Advertisement

ಥೈಲ್ಯಾಂಡ್ ನಗರವನ್ನು  ಬೆಸೆದ ಹಳ್ಳಿಯ ಕಾಳುಮೆಣಸಿನ ಬಳ್ಳಿ..!

11:11 AM Jul 28, 2018 | |

ಸುಳ್ಯ : ಮೂವತ್ತೈದು ಕಿ.ಮೀ. ದೂರದ ನಗರದಿಂದ ಅಧ್ಯಯನ ಪ್ರವಾಸ ನೆಪದಲ್ಲಿ ಹಳ್ಳಿಯೊಳಗೆ ಕಾಲಿಟ್ಟ ವಿದ್ಯಾರ್ಥಿಗಳು ನೆಲದೊಳಗೆ ಬೆವರು ಹರಿಸುವ ಕೃಷಿ ಕಲಾವಿದನ ಕುಂಚದಲ್ಲಿ ಮೂಡಿದ ಹಸಿರು ರಾಶಿಯ ಹೊದಿಕೆ ಕಂಡು ಬೆಕ್ಕಸ ಬೆರಗಾದರು..!
ನಗರಮುಖಿಯಿಂದ ಗ್ರಾಮಮುಖಿಯತ್ತ ಹೊರಳುವ ಅರ್ಥಪೂರ್ಣ ಮುಖಾಮುಖಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕುರಿಯಾಜೆ ತಿರುಮಲೇಶ್ವರ ಭಟ್‌ ಅವರ ದೇಸಿ ಸೊಗಡಿನ ಹಚ್ಚ ಹಸಿರಿನ ನಂದನವನದೊಳಗೆ ಶುಕ್ರವಾರ ಏರ್ಪಟ್ಟಿತ್ತು. 

Advertisement

60ಕ್ಕೂ ಅಧಿಕ ವಿದ್ಯಾರ್ಥಿಗಳು
ಪುತ್ತೂರಿನ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಮೂರು ದಿನಗಳ ಮಾಧ್ಯಮ ಬರವಣಿಗೆ ಕಜ್ಯ ಕೊಟ್ಯದಲ್ಲಿ ಅಧ್ಯಯನ ಪ್ರವಾಸದ ನಿಮಿತ್ತ ವಿದ್ಯಾರ್ಥಿಗಳು ಕೃಷಿ ತೋಟಕ್ಕೆ ತೆರಳಿ ಸಾಧಕನ ಯಶೋಗಾಥೆ ಕಣ್ಣಾರೆ ಕಂಡು ಸಂಭ್ರಮಿಸಿದರು. ಸುಳ್ಯ- ಪುತ್ತೂರಿನ ಪದವಿ ಕಾಲೇಜಿನ 60ಕ್ಕೂ ಅಧಿಕ ವಿದ್ಯಾರ್ಥಿಗಳು 2 ಗಂಟೆ ಕಾಲ ನಂದನವನದೊಳಗೆ ಸುತ್ತಾಡಿದರು. ನಾಲ್ಕು ಗೋಡೆಯೊಳಗೆ ಕಾಲ ಕಳೆಯುವ ವಿದ್ಯಾರ್ಥಿಗಳು ಹಳ್ಳಿ ಮೂಲೆಯ ಕೃಷಿ ಕುಟುಂಬದ ಯಶಸ್ಸಿನ ಕಥೆಗೆ ಕಿವಿಗೊಟ್ಟು, ಹಲವು ಮಾಹಿತಿಗಳನ್ನು ಪಡೆದುಕೊಂಡರು.

