Advertisement

ನೀ ಕೇಳಿಸಿದ್ದೇ ನಿಜವಾದ ಯುಗಾದೀನೋ ತಮ್ಮಾ ಅಂದಿದ್ದರು ಬೇಂದ್ರೆ!

01:25 PM Apr 14, 2020 | |

ನೀವು ಗಮನಿಸಿರಬಹುದು: ಯುಗಾದಿ ಹಬ್ಬದ ದಿನ ರೇಡಿಯೋದ ಎಲ್ಲ ಸ್ಟೇಷನ್‌ಗಳಲ್ಲಿ, ಟಿ.ವಿಯ ಎಲ್ಲಾ ಚಾನೆಲ್‌ಗ‌ಳಲ್ಲಿ “ಯುಗ ಯುಗಾದಿ ಕಳೆದರೂ…’ ಹಾಡು ಪದೇಪದೆ ಪ್ರಸಾರವಾಗುತ್ತದೆ. ವರಕವಿ ಬೇಂದ್ರೆಯವರು ಬರೆದ ಈ ಗೀತೆಯನ್ನು ಸಿನಿಮಾಕ್ಕೆ ಅಳವಡಿಸಿದ ಸಂದರ್ಭವಿದೆಯಲ್ಲ; ಅದು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿ ಹೇಳುತ್ತದೆ.

Advertisement

ಅಂದಹಾಗೆ, “ಯುಗ ಯುಗಾದಿ ಕಳೆದರೂ….’ಗೀತೆ ಬಳಕೆಯಾಗಿರುವುದು “ಕುಲವಧು’ ಚಿತ್ರದಲ್ಲಿ. ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧರಿಸಿದ ಈ ಸಿನಿಮಾ ತೆರೆ ಕಂಡದ್ದು 1963ರಲ್ಲಿ. ಎ.ಸಿ. ನರಸಿಂಹ ಎಂಬುವರು ನಿರ್ಮಿಸಿದ ಈ ಚಿತ್ರವನ್ನು ನಿರ್ದೇಶಿಸಿದವರು ಟಿ.ವಿ. ಸಿಂಗ್‌ ಠಾಕೂರ್‌. ಹದಿಹರೆಯದ ಸಮಸ್ಯೆಗಳು, ಪ್ರೀತಿ-ಪ್ರೇಮಿಗಳ ಸೆಳೆತ, ವಿವಾಹ ಬಂಧನ, ಹಿರಿಯರ ಕಟ್ಟುಪಾಡುಗಳಿಂದ ನವದಂಪತಿಗೆ ಬಂದೆರಗುವ ತೊಡಕುಗಳು- ಇಂಥ ಕಥಾವಸ್ತು ಹೊಂದಿದ್ದ, “ಕುಲವಧು’ವಿನಲ್ಲಿ ಡಾ. ರಾಜ್‌, ಲೀಲಾವತಿ, ಅಶ್ವತ್ಥ್ ಮುಂತಾದವರ ಅಭಿನಯವಿತ್ತು. ಈ ಸಿನಿಮಾ, ಎಲ್ಲರ ನಿರೀಕ್ಷೆ ಮೀರಿ ಹಿಟ್‌ ಆಯಿತು.

“ಕುಲವಧು’ ಕಥೆಯಲ್ಲಿ, ಯುಗಾದಿ ಹಬ್ಬದ ಆಚರಣೆಯ ಸನ್ನಿವೇಶವಿತ್ತು. ಆ ಸಂದರ್ಭಕ್ಕೆ ಬೇಂದ್ರೆಯವರ “ಯುಗ ಯುಗಾದಿ ಕಳೆದರೂ..’ ಗೀತೆ ಬಳಸಬೇಕೆಂದು ನಿರ್ಧಾರವಾಯಿತು. (ಈ ಚಿತ್ರದಲ್ಲಿಯೇ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರ “ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ…’, ವಿ. ಸೀ. ಅವರ “ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು..’ ಪದ್ಯಗಳನ್ನು ಬಳಸಲಾಗಿದೆ. ಮೂವರು ಹೆಸರಾಂತ ಕವಿಗಳ ಒಂದೊಂದು ಗೀತೆ ಬಳಕೆಯಾಗಿರುವುದು ಇದೊಂದೇ ಚಿತ್ರದಲ್ಲಿ) ಸಿನಿಮಾದಲ್ಲಿ ಯುಗಾದಿ ಪದ್ಯವನ್ನು ಬಳಸಬೇಕೆಂದರೆ, ಅದಕ್ಕೂ ಮೊದಲು ಬೇಂದ್ರೆಯವರ ಒಪ್ಪಿಗೆ ಪಡೆಯಬೇಕಿತ್ತು.

