Advertisement

ಆ್ಯಕ್ಷನ್‌ನಿಂದ ಕಾಮಿಡಿಯತ್ತ ಸಂತೋಷದ ಪಯಣ

11:42 AM Apr 03, 2018 | Team Udayavani |

ಕನ್ನಡ ಚಿತ್ರರಂಗದ ಕೆಲವು ನಾಯಕರು ಒಂದು ಸಿನಿಮಾ ಮಾಡಿ, ಆ ಚಿತ್ರ ಬಿಡುಗಡೆಯಾದ ನಂತರ ಆ ನಟರು ಏನು ಮಾಡುತ್ತಿರುತ್ತಾರೆಂಬ ಸುಳಿವೇ ಇರೋದಿಲ್ಲ. ಆ ಸಾಲಿಗೆ ಸೇರುವ ನಾಯಕ ನಟರಲ್ಲಿ ಸಂತೋಷ್‌ ಕೂಡಾ ಒಬ್ಬರು. ಯಾವ ಸಂತೋಷ್‌ ಎಂದರೆ ನಿರ್ಮಾಪಕ ಆನೇಕಲ್‌ ಬಾಲರಾಜ್‌ ಅವರ ಮಗ ಎನ್ನುವ ಜೊತೆಗೆ “ಕೆಂಪ’, “ಜನ್ಮ’, “ಗಣಪ’, “ಕರಿಯಾ-2′ ಚಿತ್ರಗಳ ನಾಯಕ ಎನ್ನಬೇಕು.

Advertisement

ಸಂತೋಷ್‌ ಕೂಡಾ ಗಾಂಧಿನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರಲ್ಲ. ತಮ್ಮ ಸಿನಿಮಾ ಬಿಡುಗಡೆಯ ಸಮಯದಲ್ಲಷ್ಟೇ ಕಾಣಿಸಿಕೊಳ್ಳುವ ಸಂತೋಷ್‌ ಈಗ “ಕಾಜಲ್‌’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದಿನ ನಾಲ್ಕು ಸಿನಿಮಾಗಳಲ್ಲಿ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿದ್ದ ಸಂತೋಷ್‌ ಮೊದಲ ಬಾರಿಗೆ ಆ ಇಮೇಜ್‌ನಿಂದ ಹೊರಬರಲು ಮುಂದಾಗಿದ್ದಾರೆ. ಅದೇ ಕಾರಣದಿಂದ “ಕಾಜಲ್‌’ ಸಿನಿಮಾ ಮಾಡುತ್ತಿದ್ದಾರೆ.

ಇದೊಂದು ಮ್ಯೂಸಿಕಲ್‌ ಕಾಮಿಡಿ ಜರ್ನಿ. ಈ ಹಿಂದಿನ ಸಿನಿಮಾಗಳಲ್ಲಿ ಹೊಡೆದಾಡಿದ್ದ ಸಂತೋಷ್‌ ಇಲ್ಲಿ ನಗಿಸಲು ಹೊರಟಿದ್ದಾರೆ. ಯಾಕಾಗಿ ಈ ಬದಲಾವಣೆ ಎಂದು ಕೇಳಿದರೆ, ಹೊಸದೇನೋ ಮಾಡಬೇಕೆನಿಸಿತು ಎಂಬ ಉತ್ತರ ಸಂತೋಷ್‌ರಿಂದ ಬರುತ್ತದೆ. “ಸತತವಾಗಿ ಆ್ಯಕ್ಷನ್‌ ಸಿನಿಮಾಗಳನ್ನೇ ಮಾಡಿಕೊಂಡು ಬಂದೆ. ಈಗ ಬೇರೇನೋ ಮಾಡಬೇಕೆನಿಸಿತು. ಅದಕ್ಕಾಗಿ ಎದುರು ನೋಡುತ್ತಿದ್ದಾಗ ಸಿಕ್ಕಿದ್ದು “ಕಾಜಲ್‌’. ಕತೆ ತುಂಬಾ ಇಷ್ಟವಾಯಿತು.

ನನಗೂ ಈ ಪಾತ್ರ ಹೊಸದೆನಿಸಿ ಒಪ್ಪಿಕೊಂಡೆ’ ಎನ್ನುವ ಸಂತೋಷ್‌ ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಳ್ಳುತ್ತಿದ್ದಾರಂತೆ. ಸಂತೋಷ್‌ ಚಿತ್ರರಂಗಕ್ಕೆ ಬಂದು 11 ವರ್ಷವಾಗಿದೆ. ಈ 11 ವರ್ಷದಲ್ಲಿ ಅವರು ನಟಿಸಿದ್ದು ಕೇವಲ ಐದು ಸಿನಿಮಾಗಳಲ್ಲಿ. ಇಷ್ಟೊಂದು ನಿಧಾನಗತಿಯ ಪಯಣ ಯಾಕೆ ಎಂದರೆ ಅದಕ್ಕೆ ನಾನಾ ಕಾರಣಗಳಿವೆ ಎಂಬ ಉತ್ತರ ಸಂತೋಷ್‌ರಿಂದ ಬರುತ್ತದೆ.

“ಕೆಂಪ ಚಿತ್ರದಿಂದಲೇ ನನ್ನ ಪ್ರತಿಯೊಂದು ಚಿತ್ರಗಳು ಕಾರಣಾಂತರಗಳಿಂದ ತಡವಾಗುತ್ತಾ ಹೋದುವು. ಈ ಮಧ್ಯೆ ನಾನು ಕೂಡಾ ಒಂದು ಸಿನಿಮಾ ಬಿಡುಗಡೆಯಾಗಿ ಎರಡೂರು ವರ್ಷ ಗ್ಯಾಪ್‌ ತೆಗೆದುಕೊಂಡೆ. ಬಿಝಿನೆಸ್‌ಗಾಗಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದೆ. ಆ ಕಾರಣದಿಂದ ತಡವಾಯಿತು. ಮುಂದೆ ಆ ತರಹ ಆಗಲ್ಲ. ವರ್ಷಕ್ಕೆರಡು ಸಿನಿಮಾ ಮಾಡಬೇಕೆಂದಿದ್ದೇನೆ.

Advertisement

ಈಗಾಗಲೇ ಒಂದೆರಡು ಸಿನಿಮಾಗಳ ಮಾತುಕತೆಯಾಗಿದೆ. ಎಂ.ಡಿ.ಶ್ರೀಧರ್‌ ಅವರ ಜೊತೆಗೊಂದು ಸಿನಿಮಾ ಮಾಡುತ್ತೇನೆ’ ಎನ್ನುವುದು ಸಂತೋಷ್‌ ಮಾತು. ಬಹುತೇಕ ತಮ್ಮದೇ ಬ್ಯಾನರ್‌ನಲ್ಲಿ ನಟಿಸುತ್ತಿದ್ದ ಸಂತೋಷ್‌ ಮುಂದಿನ ದಿನಗಳಲ್ಲಿ ಬೇರೆ ಬ್ಯಾನರ್‌ನ ಸಿನಿಮಾಗಳಲ್ಲೂ ನಟಿಸಲಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next