ಬನ್ನೂರು: ಬನ್ನೂರು ವಿಧಾನಸಭಾ ಕ್ಷೇತ್ರವಿದ್ದ ಸಂದರ್ಭದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ, ನಂತರದ ರಾಜಕೀಯ ಬೆಳವಣಿಗೆಯಲ್ಲಿ ಅನ್ಯಪಕ್ಷ ಸೇರಿ 14 ವರ್ಷ ವನವಾಸ ಅನುಭವಿಸಿದ ಬಳಿಕ ಮತ್ತೆ ತವರು ಪಕ್ಷ ಸೇರಿ ನನ್ನ ಪಕ್ಷದ ಅಭ್ಯರ್ಥಿ ಎಸ್.ಶಂಕರ್ ಗೆಲುವಿಗೆ ಶ್ರಮಿಸುತ್ತಿರುವುದಾಗಿ ಮಾಜಿ ಶಾಸಕಿ ಜೆ.ಸುನೀತಾ ತಿಳಿಸಿದರು.
ಸಮೀಪದ ಕೇತುಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ರಾಜಕೀಯದಲ್ಲಿ ಆದ ಬೆಳವಣಿಗೆಗಳು ತಮ್ಮ ಆಡಳಿತದ ಅವಧಿಯನ್ನು ಮೊಟಕುಗೊಳಿಸಿ ತಮಗೆ ಕೇವಲ 30 ತಿಂಗಳು ಮಾತ್ರ ಶಾಸಕ ಸ್ಥಾನ ದೊರೆತಿದ್ದು, ಅದರಲ್ಲಿಯೇ ಬನ್ನೂರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯೆತೆ ನೀಡಿದ್ದೇನೆ ಎಂದು ತಿಳಿಸಿದರು.
ತಾವು ಕಾಂಗ್ರೆಸ್ ಪಕ್ಷ ಸೇರಿದ್ದರೂ ಎಲ್ಲಿಯೂ ಬಹಿರಂಗವಾಗಿ ಕಾಣಸಿಗದೇ ರಾಜಕೀಯದಿಂದ ದೂರ ಉಳಿದಿದ್ದೆ. ಅಲ್ಲಿದ್ದರೂ ತಮ್ಮನ್ನು ಬಿಜೆಪಿ ಪಕ್ಷ ಸೆಳೆಯುತ್ತಿತ್ತು. ಎಸ್.ಶಂಕರ್ ಬಿಜೆಪಿಗೆ ಸೇರ್ಪಡೆಯಾದ ವಿಷಯ ತಿಳಿಯುತ್ತಿದ್ದಂತೆ ತಮ್ಮ ಕ್ಷೇತ್ರಕ್ಕೆ ಸೂಕ್ತ ವ್ಯಕ್ತಿ ದೊರೆತರೆಂದು ಅರಿತು ತಾವೂ ಬಿಜೆಪಿ ಸೇರಿದ್ದಾಗಿ ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ: ಜೆಡಿಎಸ್ ಅಭ್ಯರ್ಥಿ ಅಶ್ವಿನ್ ಕುಮಾರ್ ವಿರುದ್ಧ 11 ಮಂದಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು, ಪಕ್ಷದ ಮುಖಂಡರಲ್ಲಿ ಅಶ್ವಿನ್ಗೆ ಟಿಕೆಟ್ ನೀಡದಂತೆ ಮನವಿ ಮಾಡಿಕೊಂಡರೂ ಯಾರ ಮಾತನ್ನು ಲೆಕ್ಕಿಸದೇ ಅಶ್ವಿನ್ಕುಮಾರ್ರನ್ನೇ ಅಭ್ಯರ್ಥಿ ಮಾಡಿದ್ದರಲ್ಲಿಯೇ ಎಷ್ಟರ ಮಟ್ಟಿಗೆ ಒಳ ಒಪ್ಪಂದವಾಗಿದೆ ಎನ್ನುವುದು ಸ್ಪಷ್ಟವಾಗುತ್ತ¤ದೆ. ತಾವೇನೂ ಅದರ ಬಗ್ಗೆ ಹೇಳಬೇಕಾಗಿಲ್ಲ ಎಂದು ಅಶ್ವಿನ್ ಕುಮಾರ್ಗೆ ಟಾಂಗ್ ನೀಡಿದರು.
ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಮಾತನಾಡಿ, ಇದೀಗ ಕ್ಷೇತ್ರಾದ್ಯಂತ ಬಿಜೆಪಿ ಅಲೆ ಹೆಚ್ಚುತ್ತಿದೆ. ಅದರಲ್ಲಿ ಒಳ ಒಪ್ಪಂದವಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತರಗೆಲೆಯಂತೆ ಕೊಚ್ಚಿ ಹೋಗುವುದು ಖಚಿತ. ಕ್ಷೇತ್ರದ ಜನರು ಯೋಚಿಸಿ, ಹಣಕಾಸಿಗೆ ಬಲಿಯಾಗದಂತೆ ಮತವನ್ನು ಚಲಾಯಿಸಿ ತಮ್ಮನ್ನು ವಿಜಯಶಾಲಿಯನ್ನಾಗಿ ಮಾಡಬೇಕೆಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ಅತೀ ಜವಾಬ್ದಾರಿಯುತ ಸಚಿವ ಸ್ಥಾನ ಲೋಕೋಪಯೋಗಿ ಇಲಾಖೆ ಮಹದೇವಪ್ಪನವರಿಗೆ ನೀಡಿದ್ದರೂ ತವರು ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಿಲ್ಲ. ಮಾಜಿ ಶಾಸಕಿ ಸುನೀತಾ ಮಹಿಳೆಯರಿಗೆ ಉದ್ಯೋಗ ಒದಗಿಸಿಕೊಡಬೇಕೆನ್ನುವ ಮಹದಾಸೆಯಲ್ಲಿ ಹೆಗ್ಗೂರಿನ ಬಳಿಯಿರುವ ಸರ್ಕಾರಿ ಭೂಮಿಯಲ್ಲಿ ಗಾರ್ಮೆಂಟ್ಸ್ ತೆರೆಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಲೇವಡಿ ಮಾಡಿದರು.
ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು, ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಮಾಕನಹಳ್ಳಿ ಬಿಜೆಪಿ ಮುಖಂಡ ಅಶೋಕ್, ಮೂಗೂರು ಸಿದ್ದರಾಜು, ಪುರಸಭಾ ಸದಸ್ಯರಾದ ರಾಜುಗೌಡ, ಸಿದ್ದೇಗೌಡ, ಶಿವನಂಜೇಗೌಡ, ಕಾಳೇಗೌಡ, ಶಂಕರಯ್ಯ, ರವಿ, ಮಹದೇವು, ಹೇಮಂತ್, ರಮೇಶ್, ನಂಜೇಗೌಡ, ಬೀಡನಹಳ್ಳಿ ವೆಂಕಟೇಗೌಡ, ಶಿವಕುಮಾರ್, ಅನಿಲ್ ಮತ್ತಿತರರಿದ್ದರು.