Advertisement

ಹೊಲಿಗೆ ಯಂತ್ರಗಳ ಪ್ರಸ್ತಾವನೆಗೆ ಸಲಹೆ

11:54 AM Jan 19, 2019 | |

ಯಾದಗಿರಿ: ಜಿಲ್ಲೆಯಲ್ಲಿ ಬರ ಇದ್ದು, ಕನಿಷ್ಟ ಅಲ್ಪಸ್ವಲ್ಪ ಓದಿದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಯಿಂದ ಅವರ ಕುಟುಂಬಕ್ಕೆ ಆಸರೆ ಆಗುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಈಗಾಗಲೇ 562 ಹೊಲಿಗೆ ಯಂತ್ರಗಳನ್ನು ಖರೀದಿಸಲು ಮುಂದಾಗಿದ್ದು, ಹೆಚ್ಚಿನ ಯಂತ್ರಗಳಿಗೆ ಪ್ರಸ್ತಾವನೆ ಸಲ್ಲಿಸಲು ಜಿಪಂ ಸದಸ್ಯ ಬಸನಗೌಡ ಯಡಿಯಾಪೂರ ಸೂಚಿಸಿದರು.

Advertisement

ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ವೃತ್ತಿಪರ ಕುಶಲ ಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆಗಳು ಕ್ಷೌರಿಕ, ಅಗಸರಿಗೆ ನೀಡಲಾಗುತ್ತಿದ್ದು, ಬಡಿಗ, ಕುಂಬಾರ ಸೇರಿದಂತೆ ಎಲ್ಲಾ ಕುಶಲ ಕರ್ಮಿಗಳಿಗೆ ಇದರ ಸೌಕರ್ಯ ದೊರೆಯುವಂತಾಗಬೇಕು ಎಂದು ಹೇಳಿದರು.

ಸುರಪುರಿನ ಮೀನುಗಾರಿಕೆ ಇಲಾಖೆ ಕಚೇರಿ ರಿಪೇರಿಗಾಗಿ ಈ ವರೆಗೆ ಎಷ್ಟು ಹಣ ಖರ್ಚಾಗಿದೆ. ಕಾಮಗಾರಿ ಯಾವ ಹಂತದಲ್ಲಿದೆ ಎಂದು ಮೀನುಗಾರಿಕೆ ಇಲಾಖೆ ಮಹೇಶ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಈವರೆಗೆ ಹಂತ ಹಂತವಾಗಿ ಕಟ್ಟಡ ರಿಪೇರಿಗಾಗಿ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗಕ್ಕೆ ಒಟ್ಟು 7.50 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಆದರೆ, ಕೆಲಸ ಮಾತ್ರ ಆಗುತ್ತಿಲ್ಲ ಎಂದು ಸಭೆ ಗಮನಕ್ಕೆ ತಂದರು.

ಈ ವೇಳೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಮಗಾರಿ ಮಾಡದಿರುವ ಕುರಿತು ಇಷ್ಟು ದಿನದಿಂದ ಏಕೆ ಕೇಳಿಲ್ಲ. ಬೋಗಸ್‌ ಬಿಲ್‌ ಸೃಷ್ಟಿಸಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಜಿಪಂ ಸಾಮಾನ್ಯ ಸಭೆಯ ಒಳಗಾಗಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಮೀನುಗಾರಿಕೆ ಇಲಾಖೆಯ ದ್ವಿಚಕ್ರ ವಾಹನ ಖರೀದಿಸಲು 10 ಸಾವಿರ ರೂಪಾಯಿ ಸಹಾಯ ಧನ ನೀಡುವ ಯೋಜನೆಯಡಿ ಯಾದಗಿರಿ ಹೊರತುಪಡಿಸಿ ವಿಜಾಪುರದ ಜಿಲ್ಲೆಯ 2 ಫಲಾನುಭವಿಗಳಿಗೆ ಹೇಗೆ ಆಯ್ಕೆ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ 2016-17ನೇ ಸಾಲಿನಲ್ಲಿ ಯಾದಗಿರಿ ಮತಕ್ಷೇತ್ರದ ಮೀನುಗಾರರಿಗೆ 110, ಗುರುಮಠಕಲ್‌ ಕ್ಷೇತ್ರಕ್ಕೆ 20 ಮನೆಗಳು ಮಂಜೂರಾಗಿದ್ದು, ಇನ್ನೂ ಫಲಾನುಭವಿಗಳಿಗೆ ಸಮರ್ಪಕ ಲಾಭ ದೊರೆತಿಲ್ಲ. ಈ ಬಗ್ಗೆ ಶೀಘ್ರವೇ ನೈಜ ಫಲಾನುಭವಿಗಳನ್ನು ಗುರುತಿಸಿ ಸೌಲಧ್ಯ ಒದಗಿಸಬೇಕು ಎಂದು ಸೂಚಿಸಿದರು.