ಗಮನ ಸೆಳೆದ ನಂದನವನ..!
ನಂದನವನದ ಮನೆಯ ಮುಖ್ಯ ಪ್ರವೇಶ ದ್ವಾರದಿಂದ ತೊಡಗಿ ಏಳು ಎಕರೆಯಲ್ಲಿ ಇವರ ಶ್ರಮದ ಹೆಜ್ಜೆ ಗುರುತುಗಳಿವೆ. 18 ವರ್ಷಗಳಿಗಿಂತ ಮಿಕ್ಕಿ ಕೃಷಿ ಕ್ಷೇತ್ರದಲ್ಲಿ ಹಲವು ಪ್ರಯೋಗಗೈದು ಸೈ ಎನಿಸಿಕೊಂಡವರು ಕುರಿಯಾಜೆ ತಿರಮಲೇಶ್ವರ ಭಟ್‌. 100ಕ್ಕೂ ಅಧಿಕ ಬಗೆಯ ದೇಸಿ-ವಿದೇಶಿ ಹಣ್ಣಿನ ಗಿಡ, ಬಗೆ ಬಗೆಯ ಕಳ್ಳಿ ಜಾತಿಯ ಗಿಡಗಳು, ಮನೆ ಅಂಗಲದಲ್ಲಿ ಗಮನ ಸೆಳೆಯುವ ಉದ್ಯಾನವನ, ಒಪ್ಪ – ಹೂರಣವಾಗಿ ಜೋಡಿಸಿಟ್ಟ ಬಣ್ಣ-ಬಣ್ಣದ ಸ್ಟೋನ್‌ಗಳು, ಧಾರವಾಡ ಎಮ್ಮೆ, ಗಿರ್‌ ಜಾತಿಯ ದನ, ನೀರಿನ ಮರುಪೂರಣ.. ಹೀಗೆ ಇದು ಒಂದೆರಡಲ್ಲ. ಮೊಗೆದಷ್ಟು ಮುಗಿಯದ ದೇಶ-ವಿದೇಶದಲ್ಲಿ ಕಾಣ ಸಿಗುವ ತಳಿಗಳು ಏಳು ಎಕರೆ ಭೂಮಿಯಲ್ಲಿ ಸೊಂಪಾಗಿ ಪಸರಿಸಿವೆ. ರಬ್ಬರ್‌ ಹೊರತುಪಡಿಸಿ ಮಿಕ್ಕ ಕೃಷಿಗೆ ಸಾವಯವ ಗೊಬ್ಬರ ಹಾಕುತ್ತಾರೆ. ಹಾಗಾಗಿ ಇಲ್ಲಿ ರೋಗ ಬಾಧೆ ಕಾಣಿಸಿಕೊಳ್ಳುವುದೇ ಅಪರೂಪ. 

ಥೈಲ್ಯಾಂಡ್ ಬೆಸೆದ ಬಳ್ಳಿ..!
ತಿರುಮಲೇಶ್ವರ ಭಟ್‌ ಅವರ ತೋಟದೊಳಗೆ ಬೆಳೆದ ಕಾಳುಮೆಣಸಿನ ಬಳ್ಳಿ ಥಾçಲ್ಯಾಂಡ್‌ಗೆ ರಫ್ತಾಗಿತ್ತು. ಅಲ್ಲಿಂದ ಬೇಡಿಕೆ ಬಂದ ಕಾರಣ ಮಡಿಕೇರಿ ಏಜೆನ್ಸಿ ಮೂಲಕ ತಿರುಮಲೇಶ್ವರ ಭಟ್‌ ಅವರು ಬಳ್ಳಿಯನ್ನು ವಿದೇಶಕ್ಕೆ ಕಳುಹಿಸಿದ್ದರು ಎಂದು ನೆನೆಪಿಸಿದರು ಅಧ್ಯಯನ ಪ್ರವಾಸದ ಸಂಯೋಜಕ ನರೇಂದ್ರ ರೈ ದೇರ್ಲ ಅವ ರು. ಈ ಮೂಲಕ ಹಳ್ಳಿಯಿಂದ ಬಳ್ಳಿ ಮೂಲಕ ಥೈಲ್ಯಾಂಡ್ ಬೆಸೆದ ಕೀರ್ತಿ ಕುರಿಯಾಜೆಯ ಭಟ್‌ ಅವರದ್ದು. ಇಂತಹ ಹತ್ತಾರು ಅಪರೂಪದ ಸಾಧನೆಗಳು ಮೌನ ಸಾಧಕನೊಳಗಿವೆ. ಸ್ವತಃ ದುಡಿಮೆ, ಪತ್ನಿಯ ಸಹಕಾರ ಎಲ್ಲವನ್ನು ವಿವರಿಸಿದರು. ಸಂವಾದದ ಮೂಲಕವೂ ನೆಲದ ಒಡನಾಟ ಬಿಚ್ಚಿಟ್ಟರು. ಇವರ ಸಾಧನೆಗೆ ರಾಜ್ಯ ಪಂಡಿತ್‌ ಕೃಷಿ ಪ್ರಶಸ್ತಿ ಸಂದಿದೆ.

