Advertisement

ಕೋಟದಲ್ಲಿ ಲಾರಿ- ಬೈಕ್‌ ಢಿಕ್ಕಿ: ಮದುಮಗ ಸಾವು 

10:05 AM Dec 23, 2018 | |

ಕೋಟ: ಕೋಟದಲ್ಲಿ ಶನಿವಾರ ಸಂಭವಿಸಿದ ರಸ್ತೆ ಅವಘಡದಲ್ಲಿ ಭಾವೀ ಮದುಮಗ, ಕೋಟೇಶ್ವರ ಪೇಟೆಮನೆಯ ನಿವಾಸಿ ಪ್ರಸ್ತುತ ತೆಕ್ಕಟ್ಟೆಯಲ್ಲಿ ವಾಸವಾಗಿರುವ ಕೆ.ಜಿ. ರಾಜು ಅವರ  ಪುತ್ರ ವರುಣ್‌ (33)ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿದು ಹತ್ತಿರದ ಸಂಬಂಧಿ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದರು.

Advertisement

ತೆಕ್ಕಟ್ಟೆಯಿಂದ ಸಾಲಿಗ್ರಾಮ ದೇವಸ್ಥಾನಕ್ಕೆ ಬೈಕಿನಲ್ಲಿ ಹೊರಟಿದ್ದ ವರುಣ್‌ ಕೋಟ ಬೆಲ್ಲದ ಗಣಪತಿ ದೇವಸ್ಥಾನದ ಸಮೀಪ ಹೆದ್ದಾರಿಯಲ್ಲಿ ಲಾರಿಯಡಿ ಸಿಲುಕಿ ಸಾವನ್ನಪ್ಪಿದರು.  ಕೋಟದ ಬೆಲ್ಲದ ಗಣಪತಿ ದೇವಸ್ಥಾನದ ಎದುರು ರೋಡ್‌ ರೋಲರ್‌ ಸಾಗುತ್ತಿತ್ತು. ಇದನ್ನು ಹಿಂದಿಕ್ಕಿ ಮುಂದೆ ಸಾಗುವಾಗ ರೋಡ್‌ ರೋಲರ್‌ ಬೈಕಿಗೆ ತಾಗಿತು. ವರುಣ್‌ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಾಗ 12 ಚಕ್ರಗಳ ಬೃಹತ್‌ ಲಾರಿ ಇವರ  ಮೇಲೆಯೇ ಚಲಿಸಿ  ಸ್ಥಳದಲ್ಲೇ  ಮೃತಪಟ್ಟರು. 

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ಡಿ.26ಕ್ಕೆ ಊರಿಗೆ ಬರುವವರಿದ್ದರು. ಆದರೆ ಸ್ವಲ್ಪ ಬೇಗ ರಜೆ ಮಂಜೂರಾಗಿದ್ದ ಕಾರಣ ಊರಿಗೆ ಬಂದಿದ್ದರು.

ಡಿ. 30ರಂದು ಮದುವೆ ನಿಗದಿಯಾಗಿತ್ತು 
ಡಿ. 30ರಂದು ಇವರ ಮದುವೆ ನಡೆಯಲಿತ್ತು. ಮದುವೆ ಸಂಬಂಧಿ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ಅವರು ಓಡಾಡಲು ಗೆಳೆಯನಿಂದ ಬೈಕ್‌ ಪಡೆದು ದೇವಸ್ಥಾನಕ್ಕೆ ಹೊರಟಿದ್ದರು. ಮೃತರು ತಂದೆ, ತಾಯಿ ಹಾಗೂ ಸೋದರಿಯನ್ನು ಅಗಲಿದ್ದಾರೆ.

ಆಘಾತದಿಂದ ಸಂಬಂಧಿ ಮಹಿಳೆ ಸಾವು
ಘಟನೆಯ ವಿಷಯ ತಿಳಿಯುತ್ತಿದ್ದಂತೆ  ಅವರ ಸಮೀಪದ ಸಂಬಂಧಿ, ಕೋಟೇಶ್ವರ ದೊಡ್ಡೋಣಿಯ ನಿವಾಸಿ ಗಿರಿಜಾ (68) ಹೃದಯಾಘಾತದಿಂದ ಸಾವನ್ನಪ್ಪಿದರು. ಗಿರಿಜಾ ಅವರು ವರುಣ್‌ ಹಾಗೂ ತಂದೆ ತಾಯಿ ಜತೆ ಹಿಂದೆ ದಾಂಡೇಲಿಯಲ್ಲಿ ವಾಸವಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next