Advertisement

ಸ್ವೋದ್ಯೋಗದತ್ತ ಯುವ ಜನತೆ ಒಲವು

09:58 PM May 20, 2021 | Team Udayavani |

ಉಡುಪಿ: ಯುವಜನರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಜಾರಿಗೆ ತಂದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ (ಪಿಎಂಇಜಿಪಿ) ಉಡುಪಿ ಜಿಲ್ಲೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಲಾಕ್‌ಡೌನ್‌ ಬಳಿಕ  ಯುವ ಜನರು ಸ್ವೋದ್ಯೋಗದತ್ತ ಹೆಚ್ಚಿನ ಒಲವು ತೋರುವುದು ಕಂಡು ಬರುತ್ತಿದೆ.

Advertisement

ಪಿಎಂಇಜಿಪಿ ಯೋಜನೆ ಮೂಲಕ ಕೃಷಿ ಆಧಾರಿತ ಮತ್ತು ಆಹಾರ ಉದ್ಯಮಗಳಾದ ಜೇನು ಸಾಕಣೆ, ಹಾಲಿನ ಉತ್ಪನ್ನಗಳ ಘಟಕ, ಪಶು ಆಹಾರ, ಹಣ್ಣು ಮತ್ತು ತರಕಾರಿಗಳ ಪರಿಷ್ಕರಣೆ, ಗಾಣದಲ್ಲಿ ಎಣ್ಣೆ ತಯಾರಿಕೆ, ಮೆಂಥಾಲ್‌ ಎಣ್ಣೆ ತಯಾರಿಕೆ, ತೆಂಗಿನ ನಾರು ಹಾಗೂ ಇತರ ನಾರು ಉದ್ಯಮ, ರಾಗಿ ಮತ್ತು ಮೆಕ್ಕೆ ಜೋಳದ ಪರಿಷ್ಕರಣೆ, ಚಾಪೆ ಹಾಗೂ ಹೂವಿನ ಹಾರಗಳು ಇತ್ಯಾದಿಗಳ ತಯಾರಿಕೆ, ಗೋಡಂಬಿ ಪರಿಷ್ಕರಣೆ, ಅಡಿಕೆ ಹಾಲೆಯ ತಟ್ಟೆ ತಯಾರಿಕೆಗೂ ಸಾಲ ನೀಡಲಾಗುತ್ತದೆ.

ಬಂಡವಾಳ ಹೂಡಿಕೆ  :

ಈ ಯೋಜನೆಯಡಿ ವಿಶೇಷ ವರ್ಗಕ್ಕೆ ಸೇರಿದ ಅರ್ಜಿದಾರರು ಯೋಜನಾ ವೆಚ್ಚದ ಶೇ. 5ರಷ್ಟು ಹಾಗೂ ಸಾ. ವರ್ಗ ದವರು ಶೇ. 10ರಷ್ಟು ಬಂಡವಾಳ ಹೂಡಬೇಕಾಗುತ್ತದೆ. ಉಳಿದ ಮೊತ್ತ ಬ್ಯಾಂಕ್‌ಗಳು ಉದ್ಯಮಿ ಗ ಳಿಗೆ ಸಾಲ ಮಂಜೂರು ಮಾಡಿ ಮೊದಲನೆ ಕಂತಿನ ಹಣ ಬಿಡುಗಡೆಯಾದ ಅನಂತರ ಬ್ಯಾಂಕ್‌ಗಳು ಮಿಡಲ್‌ ಎಂಡ್‌ ಸಬ್ಸಿಡಿ ಕ್ಲೈಮ್‌ ಮಾಡಿ ಉದ್ಯಮಿ ಗ ಳ‌ ಹೆಸರಿನಲ್ಲಿ ಟಿ.ಡಿ.ಆರ್‌. ಖಾತೆಯಲ್ಲಿ 3 ವರ್ಷ ಠೇವಣಿ ಇಡಬೇಕು. ಘಟಕ ಕೆಲಸ ಮಾಡಲಾರಂಭಿಸಿದ ಅನಂತರ ಉದ್ಯಮಿ ಗ ಳ ಸಾಲದ ಖಾತೆಗೆ ಹಣವನ್ನು ಜಮಾ ಮಾಡಿಕೊಳ್ಳಲಾಗುತ್ತದೆ.

