Advertisement

Sirsi: ಶಂಕರ ಪರಂಪರೆಯ ಸ್ವರ್ಣವಲ್ಲೀ‌ ಮಠದಲ್ಲಿ ನಾಳೆ ಸನ್ಯಾ‌ಸ ಸ್ವೀಕಾರ

04:34 PM Feb 21, 2024 | Team Udayavani |

ಶಿರಸಿ: ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾ‌ಸ್ವಾಮೀಜಿಗಳ  ಉತ್ತರಾಧಿಕಾರಿ ಹಾಗೂ ಶಿಷ್ಯ ಸ್ವೀಕಾರ ಫೆ.22ರಂದು‌ ನಡೆಯಲಿದೆ. ಈ ಕ್ಷಣಕ್ಕೋಸ್ಕರ ಮಠದ ಶಿಷ್ಯ ಭಕ್ತರು‌ ಕಾತರದಿಂದ ಕಾಯುತ್ತಿದ್ದಾರೆ.

Advertisement

ಫೆ.18ರಿಂದ ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳ‌‌ ಮೂಲಕ ನಡೆಯುತ್ತಿದ್ದು, ಗುರುವಾರ ಯಲ್ಲಾಪುರದ ಗಂಗೆ ಮನೆಯ ಬ್ರಹ್ಮಚಾರಿ ಶ್ರೀನಾಗರಾಜ ಭಟ್ಟರು ಸಂಸ್ಥಾನದ 55ನೇ ಯತಿಗಳಾಗಿ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕರಿಸಲಿದ್ದಾರೆ.

ಬೆಳಿಗ್ಗೆ ಶಾಲ್ಮಲಾ‌ ನದಿಯಲ್ಲಿ ಜಲಾಶಯಗಮನ, ಸಾವಿತ್ರೀ ಪ್ರವೇಶ, ಪ್ರೇಷೋಚ್ಛಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ‌ಮಹಾ ವಾಕ್ಯೋಪದೇಶ, ನಾಮಕರಣ, ಪರ್ಯಂಕಶೌಚ, ಶ್ರೀ ಮಠದಲ್ಲಿ ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀನೃಸಿಂಹ ಮಂತ್ರ ಹವನ ಪೂರ್ಣಾಹುತಿ, ತೀರ್ಥ ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಲಿದೆ.

ವಿವಿಧ ಯತಿಗಳು ಸಾನ್ನಿಧ್ಯ‌ ನೀಡಲಿದ್ದಾರೆ.  ನೂತನ ಯತಿಗಳ‌ ನಾಮಧೇಯ‌ ಕೂಡ ಘೋಷಣೆ ಆಗಲಿದೆ.

Advertisement

ಮಧ್ಯಾಹ್ನ 3.30ಕ್ಕೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಧರ್ಮ ಸಭೆ  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ‌ ಸಾನ್ನಿಧ್ಯದಲ್ಲಿ ನಡೆಯಲಿದೆ.

ಹರಿಹರಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾ‌ನಂದ‌ ಮಹಾ ಸ್ವಾಮೀಜಿ, ಕೂಡಲಿ ಶೃಂಗೇರಿ‌ ಮಠದ ಶ್ರೀವಿದ್ಯಾ ವಿಶ್ವೇಶ್ವರ ಭಾರತೀ‌ ಮಹಾ ಸ್ವಾಮೀಜಿ, ಹೊಳೆನರಸಿಪುರದ ಪ್ರಕಾಶಾನಂದೇಂದ್ರ ಸರಸ್ವತೀ‌ ಮಹಾಸ್ವಾಮೀಜಿ, ಕಾಸರಗೋಡು ಎಡನೀರುಮಠದ ಶ್ರೀ ಸಚ್ಚಿದಾನಂದ ಭಾರತೀ‌ ಮಹಾ ಸ್ವಾಮೀಜಿಗಳು, ಶ್ರೀಮನ್ನೆಲಮಾವುಮಠದ ಶ್ರೀಮಾಧವಾನಂದ ಭಾರತೀಯ ಮಹಾ ಸ್ವಾಮೀಜಿ, ತುರುವೇಕೆರೆಯ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿಗಳು, ಕಾಂಚಿಂಪುರಂದ ಶ್ರೀಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀಸಹಜಾನಂದ ತೀರ್ಥ ಸ್ವಾಮೀಜಿ, ಶ್ರೀಅಂಜನಾನಂದ ತೀರ್ಥ ಸ್ವಾಮೀಜಿ ಹಾಗೂ ನೂತನ ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ.  ಕೇಂದ್ರ ಸಚಿವ ಪ್ರಹ್ಕಾಯ ಜೋಶಿ ಪಾಲ್ಗೊಳ್ಳುವರು.  ಇದೇ ವೇಳೆ  ಶ್ರೀಗಳಿಂದ ವಿರಚಿತ ಯೋಗ ವಾಸಿಷ್ಠ ಪ್ರಥಮ ಸಂಪುಟ ಬಿಡುಗಡೆ ಆಗಲಿದೆ. ಗುರುವಾರ ಶ್ರೀಮಠಕ್ಕೆ ೨೦ ಸಹಸ್ರಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ ಇದೆ.

