Advertisement

ವಿಧಾನಸೌಧಕ್ಕೆ ಉತ್ಕೃಷ್ಟ ಮಟ್ಟದ ಭದ್ರತಾ ವ್ಯವಸ್ಥೆ: ಖಾದರ್‌

11:46 PM Jul 31, 2023 | Team Udayavani |

ಮಂಗಳೂರು: ವಿಧಾನಸೌಧಕ್ಕೆ ಹೆಚ್ಚಿನ ಉತ್ಕೃಷ್ಟ ಮಟ್ಟದ ಭದ್ರತಾ ವ್ಯವಸ್ಥೆ ಶೀಘ್ರ ಜಾರಿಗೊಳ್ಳಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ವಕೀಲನೊಬ್ಬ ಶಾಸಕರ ಹೆಸರು ಹೇಳಿಕೊಂಡು ಶಾಸಕರ ಸ್ಥಾನದಲ್ಲೇ ಕುಳಿತಿದ್ದಾನೆ, ಇದು ದೊಡ್ಡ ಭದ್ರತಾ ಲೋಪ ಅಷ್ಟೇ ಅಲ್ಲ, ನಮ್ಮ ಕಣ್ಣನ್ನೂ ತೆರೆಸಿದ್ದಾನೆ. ಹಾಗಾಗಿ ಭದ್ರತಾ ವ್ಯವಸ್ಥೆ ಉತ್ತಮಗೊಳಿಸಲು ನಿರ್ಧರಿಸಿದ್ದೇವೆ, ಜನರಿಗೆ ತೊಂದರೆಯಾಗದಂತೆ ಒಳಗೆ ಬರಲು ಪಾಸ್‌ ವ್ಯವಸ್ಥೆಯೊಂದಿಗೆ ನೂತನ ಕ್ರಮ ಕೆಲವು ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು.

ಆ್ಯಪ್‌ ಮೂಲಕ ಕಲಾಪ ಮಾಹಿತಿ
ವಿಧಾನಸಭೆಯ ಕಲಾಪಗಳ ವಿವರ ಗಳನ್ನು ಜನಸಾಮಾನ್ಯರಿಗೆ ಆ್ಯಪ್‌ ಮೂಲಕ ತಲಪಿಸುವ, ಆ ಮೂಲಕ ತಮ್ಮ ವ್ಯಾಪ್ತಿಯ ಶಾಸಕರು ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ಜನರಿಗೆ ಒದಗಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ವಿಧಾನಸಭೆ ಕಲಾಪ ಪೇಪರ್‌ಲೆಸ್‌ ಮಾಡಬೇಕು ಎಂಬ ಉದ್ದೇಶವಿದ್ದು, ಅದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಗಳಿಗೂ ಮಾಹಿತಿ ಕೊಡಲಾಗಿದೆ. ಎಲ್ಲ ಕಚೇರಿಗಳಲ್ಲೂ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಇದ್ದು, ಕಾಗದಪತ್ರದ ಕಡತಗಳನ್ನು ನಿರ್ವಹಣೆ ಮಾಡುವ ಬದಲು ಕಂಪ್ಯೂಟರ್‌ ಮೂಲಕವೇ ಇವುಗಳ ನಿರ್ವಹಣೆಯಾಗಬೇಕು ಎಂಬ ಉದ್ದೇಶವಿದೆ. ಮುಂದಿನ ಹಂತದಲ್ಲಿ ಜನರಿಗೆ ಕಲಾಪಗಳನ್ನು ಆ್ಯಪ್‌ ಮೂಲಕ ನೀಡುವ ಗುರಿ ಇದೆ ಎಂದು ಖಾದರ್‌ ವಿವರಿಸಿದರು.

ಸವಾಲೆದುರಿಸುವ ಜವಾಬ್ದಾರಿ
ಸೀ³ಕರ್‌ ಹುದ್ದೆ ಹೊಸ ಅನುಭವ ನೀಡಿದೆ, ಅದರಲ್ಲೂ ವಿಪಕ್ಷದ ನಾಯಕರಿಲ್ಲದಿರುವಾಗ ಕಾರ್ಯ ನಿರ್ವಹಿಸುವುದು ಸವಾಲು, ಸಚೇತಕ ರಿಂದ ನೆರವು ಸಿಗುತ್ತದೆ. ಕಲಾಪದ ವೇಳೆ ಎಂದಿಗೂ ನಾನು ಪಕ್ಷಪಾತ ಧೋರಣೆ ಅನುಸರಿಸಿಲ್ಲ ಎಂದು ಖಾದರ್‌ ಹೇಳಿದರು.

