Advertisement

Yakshagana Jayarama Acharya: ‘ಆರೋಗ್ಯಕರ ಹಾಸ್ಯ ಹಂಚಿದ ಕಲಾವಿದ ಜಯರಾಮಣ್ಣ’

01:02 AM Oct 22, 2024 | Team Udayavani |

ಬಂಟ್ವಾಳ: ಹಲವು ದಶಕಗಳ ಕಾಲ ಯಕ್ಷ ರಂಗದ ಹಾಸ್ಯ ಲೋಕವನ್ನು ಆಳಿದ ಮೇರು ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಪರಂಪರೆಯ ಛಾಯೆಯನ್ನು ಬಿಡದೆ ಈಗಿನ ತಲೆಮಾರಿಗೆ ಒಗ್ಗುವಂಥ ಆರೋಗ್ಯ ಪೂರ್ಣ ಹಾಸ್ಯವನ್ನು ಸಮಾಜಕ್ಕೆ ತಲುಪಿಸಿದ ಹೆಗ್ಗಳಿಕೆ ಹೊಂದಿದ್ದು, ಅವರ ಅಗಲುವಿಕೆ ಯಕ್ಷಗಾನ ರಂಗಕ್ಕೆ ದೊಡ್ಡ ನಷ್ಟ. ಕೆಲವು ಪ್ರಸಂಗ-ಪಾತ್ರಗಳಿಗೆ “ಜಯರಾಮಣ್ಣನೇ ಬೇಕು’ ಎಂಬಂಥ ಬೇಡಿಕೆಯ ಕಲಾವಿದರಾಗಿದ್ದರು.

Advertisement

ಎಂದಿಗೂ ಹಾಸ್ಯದಲ್ಲಿ ಯಕ್ಷ ಪರಂಪರೆಯನ್ನು ಮೀರಿದವರಲ್ಲ. ಹಾಗಂತ ಅದೇ ಹಿಂದಿನ ಹಳೆಯ ಹಾಸ್ಯವನ್ನೇ ನೀಡುತ್ತಿದ್ದವರೂ ಅಲ್ಲ. ಈಗಿನ ಸಮುದಾಯಕ್ಕೂ ಹಿತವಾಗುವ ಹಾಸ್ಯವನ್ನು ತಲುಪಿಸುತ್ತಿದ್ದು, ಹೀಗಾಗಿ ಜಯರಾಮಣ್ಣರ ಹಾಸ್ಯವನ್ನು ಪ್ರೇಕ್ಷಕರು ಯಾವತ್ತೂ ಸ್ವೀಕರಿಸುತ್ತಿದ್ದರು. ಅವರ ಹಾಸ್ಯದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವೂ ಇತ್ತು ಎಂದೂ ರಂಗದಲ್ಲಿ ರಾಜಕೀಯ ಮಾತನಾಡಿದವರಲ್ಲ.

ಅತ್ಯುತ್ತಮ ಲಯ ಜ್ಞಾನದ ಹಾಸ್ಯ ಕಲಾವಿದ
ಪ್ರತಿಸ್ಪಂದನೆ, ಪ್ರತ್ಯುತ್ಪನ್ನಮತಿ ಇದ್ದ ಹಾಸ್ಯ ಕಲಾವಿದರಾಗಿದ್ದು, ಅಪಾರ ಅಭಿಮಾನಿ ವರ್ಗವೇ ಅವರ ದೊಡ್ಡ ಸಂಪಾದನೆಯಾಗಿತ್ತು. ಮಿಜಾರು ಅಣ್ಣಪ್ಪ, ಪುಳಿಂಚದವರ ಸಮಯದಲ್ಲೇ ಹಾಸ್ಯದಲ್ಲಿ ಹೆಸರು ಮಾಡಿದ್ದ ಜಯರಾಮಣ್ಣ, ಆ ಬಳಿಕ ತೆಂಕುತಿಟ್ಟಿನ ಹಾಸ್ಯ ಕಲಾವಿದರಲ್ಲಿ ಅಗ್ರಮಾನ್ಯರಾಗಿ ಗುರುತಿಸಿಕೊಂಡಿದ್ದರು. ಅತ್ಯುತ್ತಮ ಲಯ ಜ್ಞಾನದ ಹಾಸ್ಯ ಕಲಾವಿದರಾಗಿದ್ದ ಅವರು ನಾಟ್ಯಕ್ಕೆ ವಿಶೇಷ ಪ್ರಾಶಸ್ತ್ಯ ಕೊಡದೇ ಇದ್ದರೂ ತನ್ನ ಮಾತಿನ ಶೈಲಿಯ ಮೂಲಕ ಕಲಾಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದ್ದರು.