ಇಲ್ಲೊಂದು ಧರ್ಮಸೂಕ್ಷ್ಮವಿತ್ತು. “ಯುಗಾದಿ’ ಪದ್ಯದಲ್ಲಿ ಮೂರು ಚರಣಗಳಿವೆ. ಸಿನಿಮಾದಲ್ಲಿ ಮೊದಲ ಎರಡು ಚರಣಗಳನ್ನು ಬಳಸಿಕೊಂಡು “ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ’ ಎಂಬ ಕಡೆಯ ಚರಣವನ್ನು ಬಳಸದಿರಲು ನಿರ್ಧರಿಸಲಾಗಿತ್ತು. ಸಿನಿಮಾದ ಸಂದರ್ಭಕ್ಕೆ ಮೂರನೇ ಚರಣ ಹೊಂದುವುದಿಲ್ಲ ಎಂಬ ಕಾರಣದಿಂದಲೇ ಅದನ್ನು ಕೈ ಬಿಡಲು ನಿರ್ಧರಿಸಲಾಗಿತ್ತು. ಇದನ್ನೆಲ್ಲ ವಿವರಿಸಿ, ಹಾಡು ಬಳಸಿಕೊಳ್ಳಲು ಅನುಮತಿ ಕೇಳಿದಾಗ ಬೇಂದ್ರೆಯವರು- “ನಿಮ್ಮ ನಿಲುವಿಗೆ ನನ್ನ ಸಹಮತಿ ಇಲಿÅà. ಪದ್ಯ ಬಳಸೂಕ ನಾ ಅನುಮತಿ ಕೊಡಾಂಗಿಲ್ಲ’ ಅಂದುಬಿಟ್ಟರಂತೆ.

Advertisement

ಬೇಂದ್ರೆಯವರು ಹಾಗೆನ್ನಲೂ ಕಾರಣವಿತ್ತು. ಏನೆಂದರೆ, 1955ರಲ್ಲಿ ಎಸ್‌.ಎಸ್‌ ವೈ ದ್ಯ ಎಂಬುವರು, ತಮ್ಮ ಮಿತ್ರರೊಂದಿಗೆ ಸೇರಿ ವಿಜಯಶ್ರೀ ಲಾಂಛನದಲ್ಲಿ ಒಂದು ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಅದಕ್ಕೆ ಕಥೆ ಒದಗಿಸುವಂತೆ ಬೇಂದ್ರೆಯವರನ್ನೇ ವಿನಂತಿಸಿದರು. ಬೇಂದ್ರೆಯವರ ಕಥೆ ಆಧರಿಸಿ ತಯಾರಾದ ಚಿತ್ರವೇ “ವಿಚಿತ್ರ ಪ್ರಪಂಚ’. ಈ ಚಿತ್ರಕ್ಕೆ ದತ್ತ ಕುಮಾರ ಎಂಬ ಹೆಸರಿನಲ್ಲಿ ಬೇಂದ್ರೆಯವರು ಸಂಭಾಷಣೆ ಬರೆದರು. ಏಳು ಗೀತೆಗಳನ್ನೂ ಬರೆದರು. ಪುರುಷೋತ್ತಮ ಅನ್ನುವವರ ಸಂಗೀತ ಹಾಗೂ ಭಾಳಾ ಗಜಬರ್‌ ಅವರ ನಿರ್ದೇಶನ ಈ ಚಿತ್ರಕ್ಕಿತ್ತು. ನಿರ್ಮಾಪಕ, ನಿರ್ದೇಶಕರು, ಒಂದೆರಡು ಸಂದರ್ಭದಲ್ಲಿ ಬೇಂದ್ರೆಯವರ ಸಂಭಾಷಣೆಯನ್ನು ತಮಗೆ ಬೇಕಾದಂತೆ ತಿದ್ದಿಕೊಂಡಿದ್ದರು.

