Advertisement

ದಟ್ಟ ಕಾಡಿನಲ್ಲಿ 30 ಮಂದಿ ಬೇಟೆಗಾರರು!

11:05 AM Oct 11, 2017 | |

ಮಂಗಳೂರು: ಇನ್ನು ಮುಂದೆ ಪಶ್ಚಿಮಘಟ್ಟ ಕಾಡುಗಳಿಗೆ ಪರಿಸರಾಸಕ್ತರು ಚಾರಣಕ್ಕೆ ಹೋಗುವುದಾದರೆ ಎಚ್ಚರಿಕೆವಹಿಸುವುದು ಒಳ್ಳೆಯದು. ಕಾರಣ ಇಲ್ಲಿ ಕಾಡು ಪ್ರಾಣಿ ಗಳಿಗಿಂತಲೂ, ಬೇಟೆಗಾರರ ಅಪಾಯವೇ ಹೆಚ್ಚು! 30ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಬೇಟೆಗಾರರನ್ನು ಕಂಡ ಮಂಗಳೂರಿನ ಚಾರಣಿಗರ ತಂಡ ಚಾರಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ ಘಟನೆ ನಡೆದಿದೆ. “ಸಹ್ಯಾದ್ರಿ ಸಂಚಯ’ದ ಐವರು ಪರಿಸರಾಸಕ್ತರು ಅ. 8ರಂದು ಚಿಕ್ಕಮಗಳೂರಿನ ಮೂಡಿಗೆರೆ ಅರಣ್ಯ ವಲಯದ ಬಾಳೂರು ಮೀಸಲು ಅರಣ್ಯ ವಲಯದ “ಒಂಬತ್ತು ಗುಡ್ಡ’ಕ್ಕೆ ಚಾರಣ ಹೋಗಿದ್ದರು. ಕಾಡಿನಲ್ಲಿ ಸುತ್ತಾಡುತ್ತ ಪ್ರಕೃತಿ ಸೌಂದರ್ಯ ಕಣ್ತುಂಬಿ ಕೊಳ್ಳುತ್ತ ಸಾಗುತ್ತಿದ್ದವರಿಗೆ ಕಂಡದ್ದು ಬೆಚ್ಚಿ ಬೀಳುವ ದೃಶ್ಯ. ಕಾರಣ ಬರೋಬ್ಬರಿ 30 ಮಂದಿ ಶಸ್ತ್ರಸಜ್ಜಿತ ಬೇಟೆಗಾರರು ಅವರಿಗೆದುರಾಗಿದ್ದರು! 

Advertisement

ಬೇಟೆಗಾರರೆಲ್ಲ ಕತ್ತಿ, ಕೋವಿ ಹಿಡಿದ್ದರು. ಅವರಿಂದ ಹೇಗಾದರೂ ತಪ್ಪಿಸಿ ಕೊಳ್ಳುವ ಯೋಜನೆ ಅವರದ್ದಾಗಿತ್ತು. ಏನಾದರೂ ಪ್ರಶ್ನಿಸಿದ್ದರೆ, ಅಪಾಯ ಕಟ್ಟಿಟ್ಟದ್ದಾಗಿತ್ತು. ಏಕೆಂದರೆ ಇದೇ ರೀತಿ, ಚಾರಣಕ್ಕೆ ಹೋಗಿ ಬೇಟೆಗಾರರ ಕೈಗೆ ಸಿಕ್ಕು ಗುಂಡಿಗೆ ಬಲಿಯಾದ ಪ್ರಕರಣ ಹಿಂದೆ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ಕಾಡು, ಪರಿಸರ, ಗಿಡ-ಮರಗಳ ರಕ್ಷಣೆ ಎನ್ನುತ್ತ ಕಾಡು-ಬೆಟ್ಟಗಳ ನಡುವೆ ಸುತ್ತಾಡಿ ಬರುವ ಈ ಪರಿಸರಾಸಕ್ತ ತಂಡಕ್ಕೆ ಈ ರೀತಿ ಹಾಡಹಗಲೇ ಕೋವಿಯನ್ನು ಹೆಗಲಿಗೇರಿಸಿಕೊಂಡು ಅರಣ್ಯದಲ್ಲಿ ಬೇಟೆ ಗಾರರು ಸುತ್ತಾಡುತ್ತಿರುವ ದೃಶ್ಯ ಆತಂಕ ಸೃಷ್ಟಿಸಿತ್ತು.

