Advertisement

ಟಿಡಿಆರ್‌ ಸಮಸ್ಯೆಗೆ ಶೀಘ್ರ ಪರಿಹಾರ

07:15 AM Jun 29, 2019 | Lakshmi GovindaRaj |

ಬೆಂಗಳೂರು: “ಸರ್ಜಾಪುರ, ಬನ್ನೇರಘಟ್ಟ, ಬೇಗೂರು ರಸ್ತೆ ವಿಸ್ತರಣೆಗೆ ಟಿಡಿಆರ್‌(ಅಭಿವೃದ್ಧಿ ಹಕ್ಕು ವರ್ಗಾವಣೆ) ಪ್ರಮಾಣಪತ್ರ ನೀಡುವ ವಿಚಾರ ಸಂಬಂಧ ಭೂಸ್ವಾಧೀನ ಅಧಿಕಾರಿಗಳನ್ನು ಸ್ಥಳೀಯ ಕಚೇರಿಗಳಿಗೆ ವರ್ಗಾಹಿಸಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹೇಳಿದರು.

Advertisement

ಶುಕ್ರವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು. ನಗರದಲ್ಲಿ ಆರೇಳು ವರ್ಷಗಳಿಂದ ರಸ್ತೆ ವಿಸ್ತರಣೆ ಕಗ್ಗಂಟಾಗೇ ಉಳಿದಿದೆ. ಹಲವು ಪ್ರದೇಶಗಳಲ್ಲಿ ಇಂದಿಗೂ ರಸ್ತೆ ವಿಸ್ತರಣೆ ಆಗಿಲ್ಲ. ನಿವೇಶನದ ಮಾಲೀಕರಿಗೆ ನೀಡುವ ಟಿಡಿಆರ್‌ ವ್ಯವಹಾರದಲ್ಲಿ ಹಗರಣ ನಡೆಯುತ್ತಿದ್ದು, ಪಾಲಿಕೆಗೂ ಕೋಟ್ಯಂತರ ರೂ. ನಷ್ಟವಾಗುತ್ತಿದೆ.

ಸರ್ಜಾಪುರ, ಬೇಗೂರು, ಬನ್ನೇರಘಟ್ಟ ಇನ್ನಿತರ ರಸ್ತೆಗಳ ವಿಸ್ತರಣೆಯಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ. ಟಿಡಿಆರ್‌ ಪ್ರಮಾಣಪತ್ರ ಪಡೆಯುವುದು ಗೊಂದಲದಿಂದ ಕೂಡಿದೆ. ಇದರಿಂದ ಸಾರ್ವಜನಿಕರು ಟಿಡಿಆರ್‌ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಸೂಚಿಸುವ ಜತೆಗೆ ಏಕಗವಾಕ್ಷಿ ಪದ್ಧತಿಯಲ್ಲಿ ಟಿಡಿಆರ್‌ ಸಿಗುವಂತೆ ಕ್ರಮವಹಿಸಬೇಕು ಎಂದು ಪಾಲಿಕೆಯ ಎಲ್ಲ ಸದಸ್ಯರು ಆಗ್ರಹಿಸಿದರು.

ಆಯುಕ್ತರು ಪ್ರತಿಕ್ರಿಯಿಸಿ, 2015ರವರೆಗೆ ಟಿಡಿಆರ್‌ ಅನ್ನು ಬಿಬಿಎಂಪಿಯಿಂದಲೇ ನೀಡಲಾಗುತ್ತಿತ್ತು. 2015ರಿಂದ 2017ರ ಮಾರ್ಚ್‌ವರೆಗೆ ಟಿಡಿಆರ್‌ ನೀಡಲು ಅವಕಾಶ ಇರಲಿಲ್ಲ. 2017 ಮಾರ್ಚ್‌ ನಂತರ ಸರ್ಕಾರ ಹೊಸ ನಿಯಮಾವಳಿ ಜಾರಿಗೊಳಿಸಿ ಟಿಡಿಆರ್‌ ನೀಡುವ ಅಧಿಕಾರವನ್ನು ಬಿಡಿಎಗೆ ಹಸ್ತಾಂತರಿಸಿದೆ ಎಂದರು.

