Advertisement

ಯೋಗ ಮತ್ತು ಮಾನಸಿಕ ಆರೋಗ್ಯ

06:00 AM Sep 16, 2018 | |

ಯೋಗವು ಪುರಾತನ ಭಾರತೀಯ ತಣ್ತೀಶಾಸ್ತ್ರದಲ್ಲಿ ತನ್ನ ಮೂಲವನ್ನು ಹೊಂದಿದೆ. ಭಾರತದಲ್ಲಿ ಉಗಮವಾಗಿ ಇಂದು ಜಗದಗಲ ವಿಕಾಸ ಹೊಂದಿರುವ ಯೋಗದ ಪ್ರಯೋಜನಗಳನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ. ಶೂನ್ಯ ಬಂಡವಾಳ ಹೂಡಿಕೆಯನ್ನು ಬಯಸುವ ವ್ಯಾಯಾಮದ ಒಂದು ರೂಪವಾಗಿರುವ ಯೋಗದಿಂದ ಕೇವಲ ದೈಹಿಕ ಪ್ರಯೋಜನಗಳು ಮಾತ್ರವಲ್ಲ; ಮಾನಸಿಕ ಲಾಭಗಳೂ ಇವೆ. ಯೋಗವನ್ನು ಎಲ್ಲಿ, ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು, ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಡ. 

Advertisement

ತರಾತುರಿಯ ನಗರೀಕರಣ ಹಾಗೂ ಹಣ ಮತ್ತು ಕೀರ್ತಿಯ ಹಿಂದೆ ಬಿದ್ದಿರುವ ನಾವು ಅದರ ಫ‌ಲವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ಅನೇಕ ಅನಾರೋಗ್ಯಗಳನ್ನು ಅನುಭವಿಸುತ್ತಿದ್ದೇವೆ. ನಮ್ಮಲ್ಲಿ ಹಣವಿದೆ, ಸಂಪನ್ಮೂಲಗಳೂ ಇವೆ; ಆದರೆ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ವಿನಿಯೋಗಿಸಲು ಸಮಯ ಇಲ್ಲ. ಯಶಸ್ಸು ಸಾಧಿಸುವ ಒತ್ತಡ ಮತ್ತು ಪ್ರತೀ ಹೆಜ್ಜೆಯಲ್ಲಿಯೂ ಎದುರಾಗುವ ಸ್ಪರ್ಧೆಗಳಿಂದಾಗಿ ಇಂದಿನ ಯುವಜನತೆ ಖನ್ನತೆ, ಆತಂಕ, ಉದ್ವಿಗ್ನತೆ ಮತ್ತು ಆತ್ಮಹತ್ಯೆಯ ವರ್ತನೆಗಳಂತಹ ಅನೇಕ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದೆೆ. ಕಡಿಮೆ ಮಾರ್ಕು ಗಳಿಸಿದ್ದಕ್ಕಾಗಿಯೋ ಪರೀಕ್ಷೆಯಲ್ಲಿ ನಪಾಸು ಆದದ್ದಕ್ಕಾಗಿಯೋ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಪತ್ರಿಕೆ, ಟಿವಿ ಚಾನೆಲ್‌ಗ‌ಳಲ್ಲಿ ಇಂದು ಸಾಮಾನ್ಯ ಸುದ್ದಿ. ಇಂತಹ ಸನ್ನಿವೇಶ ಬಹಳ ಕಳವಳಕಾರಿಯಾಗಿ ಕಾಣಿಸುತ್ತದೆ ಹಾಗೂ ಇದಕ್ಕೆ ಪರಿಹಾರ ಸುಲಭಸಾಧ್ಯವಾಗಿಲ್ಲ. ಯುವಜನತೆ ಯಾವುದೇ ದೇಶದ ಆಸ್ತಿ, ಭವಿಷ್ಯ; ಹೀಗಾಗಿ ಯುವಕ- ಯುವತಿಯರು ಮಾನಸಿಕ ಮತ್ತು ದೈಹಿಕವಾಗಿ ಕ್ಷೇಮವಾಗಿಲ್ಲದಿದ್ದರೆ ದೇಶದ ಭವಿಷ್ಯವೂ ಮಸುಕಾಗುತ್ತದೆ.
 
ಮೇಲ್ನೋಟಕ್ಕೆ ಭಯಾನಕವಾಗಿ ಕಾಣಿಸುವ ಈ ಸಮಸ್ಯೆಗೆ ಬಹಳ ಸರಳವಾದ ಪರಿಹಾರ ಯೋಗದಲ್ಲಿದೆ. ಯೋಗವು ಮನುಷ್ಯನ ಆರೋಗ್ಯ ಸ್ಥಿತಿಯಲ್ಲಿ ಹೇಗೆ ಬದಲಾವಣೆಯನ್ನು ತರಬಲ್ಲುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.

