Advertisement

ಅಬಕಾರಿ ನೀತಿ ಹಣ ಹೋಗಿದ್ದು ಬಿಜೆಪಿಗೆ: ಆಪ್‌ ಆರೋಪ

11:49 PM Mar 23, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ದಿಲ್ಲಿ ಅಬಕಾರಿ ನೀತಿ ಹಗರಣದ “ಕಿಂಗ್‌ಪಿನ್‌’ ಎಂಬ ಜಾರಿ ನಿರ್ದೇಶನಾಲಯ(ಇ.ಡಿ.)ದ ಆರೋಪಕ್ಕೆ ತಿರುಗೇಟು ನೀಡಿರುವ ಆಮ್‌ ಆದ್ಮಿ ಪಾರ್ಟಿ(ಆಪ್‌), “ಈ ಪ್ರಕರಣದ ಹಣದ ಜಾಡು ಪತ್ತೆ ಹಚ್ಚಿದರೆ ಬಿಜೆಪಿ ಕಡೆ ಸಾಗುತ್ತದೆ. ಇದೇ ಕೇಸ್‌ನಲ್ಲಿ ಬಂಧಿತನಾಗಿದ್ದ ಶರತ್‌ ಚಂದ್ರ ರೆಡ್ಡಿ ಚುನಾವಣ ಬಾಂಡ್‌ ಮೂಲಕ ಬಿಜೆಪಿಗೆ ಹಣ ನೀಡಿದ್ದಾನೆ’ ಎಂದು ಆರೋಪಿಸಿದೆ.

Advertisement

ಶನಿವಾರ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪ ಮಾಡಿದ ದಿಲ್ಲಿ ಸಚಿವೆ ಆತಿಶಿ “ಹಗರಣ ನಡೆದಿದೆ ಎನ್ನಲಾಗುತ್ತಿರುವ ಅಬಕಾರಿ ನೀತಿ ಪ್ರಕರಣವನ್ನು ಸಿಬಿಐ ಮತ್ತು ಇ.ಡಿ. 2 ವರ್ಷದಿಂದ ತನಿಖೆ ನಡೆಸುತ್ತಿದೆ. ಈ ಅವಧಿಯಲ್ಲಿ ಹಣಕ್ಕೆ ಸಂಬಂಧಿಸಿದ ವಿಚಾರಣೆ ನಡಿದಿದೆಯೇ? ಹಣ ಎಲ್ಲಿ ಹೋಗಿದೆ? ಆಪ್‌ಗೆ ಸಂಬಂಧಿಸಿದ ಸಚಿವರು ಅಥವಾ ಕಾರ್ಯ ಕರ್ತರಿಂದ ಏನನ್ನೂ ವಶಪಡಿಸಿಕೊಂಡಿಲ್ಲ’ ಎಂದು ಹೇಳಿದರು.

ಬಿಜೆಪಿಗೆ ಹಣ ನೀಡಿದ ರೆಡ್ಡಿ: “ಶರತ್‌ ಚಂದ್ರ ರೆಡ್ಡಿ ಹೇಳಿಕೆ ಆಧರಿಸಿ ಇ.ಡಿ. ಕೇಜ್ರಿವಾಲರನ್ನು ಬಂಧಿಸಿದೆ. ಈ ರೆಡ್ಡಿ ಅರಬಿಂದೋ ಫಾರ್ಮಾ ಕಂಪೆನಿಯ ಮಾಲಕನಾಗಿದ್ದು, ಈ ಕಂಪೆನಿಯು 2021 ಎಪ್ರಿಲ್‌ ಮತ್ತು 2023 ನವೆಂಬರ್‌ ನಡುವೆ 52 ಕೋಟಿ ರೂ. ಚುನಾವಣ ಬಾಂಡ್‌ ಖರೀದಿಸಿದೆ. ಈ ಪೈಕಿ ಶೇ.66ರಷ್ಟು ದೇಣಿಗೆ ಬಿಜೆಪಿಗೆ ಹೋಗಿದೆ. ಉಳಿದ ದೇಣಿಗೆಯನ್ನು ಬಿಆರ್‌ಎಸ್‌ ಮತ್ತು ಟಿಡಿಪಿಗೆ ನೀಡಲಾಗಿದೆ’ ಎಂದು ಆರೋಪಿಸಿದರು.