ವಿವಿಧ ಧಾರ್ಮಿಕ ಕಾರ್ಯಕ್ರಮ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಕಂಚಿಪುರದ ಶ್ರೀಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀಸಹಜಾನಂದ ತೀರ್ಥ ಸ್ವಾಮೀಜಿಯವರ  ಸಾನ್ನಿಧ್ಯದಲ್ಲಿ ಶತಚಂಡಿ ಹವನದ ಪೂರ್ಣಾಹುತಿ ಬುಧವಾರ ನಡೆಯಿತು. ಬ್ರಹ್ಮ ಚಾರಿ ನಾಗರಾಜ ಭಟ್ಟರ ಸಂನ್ಯಾಸ ಗ್ರಹಣ ಸಂಕಲ್ಪ, ಪುಣ್ಯಾಹ, ನಾಂದಿಶ್ರಾದ್ಧ, ಮಾತೃಕಾ ಪೂಜಾದಿ ಕರ್ಮಗಳು ಅಗ್ನಿಹೋತ್ರಿ ಭಾಲಚಂದ್ರ ಉಪಾಧ್ಯಾಯರು ಗೋಕರ್ಣ ಹಾಗೂ ಶ್ರೀಮಠದ ವೈದಿಕರು, ಅನೇಕ ವಿದ್ವಾಂಸರಿಂದ ನಡೆದವು.

8  ಸಹಸ್ರಕ್ಕೂ ಅಧಿಕ ಭಕ್ತರಿಗೆ ಅನ್ನ‌ ಪ್ರಸಾದ ವಿತರಣೆ

ಸ್ವರ್ಣವಲ್ಲೀ ‌ಮಠದಲ್ಲಿ ನಡೆಯುತ್ತಿರುವ ನಾಲ್ಕನೇ‌ ದಿನದ ಅನ್ನ ಪ್ರಸಾದ ವಿತರಣೆಯೂ 8 ಸಾವಿರಕ್ಕೂ ಅಧಿಕ ಶಿಷ್ಯ ಭಕ್ತರಿಗೆ ಶ್ರದ್ಧೆಯಿಂದ ವಿತರಿಸಲಾಯಿತು. ಕೇವಲ ಒಂದುವರೆ ತಾಸಿನಲ್ಲಿ ಪ್ರಸಾದ ವಿತರಣೆ‌ ನಡೆಯಿತು.

ಅನ್ನ‌ ಪ್ರಸಾದದಲ್ಲಿ ಸಂಬಾರ, ಸಾಸಿವೆ, ಪಲ್ಯ, ಪಾಯಸ, ಬುಂದಿಲಾಡುಗಳನ್ನು 15 ಕೌಂಟರ್ ಮೂಲಕ ವಿತರಿಸಲಾಯಿತು.

ಎರಡು ಕೌಂಟರ ಮೂಲಕ ಚಹಾ, ಕಷಾಯ, ಅವಲಕ್ಕಿ, ಮೊಸರು ನೀಡಿ ಆಗಮಿಸಿದ ಶಿಷ್ಯ ಭಕ್ತರಿಗೆ ಬೆಳಗಿನಿಂದ‌ ಸಂಜೆ ತನಕ ವಿತರಿಸಲಾಯಿತು. ಭಕ್ತರು ತಮ್ಮ ಶಕ್ತ್ಯಾನುಸಾರ ಹಾಲು, ಮೊಸರು, ಅಡಿಕೆ ಹಾಳೆ, ಬೆಲ್ಲ, ಕಿರಾಣಿ, ತುಪ್ಪ, ತರಕಾರಿ, ಅಕ್ಕಿ, ಕಾಯಿಗಳೂ ಸೇವೆಯಾಗಿ ಸಮರ್ಪಿಸಿದರು.

