ಮಂಗಳೂರು: ಕುಟುಂಬದ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್ ಕಾರ್ಡ್ ಖರೀದಿಸಿ, ಬೆಂಗಳೂರಿಗೆ ತೆರಳುತ್ತಿದ್ದ ಐವರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ಕೇಂದ್ರ ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಅಕºರ್ ಅಲಿ (24), ಬೆಳ್ತಂಗಡಿಯ ಸಂಜಯನಗರದ ಮಹಮ್ಮದ್ ಮುಸ್ತಾಫಾ (22), ನೆರಿಯ ಗುಂಪುಕಲ್ಲುವಿನ ರಮೀಝ್ (20), ಪಡಂಗಡಿ ಗ್ರಾಮದ ಬದ್ಯಾರು ನಿವಾಸಿ ಮಹಮ್ಮದ್ ಸಾದಿಕ್ (27) ಮತ್ತು ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳ ಮೇಲೆ ದಾಖಲಾದ ಮೋಸ ವಂಚನೆ ಅಥವಾ ನಿಗೂಢ ಕಾರ್ಯಸಾಧನೆ ಮಾಡುವ ಪ್ರಕರಣದ ಜತೆಗೆ ವಿದೇಶಿ ಕರೆನ್ಸಿ ದಂಧೆಯಲ್ಲಿ ಐವರು ಶಾಮೀಲಾದ ಸಾಧ್ಯತೆ ಕುರಿಂತೆ ಹಿರಿಯ ಪೊಲೀಸರು ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಿದೇಶಿ ನಂಟಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪತ್ರವನ್ನೂ ಬರೆದಿದ್ದರು. ಅದರಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿ, ಆರೋಪಿಗಳನ್ನು ವಿಚಾರಣೆ ನಡೆಸಿ, ಮಾಹಿತಿ ಕಲೆಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಹೊಸ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹವಾಲಾ ಜಾಲಕ್ಕೆ ಬಳಕೆ?
ಹವಾಲಾ ಜಾಲದ ನಿರ್ವಹಣೆಗೆ ಈ ರೀತಿ ಹಲವು ಸಿಮ್ಗಳನ್ನು ಹೊಂದಲಾಗುತ್ತದೆ. ಇಲ್ಲಿ ಯಾವ ಕಾರಣಕ್ಕಾಗಿ ಆರೋಪಿಗಳು ಸಿಮ್ ಅಧಿಕ ಸಂಖ್ಯೆಯಲ್ಲಿ ಇರಿಸಿಕೊಂಡಿದ್ದರು ಎನ್ನುವ ದಿಕ್ಕಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತನಿಖೆ ನಡೆಯಬೇಕಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.