ರೆಡ್ಡಿ ಹೇಳಿಕೆ ಆಧರಿಸಿ ಕೇಜ್ರಿ ಬಂಧನ: “2022 ನ. 9ರಂದು ಶರತ್‌ ಚಂದ್ರ ರೆಡ್ಡಿಯನ್ನು ವಿಚಾರಣೆಗೆ ಕರೆಸಲಾಯಿತು. ಅರವಿಂದ್‌ ಕೇಜ್ರಿವಾÇರನ್ನು ಭೇಟಿ ಮಾಡಿಲ್ಲ ಮತ್ತು ಪ್ರಕರಣಕ್ಕೂ ಆಪ್‌ಗ್ೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದರು. ಮಾರನೇ ದಿನವೇ ಅವರನ್ನು ಬಂಧಿಸಲಾಯಿತು. 7 ತಿಂಗಳು ಜೈಲಲ್ಲಿ ಕಳೆದ ಬಳಿಕ ರೆಡ್ಡಿ, ಕೇಜ್ರಿವಾಲರನ್ನು ಭೇಟಿಯಾಗಿದ್ದೆ ಮತ್ತು ಅಬಕಾರಿ ನೀತಿ ಸಂಬಂಧ ಮಾತುಕತೆ ನಡೆಸಿದ್ದೆ ಎಂದು ಹೇಳಿಕೆ ಬದಲಿಸಿದರು. ಕೂಡಲೇ ಅವರಿಗೆ ಜಾಮೀನು ದೊರೆಯಿತು. ಹಾಗಿದ್ದರೆ ಹಣ ಎಲ್ಲಿ ಹೋಯಿತು, ಈ ಸಂಬಂದ ವಿಚಾರಣೆ ಏನಾಗಿದೆ,’ ಎಂದು ಆತಿಶಿ ಪ್ರಶ್ನಿಸಿದರು.

ಎಸಿಪಿಯಿಂದ ಕಿರುಕುಳ: ಸಿಸಿಟಿವಿ ದೃಶ್ಯಾವಳಿ ರಕ್ಷಣೆಗೆ ಕೋರ್ಟ್‌ ಸೂಚನೆ
ಕೋರ್ಟ್‌ನಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್‌ ಅಧಿಕಾರಿ ದುರ್ನಡತೆ ತೋರಿದ್ದು, ಅವರನ್ನು ಕೆಲಸದಿಂದ ತೆಗೆದು ಹಾಕಲು ಸೂಚಿಸುವಂತೆ ಬಂಧಿತ ಸಿಎಂ ಕೇಜ್ರಿವಾಲ್‌ ಮನವಿ ಮಾಡಿಕೊಂಡಿದ್ದು, ಈ ಕುರಿತಾದ ಸಿಸಿಟಿವಿ ಕೆಮರಾ ದೃಶ್ಯಾವಳಿಯನ್ನು ಸಂರಕ್ಷಿಸಿಡುವಂತೆ ದಿಲ್ಲಿ ಕೋರ್ಟ್‌ ಆದೇಶಿಸಿದೆ. ಕೇಜ್ರಿವಾಲ್‌ರನ್ನು ಕೋರ್ಟ್‌ಗೆ ಹಾಜರುಪಡಿಸುವ ಮತ್ತು ಭದ್ರತೆಯ ಹೊಣೆ ಹೊತ್ತಿದ್ದ ಎಸಿಪಿ ಎ.ಕೆ.ಸಿಂಗ್‌ ಅವರು ಅನಗತ್ಯವಾಗಿ ಕೋರ್ಟ್‌ನಲ್ಲಿ ಜನರಿಗೆ ಕಿರುಕುಳ ನೀಡಿದ್ದಾರೆ ಮತ್ತು ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌, ಮುಂದಿನ ವಿಚಾರಣೆ ವೇಳೆ ಸಿಸಿಟಿವಿ ದೃಶ್ಯಾವಳಿಯನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚಿಸಿದೆ.

