Advertisement

ಮೊಸರು ಮತ್ತು ಮಜ್ಜಿಗೆ-ಆಯುರ್ವೇದ ಏನು ಹೇಳುತ್ತದೆ?

07:04 PM Jan 01, 2024 | Team Udayavani |

ಮೊನ್ನೆ case presentation (ಆಯುರ್ವೇದ ವೈದ್ಯ ಕಲಿಕೆಯ ಭಾಗ) ಗೆಂದು ನಮ್ಮ ಆಸ್ಪತ್ರೆಯಲ್ಲಿ ಅಡ್ಮಿಟ್ ಆದವರೊಬ್ಬರನ್ನು ಮಾತನಾಡಿಸಲು ಹೋಗಿದ್ದೆ. ನೇರವಾಗಿ ಬೇಕಾದ ವಿಷಯಗಳ ಬಗ್ಗೆ ಅವರನ್ನು ಇಂಟರ್ವ್ಯೂ ಮಾಡಿದಂತೆ ಪ್ರಶ್ನೆ ಕೇಳಲು ನನಗೆ ಸ್ವಲ್ಪ ಹಿಂಜರಿಕೆ. ಹಾಗಾಗಿ ಅದೂ ಇದೂ ಮಾತನಾಡುತ್ತಾ, ಇನ್ನೇನು ಅವರ ಮೇಲೆ ನನ್ನ ಪ್ರಶ್ನೆಗಳ ಮಳೆ ಸುರಿಸಬೇಕು,ಅಷ್ಟರಲ್ಲಿ ಅವರು, “ಉಡುಪಿಲಿ ನಮ್ಮೂರಿನ ಥರ ಬಿಸಿಲ್ ಇಲ್ರಿ..ಆದ್ರೂ ಭಾಳ ಶಕೆ..ಒಂಥರಾ ಉರಿ.. ಬೆಳಗ್ಗೆ ಇಂದ್ ಮಜ್ಜಗಿ ಕುಡಿದ ಕುಡಿದ ಸಾಕಾತು” ಎಂದರು. ಅರೆ! ಇವರಿಗೆ ಈ general ward ನಲ್ಲಿ ಮಜ್ಜಿಗೆ ಯಾರು ಮಾಡಿಕೊಟ್ಟರು- ಎಂದುಕೊಂಡೆ. ಕೇಳಿದ್ದಕ್ಕೆ, ಒಂದು ದೊಡ್ಡ ಬೋಗುಣಿಯಲ್ಲಿ ನೀರು ತುಂಬಿಸಿ ಅದರ ಒಳಗೆ ತೇಲಿ ಬಿಟ್ಟಿದ್ದ ಮೊಸರಿನ ಪ್ಯಾಕೆಟ್ ಅನ್ನು ತೋರಿಸಿದರು. ಬಾಯಾರಿಕೆ ಎನಿಸಿದಾಗಲೆಲ್ಲ ಅದರಿಂದ ಸ್ವಲ್ಪ ಮೊಸರು ಬಗ್ಗಿಸಿ ನೀರು ಸೇರಿಸಿ ಕುಡಿಯುತಿದ್ದರಂತೆ. ಮೊಸರಿಗೆ ನೀರು ಸೇರಿಸಿದರೆ ಅದನ್ನೇ ಮಜ್ಜಿಗೆ ಎಂದು ಕರೆಯಬಹುದೆಂದು ಇವರು ತಿಳಿದಿದ್ದಾರೆ ಎನ್ನುವುದು ಅರ್ಥವಾಯಿತು. ಇವರು ಬೆಳಗಿನಿಂದ ವಿಪರೀತ ಉರಿ ಎಂದಿದ್ದರ ಕಾರಣವೂ ನನಗೆ ತಿಳಿಯಿತು. ಆಯುರ್ವೇದದ ಪ್ರಕಾರ ಮೊಸರು ಯಾವುದು, ಮಜ್ಜಿಗೆ ಎಂದರೇನು, ಉಷ್ಣ, ತಂಪು ಯಾವುವು ಎನ್ನುವುದರ ಬಗೆಗೆ ಇರುವ ಗೊಂದಲಗಳೂ ನನಗೆ ತಿಳಿಯಿತು.

