Advertisement

ಒಪ್ಕೋಬೇಕಾಗಿರೋದು ಪ್ರೇಕ್ಷಕ!

03:26 PM Sep 22, 2017 | |

ಮೊದಲನೇ ಮಗನಾಗಿ ಹುಟ್ಟಬಾರದು, ಕೊನೆಯ ಭಾಷಣಕಾರನಾಗಿ  ಮಾತನಾಡಬಾರದು ಎಂಬ ವಿಷಯ ಅಷ್ಟರಲ್ಲಾಗಲೇ ಬಿ.ಸಿ.ಪಾಟೀಲ್‌ ಅವರಿಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಏಕೆಂದರೆ, ಅವರಿಗೆ ಮಾತಾಡುವುದಕ್ಕೇನೂ ಇರಲಿಲ್ಲ. ಅದಕ್ಕೂ ಮುನ್ನ ವೇದಿಕೆಯ ಮೇಲಿದ್ದ 15 ಮಂದಿ ಚಿತ್ರದ ಬಗ್ಗೆ ಮಾತನಾಡಿದ್ದರು. 

Advertisement

ನಿರ್ಮಾಪಕರ ಔದಾರ್ಯತೆ, ನಿರ್ದೇಶಕರ ಸೃಜನಶೀಲತೆ, ಸಹಕಲಾವಿದರು ಮತ್ತು ತಂತ್ರಜ್ಞರ ಸೌಹಾರ್ದತೆ, ಪ್ರಚಾರ ಕೊಟ್ಟ ಮಾಧ್ಯಮದವರಿಗೆ ಕೃತಜ್ಞತೆ … ಎಲ್ಲದರ ಬಗ್ಗೆಯೂ, ಎಲ್ಲರೂ ಮಾತನಾಡಿದ್ದರು. ಕೊನೆಗೆ ಮೈಕು ಪಾಟೀಲರ ಕೈಲಿಟ್ಟಾಗ ಅವರಿಗೆ ಮಾತಾಡುವದಕ್ಕೇನೂ ಇರಲಿಲ್ಲ. ಅವರ ಮಾತು ಕೇಳುವ ಸಂಯಮ ಪ್ರೇಕ್ಷಕರಲ್ಲೂ ಇರಲಿಲ್ಲ. ಏಕೆಂದರೆ, ಅಷ್ಟರಲ್ಲಾಗಲೇ ಗಂಟೆ ಒಂಬತ್ತಾಗಿತ್ತು.

ಇಂಥದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಟೀಲರು ಮಾತು ಶುರುವಾಯಿತು. “ಎಲ್ಲರೂ ಒಳ್ಳೆಯ ಸಿನಿಮಾ ಅಂತಲೇ ಸಿನಿಮಾ ಶುರು ಮಾಡುತ್ತಾರೆ. ಯಾರಿಗೂ ಕೆಟ್ಟ ಸಿನಿಮಾ ಮಾಡಬೇಕು ಅಂತ ಆಸೆ ಇರುವುದಿಲ್ಲ. ಆದರೆ, ಸಿನಿಮಾ ಮಾಡುವುದಷ್ಟೇ ಅಲ್ಲ, ಜನರನ್ನು ಚಿತ್ರಮಂದಿರಕ್ಕೆ ಕರೆತರಬೇಕು ಎಂದರೆ ಚಿತ್ರದಲ್ಲಿ ಏನಾದರೂ ಇರಬೇಕು. ನೀವು ಚಿತ್ರ ಮಾಡಬಹುದು. ಮಾಧ್ಯಮದವರು ಚೆನ್ನಾಗಿ
ಪ್ರಚಾರ ಕೊಡಬಹುದು. ಆದರೆ, ಪ್ರೇಕ್ಷಕರು ಒಪ್ಪಿಕೊಂಡರೆ ಮಾತ್ರ ಚಿತ್ರ ಗೆಲ್ಲುವುದಕ್ಕೆ ಸಾಧ್ಯವಿಲ್ಲ. “ನನ್‌ ಮಗಳೇ ಹೀರೋಯಿನ್‌’ ಎಂಬ ಹೆಸರು ಕೆಳಗೆ “ಹೀರೋ ಒಪ್ಕೊಂಡ್ರೇ’ ಅಂತ ಇದೆಯಲ್ಲಾ … ಹೀರೋ ಒಪ್ಪಿಬಿಟ್ಟರೆ ಚಿತ್ರ ಓಡಲ್ಲ, ಪ್ರೇಕ್ಷಕರು ಒಪ್ಪಿದರೆ ಮಾತ್ರ ಓಡೋದು’ ಎಂದು ಹೇಳಿ, ಚಪ್ಪಾಳೆ ಗಿಟ್ಟಿಸಿದರು. ಆ ಮೂಲಕ ಕೊನೆಗೆ ಮಾತಾಡಿದರೂ, ಏನು ಮಾತನಾಡಬೇಕು ಎಂದು ವೇದಿಕೆಯಲ್ಲಿದ್ದವರಿಗೆ ತೋರಿಸಿಕೊಟ್ಟರು. 

“ನನ್‌ ಮಗಳೇ ಹೀರೋಯಿನ್‌’ ಚಿತ್ರದ ಆಡಿಯೋ ಬಿಡುಗಡೆಗೆ ಪಾಟೀಲರ ಜೊತೆಗೆ ಹಿರಿಯ ವಕೀಲರಾದ ದಿವಾಕರ್‌ ಸಹ ಇದ್ದರು. ಇನ್ನು ಚಿತ್ರದ ನಾಯಕ ಸಂಚಾರಿ ವಿಜಯ್‌, ನಾಯಕಿಯರಾದ ದೀಪಿಕಾ ಮತ್ತು ಅಮೃತ ರಾವ್‌, ನಿರ್ದೇಶಕ ಬಾಹುಬಲಿ, ನಿರ್ಮಾಪಕರಾದ ಪಟೇಲ್‌ ಅನ್ನದಾನಪ್ಪ ಮತ್ತು ಮೋಹನ್‌, ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್‌, ಸಂಗೀತ ನಿರ್ದೇಶಕ ಅಶ್ವಮಿತ್ರ, ಕಲಾವಿದರಾದ ವಿಜಯ್‌ ಚೆಂಡೂರ್‌, ಪವನ್‌, ಮಿಮಿಕ್ರಿ ಗೋಪಿ, ಹಾಡುಗಳನ್ನು ಬಿಡುಗಡೆ  ಮಾಡುತ್ತಿರುವ ಆನಂದ್‌ ಆಡಿಯೋದ ಆನಂದ್‌ ಸೇರಿದಂತೆ 15 ಜನ ಇದ್ದರು. ಎಲ್ಲರೂ ಹೆಚ್ಚಾ ಕಡಿಮೆ ಒಂದೇ ತರಹದ ಮಾತುಗಳನ್ನಾಡಿದರು. ಅವರೆಲ್ಲರ ಸಮ್ಮುಖದಲ್ಲಿ “ನನ್‌ ಮಗಳೇ ಹೀರೋಯಿನ್‌’ ಚಿತ್ರದ ಹಾಡುಗಳು ಬಿಡುಗಡೆಯಾದವು.

Advertisement

Udayavani is now on Telegram. Click here to join our channel and stay updated with the latest news.

Next