ಪ್ರಕರಣ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ ಚಾರಣ ತಂಡದ ದಿನೇಶ್‌ ಹೊಳ್ಳ ಅವರು, ಕಾಡಿನ ಮಧ್ಯೆ ದಿಢೀರನೆ ಎದುರಾದ ಬೇಟೆಗಾರರ ತಂಡ ಕಂಡು ದಿಗ್ಭ್ರಮೆಯಾಗಿತ್ತು. ಇಂತಹ ಸ್ಥಿತಿ ಹಿಂದೆಂದೂ ಕಂಡಿರಲಿಲ್ಲ. ಬರೋಬ್ಬರಿ 30 ಜನ ಕೈಯಲ್ಲಿ ಕೋವಿ, ಕತ್ತಿ ಹೊಂದಿದ್ದರು. ಯಾರ ಭಯವೂ ಇಲ್ಲದೆ, ಅರಣ್ಯ ಇಲಾಖೆಗೆ ಸುಳಿವೂ ಇಲ್ಲದಂತೆ ರಾಜಾರೋಷವಾಗಿ ಬೇಟೆಗೆ ಮುಂದಾಗಿದ್ದರು. ಇದು ನಮ್ಮ ವ್ಯವಸ್ಥೆ  ಬಗ್ಗೆ ಆಕ್ರೋಶ ಮೂಡುವಂತೆ ಮಾಡಿತು. ಆ ಕ್ಷಣದಲ್ಲಿ ನಾವೆಲ್ಲ ಅಸಹಾಯಕರಾಗಿದ್ದರಿಂದ ಏನೂ ಮಾಡುವಂತಿರಲಿಲ್ಲ ಎಂದು ಹೇಳುತ್ತಾರೆ. 

ಬೇಟೆಗಾರರನ್ನು ಸ್ವಲ್ಪ ಹೊತ್ತು ಹಿಂಬಾಲಿಸಿದಾಗ ಅವರು ತಮ್ಮ ಪಿಕಪ್‌ ವಾಹನಗಳನ್ನು ಅಡವಿಯ ಕಣಿವೆ ಪ್ರದೇಶದಲ್ಲಿ ಇಟ್ಟು ಬೇಟೆಗೆ ಬಂದಿರುವ ಸಂಗತಿ ಗೊತ್ತಾಯಿತು. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಕಾಡಿನೊಳಗೆ ಬೇಟೆಗಾರರು ರಾಜಾರೋಷವಾಗಿ ಬೇಟೆ ಯಾಡುತ್ತಿದ್ದಾರೆ ಎಂದರೆ ನಿಜಕ್ಕೂ ಆತಂಕದ ವಿಚಾರ. ಅಷ್ಟೇ ಅಲ್ಲ, ಆ ಗುಂಪಿನಲ್ಲಿ ಮಕ್ಕಳು ಕೂಡ ಇದ್ದರು. ಕಳೆದ ವರ್ಷ ಘಾಟಿ ಪ್ರದೇಶದಲ್ಲಿ ನಾವು ಚಾರಣ ಹೋದ ಸಮಯದಲ್ಲಿ ಸುಮಾರು 24ರಿಂದ 25ರಷ್ಟು ಕಾಡು ಕೋಣ ಗಳನ್ನು ಕಂಡಿದ್ದೆವು. ಆದರೆ, ಈ ಬಾರಿ ನಮಗೆ 8-9 ಕಾಡುಕೋಣಗಳು ಮಾತ್ರ ಕಾಣಸಿಕ್ಕಿವೆ. ಈ ಮೂಲಕ ಘಾಟಿ ಪ್ರದೇಶದಲ್ಲಿ ಬೇಟೆಯಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದಕ್ಕೆ ಇಂತಹ ಘಟನೆಗಳು ಪುಷ್ಟಿ ನೀಡು ವಂತಿವೆ. ಹೀಗೆ ಆದರೆ, ಮುಂದೆ ಪಶ್ಚಿಮ ಘಟ್ಟದಲ್ಲಿ ಅಳಿದುಳಿದಿರುವ ವನ್ಯಜೀವಿಗಳ ಸಂತತಿ ಗತಿಯೇನು?’ ಎಂದು ಅವರು ಪ್ರಶ್ನಿಸುತ್ತಾರೆ.