ಅರ್ಹತೆ ಏನು?  :

Advertisement

ಅರ್ಜಿ ಸಲ್ಲಿಸುವವರು 18 ವರ್ಷ ಮೇಲ್ಪಟ್ಟಿರಬೇಕು. 25 ಲ.ರೂ. ಯೋಜನಾ ವೆಚ್ಚಕ್ಕೆ ಮೇಲ್ಪಟ್ಟ ತಯಾರಿಕೆ ಘಟಕಕ್ಕೆ ಮತ್ತು 10 ಲ.ರೂ. ಮೇಲ್ಪಟ್ಟ ಸೇವಾ ವಲಯದ ಘಟಕಗಳಿಗೆ ಕನಿಷ್ಠ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವೇಳೆ 8ನೇ ತರಗತಿ ಉತ್ತೀರ್ಣರಾಗದೆ ಇರುವವರಿಗೆ ಯೋಜನಾ ವೆಚ್ಚಕ್ಕೆ ಮೇಲ್ಪಟ್ಟ ತಯಾರಿಕಾ ಘಟಕಕ್ಕೆ 10 ಲ.ರೂ. ಹಾಗೂ ಸೇವಾ ವಲಯಕ್ಕೆ 5 ಲ.ರೂ. ನೀಡಲಾಗುತ್ತದೆ.

ಸರಕಾರದಿಂದ ಸಹಾಯಧನ  :

ಪಿಎಂಇಜಿಪಿ ಯೋಜನೆ ಮೂಲಕ ಸೇವಾ ಚಟುವಟಿಕೆಗಳಿಗೆ ಗರಿಷ್ಠ 10 ಲ.ರೂ. ಹಾಗೂ ಇತರ ಕೈಗಾರಿಕೆಗಳಿಗೆ 25 ಲ.ರೂ. ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾಲ ಹಾಗೂ ಫ‌ಲಾನುಭವಿಗಳಿಗೆ ಎರಡು ವಾರ ತರಬೇತಿ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಸಾ.ವರ್ಗಕ್ಕೆ ಶೇ. 25, ಪ.ಜಾತಿ ಹಾಗೂ ಪ.ಪಂಗಡ, ಹಿ.ವರ್ಗ, ಅಲ್ಪಸಂಖ್ಯಾಕರು, ಮಾಜಿ ಸೈನಿಕರು, ಅಂಗವಿಕಲರು, ಮಹಿಳಾ ಫ‌ಲಾನುಭವಿಗಳಿಗೆ ಸಹಾಯಧನ ಶೇ. 35ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ. ನಗರ ಪ್ರದೇಶ ಸಾ. ವರ್ಗಕ್ಕೆ ಶೇ. 15 ಪ.ಜಾತಿ ಹಾಗೂ ಪ.ಪಂಗಡ, ಹಿ.ವರ್ಗ, ಅಲ್ಪಸಂಖ್ಯಾಕರು, ಮಾಜಿ ಸೈನಿಕರು, ಅಂಗವಿಕಲರು, ಮಹಿಳಾ ಫ‌ಲಾನುಭವಿಗಳಿಗೆ ಶೇ.25 ಸಹಾಯಧನ ನೀಡಲಾಗುತ್ತದೆ.