Advertisement

ಕೇಜ್ರಿ ವಿರುದ್ಧ ಮಾಫಿ
ಸಾಕ್ಷಿಯಾಗುವೆ: ಸುಕೇಶ್‌
ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಸಿಎಂ ಕೇಜ್ರಿವಾಲ್‌ ವಿರುದ್ಧ ಸರಕಾರಿ ಸಾಕ್ಷಿಯಾಗಿ ಬದಲಾಗುವೆ ಎಂದು, ಜೈಲಿನಲ್ಲಿರುವ ವಂಚಕ ಸುಕೇಶ್‌ ಚಂದ್ರ ಶೇಖರ್‌ ಹೇಳಿದ್ದಾನೆ. ಶನಿವಾರ ಕೋರ್ಟ್‌ಗೆ ಹಾಜರುಪಡಿಸುವಾಗ ವಂಚಕ ಆರೋಪಿಯು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾನೆ. “ಕೇಜ್ರಿವಾಲ್‌ ವಿರುದ್ಧ ಎಲ್ಲ ಸಾಕ್ಷÂಗಳನ್ನು ನೀಡಿದ್ದೇನೆ. ಸತ್ಯಕ್ಕೆ ಜಯ ಸಿಗಲಿದೆ. ತಿಹಾರ್‌ ಜೈಲಿಗೆ ಕೇಜ್ರಿವಾಲ್‌ರನ್ನು ನಾನು ಸ್ವಾಗತಿಸುತ್ತೇನೆ’ ಎಂದು ಸುಕೇಶ್‌ ಹೇಳಿದ್ದಾನೆ. 200 ಕೋಟಿ ರೂ. ವಂಚನೆ ಪ್ರಕ ರ ಣದಲ್ಲಿ ಸುಕೇಶ್‌ ಸದ್ಯ ತಿಹಾರ್‌ ಜೈಲಿನಲ್ಲಿದ್ದಾನೆ.

ಕವಿತಾ ಕೂಡ ಕಿಂಗ್‌ಪಿನ್‌: ಇ.ಡಿ.
ಕೆ.ಕವಿತಾ ಕೂಡ ಈ ಹಗರಣದ ಕಿಂಗ್‌ಪಿನ್‌ ಹಾಗೂ ಸಹ ಸಂಚು ಕೋರಳು ಎಂದು ಆರೋಪಿಸಿದೆ. ದಿಲ್ಲಿ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಕೆ.ಕವಿತಾ ಅವರನ್ನು ಮತ್ತೆ 3 ದಿನಗಳ ಕಾಲ ಇ.ಡಿ. ವಶಕ್ಕೆ ಶನಿವಾರ ನೀಡಿದೆ. ಇದೇ ವೇಳೆ, ಕವಿತಾ ಅವರು ಜಾಮೀನು ಅರ್ಜಿಯನ್ನು ಕೂಡ ದಾಖಲಿಸಿ ದ್ದಾರೆ.

