Advertisement

ಬಿಸಿಯೂಟ ಸೇವಿಸಿ 22 ಮಕ್ಕಳು ಅಸ್ವಸ್ಥ

06:44 AM Jan 29, 2019 | |

ಮಹದೇವಪುರ: ಬಿಸಿಯೂಟ ಸೇವಿಸಿ 22 ಮಕ್ಕಳು ಅಸ್ವಸ್ಥರಾದ ಘಟನೆ ಬೆಂಗಳೂರು ಪೂರ್ವ ತಾಲೂಕಿನ ನಿಂಬೆಕಾಯಿಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

Advertisement

ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳು ಪುಳಿಯೋಗರೆ-ಮೊಸರು, ಪಾಯಸ, ಉಪ್ಪಿನಕಾಯಿ ಸೇವಿಸಿದ್ದರು. ಊಟ ಆದ 30 ನಿಮಿಷದ ನಂತರ 22 ಮಕ್ಕಳು ಅಸ್ವಸ್ಥರಾಗಿದ್ದು, 10 ಮಕ್ಕಳು ವಾಂತಿ, ಹೊಟ್ಟೆ ನೋವಿನಿಂದ ತೀವ್ರ ಬಳಲಿದ್ದಾರೆ. ಕೂಡಲೆ ಶಾಲೆ ಶಿಕ್ಷಕರು ಎಲ್ಲ ಮಕ್ಕಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಕ್ಕಳು ಅಸ್ವಸ್ಥರಾದ ಕೋಡಲೇ ಎಚ್ಚೆತ್ತುಕೊಂಡ ಶಿಕ್ಷಕರು, ಗ್ರಾಮಸ್ಥರ ನೆರವಿನಿಂದ ಎಲ್ಲಾ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 22 ಮಕ್ಕಳ ಪೈಕಿ ವಾಂತಿ ಮಾಡಿಕೊಂಡು, ತೀವ್ರ ಅಸ್ವಸ್ಥರಾಗಿದ್ದ 10 ಮಕ್ಕಳು ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ. ಈಗಾಗಲೇ ಸಿಸಿ ಕ್ಯಾಮೆರಾ ಫ‌ುಟೇಜ್‌ ಸಂಗ್ರಹಿಸಿದ್ದು, ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೂರ್ವ ತಾಲೂಕು ಬಿಇಒ ಸಲೀಂ ಪಾಷ ಹೇಳಿದರು.

ನಿಂಬೆಕಾಯಿಪುರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 25 ವಿದ್ಯಾರ್ಥಿಗಳು ಆಹಾರ ಸೇವಿಸಿದ್ದು, 10 ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಉಳಿದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಅಲ್ಲದೆ ಈ ಶಾಲೆ ಮಕ್ಕಳು ಸೇವಿಸಿದ ಆಹಾರವನ್ನೇ ಅಕ್ಕಪಕ್ಕದ ಶಾಲೆಗಳಿಗೂ ಪೂರೈಸಲಾಗಿದೆ. ಆದರೆ, ಬೇರೆ ಯಾವ ಶಾಲೆಯಲ್ಲೂ ಅವಘಡ ಸಂಭವಿಸಿಲ್ಲ.

ಆಹಾರ ಪರೀಕ್ಷೆಯ ವರದಿ ಬಂದ ನಂತರ ಮಕ್ಕಳು ಅಸ್ಪಸ್ಥರಾಗಲು ಕಾರಣವೇನು ಎಂದು ತಿಳಿಯಲಿದೆ ಎಂದು ಬಿಇಒ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜು ಹಾಗೂ ಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣು, ಶಾಲೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಪೋಷಕರಿಗೆ ಧೈರ್ಯ ಹೇಳಿದರು.

Advertisement

ಮಕ್ಕಳು ಅಪಾಯದಿಂದ ಪಾರು
ಹೊಸಕೋಟೆ:
ಸಮೀಪದ ನಿಂಬೆಕಾಯಿಪುರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿ, ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಒಂದನೇ ತರಗತಿಯ ದೀಕ್ಷಾ, ಇತಿಶ್ರೀ, ಚಂದ್ರಿಕಾ, 2ನೇ ತರಗತಿಯ ದಿವ್ಯಾ,

ಕೌಶಿಕ್‌, 4ನೇ ತರಗತಿಯ ಪ್ರಶಾಂತ್‌, ಪ್ರಿಯಾ, 5ನೇ ತರಗತಿಯ ಭಾರ್ಗವಿ, ಬೀಬಿಜಾನ್‌, ನಂದಿತಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 18 ವಿದ್ಯಾರ್ಥಿಗಳಿಗೆ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಡಾ.ನಾಗರಾಜ್‌ ಮಾಹಿತಿ ನೀಡಿದರು. ಗ್ರಾಮದ ಮುಖಂಡರು, ಆವಲಹಳ್ಳಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಕ್ಕಳು ಚೇತರಿಸಿಕೊಂಡಿದ್ದಾರೆ. ಮಕ್ಕಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಮಂಡೂರು ಗ್ರಾ.ಪಂ ಭರಿಸಲಿದೆ.
-ವೇಣು, ಗ್ರಾ.ಪಂ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next