Advertisement

ಹೃದಯ ಶಿಕಾರಿ ಮಾಡುವ ಒಂದು ಕಥೆ

11:08 AM Mar 08, 2020 | Lakshmi GovindaRaj |

ಕೆಲವು ಸಿನಿಮಾಗಳೇ ಹಾಗೆ ತನ್ನೊಳಗೆ ಅದ್ಭುತವಾದ ಕಥಾವಸ್ತುವನ್ನು ಹೊಂದಿರುತ್ತವೆ. ಆದರೆ, ಪ್ರಚಾರದ ಕೊರತೆಯಿಂದಲೋ ಅಥವಾ ಹೊಸಬರೆಂಬ ಕಾರಣಕ್ಕೋ ಅದು ಜನರಿಗೆ ತಲುಪುದಿಲ್ಲ. ಈ ವಾರ ತೆರೆಕಂಡಿರುವ “ಒಂದು ಶಿಕಾರಿಯ ಕಥೆ’ ಕೂಡಾ ಇದೇ ಸಾಲಿಗೆ ಸೇರುವ ಸಿನಿಮಾ ಎಂದರೆ ತಪ್ಪಲ್ಲ. ಯಾವುದೇ ಅಬ್ಬರವಿಲ್ಲದೇ ಬಿಡುಗಡೆಯಾಗಿರುವ ಈ ಚಿತ್ರದೊಳಗೊಂದು ಅದ್ಭುತವಾದ ಕಥಾವಸ್ತುವಿದೆ.

Advertisement

ಮನುಷ್ಯ ಹೀಗೂ ಯೋಚಿಸಬಹುದಾ ಎಂದು ಚಿಂತಿಸುವ ಅಂಶಗಳಿವೆ, ಸಿನಿಮಾ ಮುಗಿದು ಹೊರಗೆ ಬಂದರೂ ನಿಮ್ಮನ್ನು ಕಾಡುವ ಶಕ್ತಿಯೂ ಈ ಸಿನಿಮಾಕ್ಕಿದೆ. ಮನಸ್ಸಿನೊಳಗೆ ನಡೆಯುವ ಶಿಕಾರಿಯ “ದೃಶ್ಯರೂಪ’ವಾಗಿ ಈ ಚಿತ್ರ ಮೂಡಿಬಂದಿದೆ. ಇಲ್ಲಿ ಪರಿಚಿತ ಮುಖ ಎಂದಿರೋದು ಪ್ರಮೋದ್‌ ಶೆಟ್ಟಿ ಹಾಗೂ ಎಂ.ಕೆ.ಮಠ ಇಬ್ಬರೇ. ಉಳಿದಂತೆ ಇದು ಸಂಪೂರ್ಣ ಹೊಸಬರ ಸಿನಿಮಾ. ಆದರೆ, ಸಿನಿಮಾ ಸಾಗುತ್ತಾ ಇದು ಹೊಸಬರ ಸಿನಿಮಾ ಎಂಬ ಭಾವವನ್ನು ಅಳಿಸಿ ಹಾಕಿ, ಒಂದು ಸುಂದರ ಕಥಾನಕವಾಗಿ ರಂಜಿಸುತ್ತಾ ಹೋಗುತ್ತದೆ.

ಅದು ಈ ಸಿನಿಮಾದ ಪ್ಲಸ್‌ ಪಾಯಿಂಟ್‌ ಕೂಡಾ. ಒಂದು ಸುಂದರ ಕಾದಂಬರಿಯನ್ನು ಪ್ರಶಾಂತವಾಗಿ ಓದಿದ ಅನುಭವ ನಿಮಗೆ ಸಿಕ್ಕರೆ ಅದು ಈ ಸಿನಿಮಾದ ನಿರ್ದೇಶಕರ ಶ್ರಮಕೆ ಸಿಕ್ಕ ಫ‌ಲ ಎನ್ನಬಹುದು. ಒಬ್ಬ ವಿರಕ್ತ ಸಾಹಿತಿ ಈ ಸಿನಿಮಾದ ಕಥಾ ನಾಯಕ. ಖ್ಯಾತ ಸಾಹಿತಿಯಾಗಿ ಹೆಸರು, ಅಭಿಮಾನಿ ವರ್ಗವನ್ನು ಹೊಂದಿದ ಶಂಭು ಶೆಟ್ರಿಗೆ ಒಂದು ಹಂತದಲ್ಲಿ ವೈರಾಗ್ಯ ಬಂದು ಆಧ್ಯಾತ್ಮದ ಕಡೆಗೆ ಹೋಗಬೇಕೆಂಬ ಮನಸ್ಸಾಗುತ್ತದೆ. ಆದರೆ, ಎಲ್ಲವನ್ನು ಬಿಟ್ಟು ಹೊಸ ಬದುಕಿಗೆ ಹೋಗುವ ಮುನ್ನ ಶಿಕಾರಿ ಮಾಡಿಯೇ ಹೋಗಬೇಕೆಂಬ ಹಠ.