ಬಂಧನ ಪ್ರಶ್ನಿಸಿ ಹೈ ಮೊರೆ:
ತುರ್ತು ವಿಚಾರಣೆಗೆ ನಕಾರ
ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧ ಇ.ಡಿ. ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್‌ ಅವರು ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತುರ್ತು ವಿಚಾರಣೆ ನಡೆಸುವಂತೆ ಆಪ್‌ ವಕೀಲರ ತಂಡವು ಮನವಿ ಮಾಡಿದೆ. ಆದರೆ ತುರ್ತು ವಿಚಾರಣೆಗೆ ಹೈಕೋರ್ಟ್‌ ನಿರಾಕರಿಸಿದೆ. ಅರವಿಂದ್‌ ಕೇಜ್ರಿವಾಲರನ್ನು ಇ.ಡಿ. ಬಂಧಿಸಿರುವುದು ಮತ್ತು ವಶಕ್ಕೆ ಪಡೆದಿರುವುದು ಕಾನೂನುಬಾಹಿರವಾಗಿದೆ. ಕೂಡಲೇ ಅವರ ಬಿಡುಗಡೆಗೆ ಆದೇಶಿಸಬೇಕು. ಆಡಳಿತ ಪಕ್ಷ(ಬಿಜೆಪಿ)ವನ್ನು ಟೀಕಿಸುತ್ತಿರುವುದರಿಂದ ಕೇಂದ್ರದ ಅಧೀನದಲ್ಲಿರುವ ಇ.ಡಿ. ಯನ್ನು ಕೇಜ್ರಿವಾಲರ ವಿರುದ್ಧ ಬಳಸಿಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಆಪ್‌ ಕಚೇರಿ ಸೀಲ್‌: ಆತಿಶಿ, ಸೌರಭ್‌ ಆಕ್ರೋಶ
ದಿಲ್ಲಿಯ ಆಪ್‌ ಕಚೇರಿಯನ್ನು ಎಲ್ಲ ಕಡೆಯಿಂದಲೂ ಸೀಲ್‌ ಮಾಡಲಾಗಿದೆ. ಈ ಬಗ್ಗೆ ಚುನಾವಣ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಚಿವರಾದ ಆತಿಶಿ ಮತ್ತು ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ. ಲೋಕ ಸಭೆ ಚುನಾವಣೆ ವೇಳೆ ರಾಷ್ಟ್ರೀಯ ಪಕ್ಷ ವೊಂದರ ಕಚೇರಿಗೆ ಪ್ರವೇಶ ನಿರಾಕರಿಸಿದರೆ ಹೇಗೆ, ಇದು ಸಂವಿಧಾನದ ಸಮಾನ ಅವಕಾಶ ಒದಗಿಸುವ ನೀತಿಗೆ ವಿರುದ್ಧವಾಗಿದೆ. ಕಚೇರಿಯ ನಾಲ್ಕೂ ದಿಕ್ಕುಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಯಾರೊಬ್ಬರಿಗೂ ಒಳ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಚುನಾವಣ ಆಯೋಗಕ್ಕೆ ದೂರು ನೀಡಲಿದ್ದೇವೆ ಎಂದಿದ್ದಾರೆ.

ಆಪ್‌ ಶಾಸಕನ ಮನೆ ಮೇಲೆ ಐಟಿ ದಾಳಿ: ದಿಲ್ಲಿ ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್‌ ಬಂಧನದ ಬೆನ್ನಲ್ಲೇ, ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐ.ಟಿ. ಅಧಿಕಾರಿಗಳು ಆಪ್‌ ಶಾಸಕ ಗುಲಾಬ್‌ ಯಾದವ್‌ ಹಾಗೂ ಸಹಚರರಿಗೆ ಸೇರಿದ ಆಸ್ತಿ ಪಾಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಘೂಮನ್‌ಹೆಡಾದ ಯಾದವ್‌ ನಿವಾಸ ಸೇರಿದಂತೆ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೇಜ್ರಿವಾಲ್‌ ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದು, ದೇಶದಲ್ಲಿ ಕ್ರಾಂತಿ ಸೃಷ್ಟಿಸಲಿದ್ದಾರೆ. ದೇಶದಲ್ಲಿ ಸರ್ವಾಧಿಕಾರ ಜಾರಿಗೆ ತರಲು ಬಿಜೆಪಿ ಹೊರಟಿದೆ. ವಿಪಕ್ಷಗಳು ಒಂದಾಗದಿದ್ದರೆ ದೇಶ ನಾಶ ವಾ ಗಲಿದೆ.
-ಭಗವಂತ್‌ ಮಾನ್‌, ಪಂಜಾಬ್‌ ಸಿಎಂ

ಕೇಜ್ರಿವಾಲ್‌ ವಿಷಯದಲ್ಲಿ ರಾಹುಲ್‌ ಗಾಂಧಿ ದ್ವಿಮುಖ ನೀತಿ ಹೊಂದಿದ್ದಾರೆ. ತೆಲಂಗಾಣದಲ್ಲಿ ಕೇಜ್ರಿವಾಲ್‌ ಅವರನ್ನು “ಭ್ರಷ್ಟ’ ಎಂದು ಜರೆದಿದ್ದ ಅವರು, ದಿಲ್ಲಿಯಲ್ಲಿ ಕೇಜ್ರಿವಾಲ್‌ ಕುಟುಂಬವನ್ನು ಸಂತೈಸುತ್ತಾರೆ. ರಾಹುಲ್‌ ಅಸಲಿ ಮುಖ ಯಾವುದು?
-ಸ್ಮತಿ ಇರಾನಿ, ಕೇಂದ್ರ ಸಚಿವೆ

 

Advertisement

Udayavani is now on Telegram. Click here to join our channel and stay updated with the latest news.

Next