ಇಡೀ ನಂದನವನ ನಮ್ಮೆಲ್ಲರ ಪಾಲಿಗೆ ಹೊಸ ಪ್ರಪಂಚವನ್ನು ತೋರಿಸಿದಷ್ಟು ಖುಷಿ ಕೊಟ್ಟಿದೆ. ವಿದೇಶದ ಹಣ್ಣಿನ ಗಿಡಗಳು ಇಲ್ಲಿ ಹೂ ಬಿಟ್ಟಿವೆ. ಪುಸ್ತಕದಲ್ಲಿ ಕಂಡಿದ್ದ ಕೆಲವು ಗಿಡಗಳು, ಹಣ್ಣುಗಳು ತೋಟ ದೊಳಗೆ ಕಂಡೆವು. ಅಧ್ಯಯನ ಪ್ರವಾಸ ಅರ್ಥಪೂರ್ಣವಾಗಿದೆ ಎಂದು ಅಧ್ಯಯನ ಪ್ರವಾಸಗೈದ ವಿದ್ಯಾರ್ಥಿಗಳು ಹೇಳಿದ್ದಾರೆ.

Advertisement

ಕೃಷಿ ಮೇಲೆ ಪ್ರೀತಿ
ಕೃಷಿಯಲ್ಲಿ ಶ್ರಮದ ಜತೆಗೆ ಸುಖ ಇದೆ. ನಗರದೊಳಗೆ ನುಸುಳಿದ ಅನೇಕರು ಮರಳಿ ಹಳ್ಳಿಯತ್ತ ಮುಖ ಮಾಡಿದ್ದು ಇದೇ ಸುಖ, ನೆಮ್ಮದಿಗೋಸ್ಕರ. ನಂದನವನ ನನ್ನ ಆಸಕ್ತಿ, ಸಹಜ ಕೃಷಿ ಪ್ರೀತಿಯ ಫಲ. 600 ರಬ್ಬರ್‌ ಗಿಡ ತೆಗೆದು ಅಲ್ಲೆಲ್ಲ ಹಣ್ಣಿನ ಗಿಡ ನೆಡುವ ಯೋಚನೆ ನನ್ನೊಳಗಿದೆ.
– ತಿರುಮಲೇಶ್ವರ ಭಟ್‌ ಕುರಿಯಾಜೆ ನಂದನವನ

ಸ್ಫೂರ್ತಿಯಾಗಲಿ
ನಂದನವನದೊಳಗೆ ಹೊಕ್ಕಾಗ ನಿಜವಾದ ಹಸಿರು ಲೋಕದ ದರ್ಶನವಾಗಿದೆ. ವಿದ್ಯಾರ್ಥಿಗಳ ಪಾಲಿಗೆ ಇದು ಒಂದು ದಿನದ ಭೇಟಿ ಆಗಬಾರದು. ನಿತ್ಯವೂ ಕಣ್ಣು, ಕಿವಿ ತೆರೆದು, ನೆಲದೊಳಗಿನ ಬಾಂಧವ್ಯದ ಕಡೆ ಮುಖ ಮಾಡಬೇಕು. ಅಧ್ಯಯನ ಪ್ರವಾಸ ಅದಕ್ಕೊಂದು ಸ್ಫೂರ್ತಿಯಾಗಲಿ.
– ಝೇವಿಯರ್‌ ಡಿ’ಸೋಜಾ
ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next