ್ನದಾಯಿತು ಎನ್ನುತ್ತಾರೆ ದೇವರಾಜನ್‌.

ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಕೇರಳದ ತಿರುವನಂತ ಪುರದಲ್ಲಿ ಪೂರೈಸಿದ ಇವರು, ತ್ರಿವೇಂಡ್ರಮ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌, ಎರೋನಾಟಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡರು. 1986ರಲ್ಲಿ ಪೈಲಟ್‌ ಆಫೀಸರ್‌ ಆಗಿ ನೇಮಕಗೊಂಡ ಅವರು ಎರಡು ವರ್ಷ ಬೆಂಗಳೂರಿನ ವಾಯುಸೇನೆ ಕೇಂದ್ರದಲ್ಲಿ ಫೈಟರ್‌ಜೆಟ್‌ ತರಬೇತಿ ಪಡೆದುಕೊಂಡರು. ಸ್ಕೈಡೈವಿಂಗ್‌ನಲ್ಲಿಯೂ ವಿಶೇಷ ತರಬೇತಿ ಪಡೆದಿದ್ದ ಇವರು ಕೋಲ್ಕತಾ, ಆಗ್ರಾ, ಶಿಲ್ಲಾಂಗ್‌, ಚೆನ್ನೈ ಏರ್‌ಬೇಸ್‌ನಲ್ಲಿ ಸೇವೆ ಸಲ್ಲಿಸಿದ್ದರು.

ವಾಯುಸೇನೆಗೆ ಸೇರ್ಪಡೆಯಾಗಿ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದು ನನ ಗೊದಗಿದ ಸೌಭಾಗ್ಯವೇ ಸರಿ. ಕಾರ್ಗಿಲ್‌ ಯುದ್ಧ ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ನೀಡಿದೆ. ಆ ಸಮಯದಲ್ಲಿ ಪಂಜಾಬ್‌ನಲ್ಲಿ ಕರ್ತವ್ಯದಲ್ಲಿದ್ದು, 100 ಮೀಟರ್‌ ಅಂತರದಲ್ಲಿ ಬಾಂಬ್‌ಗಳು ಸಿಡಿದು ಪಾರಾದ ಉದಾಹರಣೆ ಗಳಿವೆ. ಕಾರ್ಗಿಲ್‌ ಬಳಿಕ ಆಪರೇಶನ್‌ ಪರಾಕ್ರಮ್‌ ವ್ಯವಸ್ಥಿತವಾಗಿ ನಡೆಯಿತು. ಇದರಲ್ಲಿ ವಾಯುಪಡೆ ನಿರ್ವಹಿಸಿದ ಪಾತ್ರ ಮಹತ್ವ ದ್ದಾಗಿದೆ. ಹಾಕ್‌ ಹೆಲಿಕಾಪ್ಟರ್‌ ಮತ್ತು ತೇಜಸ್‌ ಎಲ್‌ಸಿಎ ವಾಯುಪಡೆಗೆ ಸಂಯೋಜನೆಗೊಳಿಸುವ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸಿದ್ದೆ. ಇದರ ಪ್ರಾಜೆಕ್ಟ್ ಡೈರೆಕ್ಟರ್‌ ಆಗಿ ಕಾರ್ಯನಿರ್ವಹಿಸಿದ್ದಾಗಿ ದೇವರಾಜನ್‌ ತಮ್ಮ ಸೇವಾನುಭವಗಳನ್ನು ಬಿಚ್ಚಿಡುತ್ತಾರೆ.

