ಗುರುಗ್ರಾಮ್: ದೇವರ ಪ್ರಸಾದ ಎಂದು ವ್ಯಕ್ತಿಯೊಬ್ಬ ಕೊಟ್ಟ ಹಣ್ಣಿನ ರಸವನ್ನು ಕುಡಿದ ಸುಮಾರು 25 ಮಂದಿ ಮೂರ್ಛೆ ಹೋಗಿರುವ ಘಟನೆ ಗುರುಗ್ರಾಮ್ ನ ಫಾರುಖ್ ನಗರ್ ದ ಬುಧೋ ಮಾತಾ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಈಶ್ವರಪ್ಪ, ಸಂತೋಷ್ ಭೇಟಿಯಾಗಿದ್ದಾರೆ: ಗ್ರಾ.ಪಂ ಅಧ್ಯಕ್ಷರ ಸ್ಫೋಟಕ ಹೇಳಿಕೆ
ಮೂರ್ಛೆ ಹೋದವರಲ್ಲಿ ಬಹುತೇಕ ಮಹಿಳೆಯರು, ಮಕ್ಕಳು ಸೇರಿದ್ದಾರೆ. 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಬುಧವಾರ (ಏ.13) ಡಿಸ್ ಚಾರ್ಜ್ ಮಾಡಲಾಗಿದೆ. ಸ್ಥಳದಲ್ಲಿ ಯಾವುದೇ ದರೋಡೆ, ಕಳ್ಳತನ ನಡೆದ ಬಗ್ಗೆ ಈವರೆಗೆ ವರದಿಯಾಗಿಲ್ಲ. ಆದರೆ ಭಕ್ತರಿಗೆ ಹಣ್ಣಿನ ರಸ ಕುಡಿಯಲು ಕೊಟ್ಟ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಯತ್ನಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 328, 326, 120 ಬಿ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಫಾರುಖ್ ನಗರ್ ಪೊಲೀಸ್ ಠಾಣಾಧಿಕಾರಿ ಸುನೀಲ್ ಬೇನಿವಾಲ್ ತಿಳಿಸಿದ್ದಾರೆ. ಬುಧೋ ಮಾತಾ ದೇವಾಲಯದ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಭಕ್ತರಿಗೆ ದೇವರ ಪ್ರಸಾದ ಎಂದು ಹೇಳಿ ಹಣ್ಣಿನ ರಸ ಕುಡಿಯಲು ಕೊಟ್ಟಿರುವುದಾಗಿ ವರದಿ ಹೇಳಿದೆ.
ವ್ಯಕ್ತಿಯೊಬ್ಬ ನಮ್ಮ ಬಳಿ ಬಂದು ಹಣ್ಣಿನ ರಸ ಕುಡಿಯಿರಿ ಎಂದು ಕೊಟ್ಟಿದ್ದ. ಅದನ್ನು ಕುಡಿದ ಸ್ವಲ್ಪ ಹೊತ್ತಿನಲ್ಲಿಯೇ ನಾವು ಮೂರ್ಛೆ ಹೋಗಿದ್ದೇವು ಎಂದು ದೆಹಲಿಯ ನಿವಾಸಿ ಸುಹೈಲ್ ಕುಮಾರ್ ತಿಳಿಸಿದ್ದಾರೆ.