1. ಯೋಗವು ವ್ಯಕ್ತಿಯನ್ನು ಅನುವೇದಕ ನರ ವ್ಯವಸ್ಥೆಯಿಂದ ಉಪಾನುವೇದಕ ನರವ್ಯವಸ್ಥೆಗೆ ಬದಲಾಯಿಸುತ್ತದೆ: ವ್ಯಕ್ತಿಯು ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದರೆ ಸದಾ ಸ್ಪರ್ಧೆ ನಡೆಸುವ ಅಥವಾ ಸ್ಪರ್ಧೆಯನ್ನು ಎದುರಿಸುವ ಮನೋಭಾವನೆಯಿಂದ ಹೆಚ್ಚು ವಿಶ್ರಾಂತ ಸ್ಥಿತಿಯನ್ನು ಅನುಭವಿಸುತ್ತಾನೆ. ವ್ಯಕ್ತಿಯ ಒತ್ತಡ ಕಡಿಮೆಯಾಗಿ ಉಲ್ಲಾಸ, ವಿಶ್ರಾಂತಿಯ ಅನುಭವ ಉಂಟಾಗುತ್ತದೆ. ಉಚ್ಛಾ$Ìಸ- ನಿಚ್ಛಾ$Ìಸಗಳು ಶಾಂತಿಯನ್ನು ಉಂಟು ಮಾಡುತ್ತವೆ. ಈಚೆಗೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್‌ ಅವರು, ಪರಾಜಯದ ಒತ್ತಡದಿಂದ ಪಾರಾಗಲು ತಾನು ಯೋಗಾಭ್ಯಾಸದ ಮೊರೆ ಹೊಕ್ಕಿದ್ದುದಾಗಿ ಹೇಳಿದ್ದಾರೆ.

2. ಯೋಗಾಭ್ಯಾಸವು ವ್ಯಕ್ತಿಯ ಆತ್ಮಗೌರವ, ಆತ್ಮವಿಶ್ವಾಸಗಳನ್ನು ವೃದ್ಧಿಸುತ್ತದೆ: ಯೋಗಾಭ್ಯಾಸದಿಂದ ವ್ಯಕ್ತಿಗೂ ಆತನ ವ್ಯಕ್ತಿತ್ವಕ್ಕೂ ತರ್ಕವನ್ನು ಮೀರಿದ ಸಂಬಂಧವೊಂದು ಉಂಟಾಗುತ್ತದೆ. ಇದರಿಂದಾಗಿ ವ್ಯಕ್ತಿಯು ತನ್ನ ಜೀವನ ಬಹಳ ಮೌಲಿಕವಾದದ್ದು, ಅದು ದೇವರ ಅಮೂಲ್ಯ ಕೊಡುಗೆ ಎಂಬುದಾಗಿ ಭಾವಿಸುವ ಮೂಲಕ ಒಳ್ಳೆಯ ಆಹಾರಾಭ್ಯಾಸ ರೂಢಿಸಿಕೊಳ್ಳುತ್ತಾನೆ, ವ್ಯಾಯಾಮ ಮಾಡುತ್ತಾನೆ. ವ್ಯಕ್ತಿಯ ಆತ್ಮಗೌರವ ವೃದ್ಧಿಯಾದಂತೆ ಆತ ಹೆಚ್ಚು ಆತ್ಮವಿಶ್ವಾಸವನ್ನು ಹೊಂದುತ್ತಾನೆ ಹಾಗೂ ಆತ್ಮವಿಶ್ವಾಸವುಳ್ಳ ವ್ಯಕ್ತಿಯು ಯಶಸ್ಸು ಗಳಿಸುತ್ತಾನೆ. 

