Advertisement

Chikkaballapur: ಜಿಲ್ಲೆಯಲ್ಲಿ 181 ಮಕ್ಕಳು ಶಾಲೆಯಿಂದ ಹೊರಗೆ!

01:25 PM Nov 21, 2023 | Team Udayavani |

ಚಿಕ್ಕಬಳ್ಳಾಪುರ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಕಳೆದ ಅ.26 ರಿಂದ ನ.9 ರ ವರೆಗೂ ಜಿಲ್ಲೆಯಲ್ಲಿ ನಡೆಸಿದ ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಗಣತಿಯಲ್ಲಿ ಬರೋಬ್ಬರಿ 181 ಮಂದಿ ವಿದ್ಯಾರ್ಥಿಗಳು ಹೊರಗೆ ಉಳಿದಿರುವುದು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.

Advertisement

ಸಮಗ್ರ ಶಿರ್ಕಾಟಕ ಯೋಜನೆಯಡಿ 2023-24ನೇ ಸಾಲಿನಲ್ಲಿ ಶಾಲೆಯಿಂದ ಹೊರಗೆ ಉಳಿದ 1ರಿಂದ 10ನೇ ತರಗತಿ ಮಕ್ಕಳನ್ನು ಗುರುತಿಸಲು ಶಾಲಾ, ಕ್ಲಸ್ಟರ್‌, ಜಿಲ್ಲಾ ಮಟ್ಟದಲ್ಲಿ ವಿಶೇಷ ಗಣತಿ ನಡೆದಿದ್ದು ಈ ವೇಳೆ ಜಿಲ್ಲೆಯಲ್ಲಿ 181ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ದೃಢಪಟ್ಟಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿಗಾಗಿ ಇಲಾಖೆ ಪ್ರತಿ ತಾಲೂಕಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದು, ವಿಶೇಷವಾಗಿ ವಿದ್ಯಾವಾಹಿನಿ ಆ್ಯಪ್‌ ಮೂಲಕ ಮಕ್ಕಳ ಪತ್ತೆಗೆ ವಿಶೇಷ ಅಭಿಯಾನ ನಡೆಸಲಾಗಿತ್ತು. ಜಿಲ್ಲೆಯಲ್ಲಿ 181 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಹೆಚ್ಚು: ಜಿಲ್ಲಾ ಕೇಂದ್ರ ಹೊಂದಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಇಡೀ ಜಿಲ್ಲೆಯ ಪೈಕಿ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ಕಂಡು ಬಂದಿದ್ದು, 181 ಮಕ್ಕಳ ಪೈಕಿ ಚಿಕ್ಕಬಳ್ಳಾಪುರದಲ್ಲಿ 51 ಮಕ್ಕಳನ್ನು ಗುರುತಿಸಲಾಗಿದೆ. ನಂತರದಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ಬರೋಬ್ಬರಿ 40 ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. 3ನೇ ಸ್ಥಾನದಲ್ಲಿ ಅತಿ ಚಿಕ್ಕ ತಾಲೂಕಾದ ಗುಡಿಬಂಡೆಯಲ್ಲಿ 37 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಚಿಂತಾಮಣಿಯಲ್ಲಿ ಒಟ್ಟು 29 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ.

12 ಮಕ್ಕಳು ಮರಳಿ ಶಾಲೆಗೆ: ಶಿಕ್ಷಣ ಇಲಾಖೆ ಸಮೀಕ್ಷೆ ಮೂಲಕ 181 ಮಕ್ಕಳನ್ನು ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳೆಂದು ಗುರುತಿಸಿದ್ದು ಆ ಪೈಕಿ 12 ಮಕ್ಕಳನ್ನು ಮರಳಿ ಶಾಲೆಗೆ ಕರೆ ತಂದು ದಾಖಲಿಸಿಕೊಂಡಿದೆ. ಆ ಪೈಕಿ ಚಿಕ್ಕಬಳ್ಳಾಪುರದಲ್ಲಿ 8, ಚಿಂತಾಮಣಿ 3, ಶಿಡ್ಲಘಟ್ಟದಲ್ಲಿ 1 ವಿದ್ಯಾರ್ಥಿಯನ್ನು ಮಾತ್ರ ಶಾಲೆಗೆ ಸೇರಿಸಲಾಗಿದೆ. ಉಳಿದಂತೆ ಬಾಗೇಪಲ್ಲಿ, ಗೌರಿಬಿದನೂರು, ಗುಡಿಬಂಡೆ ತಾಲೂಕುಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಸಾಧ್ಯವಾಗಿಲ್ಲ.