ಈ ಘಟನೆಯಿಂದ ಬೇಸರಗೊಂಡಿದ್ದ ಬೇಂದ್ರೆ- “ನೀವು ಸಿನಿಮಾದ ಮಂದಿ ಸಾಹಿತ್ಯವನ್ನು ಹೇಗೆ ಹೇಗೋ ಬಳಸಿಕೊಂಡು ವಿರೂಪ ಮಾಡಿಬಿಡ್ತೀರಿ. ಹಾಗಾಗಿ “ಯುಗಾದಿ’ ಪದ್ಯ ಬಳಸಲು ನಾನು ಅನುಮತಿ ಕೊಡಲಾರೆ’ ಎಂದು “ಕುಲವಧು’ ಚಿತ್ರತಂಡದವರಿಗೆ ಹೇಳಿ ಬಿಟ್ಟಿದ್ದಾರೆ. ಆದರೆ, ಬೇಂದ್ರೆಯವರನ್ನು ಒಪ್ಪಿಸಲೇಬೇಕು ಎಂದು ನಿರ್ಧರಿಸಿದ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್‌, ಹಾರ್ಮೋನಿಯಂ ತೆಗೆದುಕೊಂಡು ಮದ್ರಾಸಿನಿಂದ ಸೀದಾ ಸಾಧನಕೇರಿಯಲ್ಲಿದ್ದ ಬೇಂದ್ರೆಯವರ ಮನೆಗೇ ಹೋದರಂತೆ. ನಂತರ, ತಾವು ಬಂದ ಉದ್ದೇಶ ತಿಳಿಸಿ, ಮೊದಲು ಟ್ಯೂನ್‌ ಕೇಳಿಸಿದರಂತೆ. ಆಗಷ್ಟೇ ಮದುವೆಯಾಗಿ ಗಂಡನ ಮನೆಗೆ ಬಂದ ನಾಯಕಿ, ಹಬ್ಬದ ಸಡಗರದಲ್ಲಿ ಈ ಹಾಡು ಹಾಡುವಂತೆ ಚಿತ್ರೀಕರಿಸ್ತೇವೆ. ಈ ಕಾರಣದಿಂದಲೇ “ನಿದ್ದೆಗೊಮ್ಮೆ ನಿತ್ಯ ಮರಣ’ ಚರಣವನ್ನು ಬಳಸಿಲ್ಲ. ನೀವು ಬರೆದಿರೋದ್ರಲ್ಲಿ ಒಂದಕ್ಷರ ಕೂಡ ಬದಲಿಸುವುದಿಲ್ಲ. ಈ ಹಾಡು ಬಳಸಿಕೊಳ್ಳಲು ದಯವಿಟ್ಟು ಒಪ್ಪಿಗೆ ಕೊಡಿ ಸಾರ್‌ ಎಂದು ಕೋರಿದರಂತೆ. ಅಷ್ಟಕ್ಕೇ ಸುಮ್ಮನಾಗದೆ, ಇಡೀ ಗೀತೆಯನ್ನು ಹಾರ್ಮೋನಿಯಂ ನುಡಿಸುತ್ತಾ ಹಾಡಿಯೂ ತೋರಿಸಿದರಂತೆ. ಥೇಟ್‌ ಜೋಗುಳದಂತಿದ್ದ ಆ ಮಧುರ ಸಂಯೋಜನೆಗೆ ಮಾರುಹೋದ ಬೇಂದ್ರೆಯವರು ಖುಷಿಯಿಂದ ಜಿ.ಕೆ. ವಿ ಅವರ ಹೆಗಲು ತಟ್ಟಿ, ಬಾಯಿಗೆ ಕಲ್ಲು ಸಕ್ಕರೆ ಹಾಕಿ-“ನೀ ಕೇಳಿಸಿದೆಯಲ್ಲ? ಅದೀಗ ನಿಜವಾದ ಯುಗಾದೀನೋ ತಮ್ಮಾ…’ ಎಂದು ಉದ್ಗರಿಸಿದರಂತೆ!

“ಕುಲವಧು’ ಚಿತ್ರ ತೆರೆಕಂಡು 55 ವರ್ಷ ಕಳೆದಿವೆ. ಕಳೆದ 55 ವರ್ಷಗಳಿಂದ ಒಂದು ವರ್ಷವೂ ತಪ್ಪದೆ ಯುಗಾದಿ ಹಬ್ಬದ ದಿನ ಆಕಾಶವಾಣಿಯ ಎಲ್ಲ ಕೇಂದ್ರಗಳಿಂದ “ಯುಗ ಯುಗಾದಿ ಕಳೆದರೂ…’ ಹಾಡು ಪ್ರಸಾರವಾಗುತ್ತಿದೆ. ಬಹುಶಃ ಮುಂದಿನ 55 ವರ್ಷವೂ ಈ ಪರಂಪರೆ ಮುಂದುವರಿಯುತ್ತದೆ.

ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next