3. ಯೋಗವು ಪತಿ-ಪತ್ನಿಯ ನಡುವಣ ಸಂಬಂಧವನ್ನು ಉತ್ತಮಪಡಿಸುತ್ತದೆ: ಇತ್ತೀಚೆಗಿನ ದಿನಗಳಲ್ಲಿ ವಿವಾಹಿತರು ವಿಚ್ಛೇದನ ಪಡೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಜತೆಯಾಗಿ ಕಳೆಯಲು, ಅಂತರಂಗದ ಮಾತುಕತೆ ನಡೆಸಲು ಅವರಿಗೆ ಸಾಕಷ್ಟು ಸಮಯ ಸಿಗುವುದಿಲ್ಲ. ಜತೆಗೆ, ಒತ್ತಡದ ಜೀವನದಿಂದಾಗಿ ದಂಪತಿಗಳು ಸಣ್ಣಸಣ್ಣ ವಿಷಯಗಳಿಗೂ ಪರಸ್ಪರ ರೇಗಾಡುವುದು, ಜಗಳ ಮಾಡಿ ಮುನಿಸಿಕೊಳ್ಳುತ್ತಾರೆ. ಇವೆಲ್ಲ ಒಟ್ಟಾಗಿ ಮನಸ್ತಾಪಕ್ಕೆ ಕಾರಣವಾಗುತ್ತವೆ. ಯೋಗಾಭ್ಯಾಸವನ್ನು ನಿಯಮಿತವಾಗಿ ನಡೆಸಿದರೆ ಪತಿ-ಪತ್ನಿ ಪರಸ್ಪರ ಸಹಾನುಭೂತಿ ಬೆಳೆಸಿಕೊಳ್ಳುತ್ತಾರೆ, ಪರಸ್ಪರ ಒಲುಮೆ ವೃದ್ಧಿಸುತ್ತದೆ. ಯೋಗಾಭ್ಯಾಸದಿಂದ ಸಣ್ಣಸಣ್ಣ ವಿಷಯಗಳಿಗೂ ಪ್ರತಿಕ್ರಿಯಿಸುವುದು, ಜಗಳವಾಡುವುದು ಕಡಿಮೆಯಾಗುತ್ತದೆ. ಒಟ್ಟಾರೆ ಆರೋಗ್ಯದಲ್ಲಿ ವೃದ್ಧಿ ಮತ್ತು ಶಾಂತಿಯ ಅನುಭವ ದಂಪತಿಯ ಲೈಂಗಿಕ ಜೀವನವನ್ನು ಚೆನ್ನಾಗಿರಿಸುತ್ತದೆ. ಇವೆಲ್ಲ ಒಟ್ಟಾಗಿ ಇಬ್ಬರೂ ಪರಸ್ಪರ ಬೇರ್ಪಡಿಸಲಾಗದಂತಹ ಬೆಸುಗೆಯುಳ್ಳ ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. 

Advertisement

4. ಅಂತರ್ಗತ ಗುಣಗಳ ಬಗ್ಗೆ ಅರಿವು ಹೊಂದಿರಲು ಯೋಗಾಭ್ಯಾಸ ಸಹಾಯ ಮಾಡುತ್ತದೆ: ಈ ಜಗತ್ತಿನಲ್ಲಿ ಪ್ರತೀ ವ್ಯಕ್ತಿಯೂ ಕೆಲವು ಅನನ್ಯ ಗುಣಗಳನ್ನು ಹೊಂದಿ ಜನಿಸಿರುತ್ತಾನೆ. ಕೆಲವೊಮ್ಮೆ ಅಂತಹ ಗುಣಗಳು, ಪ್ರತಿಭೆ ಬಹಿರಂಗವಾಗುವುದೇ ಇಲ್ಲ ಮತ್ತು ವ್ಯಕ್ತಿಗೂ ಅವು ತನ್ನಲ್ಲಿವೆ ಎಂಬ ಅರಿವು ಇರುವುದಿಲ್ಲ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿಯ ಸ್ವ-ಅರಿವು ವೃದ್ಧಿಸುತ್ತದೆ ಹಾಗೂ ಆತ ತನ್ನಲ್ಲಿರುವ ಪ್ರತಿಭೆ, ಗುಣಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದರ ಮೂಲಕ ಇತರರಿಂದ ಭಿನ್ನವಾದ ಅನನ್ಯ ವ್ಯಕ್ತಿಯಾಗಿ ಮೂಡಿಬರುತ್ತಾನೆ. ಅಂತರ್ಗತ ಗುಣ, ಪ್ರತಿಭೆಗಳ ಪರಿಚಯವಾದೊಡನೆ ಅವುಗಳನ್ನು ಪೋಷಿಸಿ ಪರಿಣತನಾಗುವುದು ಸಾಧ್ಯವಾಗುತ್ತದೆ. 