Advertisement

ಮೀನುಗಾರಿಕೆ ಇಲಾಖೆ ಎಲ್ಲಾ ಯೋಜನೆಗಳ ಕುರಿತು ಸಮಗ್ರವಾಗಿ ಪರಿಶೀಲಿಸಲು ಅಧ್ಯಕ್ಷರು ದಿನಾಂಕ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಮೀನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆಗಳ ಕುರಿತು ಜನಪ್ರತಿನಿಧಿಗಳಿಗೆ ಸಮರ್ಪಕ ಮಾಹಿತಿ ನೀಡಿ, ಇದರಿಂದಾಗಿ ಗ್ರಾಮೀಣ ಭಾಗದ ಜನರಿಗೆ ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಲಾಭ ಪಡೆಯುವಂತಾಗುತ್ತದೆ ಎಂದು ಜಿಪಂ ಸದಸ್ಯ ಭೀಮರೆಡ್ಡಿ ಬಳಿಚಕ್ರ ಹೇಳಿದರು.

ತೋಟಗಾರಿಕೆ ಕುರಿತು ಜಿಲ್ಲೆಯ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಅಧಿಕಾರಿಗಳು ಮುಂದಾಗ ಬೇಕು. ಪಾಲಿಹೌಸ್‌ ನಿರ್ಮಾಣದ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು ತೋಟಗಾರಿ ಉಪನಿರ್ದೇಶಕ‌ರಿಗೆ ಸೂಚಿಸಲಾಯಿತು.

ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಆರ್‌. ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಶೇ. 40.63 ಬಿತ್ತನೆಯಾಗಿದ್ದು, ಶೇ. 81ರಷ್ಟು ಮಳೆ ಕೊರತೆಯಾಗಿದೆ ಎಂದು ವಿವರಿಸಿದರು. ಜಿಲ್ಲೆ ಬರಗಾಲ ಪೀಡಿತ ಎಂದು ಘೋಷಣೆಯಾಗಿದ್ದು, 99 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಕೇಂದ್ರದ ಬರ ಅಧ್ಯಯನ ತಂಡ ಪರಿಶೀಲಿಸಿದ್ದು, ರೈತರ ಖಾತೆಗೆ ನೇರವಾಗಿ ಪರಿಹಾರ ಜಮಾ ಆಗಲಿದೆ ಎಂದರು.

ಜಿಲ್ಲೆಯ ಬೆಂಡೆಬೆಂಬಳಿ, ಮುದನೂರ, ಅರಕೇರಾ (ಕೆ), ಯರಗೋಳನಲ್ಲಿ ರೈತ ಸಂಪರ್ಕ ಕೇಂದ್ರ ಆರಂಭಿಸುವ ಬೇಡಿಕೆ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. 1262 ಕೃಷಿ ಹೊಂಡ ನಿರ್ಮಾಣದ ಗುರಿಯಿದ್ದು, 615 ಪೂರ್ಣವಾಗಿದ್ದು, ಫೆಬ್ರವರಿ ವೇಳೆ ಸಂಪೂರ್ಣ ಗುರಿ ಸಾಧಿಸುವುದಾಗಿ ಸಭೆಗೆ ತಿಳಿಸಿದರು.

ಹಾವು ಕಡಿದು ಸಾವನ್ನಪ್ಪುವ ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ಆಗುತ್ತಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಸದಸ್ಯರು, ರೈತರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತೆ ತಿಳಿಸಿದರು. ಸಮಿತಿ ಅಧ್ಯಕ್ಷೆ ಸರಸ್ವತಿ ಹೊನಗೇರಾ, ಜಿಪಂ ಸದಸ್ಯೆ ಗಿರಿಜಮ್ಮ, ಅಶೋಕರೆಡ್ಡಿ ಗೋನಾಳ ಇದ್ದರು. ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next