“ನಗರದಲ್ಲಿ ರಸ್ತೆ ವಿಸ್ತರಣೆಗೆ 10 ಎಕರೆ ಜಾಗ ಸ್ವಾಧೀನ ಪಡಿಸಿಕೊಳ್ಳಬೇಕೆಂದರೆ ಒಂದು ಸಾವಿರ ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಇಷ್ಟು ಹಣವನ್ನು ನೀಡಲು ಪಾಲಿಕೆಯಿಂದ ಸಾಧ್ಯವಿಲ್ಲದ ಕಾರಣ, ಟಿಡಿಆರ್‌ ವಿತರಿಸಲಾಗುತ್ತಿದೆ. ಆದರೆ, ಟಿಡಿಆರ್‌ನಲ್ಲಿ ಗೊಂದಲಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಆ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಜತೆಗೆ ಮೆಟ್ರೋ ಕಾಮಗಾರಿ ಭೂಸ್ವಾಧೀನ ಮಾಡಿಕೊಳ್ಳುವ ಸ್ಥಳಕ್ಕೆ ಹೆಚ್ಚುವರಿ ಪರಿಹಾರ ನೀಡುತ್ತಿರುವುದು ಸಹ ಸಮಸ್ಯೆಗೆ ಕಾರಣವಾಗಿದೆ’ಎಂದರು.

Advertisement

ಟಿಡಿಆರ್‌ ಒತ್ತಾಯ ಪೂರ್ವಕವಾಗಿ ನೀಡಲು ಬರುವುದಿಲ್ಲ. ಸಾರ್ವಜನಿಕರೇ ಮುಂದೆ ಬಂದು ಟಿಡಿಆರ್‌ ತೆಗೆದುಕೊಳ್ಳುವಂತೆ ನಾವು ಯೋಜನೆ ರೂಪಿಸಿಕೊಳ್ಳಬೇಕಿದೆ. ನಗರದಲ್ಲಿ ಗ್ರೇಡ್‌ ಸಪರೇಟರ್‌, ಕೆಳಸೇತುವೆ, ರಸ್ತೆ ವಿಸ್ತರಣೆಗೆ ಇದುವರೆಗೆ 48 ರಸ್ತೆಗಳಲ್ಲಿ ಟಿಡಿಆರ್‌ ನೀಡಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

ಶೀಘ್ರ ಟಿಡಿಆರ್‌ ಇತ್ಯರ್ಥ: ರಸ್ತೆ ವಿಸ್ತರಣೆ ವೇಳೆ ಟಿಡಿಆರ್‌ ನೀಡುವ ಆಸ್ತಿ ಮಾಲೀಕರಿಗೆ ಬಿಡಿಎ ಮತ್ತು ಬಿಬಿಎಂಪಿ ಜಂಟಿಯಾಗಿ ಕಾರ್ಯನಿರ್ವಹಿಸಿ ಕಾಲಮಿತಿಯೊಳಗೆ ವಿತರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಜಾಪುರ, ಬನ್ನೇರುಘಟ್ಟ, ಬೇಗೂರಲ್ಲಿ ರಸ್ತೆ ವಿಸ್ತರಣೆ ಮಾಡುವ ವಿಚಾರವಾಗಿ ಭೂಸ್ವಾಧೀನಕ್ಕೆ ಅಧಿಕಾರಿಗಳನ್ನು ಸ್ಥಳೀಯ ಕಚೇರಿಗಳಿಗೆ ವರ್ಗಾಯಿಸಿ ಸಮಸ್ಯೆ ನಿವಾರಿಸಲಾಗುವುದು.