ಆಹಾ ಚೆಲುವಾಯಿತು‌ ಮಠ

ಸ್ವರ್ಣವಲ್ಲೀ‌ ಮಠದಲ್ಲಿ ರಾತ್ರಿ ಬೆಳಗಾಗುವದರೊಳಗೆ ಹೂವಿನ‌ ಅಲಂಕಾರದ ಮೂಲಕ ಸುಂದರವಾಗಿ ಅಲಂಕರಿಸಲಾಗಿತ್ತು. ಬೆಂಗಳೂರಿನಲ್ಲಿ ವೈದಿಕರಾಗಿರುವ ಮೂಲತಃ ಯಲ್ಲಾಪುರ ಮೊಳೆಮನೆಯ ಪ್ರಸನ್ನ ಭಟ್ಟ, ರಾಮಚಂದ್ರ ಭಟ್ಟ ಸಹೋದರರು ಬೆಂಗಳೂರಿನಿಂದ ಐದು‌ ಲಕ್ಷ ರೂಪಾಯಿಗೂ ಅಧಿಕ ಪುಷ್ಪಗಳನ್ನು ತರಿಸಿ ಸೇವಾ ಅಲಂಕರಿಸಲಾಗಿತ್ತು. ಇದು ಎಲ್ಲರ‌ ಗಮನ ಸೆಳೆಯಿತು.

ಸಾಂಪ್ರದಾಯಿಕ‌ ಉಡುಪೇ‌ ಎಲ್ಲ!

ಶ್ರೀ ಮಠದಲ್ಲಿ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವದ ಲೈವ್ ಹಾಗೂ ಮಠದ ಐದಾರು ಕಡೆ ಸ್ಕ್ರೀನ್, ಟಿವಿ ವ್ಯವಸ್ಥೆ ಮಾಡಲಾಗಿತ್ತು. ಖುಷಿಯಿಂದ ಖುರ್ಚಿಯ ಮೇಲೆ‌ ಕುಳಿತು ವೀಕ್ಷಿಸಿದರು. ಕಾಲು ತೊಳೆದೂ ಮಠದ ಆವರಣಕ್ಕೆ ಬರುವ ಬಹುತೇಕ‌ ಶಿಷ್ಯರು ಲುಂಗಿ, ಶಾಲು ಧರಿಸಿ ಸಾಂಪ್ರದಾಯಿಕ‌ ಉಡುಪಿನಲ್ಲಿ ಗಮನ ಸೆಳೆದರು. ಸ್ವರ್ಣವಲ್ಲೀ ಭಗವತ್ಪಾದ ಪ್ರಕಾಶನದ ಪುಸ್ತಕಗಳ‌ ಮಾರಾಟ ಪ್ರದರ್ಶನ, ಕುಠೀರ ವೇದಿಕೆ ಕೂಡ ಗಮನ ಸೆಳೆಯಿತು.

ಆರಾಮ, ಬನ್ನಿ….

ರಾಷ್ಟ್ರ‌ಧರ್ಮ, ಸಂಸ್ಕೃತಿ, ಸನಾತನ‌, ಜಾಗೃತಿಯ‌ ಫಲಕಗಳು, ಮಾರ್ಗಸೂಚಿಗಳು, ಮಾಹಿತಿ ನೀಡುವ ಕಾರ್ಯಕರ್ತರು ಹೀಗೆ ಗಮನ ಸೆಳೆದವು.

ಪ್ರವೇಶ ದ್ವಾರದಲ್ಲೇ ಭೈರುಂಬೆಯ‌ ಪ್ರೌಢ ಶಾಲೆಯ  ಮಕ್ಕಳು ತಿಲಕ ಇಟ್ಟು, ‘ಆರಾಮ‌, ಬನ್ನಿ‌’ ಎಂದು ಮಾತನಾಡಿಸಿ ಗಮನ‌ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next