Advertisement

Wayanad landslides: ದೇವರ ನಾಡಿನಲ್ಲಿ ಸೂತಕದ ಛಾಯೆ

12:28 PM Sep 18, 2024 | Team Udayavani |

ದೇವರ ಸ್ವಂತ ನಾಡು ಎಂದು ಪ್ರಸಿದ್ಧಿ ಪಡೆದ ಕೇರಳವು ಪ್ರವಾಸಿಗರ ನೆಚ್ಚಿನ ತಾಣ. ಕಣ್ಮನ ಸೆಳೆಯುವ ಪಶ್ಚಿಮ ಘಟ್ಟದ ತಪ್ಪಲಿನಲ್ಲಿನ ಹಚ್ಚ ಹಸಿರಿನ ಬೆಟ್ಟ, ಗುಡ್ಡಗಳು ಅದರ ನಡುವೆ ಹರಿಯುವ ತೊರೆಗಳು, ವಿಶಾಲವಾದ ಅರಬಿ ಸಮುದ್ರ, ಅಲ್ಲಿನ ಜಲಸಾರಿಗೆ ವ್ಯವಸ್ಥೆ, ಆಹಾರ ಕ್ರಮ, ಸಂಸ್ಕೃತಿ, ತನ್ನ ಸೊಗಡನ್ನು ಬಿಂಬಿಸುವ ಮಲಯಾಳ ಚಿತ್ರಗಳು ಇವೆಲ್ಲವೂ ದೇಶ-ವಿದೇಶದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಂತೆ ಮಾಡುತ್ತಿವೆ. ಅಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ರೆಸಾರ್ಟ್‌, ಹೊಂ ಸ್ಟೇ ಅಂತಹ ಉತ್ಕೃಷ್ಟ ಗುಣಮಟ್ಟದ ವ್ಯವಸ್ಥೆಯನ್ನು ಮಾಡಲಾಗಿದೆ.

Advertisement

ಕೇರಳವು ಭಾರತದ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ.ಇಲ್ಲಿನ ತೊಂಬತ್ತು ಶೇಕಡಕ್ಕೂ ಅಧಿಕವಿರುವ ಸಾಕ್ಷರತೆಯ ಮಟ್ಟ ಇಡೀ ದೇಶಕ್ಕೆ ಮಾದರಿಯಾಗಿದೆ.  ಕೇರಳದಲ್ಲಿ ಹೇಳುವಷ್ಟು ಕಾರ್ಖಾನೆಗಳಿಲ್ಲದಿದ್ದರೂ ಉತ್ಕ¢ಷ್ಟ ಮಟ್ಟದ ನರ್ಸಿಂಗ್‌ ಕಾಲೇಜುಗಳಿವೆ. ವರ್ಷಕ್ಕೆ ಸಾವಿರಾರು ನರ್ಸ್‌ಗಳಿಗೆ ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುತ್ತಾರೆ. ಇದರಲ್ಲಿ  ಮಹಿಳೆಯರದ್ದೆ ಸಿಂಹಪಾಲು. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿಯುತ್ತಿರುವ ಕೇರಳ ರಾಜ್ಯದ ಮೇಲೆ ಯಾರ ವಕ್ರ ದೃಷ್ಟಿ ಬಿತ್ತೋ.. ಬಲ್ಲವರಾರು?

ಸ್ವಚ್ಛತೆ, ಮೂಲ ಸೌಕರ್ಯ ಅದರಲ್ಲೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುತ್ತಾ ಬಂದಿರುವ ಕೇರಳವು ಈಗ ವೈರಸ್‌ಗಳ ಆಶ್ರಯ ತಾಣವಾಗಿದೆ. ಹಂದಿ ಜ್ವರ, ನಿಫಾ, ಕೊರೊನಾ ವೈರಸ್‌, ಮೆದುಳು ತಿನ್ನುವ ಅಮೀಬಾದಂತಹ ಕಾಯಿಲೆಗಳು, ಮಾದಕ ದ್ರವ್ಯದ ವ್ಯಸನಗಳು ಹೆಚ್ಚಾಗುತ್ತಿದೆ. ಇದರೊಂದಿಗೆ ಪ್ರಾಕೃತಿಕ ವಿಕೋಪಗಳು ಕೇರಳವನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ.

ಪ್ರವಾಹ, ಭೂಕುಸಿತ ಕೇರಳದಲ್ಲಿ ಹೊಸದೇನಲ್ಲ. ಇಂತಹವು ಈ ಮೊದಲು ಸಂಭವಿಸಿವೆ 2018ರ ಮಹಾ ಪ್ರಳಯವು ಇಡೀ ಕೇರಳವನ್ನೇ ನಲುಗಿಸಿತ್ತು. 2020ರಲ್ಲಿ ಕೇರಳದ ಇಡುಕ್ಕಿ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂಕುಸಿತವೂ 66 ಜನರನ್ನು ಬಲಿ ಪಡೆದಿತ್ತು.

ಇದು ಇಷ್ಟಕ್ಕೇ ನಿಲ್ಲದೇ  2024ರಲ್ಲಿ ಮತ್ತೂಮ್ಮೆ ಪ್ರಕೃತಿ ತನ್ನ ಪ್ರಕೋಪವನ್ನು ತೋರಿಸಿದೆ. ವಯನಾಡು ಕೇರಳದಲ್ಲಿನ ಒಂದು ಜಿಲ್ಲೆ. ಮಲೆನಾಡಿನ ಪ್ರಕೃತಿಯ ಸೊಬಗನ್ನು ತನ್ನಲ್ಲಿ ತುಂಬಿಕೊಂಡು ಇಳೆಯಲ್ಲಿನ ಸ್ವರ್ಗದಂತಿದ್ದ ವಯನಾಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಈಗಾಗಲೇ ರಾಜಕೀಯವಾಗಿ ಪ್ರಸಿದ್ಧಿ ಪಡೆದ ವಯನಾಡು  ಇಂದು ಮಹಾದುರಂತಕ್ಕೆ ಬಲಿಯಾಗಿದೆ.

