Advertisement

ಯೌವನದಲ್ಲಿಯೂ ಹೆತ್ತವರ ಕಾಳಜಿ ಬೇಕು!

06:00 AM Dec 28, 2018 | |

ಪೋಷಕರು ಎಂದರೆ ಮಕ್ಕಳ ಪಾಲನೆ-ಪೋಷಣೆ ಮಾಡುವ, ಒಂದು ಬೀಜವನ್ನು ಮೊಳಕೆಯೊಡೆಸಿ, ಗಿಡವಾಗಿಸಿ, ಫ‌ಲಕೊಡುವ ಮರವನ್ನಾಗಿಸುವ ಹೃದಯಗಳು. ಹಾಗಾದರೆ, ಅವರ ಕರ್ತವ್ಯಗಳು ಕೇವಲ ಬಾಲ್ಯದಲ್ಲಿರುತ್ತದೋ ಅಥವಾ ಯೌವನ ಮುಗಿದು ಪ್ರೌಢಘಟ್ಟದವರೆಗೂ ಸಾಗುತ್ತದೋ? ಹೌದು, ಪ್ರೌಢ ಘಟ್ಟದವರೆಗೂ ಸಾಗುತ್ತದೆ.

Advertisement

ಮಗುವೊಂದು ಹುಟ್ಟುವ ಮೊದಲೇ ಮನೆಯಲ್ಲಿ ಸಂಭ್ರಮ, ಸಡಗರ, ಹಬ್ಬದ ವಾತಾವರಣ ಸೃಷ್ಟಿಯಾಗಿರುತ್ತದೆ. ಅದು ಹೆಣ್ಣೋ ಅಥವಾ ಗಂಡೋ ಎಂದು ತಿಳಿಯುವ ಮುನ್ನವೇ ತಾಯಿಗೆ ಕರುಳಬಳ್ಳಿಯ ಸಂಬಂಧ ಬೆಸೆದಿರುತ್ತದೆ. ತಂದೆಗೆ ತೊಟ್ಟಿಲು ಹೇಗಿರಬೇಕು, ಏನೆಂದು ಹೆಸರಿಡುವುದು ಎಂಬ ಕಳಕಳಿ. ನಂತರ ಮಗುವಿನ ಚಲನವಲನ ನಗುವಿನೊಂದಿಗೇ ಇಬ್ಬರೂ ದಿನದ 24 ಗಂಟೆಗಳನ್ನೂ ಕಳೆಯುತ್ತಾರೆ. ಬೇರೆ ಯಾವ ಚಿಂತನೆಗಳಿಗೂ ಆಸ್ಪದವೇ ಇಲ್ಲ.

ಆರು ವರ್ಷ ತುಂಬುವಾಗ ತಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸುವುದು ಎಂದು ಹತ್ತಾರು ಕಡೆ ವಿಚಾರಿಸುತ್ತಾರೆ. ಶಾಲೆಗೆ ಹೋಗಿ ಬಂದ ಮಗುವಿಗೆ ಅಮ್ಮ ಊಟ ಮಾಡಿಸಿ ಹೋಮ್‌ವರ್ಕ್‌ ಮಾಡಿಸುತ್ತಾಳೆ. ಅಪ್ಪ, “ಟೀಚರ್‌ ಏನು ಪಾಠ ಮಾಡಿದರು? ನಿಂಗೆ ಎಷ್ಟು ಜನ ಸ್ನೇಹಿತರಾದರು? ಏನಾದ್ರೂ ಶಾಲೆಯಲ್ಲಿ ತೊಂದರೆ ಇದ್ದರೆ ಹೇಳು’ ಎಂದು ಪ್ರೀತಿಯಿಂದ ಕೂತು ಕೇಳುತ್ತಾರೆ. ಬಣ್ಣದ ಕ್ರೆಯಾನ್ಸ್‌ ತಂದುಕೊಟ್ಟು ಅವರಂತೆ ತಾವೂ ಮಕ್ಕಳಾಗಿ, ಭಾವನೆಗಳಿಗೆ, ಅವರ ಕನಸುಗಳಿಗೆ ಸ್ನೇಹಿತನಂತೆ ಬಣ್ಣ ಹಚ್ಚುತ್ತಾರೆ. ಆದರೆ, ಇವೆಲ್ಲ ಎಷ್ಟು ದಿನ? ಅನಿವಾರ್ಯತೆ ಎಲ್ಲಿಯವರೆಗೆ?