ಅದಕ್ಕೆ ಕಾರಣ ಅವರ ತಂದೆಯ ಆಸೆ. ಮಗನಲ್ಲಿ ಶಿಕಾರಿ ನೋಡುವ ಆಸೆಯನ್ನಿಟ್ಟುಕೊಂಡೇ ಕೊನೆಯುಸಿರೆಳೆದ ತಂದೆಯ ಆಸೆಯನ್ನು ಈಡೇರಿಸಲು ಮುಂದಾಗುತ್ತಾರೆ. ಇಂತ ವಿರಕ್ತ ಸಾಹಿತಿ ಶಿಕಾರಿಗೆ ಹೊರಡುವ ಕಥಾ ಹಂದರದೊಂದಿಗೆ ಹಲವು ಪಾತ್ರಗಳು ತೆರೆದುಕೊಳ್ಳುತ್ತವೆ. ಇಲ್ಲಿ ಶಿಕಾರಿ ಒಂದು ನೇಪವಷ್ಟೇ. ಇದನ್ನು ಭಿನ್ನ ಮನಸ್ಥಿತಿಗಳ ಅನಾವರಣ ಎನ್ನಬಹುದು. ಇಲ್ಲಿ ಹಲವು ಪಾತ್ರಗಳು ಬರುತ್ತವೆ. ಎಲ್ಲವೂ ಒಂದಕ್ಕೊಂದು ಸಂಧಿಸಿಯೇ ಮುಂದೆ ಸಾಗುತ್ತವೆ. ಕರುಣೆ, ಪ್ರೀತಿ, ಸ್ನೇಹ, ದುರಾಸೆ, ಅನುಮಾನ, ಆತಂಕ, ಭಯ, ಶೂನ್ಯ …

ಹೀಗೆ ಹಲವು ಅಂಶಗಳನ್ನು ಪ್ರತಿಯೊಂದು ಪಾತ್ರಗಳು ಪ್ರತಿನಿಧಿಸಿವೆ. ಆದರೆ, ನಿರ್ದೇಶಕರು ಯಾವುದೇ ಗೊಂದಲವಿಲ್ಲದೇ ಎಲ್ಲವನ್ನು ನಿಭಾಹಿಸಿದ್ದಾರೆ. “ಕೋವಿ ಈಡಿನಿಂದ ತಪ್ಪಿಸಿಕೊಳ್ಳೋಕೆ ಓಡೋ ಪ್ರಾಣಿ, ದುಡ್ಡಿನ ಹಿಂದೆ ಓಡೋ ಮನುಷ್ಯ, ನನ್ನ ಪ್ರಕಾರ ಇವೆರಡರದ್ದು ಒಂದೇ ವೇಗ’ ಈ ತರಹದ ಒಂದಷ್ಟು ಅರ್ಥಪೂರ್ಣ ಸಂಭಾಷಣೆಗಳು ಸಿನಿಮಾದುದ್ದಕ್ಕೂ ಸಿಗುತ್ತವೆ. ಹಾಗಂತ ಇಲ್ಲಿ ಅತಿಯಾದ ಮಾತಾಗಲೀ, ಬೇಡದ ದೃಶ್ಯಗಳಾಗಲೀ ಇಲ್ಲ. ಇಲ್ಲಿ ನಿಮಗೆ ಈ ದೃಶ್ಯ ಯಾಕೆ ಬೇಕಿತ್ತು ಎಂಬ ಪ್ರಶ್ನೆ ಮೂಡದಂತೆ ಸಿನಿಮಾ ಕಟ್ಟಿಕೊಡಲಾಗಿದೆ.

