Advertisement

ಎಂಡೋ ಸಂತ್ರಸ್ತರಿಗೆ ಕನಿಷ್ಠ ಸೌಲಭ್ಯ ನೀಡದ ಸರಕಾರ

11:32 PM Feb 15, 2022 | Team Udayavani |

ಬೆಂಗಳೂರು: ಕರಾವಳಿಯಲ್ಲಿ ಎಂಡೋಸಲ್ಫಾನ್‌ ಬಾಧಿತ ಸಂತ್ರಸ್ತರಿಗೆ ಸರಕಾರ ಕನಿಷ್ಠ ಸೌಲಭ್ಯ ಕಲ್ಪಿಸುವುದನ್ನೂ ಮರೆತಿದ್ದು, ಈ ಬಗ್ಗೆ ರಾಜ್ಯ ಪಾಲರ ಭಾಷಣದಲ್ಲಿ ಚಕಾರ ಎತ್ತಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ಹರೀಶ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

Advertisement

ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಮಾರು 3,600ಕ್ಕೂ ಹೆಚ್ಚು ಜನ ಎಂಡೋಪೀಡಿತರಾಗಿದ್ದಾರೆ. ಮಾಸಾಶನ ಸಿಗುತ್ತಿಲ್ಲ. ಮೂರು ಡೇ ಕೇರ್‌ ಸೆಂಟರ್‌ಗಳಲ್ಲಿ ವಾಹನ, ಫಿಸಿಯೋಥೆರಪಿ, ಊಟ ಮತ್ತಿತರ ಸೌಲಭ್ಯಗಳಿಲ್ಲ. ಈ ಸಂತ್ರಸ್ತ ಕುಟುಂಬ ಗಳಿಗೆ ಹೆಣ್ಣು ಕೊಡ ಲಿಕ್ಕೂ ಯಾರೂ ಮುಂದೆ ಬರುತ್ತಿಲ್ಲ. ಅದೇ ರೀತಿ, ಹೆಣ್ಣು ಮಕ್ಕಳನ್ನು ಮದುವೆ ತೆಗೆದುಕೊಳ್ಳಲೂ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟೆಲ್ಲ ಅವಾಂತರಗಳಾಗಿದ್ದರೂ ಈ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾವ ಆಗದಿರುವುದು ಬೇಸರದ ಸಂಗತಿ ಎಂದರು.

ಸವಲತ್ತುಗಳ ವ್ಯವಸ್ಥೆ ಮಾಡಿ
ಸರಕಾರದ ತಪ್ಪಿಗೆ ಸಾವಿರಕ್ಕೂ ಅಧಿಕ ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ಕೂಡಲೇ ಸೌಲಭ್ಯ ವಂಚಿತ ಆ ಡೇ ಕೇರ್‌ ಸೆಂಟರ್‌ಗಳಿಗೆ ಸರಕಾರ ಅಗತ್ಯ ಸವಲತ್ತುಗಳ ವ್ಯವಸ್ಥೆ ಮಾಡಬೇಕು. ನಿಯ ಮಿತವಾಗಿ ಮಾಸಾಶನ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಭಾಪತಿಗಳ ಸೂಚನೆ
ಇದಕ್ಕೆ ದನಿಗೂಡಿಸಿದ ಸಭಾಪತಿ ಗಳು, ಎಂಡೋಸಲ್ಫಾನ್‌ ಪೀಡಿತ ಕುಟುಂಬಗಳ ಪರಿಸ್ಥಿತಿ ಅಧ್ಯಯನಕ್ಕೆ ಈ ಹಿಂದೆ ಸಮಿತಿ ರಚಿಸಲಾಗಿತ್ತು. ಅದು ಸ್ಥಳಕ್ಕೆ ಭೇಟಿ ನೀಡಿ, ವರದಿ ಸಲ್ಲಿಸಿದೆ. ಅದನ್ನು ಆಧರಿಸಿ ಪರಿಹಾರ ಕ್ರಮಕ್ಕೆ ಮುಂದಾಗಬೇಕು ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸೂಚಿಸಿದರು.

ಎತ್ತಿನಹೊಳೆ ಬಿಲ್‌ ಬಾಕಿ
9 ತಿಂಗಳುಗಳಿಂದ ಎತ್ತಿನಹೊಳೆ ಯೋಜನೆಗೆ ಬಿಡಿ ಗಾಸನ್ನೂ ಸರಕಾರ ಬಿಡುಗಡೆ ಮಾಡಿಲ್ಲ. ಈ ಮಧ್ಯೆ 3,600 ಕೋಟಿ ರೂ. ಬಿಲ್‌ ಬಾಕಿ ಉಳಿಸಿ ಕೊಂಡಿದೆ. ಇನ್ನೂ ಯೋಜನೆ ಪ್ರಗತಿಯಲ್ಲಿದ್ದಾಗಲೇ ಉದ್ದೇಶಿತ ಯೋಜನೆ ಅಡಿ 2.5 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ ಎಂದು ದಾಖಲೆಯಲ್ಲಿ ಉಲ್ಲೇಖೀಸಲಾಗಿದೆ. ಇದು ಹೇಗೆ ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.

Advertisement

ಗಮನ ಬೇರೆಡೆ ಸೆಳೆಯಲು ಹಿಜಾಬ್‌
ಬೆಂಗಳೂರು: ರಾಜ್ಯದ ಜನ ಬೆಲೆಯೇರಿಕೆಯಂತಹ ಹಲವು ಸಮಸ್ಯೆಗಳ ಬೆಂಕಿಯಲ್ಲಿ ಬೇಯುತ್ತಿದ್ದಾರೆ. ಆದರೆ, ಸರಕಾರ ಹಿಜಾಬ್‌ ಮತ್ತು ಕೇಸರಿ ಕೆಸರೆರಚಾಟದಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್‌ ಸದಸ್ಯ ಹರೀಶ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, “ಸರಕಾರದ ವಿರುದ್ಧ 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪ ಇದೆ. ದುರ್ಬಲ ಆಯವ್ಯಯ, ಬೆಲೆಯೇರಿಕೆ, ಅಘೋಷಿತ ತುರ್ತು ಪರಿಸ್ಥಿತಿ ಯಿಂದ ಜನ ನರಳುತ್ತಿದ್ದಾರೆ. ಆದರೆ, ಸರಕಾರವು ಹಿಜಾಬ್‌ ವಿಷಯ ಮುಂದಿಟ್ಟು ಜನರ ಗಮನವನ್ನು ಬೇರೆಡೆ ಎಳೆಯುತ್ತಿದೆ ಎಂದು ಆರೋಪಿಸಿದರು.

ವಿದ್ಯಾಲಯಗಳು ಹಾಗೂ ದೇಗುಲ ಗಳಿಗೂ ರಾಜಕೀಯ ಪ್ರವೇಶಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಲಾಠಿಚಾರ್ಜ್‌ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದು ಸಲ್ಲದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next