Advertisement

ಜುಲೈ 29, 2024ರ ತಡರಾತ್ರಿಯಲ್ಲಿ ಎಲ್ಲರೂ ತಮ್ಮ ಆಯಾಸವನ್ನು ಮರೆತು ಹೊಸದಿನದ ಆಶಯವನ್ನು ಕನಸ್ಸನ್ನು ಕಾಣುತ ನಿದ್ರಿಸುತ್ತಿರಲು ಅಷ್ಟರಲ್ಲೇ ಅವರ ಕನಸಿಗೆ ಕೊಳ್ಳಿಯಿಟ್ಟಂತೆ ನಿರಂತರವಾಗಿ ಸುರಿದ ಮಳೆಗೆ ಜಲಪ್ರಳಯ ಸಂಭವಿಸಿ, ತಡರಾತ್ರಿ ಒಂದು ಗಂಟೆಯಿಂದ ನಾಲ್ಕು ಗಂಟೆಯ ತನಕ ಹೀಗೆ ನಾಲ್ಕು ತಾಸುಗಳಲ್ಲಿ ಸಂಭವಿಸಿದ ಸರಣಿ ಭೂಕುಸಿತಗಳು ಜನಜೀವನವನ್ನೇ ಕಬಳಿಸಿತು. ಕೆಲವರು ಇದರ ಮುನ್ಸೂಚನೆ ದೊರೆತು ಸುರಕ್ಷಿತ ಸ್ಥಳಗಳಿಗೆ ತೆರಳಿದರೆ, ಇನ್ನೂ ಕೆಲವರು ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿದರು.

ಮುಂಜಾನೆ ಆಗುವಷ್ಟರಲ್ಲೇ ಮೇಪ್ಪಾಡಿ, ಮುಂಡಕೈ ಪಟ್ಟಣ ಮತ್ತು ಚೂರಲ್‌ವುಲದ ಇಡೀ ಪ್ರದೇಶಕ್ಕೆ ಪ್ರದೇಶವೇ ಕಬಳಿಸಿದೆ. ಎರಡು ಗ್ರಾಮಗಳು ಹೆಳಹೆಸರಿಲ್ಲದಂತೆ ಕೊಚ್ಚಿ ಹೋಗಿವೆ. ಇಲ್ಲಿಯವರೆಗೆ 296 ಜನರನ್ನು ಬಲಿ ತೆಗೆದುಕೊಂಡಿದೆ. ನೂರಾರು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ರಕ್ಷಣ ಕಾರ್ಯ ಚಾಲ್ತಿಯಲ್ಲಿದೆ.  ಜನರು ತಮ್ಮ ಮನೆ, ಮಠ, ಸಂಬಂಧಿಕರು, ಕನಸು ಹೀಗೆ ಸರ್ವಸ್ವವನ್ನೂ ಕಳೆದುಕೊಂಡು ಅನಾಥರಾಗಿ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ.

ಈ ಭೀಕರ ಘಟನೆಗೆ ಪ್ರಕೃತಿಯಲ್ಲಿನ ಮಾನವರ ಹಸ್ತಕ್ಷೇಪ ಕಾರಣವಿರಬಹುದು. ರಬ್ಬರ್‌ ಬೆಳೆಯಿಂದ ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಲು, ಹೆಚ್ಚು ಲಾಭಗಳಿಸಬಹುದೆಂದು ಗುಡ್ಡಗಾಡು, ಇಳಿಜಾರು ಪ್ರದೇಶಗಳಲ್ಲಿ ಅರಣ್ಯ ನಾಶಗೊಳಿಸಿ ಅವೈಜ್ಞಾನಿಕ ರೀತಿಯಲ್ಲಿ ರಬ್ಬರ್‌ ತೋಟವನ್ನು ಮಾಡಿ ದೇಶದಲ್ಲಿನ  ಶೇ. 75 ರಬ್ಬರ್‌ ಬೇಡಿಕೆಗಳನ್ನು ಕೇರಳ ರಾಜ್ಯ ಪೂರೈಸುತ್ತಿದೆ. ಈ ವಾಣಿಜ್ಯ ಬೆಳೆಯೇ ಜನರ ಜೀವನಕ್ಕೆ ಮಾರಕವಾಗಿ ಪರಿಣಮಿಸಿತು.

ಜನರ ಬಳಿ ಏನಿದ್ದರೇನಂತೆ ಪ್ರಕೃತಿಗೆ ಎಲ್ಲರೂ ಸಮಾನರೇ, ಪ್ರಕೃತಿಗೆ ಎಲ್ಲರೂ ತಲೆ ಬಾಗಲೇಬೇಕು. ಇಷ್ಟು ದಿನ ಎಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡಿದ್ದ ಪ್ರಕೃತಿಯು ಇಂದು ತನ್ನ ರುದ್ರಾವತಾರ ತೋರಿದೆ. ಇದಕ್ಕೆ ಕೇರಳದ ವಯನಾಡು  ಜಿಲ್ಲೆಯೇ ಸಾಕ್ಷಿ. ಒಂದು ಕಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣ ಇಂದು ಅಕ್ಷರಶಃ ಮಸಣ.

-ಸಮೃದ್ಧಿ ಕಿಣಿ

ಡಾ| ಬಿ.ಬಿ. ಹೆಗ್ಡೆ ಕಾಲೇಜು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next