Advertisement

ಚಿತ್ರದ ತುಂಬಾ ಸಹಜತೆ ತುಂಬಿಕೊಂಡಿರೋದು ಕೂಡಾ ಸಿನಿಮಾದ ಗಾಂಭೀರ್ಯತೆಯನ್ನು ಹೆಚ್ಚಿಸಿದೆ. ಇಡೀ ಸಿನಿಮಾ ಕರಾವಳಿ ಹಿನ್ನೆಲೆಯಲ್ಲಿ ಸಾಗುತ್ತದೆ. ಯಕ್ಷಗಾನದ ಹಿನ್ನೆಲೆಯೂ ಈ ಚಿತ್ರಕ್ಕಿದೆ. ಕೆಲವು ಸಿನಿಮಾಗಳು ಯಕ್ಷಗಾನ ಪಾತ್ರಗಳನ್ನು ಬಳಸಿ ಅಪಹಾಸ್ಯ ಮಾಡಿದಂತೆ ಇಲ್ಲಿ ಮಾಡಿಲ್ಲ. ತುಂಬಾ ಅಚ್ಚುಕಟ್ಟಾಗಿ ಬಳಸಲಾಗಿದೆ. ಜೊತೆಗೆ ಈ ಚಿತ್ರದಲ್ಲಿ ಸುಂದರ ಪರಿಸರವೂ ಇದೆ. ಅದು ಸಿನಿಮಾದಿಂದ ಹೊರತಾಗಿ, ಸಿನಿಮೇಟಿಕ್‌ ಬ್ಯೂಟಿಗಾಗಿ ಸೆರೆಹಿಡಿದಂತೆ ಭಾಸವಾಗದೇ, ಕಥೆಯ ಒಂದು ಭಾಗವಾಗಿದೆ.

ನಿರ್ದೇಶಕರು ತುಂಬಾ ತಾಳ್ಮೆಯಿಂದ ಕಥೆ ಹೇಳಿದ್ದಾರೆ. ಹಾಗಾಗಿ, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಪ್ರಿಯರಿಗೆ ಇದು ನಿಧಾನ ಎನಿಸಬಹುದು. ಫೈಟ್‌, ಕಾಮಿಡಿ, ಹಾಡಿಗಾಗಿ ಇಲ್ಲಿ ಯಾವುದೇ ಟ್ರ್ಯಾಕ್‌ ಇಲ್ಲ. ಹೊಸ ಬಗೆಯ ನಿರೂಪಣೆಯೊಂದಿಗೆ “ಒಂದು ಶಿಕಾರಿಯ ಕಥೆ’ಯನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಪಾತ್ರಧಾರಿಗಳು ಅಕ್ಷರಶಃ ಪಾತ್ರವನ್ನು ಜೀವಿಸಿದ್ದಾರೆ. ವಿರಕ್ತ ಸಾಹಿತಿ ಶಂಭು ಶೆಟ್ಟಿಯಾಗಿ ಪ್ರಮೋದ್‌ ಶೆಟ್ಟಿಯವರದ್ದು ಮಾಗಿದ ಅಭಿನಯ.

ಪಾತ್ರಕ್ಕಿರಬೇಕಾದ ಗಾಂಭೀರ್ಯ, ಮಾಡದ ತಪ್ಪಿನ ಕೊರಗು, ತಂದೆಯ ಆಸೆಯ ಮೆಲುಕು .. ಹೀಗೆ ಪ್ರತಿ ದೃಶ್ಯಗಳಲ್ಲೂ ಪ್ರಮೋದ್‌ ಶೆಟ್ಟಿ ಇಷ್ಟವಾಗುತ್ತಾರೆ. ಇನ್ನು, ನಿಯತ್ತಿನ ಸೇವಕನ ಪಾತ್ರದಲ್ಲಿ ಎಂ.ಕೆ.ಮಠ ಹೊಂದಿಕೊಂಡಿದ್ದಾರೆ. ಉಳಿದಂತೆ ಯಕ್ಷಗಾನ ಕಲಾವಿದನಾಗಿ ಪ್ರಸಾದ್‌ ಅವರ ಪಾತ್ರ, ಉಳಿದಂತೆ ಮೋಹನ, ಉಮಾ, ಪಾತ್ರಗಳು ಸಿನಿಮಾವನ್ನು ಯಶಸ್ವಿಯಾಗಿ ಮುನ್ನಡೆಸಿವೆ. ಚಿತ್ರದ ಹಿನ್ನೆಲೆ ಸಂಗೀತ “ಶಿಕಾರಿ’ಯ ಸದ್ದು ಹೆಚ್ಚಿಸಿವೆ. ಕಾಡುವ ಸಿನಿಮಾವೊಂದರ ಭಾಗವಾಗ ಬೇಕೆಂದು ಬಯಸುವವರು ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಚಿತ್ರ: ಒಂದು ಶಿಕಾರಿಯ ಕಥೆ
ನಿರ್ಮಾಣ: ಶೆಟ್ಟಿಸ್‌ ಫಿಲಂ ಫ್ಯಾಕ್ಟರಿ
ನಿರ್ದೇಶನ: ಸಚಿನ್‌ ಶೆಟ್ಟಿ
ತಾರಾಗಣ: ಪ್ರಮೋದ್‌ ಶೆಟ್ಟಿ, ಸಿರಿ, ಪ್ರಸಾದ್‌, ಎಂ.ಕೆ.ಮಠ, ಅಭಿಮನ್ಯು ಪ್ರಜ್ವಲ್‌, ಶ್ರೀಪ್ರಿಯಾ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next