251  ಮಂದಿ  ಅರ್ಜಿ  :

ಉಡುಪಿಯಲ್ಲಿ ಪಿಎಂಇಜಿಪಿ ಮೂಲಕ 2018-2019 ಸಾಲಿನಲ್ಲಿ 92 ಮಂದಿ, 2019-20ನೇ ಸಾಲಿನಲ್ಲಿ 170 ಮಂದಿ, 2020-21ನೇ ಸಾಲಿನಲ್ಲಿ 251 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷ 48 ಅಹಾರೋತ್ಪನ್ನ ಘಟಕ, 12 ವೆಲ್ಡಿಂಗ್‌ ಶಾಪ್‌, 2 ಜುವೆಲರಿ ಘಟಕ, 4 ಕಾಗದ ಉತ್ಪನ್ನ ಘಟಕ, 2 ಪ್ರಿಂಟಿಂಗ್‌ ಪ್ರಸ್‌, 12 ದುರಸ್ತಿ ಮತ್ತು ಸೇವಾ ಘಟಕ, 40 ರೆಡಿಮೇಡ್‌ ಗಾರ್ಮೆಂಟ್‌ ಅಂಗಡಿ, 18 ಪೀಠೊಪಕರಣ ಅಂಗಡಿ, 13 ಸೇವಾ ವಲಯದ ಉದ್ಯಮ ಗಳನ್ನು ಆರಂಭಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ? :

ಆನ್‌ಲೈನ್‌ ಮೂಲಕ ಸಲ್ಲಿಸಿದ ಮುದ್ರಿತ ಅರ್ಜಿಯೊಂದಿಗೆ ಭಾವಚಿತ್ರಗಳು-2 ವಾಸಸ್ಥಳ ದೃಢೀಕರಣ ಪತ್ರ, ಯೋಜನಾ ವ‌ರದಿ, ಸ್ಥಾಪಿಸುವ ಘಟಕ ಗ್ರಾಮೀಣ ಪ್ರದೇಶವಾಗಿರುವುದಕ್ಕೆ ದಾಖಲಾತಿ, ಜಾತಿ ಪ್ರಮಾಣ ಪತ್ರ, ಮಾಜಿ ಸೈನಿಕ, ಅಂಗವಿಕಲರಾಗಿರುವುದಕ್ಕೆ ದಾಖಲಾತಿ, ವಿದ್ಯಾಭ್ಯಾಸ, ತಾಂತ್ರಿಕ ವಿದ್ಯಾರ್ಹತೆ ಪ್ರಮಾಣ ಪತ್ರದ ಪ್ರತಿ, ಯಂತ್ರೋಪಕರಣಗಳ ದರ ಪಟ್ಟಿ, ಪಂಚಾಯತ್‌ ಲೈಸೆನ್ಸ್, ಘಟಕದ ಕಟ್ಟಡದ ದಾಖಲಾತಿಗಳು, ಹಾಗೂ ಉದ್ಯಮಶೀಲತಾ ತರಬೇತಿ ಪಡೆದಿದ್ದರೆ ಅದರ ದಾಖಲಾತಿಗಳನ್ನು ಸಲ್ಲಿಸಬೇಕು. ವಿಶೇಷ ವರ್ಗಕ್ಕೆ ಸೇರಿದವರು ಅಗತ್ಯ ದಾಖಲಾತಿಗಳೊಂದಿಗೆ ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು. ಆನ್‌ ಲೈನ್‌ www.kviconline.gov.in/pmegpeportal/jsp/pmegponline.jsp ಮೂಲಕ ಅರ್ಜಿ ಸಲ್ಲಿ ಸಬಹುದು.

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಮೂಲಕ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಯುವಜನರಲ್ಲಿ ಸ್ವೋದ್ಯೋಗದ ಒಲವು ಹೆಚ್ಚಾಗಿದೆ. 2020-21ನೇ ಸಾಲಿನಲ್ಲಿ 251 ಮಂದಿ ಅರ್ಜಿ ಸಲ್ಲಿಸಿದ್ದಾರೆ.  ಗೋಕುಲ್‌ ದಾಸ್‌ ನಾಯಕ್‌ ಜಂಟಿ ನಿರ್ದೇಶಕರು,  ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next