ಆ ಬಳಿಕ ಕಾನ್ಪುರ ಏರ್‌ಬೇಸ್‌ನಲ್ಲಿ ಏರ್‌ಬೇಸ್‌ ಕಮಡೋರ್‌ ಆಗಿ ಮೂರು ವರ್ಷ ಸೇವೆ ಸಲ್ಲಿಸಿ 2021ರ ಮೇ 31ಕ್ಕೆ ನಿವೃತ್ತಿಯಾದರು. ಸೇವಾವಧಿಯಲ್ಲಿ ಐಎಎಫ್ ಫೈಟರ್‌ಜೆಟ್‌, 4 ಎಂಜಿನ್‌ ಇರುವ ಐಎಲ್‌76, ಸುಖೋಯ್‌ ಯುದ್ಧ ವಿಮಾನಗಳನ್ನು ಯಶಸ್ವಿಯಾಗಿ ಹಾರಿಸಿದ ಕೀರ್ತಿ ಇವರಿಗಿದೆ. ವಾಯುಸೇನೆಯಲ್ಲಿನ ಅಮೋಘ ಸಾಧನೆಗಾಗಿ ರಾಷ್ಟ್ರಪತಿಯವರಿಂದ ವಿಶಿಷ್ಟ ಸೇವಾ ಪದಕಕ್ಕೆ ದೇವ ರಾಜನ್‌ ಭಾಜನರಾಗಿದ್ದಾರೆ. ವಾಯುಪಡೆಗಳ ಮಹತ್ವ ಮತ್ತು ಕಾರ್ಯ ನಿರ್ವಹಣೆ ವಿಷಯದಲ್ಲಿ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಇವರು ನಡೆಸಿಕೊಟ್ಟಿದ್ದು, ದಕ್ಷಿಣ ಕೊರಿಯಾ, ಮಸ್ಕತ್‌, ರಷ್ಯಾದಲ್ಲಿ ನಡೆದ ರಕ್ಷಣ ಸಂಶೋಧನ ಸಮಾವೇಶಗಳಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸಗಳನ್ನೂ ನೀಡಿದ್ದಾರೆ.
ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇವರಾಜನ್‌ “ಉದಯವಾಣಿ’ಗೆ ನೀಡಿದ ಸಂದರ್ಶನದ ಸಂಕ್ಷಿಪ್ತ ಪಾಠ ಇಲ್ಲಿದೆ.

Advertisement

– ನಿಮ್ಮ ವೃತ್ತಿ ಜೀವನದ ವಿಶೇಷ ಕಾರ್ಯಾಚರಣೆ ಯಾವುದಾಗಿತ್ತು?
2002-03ರಲ್ಲಿ ನಡೆದ ಕೊಲ್ಲಿ ಯುದ್ಧದ ಸಮಯದಲ್ಲಿ ಭಾರ ತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆ ಬಹಳ ಮುಖ್ಯ ವಾ ದ ದ್ದು. ಅಂದು ಏರ್‌ ಇಂಡಿಯಾ ಜತೆಗೆ ಭಾರತೀಯ ವಾಯು ಪಡೆಯು ಕೈಜೋಡಿಸಿ ಭಾರತೀಯರನ್ನು ತಾಯ್ನಾಡಿಗೆ ಕರೆ ತಂದಿತ್ತು. ಅಂದು ಸ್ಕ್ವಾಡ್ರನ್‌ ಲೀಡರ್‌ ಹುದ್ದೆಯಲ್ಲಿದ್ದು, ಈ ಕಾರ್ಯಾ ಚರಣೆ ಜೀವನದ ವಿಶೇಷ ಭಾಗವಾಗಿತ್ತು. 15 ಸಾವಿರಕ್ಕೂ ಅಧಿಕ ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆ ತಂದಿದ್ದೆವು.

–  ಚೀನ ಮತ್ತು ಭಾರತದ ಮಿಲಿಟರಿ ಬಲದ ವ್ಯವಸ್ಥೆ ಹೇಗಿದೆ?
ಎಲ್ಲ ದೇಶಗಳು ಅವುಗಳ ಭದ್ರತಾ ಅಗತ್ಯಗಳಿಗೆ ತಕ್ಕಂತೆ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ನಮಗೆ ದೇವರ ಕೊಡುಗೆಯಂತೆ ಮಿಲಿಟರಿ ಶಕ್ತಿ ಬಲಕ್ಕೆ ಅನುಗುಣವಾಗಿ ಹಿಮಾ ಲಯ ಪರ್ವತ ದೊಡ್ಡ ರಕ್ಷಣ ಗೋಡೆಯಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತ ವಿಶ್ವದ ಬಲಾಡ್ಯ ರಾಷ್ಟ್ರಗಳಿಗೂ ಸಡ್ಡು ಹೊಡೆಯುವ ರೀತಿಯಲ್ಲಿ ತನ್ನ ಸೇನಾಶಕ್ತಿಯನ್ನು ವೃದ್ಧಿಸಿಕೊಂಡಿದೆ. ರಕ್ಷಣ ಕ್ಷೇತ್ರದಲ್ಲಿನ ಭಾರತದ ಬೆಳವಣಿಗೆ ಚೀನಕ್ಕೂ ಚಿಂತೆಯನ್ನುಂಟು ಮಾಡಿದೆ.