ಈಗಾಗಲೇ ಬಹುತೇಕ ಕಡೆ ಫಾರ್ಮ್ ಸಂ.1ರ ಪ್ರಕ್ರಿಯೆ ಮುಗಿದಿದ್ದು, ಫಾರ್ಮ್ ನಂ.2ನ್ನು ಅಧಿಕಾರಿಗಳೇ ಬಿಡಿಎಗೆ ಸಲ್ಲಿಸಬೇಕು. ಬಿಡಿಎ ಆಯುಕ್ತರ ಜತೆ ನಾನೇ ಚರ್ಚಿಸುತ್ತೇನೆ. ಕಾಲಮಿತಿಯೊಳಗಾಗಿ ಆಸ್ತಿ ಮಾಲೀಕರ ಮನೆಗೆ ಟಿಡಿಆರ್‌ ಪ್ರಮಾಣಪತ್ರವನ್ನು ಅಧಿಕಾರಿಗಳು ನೀಡುವಂತೆ ಯೋಜನೆ ರೂಪಿಸಲಾಗುವುದು ಎಂದು ಆಯುಕ್ತರು ಹೇಳಿದರು.

ಮೂರು ಪಟ್ಟು ಟಿಡಿಆರ್‌ಗೆ ಪ್ರಸ್ತಾವನೆ: ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ 1,000 ಚ.ಅಡಿಗೆ 2,000 ಚ.ಅಡಿ ಬದಲಿ ಟಿಡಿಆರ್‌ ನೀಡಲಾಗುತ್ತಿದೆ. ಇದೀಗ 1,000 ಚ.ಅಡಿಗೆ 3000 ಚ.ಅಡಿ ಬದಲಿ ಟಿಡಿಆರ್‌ ನೀಡಲು ನಿರ್ಧರಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿಗಳು ಸೂಚಿಸಿ¨ªಾರೆ. ಅದರಂತೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಇಂದಿರಾ ಕ್ಯಾಂಟೀನ್‌ ಟೆಂಡರ್‌ ಬೇರೆಯವರಿಗೆ ನೀಡಿ: ಬಡವರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಇಂದಿರಾ ಕ್ಯಾಂಟಿನ್‌ನಲ್ಲಿ ಕಳಪೆ ಊಟ ನೀಡಲಾಗುತ್ತಿದ್ದು, ಬೇರೆಯವರಿಗೆ ಇಂದಿರಾ ಕ್ಯಾಂಟಿನ್‌ ಟೆಂಡರ್‌ ನೀಡಬೇಕೆಂದು ಶಾಸಕ ಮುನಿರತ್ನ ಆಗ್ರಹಿಸಿದರು. ಇಂದಿರಾ ಕ್ಯಾಂಟಿನ್‌ನಲ್ಲಿ ನಿತ್ಯ 100 ಮಂದಿಯೂ ಊಟ ಮಾಡುತ್ತಿಲ್ಲ.

ಇದಕ್ಕೆ ಕಳಪೆ ಗುಣಮಟ್ಟವೇ ಕಾರಣ. ಚೆಫ್ಟಾಕ್‌ ಮತ್ತು ರಿವಾರ್ಡ್‌ ಸಂಸ್ಥೆಗೆ ನೀಡುವ ಟೆಂಡರ್‌ ಆಗಸ್ಟ್‌ಗೆ ಮುಗಿಯಲಿದ್ದು, ಬೇರೆಯವರಿಗೆ ಟೆಂಡರ್‌ ನೀಡಿ ಎಂದರು. ಉಕ್ಕಿನ ಮಹಿಳೆ ಎಂದು ಕರೆಯುವ ಇಂದಿರಾ ಗಾಂಧಿಯವರ ಹೆಸರನ್ನಿಟ್ಟಿರುವ ಇಂದಿರಾ ಕ್ಯಾಂಟಿನ್‌ ಅನ್ನು ಆ ಹೆಸರಿಗೆ ಗೌರವವಾಗಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.

ವರದಿ ಮಂಡನೆಗೆ ಆಗ್ರಹ: ಕೆಎಂಸಿ ಕಾಯಿದೆ ಪ್ರಕಾರ ಪ್ರತಿ ತಿಂಗಳ ಕೌನ್ಸಿಲ್‌ ಸಭೆಯಲ್ಲಿ ಆಯಾ ತಿಂಗಳ ಲೆಕ್ಕಪತ್ರ ಸ್ವೀಕೃತಿಯನ್ನು ಕೌನ್ಸಿಲ್‌ನಲ್ಲಿ ಮಂಡನೆ ಮಾಡಬೇಕು. ಆದರೆ, ಒಂದುವರೆ ವರ್ಷದಿಂದ ಲೆಕ್ಕಪತ್ರ ಸ್ವೀಕೃತಿ ಮಂಡಿಸಿಯೇ ಇಲ್ಲ. ಸ್ವೀಕೃತಿ ಮಂಡಿಸಿದರೆ ಅವ್ಯವಹಾರಗಳು ಬೆಳಕಿಗೆ ಬರುತ್ತವೆ ಎನ್ನುವ ಭಯ ಇರಬಹುದು. ಕೂಡಲೇ ಆ ಕಾರ್ಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಗ್ರಹಿಸಿದರು.