ಈ ಪ್ರೀತಿ, ಕಾಳಜಿಯ ಆಪ್ತತೆ ಅತ್ಯಂತ ಮುಖ್ಯವಾಗುವುದು ಯೌವ್ವನದಲ್ಲಿ. ಆಗ ಪ್ರತಿಯೊಬ್ಬ ಪೋಷಕನ ಪಾತ್ರವೂ ಶ್ರೇಷ್ಠವಾಗಿರುತ್ತದೆ. ಯಾಕೆ ಗೊತ್ತಾ? ಆಗ ಮಕ್ಕಳ ಮನಸ್ಸು ಹಸಿಮಣ್ಣಿನಂತಿರುತ್ತದೆ. ಅದಕ್ಕೆ ಹೆತ್ತವರು ಹದವಾಗಿ ಕಲಸಿ ಒಂದು ಒಳ್ಳೆಯ ರೂಪ ಕೊಡಬೇಕಾಗುತ್ತದೆ. ಅವರು ಹಕ್ಕಿಯಂತೆ ಹಾರಬಯಸುತ್ತಾರೆ. ಏನೋ ಒಂದು ಚಂಚಲತೆ, ತುಂಟತನ, ಏನನ್ನೋ ಗೆದ್ದಂತಹ ಉತ್ಸಾಹ. ವಿಪರ್ಯಾಸವೆಂದರೆ ಯೌವ್ವನದಲ್ಲಿ ಎಷ್ಟೋ ಮಕ್ಕಳು ಎಡವುದಕ್ಕಿಂತ ಈ ಸಮಯದಲ್ಲಿ ತಂದೆತಾಯಿಯರೇ ಹೆಚ್ಚು ಎಡವುತ್ತಾರೆ. ಹೆತ್ತವರು ಎಚ್ಚೆತ್ತುಕೊಳ್ಳಲೇಬೇಕು. ಮಕ್ಕಳಿಗೆ ಕೇವಲ ಆರ್ಥಿಕವಾಗಿ ನೆರವಾಗಬೇಡಿ. ಅವರ ಬೆಳವಣಿಗೆಯ ಹಾದಿಯಲ್ಲಿರುವ ಕಲ್ಲು-ಮುಳ್ಳುಗಳನ್ನು ಕಿತ್ತುಹಾಕಲು ಅವರೊಂದಿಗೆ ಕೈ ಜೋಡಿಸಿ. ಜಾಸ್ತಿ ಏನೂ ಮಾಡಬೇಕಾದ್ದಿಲ್ಲ. ಸುಗಮ ಮಾರ್ಗ ಕಲ್ಪಿಸಿ. ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ, ಶಾಲೆಗೆ ಹೋಗಿ ಬರುತ್ತಿದ್ದ ಮಗುವಿಗೆ ಹೇಗೆ ಬೇಕು-ಬೇಡದ್ದನ್ನು ವಿಚಾರಿಸುತ್ತಿದ್ದೀರೋ ಈಗಲೂ ಹಾಗೆಯೇ ಕಾಲೇಜಿನಿಂದ ಬಂದ‌ ಮಕ್ಕಳನ್ನು ವಿಚಾರಿಸಿ. ಅವರ ಆಸೆ-ಕನಸುಗಳನ್ನು ತಿಳಿದುಕೊಳ್ಳಿ. ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಅವರನ್ನು ಹುರಿದುಂಬಿಸಿ. ಮನೆಯಲ್ಲಿ ಯಾವಾಗಲೂ ಖುಷಿಯ, ಲವಲವಿಕೆಯ ವಾತಾವರಣ ಸೃಷ್ಟಿಸಿ.

ನಿಮ್ಮ ಜಗಳಗಳು ಮನಸ್ತಾಪಗಳು ಮಕ್ಕಳ ಮೇಲೆ ಪರಿಣಾಮ ಬೀರದಂತೆ ದೂರವಿಡಲು ಪ್ರಯತ್ನಿ. ಅದರ ಬದಲು ಅಂತಹ ಸಂದರ್ಭಗಳನ್ನು ಕೋಪಗೊಳ್ಳದೆ ನಿಭಾಯಿಸುವುದನ್ನು ಹೇಳಿಕೊಡಿ. ಗದರಬೇಡಿ, ಕೂತು ವಿಷಯಗಳನ್ನು ಸೂಕ್ಷ್ಮವಾಗಿ ಚರ್ಚಿಸಿ. ಸ್ನೇಹಿತನಂತೆ ನೀವೂ ಅವರನ್ನು ಗೇಲಿ ಮಾಡಿ. ಆ ವಯಸ್ಸಿನಲ್ಲಿ ಅವರಲ್ಲಿ ಮೂಡುವ ಭಾವನೆಗಳಿಗೆ ಸ್ಪಂದಿಸಿ, ಏನನ್ನಾದರೂ ನಿಮ್ಮ ಬಳಿ ಹೆದರಿಕೆ ಇಲ್ಲದೆ ಹಂಚಿಕೊಳ್ಳುವ ಸ್ವಾತಂತ್ರ್ಯ ಕೊಡಿ. ಎಂದಿಗೂ ಅವರನ್ನು ಒಬ್ಬಂಟಿಯಾಗಿ ಬೇರೊಂದು ಮಾರ್ಗ ಹುಡುಕಿ ಖನ್ನತೆಯನ್ನು ಹೆಚ್ಚಿಸಿಕೊಳ್ಳಲು ಬಿಡಬೇಡಿ.

Advertisement

– ಸ್ವಾತಿ
ದ್ವಿತೀಯ ಬಿ. ಎಸ್ಸಿ.
ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next