ಸೀಮಿತ ಸಮಯಾವಕಾಶದಲ್ಲಿ ಕಾಲಹರಣವಾಗದೆ, ವ್ಯರ್ಥವಾಗದೆ ಮಸೂದೆ, ನಿಯಮಗಳನ್ನು ಜಾರಿ ಮಾಡುವ ಜವಾಬ್ದಾರಿ ಶಾಸನ ಸಭೆಗೆ ಇರುತ್ತದೆ, ಹಾಗಾಗಿ ಸಂದ ರ್ಭಕ್ಕನುಗುಣವಾಗಿ ನಾನು ಕಠಿನವೆನಿಸುವ ಕ್ರಮ ತೆಗೆದುಕೊಂಡಿರ ಬಹುದು. ಆದರೆ ಎಲ್ಲ ಶಾಸಕರ ಮೇಲೆಯೂ ನನಗೆ ಸಮಾನ ಪ್ರೀತಿ ಗೌರವ ಇದ್ದೇ ಇದೆ, ಆಗಿ ಹೋದ ಅಧ್ಯಾಯಗಳ ಬಗ್ಗೆ ಮತ್ತೆ ತಿರುವಿ ಹಾಕುವ ಅಗತ್ಯವಿಲ್ಲ ಎಂದರು.

Advertisement

ಸ್ಪೀಕರ್‌ ಎಂದರೆ ವಿಪಕ್ಷದವರ ಮಿತ್ರ, ಮಾತು ಕಡಿಮೆ ಮಾಡಿ ಮಾತ ನಾಡುವವರಿಗೆ ಅವಕಾಶ ಮಾಡಿ ಕೊಡಬೇಕು. ಹಾಗಾಗಿ ಹೊಸಬರಿಗೆ ಈ ಬಾರಿ ಕಲಾಪದಲ್ಲಿ ಅವಕಾಶ ಮಾಡಿ ಕೊಟ್ಟಿದ್ದೇನೆ. ಸಭಾಧ್ಯಕ್ಷನಾದರೂ ಜನರಿಂದ ದೂರವಾಗಿಲ್ಲ, ಕ್ಷೇತ್ರದಲ್ಲೂ ಸಂಚರಿಸಿಕೊಂಡಿದ್ದೇನೆ, ಅದೇ ವೇಳೆ ಸ್ಪೀಕರ್‌ ಹುದ್ದೆಯ ಘನತೆ ಕಾಯ್ದುಕೊಂಡಿದ್ದೇನೆ.

ತುಳುವಿಗೆ ಅಧಿಕೃತ ರಾಜ್ಯ ಭಾಷೆ ಮಾನ್ಯತೆ ಕೊಡುವ ಬಗ್ಗೆ ಕಲಾಪದಲ್ಲಿ ಚರ್ಚೆ ಆಗಿದೆ, ತುಳುವಿಗೆ ಮಾನ್ಯತೆ ಸಿಗಲೇಬೇಕಾದ ವಿಚಾರ, ಅಷ್ಟು ಮಹತ್ವವಿರುವ ನಮ್ಮ ಭಾಷೆ ತುಳು. ಮಂತ್ರಿಗಳೂ ಈ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದಾರೆ, ಇದು ಶೀಘ್ರ ಆಗಬಹುದು ಎಂಬ ನಿರೀಕ್ಷೆ ನನಗೂ ಇದೆ ಎಂದು ಖಾದರ್‌ ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪ್ರಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌., ಜಗನ್ನಾಥ ಶೆಟ್ಟಿ ಬಾಳ, ಅನ್ನು ಮಂಗಳೂರು ಉಪಸ್ಥಿತರಿದ್ದರು. ಮೊಹಮ್ಮದ್‌ ಆರಿಫ್‌ ನಿರೂಪಿಸಿ, ಭಾಸ್ಕರ ರೈ ಕಟ್ಟ ವಂದಿಸಿದರು.

ಗೂಡಂಗಡಿಯಲ್ಲಿ ಚಹಾ ಕುಡಿಯಲಾಗುತ್ತಿಲ್ಲ !
ಹಿಂದೆ ಶಾಸಕನಾಗಿದ್ದಾಗ ಹೆಚ್ಚಿನ ಕಟ್ಟುಪಾಡು ಇರಲಿಲ್ಲ, ಗೂಡಂಗಡಿಯಲ್ಲೂ ಚಹಾ ಕುಡಿಯುತ್ತಿದ್ದೆ, ಈಗ ಹಾಗೆ ಮಾಡಲು ಹೋದರೆ ಬೇರೆಯವರಿಗೆ ಕಿರಿಕಿರಿಯಾಗುತ್ತದೆ. ನಿನ್ನೆ ಬಿ.ಸಿ.ರೋಡಿನಲ್ಲಿ ಸ್ನೇಹಿತರ ಅಂಗಡಿಗೆ ಚಹಾಕ್ಕೆ ಬರುವುದಾಗಿ ಹೇಳಿದ್ದೆ, ಅಲ್ಲಿ ನನ್ನ ಹುದ್ದೆಯ ಕಾರಣಕ್ಕೆ ಭದ್ರತೆಗೆ ಪೊಲೀಸರು ಹೋಗಿದ್ದರಿಂದ ಬೇರೆ ಯಾವುದೇ ಗ್ರಾಹಕರು ಬರದಂತೆ ಆಯಿತು, ಹಾಗಾಗಿ ಶಿಷ್ಟಾಚಾರದ ಕಾರಣಕ್ಕೆ ಸಮಸ್ಯೆಯಾಗುತ್ತದೆ ಎಂದು ಖಾದರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next