ಮಾಜಿ ಸದಸ್ಯರ ಅನಾರೋಗ್ಯಕ್ಕೆ ಸ್ಪಂದಿಸಿ: ಪಾಲಿಕೆಯ ಮಾಜಿ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಿ ಸಹಾಯಕ್ಕೆ ಬಂದರೆ ಅವರ ಚಿಕಿತ್ಸೆಗೆ ಮೇಯರ್‌ ಮತ್ತು ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಸರ್ವಪಕ್ಷದ ಸದಸ್ಯರು ಸಭೆಯಲ್ಲಿ ಮೇಯರ್‌ಗೆ ಮನವಿ ಮಾಡಿದರು.

ಪಾಲಿಕೆ ಮಾಜಿ ಸದಸ್ಯ ಸತ್ಯನಾರಾಯಣ ರಾವ್‌ ಅವರಿಗೆ ಶ್ರದ್ಧಾಂಜಲಿ ಸಲಿಸಿದ ನಂತರ, ಈ ಬಗ್ಗೆ ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಮೇಯರ್‌ ಜಿ.ಪದ್ಮಾವತಿ, ಎಲ್ಲ ಸದಸ್ಯರು ಬೆಂಗಳೂರಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರು ಸಹಾಯಕ್ಕೆ ಬಂದಾಗ ಪಾಲಿಕೆ ಆರೋಗ್ಯ ನಿಧಿಯಿಂದ ಹಣ ಬಿಡುಗಡೆ ಮಾಡಬೇಕು. ಅವರಿಗೆ ಮುಜುಗರವಾಗದ ರೀತಿಯಲ್ಲಿ ಸ್ಪಂದಿಸಬೇಕು ಎಂದರು.

ಗಿರೀಶ್‌ ಕಾರ್ನಾಡ್‌ ಅವರ ಆತ್ಮ ಇಲ್ಲೇ ಇರುತ್ತೆ! : ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಗಿರೀಶ್‌ ಕಾರ್ನಾಡ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರು ಇಹ ಲೋಕ ತ್ಯಾಜಿಸಿದ್ದಾರೆ ಎಂದು ಹೇಳಿ ಪಾಲಿಕೆಯ ಮಾಜಿ ಸದಸ್ಯರಾದ ಸತ್ಯನಾರಾಯಣ ರಾವ್‌ ಅವರ ಬಗ್ಗೆ ಮಾತನಾಡಲು ಮುಂದಾದರು. ಆಗ ಆಡಳಿತ ಪಕ್ಷದ ಸದಸ್ಯರಾದ ಎಂ.ಜಿ ವೆಂಕಟೇಶ್‌, ಈಗಲಾದರೂ ಕಾರ್ನಾಡರಿಗೆ ನಮನ ಸಲ್ಲಿಸಿ. ಇಲ್ಲವಾದರೆ ಅವರ ಆತ್ಮ ಇಲ್ಲೇ ಇರುತ್ತೆ ಎಂದರು!

ಪ್ರಮಾಣ ವಚನ ಸ್ವೀಕಾರ: ವಾರ್ಡ್‌ ನಂ. 60ರ (ಸಗಾಯಪುರ) ಸದಸ್ಯರಾಗಿ ಪಳನಿಅಮ್ಮಳ್‌ ಮತ್ತು ವಾರ್ಡ್‌ ನಂ.103 (ಕಾವೇರಿಪುರ) ಸದಸ್ಯರಾಗಿ ಸಿ.ಪಲ್ಲವಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next