Advertisement

ಮೊಸರು ಉಷ್ಣವೋ ಶೀತವೋ?
ಆಯುರ್ವೇದದ ಪ್ರಕಾರ ಮೊಸರು ಉಷ್ಣ! ಅದರೊಂದಿಗೆ ಅಮ್ಲ ರಸ(ಹುಳಿ ರಸ)ವೂ ಸೇರಿ ದೇಹದಲ್ಲಿ ಪಿತ್ತ ದೋಷದ ವೃದ್ಧಿಯಾಗುತ್ತದೆ. ಈ ಪಿತ್ತವು ನಮ್ಮಲ್ಲಿ ದಾಹ, ಬಾಯಾರಿಕೆ, ಹುಳಿತೇಗು, ಎದೆಯುರಿ, ಅಜೀರ್ಣ, ಮುಂತಾದ ತೊಂದರೆಗಳನ್ನು ಉಂಟುಮಾಡಬಹುದು.

ಅಂತೆಯೇ, ಮೊಸರು ತನ್ನ ಗುರು, ಸ್ನಿಗ್ಧ, ಅಭಿಷ್ಯಂಧಿ ಗುಣಗಳಿಂದ ಕಫ ದೋಷವನ್ನು ಸಹ ಹೆಚ್ಚಿಸುತ್ತದೆ. ಈ ಕಫ ದೋಷವು ತಲೆ ನೋವು, ತಲೆ ಭಾರ, ದಮ್ಮು, ಗಂಟಲು ನೋವು ಮುಂತಾದವು ಗಳನ್ನು ಉಂಟುಮಾಡಬಹುದು. ಇಂದು ನಾವೆಲ್ಲರೂ ಮೊಸರನ್ನು ಫ್ರಿಡ್ಜ್ ನಲ್ಲಿಟ್ಟು ಹಾಗೆಯೇ ಕೊರೆಯುವ ಥಂಡಿಯಲ್ಲೇ ಸೇವಿಸುವುದರಿಂದ ಈ ಕಫ ದೋಷದ ವೃದ್ಧಿಯೇ ಮುನ್ನೆಲೆಗೆ ಬಂದು ಮೊಸರು ತಂಪೆನ್ನುವ ಕಲ್ಪನೆ ಬೆಳೆದಿರಬಹುದು.

ಮೊಸರಿಗೆ ನೀರು ಸೇರಿಸಿದರೆ ಅದು ಮಜ್ಜಿಗೆಯೆ?
ಆಯುರ್ವೇದದ ಪ್ರಕಾರ ಹಾಲಿಗೆ ಹೆಪ್ಪು ಹಾಕಿ ಒಂದು ರಾತ್ರಿ ಕಾಲ ಇಟ್ಟರೆ ದಧಿ, ಅಥವಾ ನಾವು ಮೊಸರೆಂದು ಕರೆಯುವ ದ್ರವ್ಯ ಸಿದ್ಧವಾಗುತ್ತದೆ. ಈ ಮೊಸರನ್ನು ಮಂಥನ ಮಾಡಿ, ಅದರಿಂದ ಬಂದಂತಹ ನವನೀತವನ್ನು ಬೇರ್ಪಡಿಸಿದಾಗ ಉಳಿಯುವ ದ್ರವ್ಯವೇ ತಕ್ರ. ಅದನ್ನು ನಾವು ಆಡುಭಾಷೆಯಲ್ಲಿ ಮಜ್ಜಿಗೆ ಎಂದೇ ಕರೆದರೂ, ಇದಕ್ಕೂ, ಮೊಸರಿಗೆ ನೀರು ಸೇರಿಸಿದಾಗ ಸಿಗುವ ಮಜ್ಜಿಗೆಗೂ ವ್ಯತ್ಯಾಸವಂತೂ ಇದೆ. ಅದೇನೇ ಇರಲಿ, ನೆನಪಿಡಬೇಕಾದ ವಿಷಯವೆಂದರೆ ಈ ಎರಡೂ ಮಜ್ಜಿಗೆಗಳೂ ಉಷ್ಣ ಕಾಲದಲ್ಲಿ (ಬೇಸಿಗೆಯಲ್ಲಿ) ನಿಷಿದ್ಧ. ಅಂದರೆ, ಬಿಸಿಲಿನಲ್ಲಿ ಸುಸ್ತಾಗಿ ಬಂದವರಿಗೆ ಮಜ್ಜಿಗೆ ಕೊಡುವ ನಮ್ಮ ಪದ್ಧತಿ ನಿಜವಾಗಿ ಅವೈಜ್ಞಾನಿಕ.