ನಾನು ಕೂಡ ಸಾಕಷ್ಟು ಯಕ್ಷಗಾನಗಳನ್ನು ಸಂಘಟನೆ ಮಾಡುತ್ತಿದ್ದು, ಆಗ ಜಯರಾಯ ಆಚಾರ್ಯರು ಇದ್ದಾರಾ ಎಂದು ಕೇಳಿ ಬರುವವರು ದೊಡ್ಡ ಸಂಖ್ಯೆಯಲ್ಲಿದ್ದರು. ಮೇಳದ ಪ್ರಸಂಗದ ಸಂದರ್ಭದಲ್ಲೂ ಅವರ ಪಾತ್ರದ ಕುರಿತು ಅಭಿಮಾನಿಗಳು ವಿಚಾರಿಸುವ ಮೇರು ಕಲಾವಿದ ಅವರಾಗಿದ್ದರು. ಸಾಕಷ್ಟು ಪ್ರಸಂಗಗಳಲ್ಲಿ ಹಿರಿಯ ಕಲಾವಿದರು ಅವರಲ್ಲಿ ಸಲಹೆ ಪಡೆಯುತ್ತಿದ್ದರು. ಪಾತ್ರವೊಂದು ಅವರಿಗೆ ಇಷ್ಟವಾಗಿದೆ ಎಂದರೆ ಅವರ ಅಭಿನಯ ಮನೋಜ್ಞ ವಾಗಿರುತ್ತಿತ್ತು.

Advertisement

ಆರೋಗ್ಯ ತೊಂದರೆ ಪರಿಣಾಮ ಅಭಿನಯದಲ್ಲಿ ಬದಲಾವಣೆ:
ವೇಷಭೂಷಣ ಸಾಮಾನ್ಯವಾಗಿದ್ದರೂ, ಲೌಕಿಕ ಜೀವನದಲ್ಲಿ ವಸ್ತ್ರ ಸಂಹಿತೆಗೆ ವಿಶೇಷ ಮಹತ್ವ ನೀಡುತ್ತಿದ್ದರು. ಯಕ್ಷಗಾನಕ್ಕೆ ಬರುವಾಗ ಅವರು ಉಡುಗೆ ತೊಡುಗೆಯೇ ಅವರಿಗೆ ಹೊಸ ಘನತೆ ತರಿಸುತ್ತಿತ್ತು. ಅದನ್ನು ನೋಡುವುದೇ ವಿಶೇಷವಾಗಿತ್ತು. ಆರೋಗ್ಯ ತೊಂದರೆಯ ಪರಿಣಾಮ ಕಳೆದ 2-3 ವರ್ಷಗಳಲ್ಲಿ ಅವರ ಅಭಿನಯದಲ್ಲಿ ಸಾಕಷ್ಟು ಬದಲಾವಣೆಗಳಾಗಿತ್ತು. ಅವರ ಹೃದಯದ ಸಮಸ್ಯೆ ಕುರಿತು ವೈದ್ಯರು ಕೂಡ ಸಲಹೆ ನೀಡಿದ್ದರು. ಕಳೆದ ವರ್ಷ ತಿರುಗಾಟದ ಸಂದರ್ಭ ಆರೋಗ್ಯ ಸಮಸ್ಯೆಯಿಂದ ಅವರ ವೇಷ ಬಾಕಿಯಾದ ಘಟನೆಗಳು ಸಾಕಷ್ಟಿದ್ದು, ಹೀಗಾಗಿ ಅವರಿಗೆ ಮೇಳದಿಂದ ನಿವೃತ್ತಿಯನ್ನೂ ನೀಡಲಾಗಿತ್ತು.

– ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ (ಯಕ್ಷಗಾನದ ಹಿರಿಯ ಕಲಾವಿದರು)

Advertisement

Udayavani is now on Telegram. Click here to join our channel and stay updated with the latest news.

Next