24 ವರ್ಷದ ಚಾರಣದಲ್ಲಿ ಮೊದಲ ಅನುಭವ!
“ಸಹ್ಯಾದ್ರಿ ಸಂಚಯದ ತಂಡ ಕಳೆದ 24 ವರ್ಷಗಳಿಂದ ಪಶ್ಚಿಮ ಘಟ್ಟದ ವಿವಿಧ ತಾಣಗಳಿಗೆ ಚಾರಣ ಹೋಗುತ್ತಿದ್ದೇವೆ. ರಾತ್ರಿ ವೇಳೆ ಬೇಟೆಯಾಡುವ ವಿಚಾರ ಕೇಳಿದ್ದೆವು. ಆದರೆ ಎಲ್ಲೂ ನೋಡಿರಲಿಲ್ಲ. ವನ್ಯಜೀವಿಗಳ ರಕ್ಷಣೆಗೆಂದು ಸರಕಾರ ಬಗೆ ಬಗೆಯ ಹೇಳಿಕೆ ನೀಡುತ್ತಿದೆ. ಆದರೆ ಇದಾವುದೂ ಲೆಕ್ಕವಿಲ್ಲದಂತೆ ಬೇಟೆಗಾರರು ಹಗಲೇ ಸುತ್ತಾಡುತ್ತಿದ್ದಾರೆ. 
ದಿನೇಶ್‌ ಹೊಳ್ಳ , ಸಹ್ಯಾದ್ರಿ ಸಂಚಯದ ಪ್ರಮುಖರು

Advertisement

ಅರಣ್ಯ ಸಚಿವರ ಗಮನಕ್ಕೆ
ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಚಾರಣ ಹೋಗಿದ್ದಾಗ ಹಾಡಹಗಲೇ ವನ್ಯಜೀವಿಗಳ ಬೇಟೆಯಾಡಲು 30 ಮಂದಿಯ ತಂಡವೊಂದು ಎದುರಾಗಿದ್ದ ಘಟನೆ ಬಗ್ಗೆ ಸಹ್ಯಾದ್ರಿ ಸಂಚಯದ ತಂಡದ ಸದಸ್ಯರು ಅರಣ್ಯ ಸಚಿವ ಬಿ. ರಮಾನಾಥ ರೈ ಅವರ ಗಮನಕ್ಕೆ ತಂದಿದ್ದಾರೆ. ಸಚಿವ ರೈ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಜತೆಗೆ, ಅರಣ್ಯ ಇಲಾಖೆಯ ಬಹುತೇಕ ಅಧಿಕಾರಿಗಳಿಗೂ ಈ ವಿಷಯದ ಗಂಭೀರತೆಯನ್ನು ತಿಳಿಸಲಾಗಿದೆ. ಈ ಬಗ್ಗೆ ಅರಣ್ಯ ಸಚಿವರು ಸೇರಿದಂತೆ ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಜರಗಿಸದೆ ಹೋದರೆ, ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಪರಿಸರಾಸಕ್ತರು ಚಾರಣ ಕೈಗೊಳ್ಳುವುದಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗುವುದು ಗ್ಯಾರಂಟಿ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next