ಹಾಗೆಂದು ಶೀತಕಾಲದಲ್ಲಿ ಮೊಸರು ತಿನ್ನಬಹುದೇ? ಕಣ್ಣು ಮುಚ್ಚಿ ಹೌದೆಂದು ಹೇಳಲು ಸಾಧ್ಯವಿಲ್ಲ. ಈ ಮೊದಲೇ ಹೇಳಿದಂತೆ ಅದು ಕಫದೋಷವನ್ನು ವೃದ್ಧಿ ಮಾಡುವುದರಿಂದ ರಾತ್ರಿಯ ಸಮಯದಲ್ಲಿ, ಕಫದ ತೊಂದರೆ ಇರುವವರಿಗೆ ಸಹ ಮೊಸರು ಕೊಡುವಂತಿಲ್ಲ. ವರ್ಷಾನುಗಟ್ಟಲೆ ರಾತ್ರಿ ಬರೀ ಮೊಸರನ್ನ ತಿನ್ನುವ ಅಭ್ಯಾಸವಿರುವವರು ಮುಂದೆ ಕಫ ಪ್ರಧಾನ ರೋಗಗಳಾದ ಸ್ಥೌಲ್ಯ, ಮಧುಮೇಹಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹಾಗೆಯೇ, ಸಣ್ಣ ಮಕ್ಕಳಲ್ಲಿ ಪದೇ ಪದೇ ಕಫದ ತೊಂದರೆಗಳು (ಉದಾ: ನೆಗಡಿ, ಕೆಮ್ಮು, ದಮ್ಮು) ಕಾಣಿಸಿಕೊಂಡರೆ ಸ್ವಲ್ಪ ಸಮಯ ಮೊಸರಿನ ಸೇವನೆ ನಿಲ್ಲಿಸಿ ನೋಡಬಹುದು.

Advertisement

ಹಾಗಾದರೆ ಮೊಸರು ಮಜ್ಜಿಗೆ ಸೇವನೆ ತಪ್ಪೇ?
ಖಂಡಿತ ಅಲ್ಲ. ಆಯುರ್ವೇದವು ಮೊಸರನ್ನು ಮಂಗಳಕರವೆಂದು ಕರೆದಿದೆ. ಎಂದರೆ, ಸರಿಯಾದ ಕ್ರಮದಲ್ಲಿ, ಸಹಜವಾಗಿ ತಯಾರಿಸಿದ ತಾಜಾ ಮೊಸರು ದೇಹಕ್ಕೆ ಬಲವನ್ನು, ಪುಷ್ಟಿಯನ್ನು ಕೊಡುತ್ತದೆ; ಬಾಯಿರುಚಿಯನ್ನು ಹೆಚ್ಚಿಸುತ್ತದೆ; ಜೀರ್ಣ ಶಕ್ತಿಯನ್ನು ವೃದ್ಧಿ ಮಾಡುತ್ತದೆ; ವಾತ ದೋಷವನ್ನು ಸಮಸ್ಥಿತಿಗೆ ತರುತ್ತದೆ.