ಈ ಬಾರಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗೆ: ಹಿಂದಿನ ಹಲವು ವರ್ಷಗಳಿಗೆ ಹೋಲಿಸಿಕೊಂಡರೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು 181 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ಸಮೀಕ್ಷೆಯಲ್ಲಿ ಗುರುತಿಸಿರುವುದು ಶಿಕ್ಷಣ ಇಲಾಖೆ ಮಾತ್ರವಲ್ಲದೇ, ಸಾರ್ವಜನಿಕ ವಲಯದಲ್ಲಿ ತೀವ್ರ ದಿಗ್ಭ್ರಮೆ ಮೂಡಿಸಿದೆ. 181 ಮಕ್ಕಳ ಪೈಕಿ 12 ಮಕ್ಕಳನ್ನು ಮಾತ್ರ ಮರಳಿ ಶಾಲೆಗೆ ತರುವ ನಿಟ್ಟಿನಲ್ಲಿ ಯಶಸ್ಸು ಸಾಧಿಸಿರುವ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಇನ್ನೂ 169 ಮಕ್ಕಳನ್ನು ಪತ್ತೆ ಮಾಡಿ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಹಲವು ಕಾರ್ಯ ಯೋಜನೆಗಳನ್ನು ರೂಪಿಸಿ ಮನೆ ಮನೆ ಭೇಟಿ ಮಾಡಿ ಮಕ್ಕಳನ್ನು ಪತ್ತೆ ಮಾಡಿ ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಸೇರಿಸುವ ಕಾರ್ಯ ಮಾಡಬೇಕಿದ್ದು, ಇದಕ್ಕೆ ಜಿಲ್ಲೆಯ ಸಂಘ ಸಂಸ್ಥೆಗಳು, ಪೋಷಕರು ಕೂಡ ಶಿಕ್ಷಣ ಇಲಾಖೆಗೆ ಸಹಕಾರ ಕೊಡಬೇಕಿದೆ.

Advertisement

ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹೇಳಿದ್ದೇನು? : ಜಿಲ್ಲೆಯಲ್ಲಿ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 181 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಉಳಿದಿದ್ದು ಆ ಪೈಕಿ ಸಮೀಕ್ಷೆಯ ಅಭಿಯಾನದ ವೇಳೆ 12 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ. ಉಳಿದಂತೆ ಶಾಲೆಯಿಂದ ಹೊರಗೆ ಉಳಿದಿರುವ 169 ಮಕ್ಕಳನ್ನು ಮ್ಯಾಪಿಂಗ್‌ ಮಾಡಿ ಮರಳಿ ಶಾಲೆಗೆ ತರುವ ಕಾರ್ಯವನ್ನು ಇಲಾಖೆ ಮಾಡಲಿದೆ. ಈ ನಿಟ್ಟಿನಲ್ಲಿ ಇಲಾಖೆ ವಿಶೇಷ ಕಾರ್ಯ ಯೋಜನೆ ರೂಪಿಸಿ ಬಿಆರ್‌ಸಿ, ಸಿಆರ್‌ಸಿಗಳಿಗೆ ಉಸ್ತುವಾರಿ ವಹಿಸಿ ಮಕ್ಕಳನ್ನು ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಪತ್ತೆ ಮಾಡಲಾಗುವುದು. ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಕುಟುಂಬಗಳಲ್ಲಿ ಏನಾದರೂ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆ ಇದ್ದರೆ ಗುರುತಿಸಿ ಅವರನ್ನು ಇಲಾಖೆ ಕೆಜಿಬಿವಿ ಶಾಲೆಗೆ ಅಥವ ಹಾಸ್ಟಲ್‌ಗೆ ಸೇರಿಸುವ ವ್ಯವಸ್ಥೆ ಮಾಡುತ್ತೇವೆ. ಮನೆ ಮನೆ ಸಮೀಕ್ಷೆ ಮಾಡುವ ಮೂಲಕ ಪೋಷಕರ ಮನವೊಲಿಸಿ ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸಿಕೊಳ್ಳುತ್ತೇವೆಂದು ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಬೈಲಾಂಜನಪ್ಪ ಸೋಮವಾರ ಉದಯವಾಣಿಗೆ ತಿಳಿಸಿದರು.

ಶಾಲೆ ಬಿಡಲು ಕಾರಣಗಳೇನು?; ಮನೆಗಳಲ್ಲಿನ ವಯೋ ವೃದ್ಧರನ್ನು ನೋಡಿಕೊಳ್ಳಲು ತಮ್ಮ ಮಕ್ಕಳನ್ನು ಪೋಷಕರು ಶಾಲೆಗೆ ಕಳಿಸದೇ ಮನೆಯಲ್ಲಿ ಬಿಡುತ್ತಾರೆ. ಬಾಲ್ಯದಲ್ಲಿಯೆ ಮಕ್ಕಳನ್ನು ದುಡಿಮೆ ದೂಡುವುದರಿಂದಲೂ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್‌ ಸೌಕರ್ಯ ಇಲ್ಲದೇ ಇರುವುದು. ಜೊತೆಗೆ ಆರ್ಥಿಕ, ಸಾಮಾಜಿಕ ಕಾರಣಗಳಿಂದಲೂ ಕೂಡ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುತ್ತಿರುವುದನ್ನು ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆ ಗಮನಿಸಿದೆ.

– ಕಾಗತಿ ನಾಗರಾಜಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next