– ವಾಯುಸೇನೆ ಆಯ್ಕೆ ಪ್ರಕ್ರಿಯೆ ಕಠಿನವಾಗಿರುತ್ತದೆಯೇ?
ಅಭ್ಯರ್ಥಿಗಳ ದೈಹಿಕ, ಮಾನಸಿಕ ಆರೋಗ್ಯವನ್ನು ಪರೀಕ್ಷಿಸಿಯೇ ವಾಯುಪಡೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಹಾಕಿದವರೆಲ್ಲ ಆಯ್ಕೆಗೊಳ್ಳಲು ಸಾಧ್ಯವಿಲ್ಲ. ತಾಂತ್ರಿಕ ಶಿಕ್ಷಣ, ಸದೃಢ ಆರೋಗ್ಯ, ದೈಹಿಕ ಅರ್ಹತೆ ಇದ್ದಲ್ಲಿ ವಾಯುಸೇನೆಗೆ ಸೇರಬಹುದು. ನನ್ನ ಕಾಲೇಜಿನಲ್ಲಿ 1985ರಲ್ಲಿ ಭಾರತೀಯ ವಾಯು ಸೇವೆ ಪೈಲಟ್‌ ಆಫೀಸರ್‌ ಹುದ್ದೆಗೆ ಕ್ಯಾಂಪಸ್‌ ಸೆಲೆಕ್ಷನ್‌ ಆಯೋಜಿಸಿತ್ತು. ಅದರಲ್ಲಿ ಅರ್ಜಿ ಹಾಕಿದ್ದ 135 ಮಂದಿಯಲ್ಲಿ 10 ಮಂದಿ ಮಾತ್ರ ಆಯ್ಕೆಯಾಗಿದ್ದು, ಅದರಲ್ಲಿ ನಾನು ಒಬ್ಬನಾಗಿದ್ದೆ.

– ಸಿಡಿಎಸ್‌ ಬಿಪಿನ್‌ ರಾವತ್‌ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಅಪಘಾತ ಪ್ರಕರಣದ ಬಗ್ಗೆ ಏನು ಹೇಳುತ್ತೀರಿ?
ಸೇನಾ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಅಪಘಾತಕ್ಕೆ ಒಳಗಾಗಿದ್ದು ದುಃಖಕರ ಸಂಗತಿ. ಈ ದುರಂತ ನಡೆಯಬಾರದಿತ್ತು. ಬೆಟ್ಟ, ಗುಡ್ಡ ಪ್ರದೇಶದಲ್ಲಿ ಮೋಡಗಳ ಚಲನೆಯನ್ನು ಅಂದಾಜು ಮಾಡುವುದು ಕಷ್ಟ ಮತ್ತು ಇಲ್ಲಿನ ಹವಾಮಾನ ಭಿನ್ನವಾಗಿರುತ್ತದೆ. ಹೆಲಿ ಕಾಪ್ಟರ್‌, ವಿಮಾನಗಳ ಚಾಲನೆ ವೇಳೆ ಎಷ್ಟೇ ನುರಿತ ಪೈಲಟ್‌ಗಳಾದರೂ ಪರಿಸ್ಥಿತಿ ಹೀಗೆಯೇ ಇದೆ ಮತ್ತು ಇರಲಿದೆ ಎಂದು ಅಂದಾಜಿಸುವುದು ಸಾಧ್ಯವಿಲ್ಲ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಈ ದುರಂತ ಸಂಭವಿಸಿದೆ.

– ವಾಯುಸೇನೆಗೆ ಸೇರ್ಪಡೆಗೊಳ್ಳ ಬಯಸುವ ಆಸಕ್ತರಿಗೆ ನಿಮ್ಮ ಸಲಹೆ ಏನು?

ಭಾರತೀಯ ವಾಯುಸೇನೆ ಉತ್ಸಾಹಿ, ಸಾಹಸಿ ಪ್ರವೃತ್ತಿಯ ಯುವಕರಿಗೆ ದೇಶ ಸೇವೆ ಮಾಡಲು ಸದಾ ಬಾಗಿಲು ತೆರೆದಿರುತ್ತದೆ. ಈಗ ಸೇನೆಯಲ್ಲಿ ಉತ್ತಮ ವೇತನ ಸಹಿತ ಹಲವು ಸೌಲಭ್ಯಗಳು ಲಭಿಸುತ್ತಿವೆ. ಸೈನಿಕರಾಗ ಬಯಸುವವರು ಬದ್ಧತೆ, ಸ್ವಯಂ ಶಿಸ್ತು, ತಾಳ್ಮೆ ಗುಣವನ್ನು ಹೊಂದಿರಬೇಕು. ಮದ್ಯಪಾನ, ಧೂಮಪಾನಗಳಂತಹ ದುಶ್ಚಟಗಳಿಂದ ದೂರವಿರಬೇಕು.

- ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next