ಇನ್ನು ಮಜ್ಜಿಗೆಯನ್ನಂತೂ (ಮೇಲೆ ಹೇಳಿದ ತಕ್ರ) ಹಲವು ಕಡೆಗಳಲ್ಲಿ ಅಮೃತವೆಂದು ಕರೆಯಲಾಗಿದೆ. ಕಷಾಯರಸ ಪ್ರಧಾನವಿರುವ, ಉಷ್ಣವೀರ್ಯದ ಆದರೆ ಮಧುರ ವಿಪಾಕದ ಮಜ್ಜಿಗೆಯು ಉತ್ತಮ ಅಗ್ನಿ ದೀಪಕ. (ಇದನ್ನು ನಾವು ಇಂದಿನ ಭಾಷೆಯಲ್ಲಿ gut bacteria ದ ವೃದ್ದಿ ಎಂದು ಅರ್ಥೈಸಬಹುದು).

ವಾತ-ಕಫದ ರೋಗಗಳಲ್ಲಿ ಮಜ್ಜಿಗೆಗಿಂತ ಉತ್ತಮ ಔಷಧಿ ಮತ್ತೊಂದಿಲ್ಲ ಎಂದು ಹೇಳಲಾಗಿದೆ. ವಿಜ್ಞಾನವು ಭೋಜನದ ಕೊನೆಯಲ್ಲಿ ಕಷಾಯರಸವನ್ನು ಸೇವಿಸಬೇಕು ಎನ್ನುತ್ತದೆ. ಹಾಗಾಗಿ ಊಟದ ಕೊನೆಗೆ ಮಜ್ಜಿಗೆ ಕುಡಿಯುವ, ಮಜ್ಜಿಗೆ ಕಲಸಿದ ಅನ್ನ ಉಣ್ಣುವ ಅಭ್ಯಾಸ ಬಹಳ ಒಳ್ಳೆಯದು .

ಕೆಲವೊಂದು ಟಿಪ್ಸ್
-ಮೊಸರನ್ನು ಕುದಿಸಿ ತಯಾರಿಸಿದ ಆಹಾರ ಸೇವನೆ ಆದಷ್ಟು ಕಡಿಮೆ ಇರಲಿ.
-​ಮೊಸರಿಗೆ ನೀರು ಸೇರಿಸಿ ಮಾಡುವ ಮಜ್ಜಿಗೆಯು ಮೊಸರಿನ ಗುಣಗಳನ್ನೇ ಕಡಿಮೆ ಬಲದಲ್ಲಿ ಹೊಂದಿರುತ್ತದೆ. ಗಟ್ಟಿ ಮೊಸರಿನಿಂದ ತೊಂದರೆ ಇರುವವರು ಈ ಮಜ್ಜಿಗೆಯನ್ನು ಉಪಯೋಗಿಸಿ ನೋಡಬಹುದು.
-​ಮೊಸರಿಗೆ ಸಕ್ಕರೆ ಸೇರಿಸಿ ಮಾಡುವ ಲಸ್ಸಿ ಅದರ ಉಷ್ಣ ಗುಣವನ್ನು ಕಡಿಮೆ ಮಾಡುತ್ತದೆ. ದಾಹ, ಉರಿಯಂತಹ ತೊಂದರೆಗಳಲ್ಲಿ ಬಳಸಬಹುದು.
​-ಕೊತ್ತಂಬರಿ, ಜೀರಿಗೆ, ಉಪ್ಪು ಹಾಕಿ ಮಾಡಿದ ಮಸಾಲ ಮಜ್ಜಿಗೆ ಜೀರ್ಣಶಕ್ತಿಯ ವೃದ್ಧಿಗೆ ಅತ್ಯುತ್ತಮ.
-​ಮೊಸರು ಮಜ್ಜಿಗೆ – ಫ್ರಿಡ್ಜ್ ನಿಂದ ತೆಗೆದ ಕೂಡಲೇ ಸೇವಿಸದೇ, ರೂಮ್ ಟೆಂಪರೇಚರ್ ಬರುವವರೆಗೂ ಕಾದು ಸೇವಿಸುವುದು ಒಳ್ಳೆಯದು.

ಸಿರಿ, ಮರವಂತೆ

Advertisement

Udayavani is now on Telegram. Click here to join our channel and stay updated with the latest news.

Next