5. ಒತ್ತಡವನ್ನು ಕಳೆಯಲು ಯೋಗಾಭ್ಯಾಸ ಸಹಾಯ ಮಾಡುತ್ತದೆ: ಇವತ್ತಿನ ಬದುಕು ತಡೆದುಕೊಳ್ಳಲಾರದಂತಹ ಒತ್ತಡದಿಂದ ಕೂಡಿದೆ. ಕ್ಷಣಕಾಲ ನಿಂತು ಆಲೋಚಿಸಿ ಮುನ್ನಡೆಯುವಷ್ಟು ಸಮಯವು ಯಾರಿಗೂ ಇಲ್ಲ. ಎಲ್ಲರೂ ಯಂತ್ರಗಳಂತೆ ಆಗಿಬಿಟ್ಟಿದ್ದಾರೆ. ತಮ್ಮ ತಮ್ಮ ಕುಟುಂಬ, ಮಕ್ಕಳು ಬಿಡಿ, ಸ್ವಂತಕ್ಕೂ ವ್ಯಯಿಸಲು ಯಾರ ಬಳಿಯೂ ಸಮಯವಿಲ್ಲ ಎಂಬಂತಾಗಿದೆ. ಇಂತಹ ಜೀವನ ಶೈಲಿಯು ನಿಧಾನವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಿ ನಾನಾ ರೀತಿಯ ಅನಾರೋಗ್ಯಗಳನ್ನು ಉಂಟು ಮಾಡುತ್ತಿದೆ. ಯೋಗಾಭ್ಯಾಸವು ಮನಸ್ಸಿನ ಮೇಲೂ ಪರಿಣಾಮ ಬೀರಿ ಒತ್ತಡ ಮಟ್ಟವನ್ನು ಇಳಿಸುತ್ತದೆ. ಯೋಗಾಭ್ಯಾಸವನ್ನು ನಿಯಮಿತವಾಗಿ ನಡೆಸುವವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಒತ್ತಡ ಸಂಬಂಧಿ ಕಾಯಿಲೆಗಳು ಉಂಟಾಗುವ ಪ್ರಮಾಣ ಕಡಿಮೆ. 

ಯೋಗಾಭ್ಯಾಸವು ಸ್ವ-ಅಭಿವೃದ್ಧಿಗಿಂತ‌ ಹೆಚ್ಚಾಗಿ ಸ್ವ-ಸ್ವೀಕೃತಿಗೆ ಸಂಬಂಧಿಸಿದ್ದು ಎನ್ನಲಾಗುತ್ತದೆ. ಹೀಗಾಗಿ ಯೋಗಾಭ್ಯಾಸಿಗಳಲ್ಲಿ ಸ್ವಗೌರವ, ಆತ್ಮವಿಶ್ವಾಸ ಬಹಳ ಉನ್ನತ ಮಟ್ಟದಲ್ಲಿರುತ್ತದೆ. ಇದರಿಂದ ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವರು ಮುಂಚೂಣಿಯಲ್ಲಿ ಇರುವುದು ಸಾಧ್ಯವಾಗುತ್ತದೆ. ಯೋಗದ ವಿವಿಧ ಭಂಗಿಗಳು, ಆಸನಗಳು ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ನಮನೀಯತೆಯನ್ನು ಉತ್ತಮಪಡಿಸುವುದು ಮಾತ್ರವಲ್ಲ, ಉಸಿರಾಟದ ಮೇಲೆ ಏಕಾಗ್ರತೆ ಹೆಚ್ಚುವುದರಿಂದ ಉದ್ವಿಗ್ನತೆ, ಒತ್ತಡ ಕಡಿಮೆಯಾಗುತ್ತದೆ. ಖನ್ನತೆ, ಉದ್ವಿಗ್ನತೆ, ಒತ್ತಡ, ಆತಂಕ, ಅವಘಡೋತ್ತರ ಒತ್ತಡದಂತಹ ರೂಪಗಳಲ್ಲಿ ಮಾನಸಿಕ ಅಸ್ವಾಸ್ಥ éದ ಪ್ರಮಾಣ ಇವತ್ತಿನ ಸಮಾಜದಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಪರಿಣಾಮಕಾರಿಯಾದ ಉಪಶಮನ ಮಾರ್ಗವೊಂದರ ತುರ್ತು ಅಗತ್ಯವಿದೆ. ಹೀಗಾಗಿ ಯೋಗವನ್ನು ಪಠ್ಯದ ಒಂದು ಅಂಗವಾಗಿ ಶಾಲಾಕಾಲೇಜು ಹಂತದಿಂದಲೇ ಬೋಧಿಸುವುದು ಅತ್ಯಗತ್ಯವಾಗಿದೆ. ಪ್ರತೀ ವಿದ್ಯಾರ್ಥಿಯೂ ಇದರಲ್ಲಿ ಪಾಲುಗೊಳ್ಳಲು ಪ್ರೇರಣೆ – ಪ್ರೋತ್ಸಾಹ ನೀಡಬೇಕಾಗಿದೆ. ನಾವು ಭಾರತವನ್ನು ಇಡಿಯ ಜಗತ್ತಿನಲ್ಲಿ ಮುಂಚೂಣಿಯ ಒಂದು ದೇಶವಾಗಿ ಕಾಣಬೇಕಿದ್ದರೆ ಪ್ರತಿಯೊಬ್ಬರೂ ಯೋಗವನ್ನು ಕಲಿತು ಅಭ್ಯಾಸ ಮಾಡಬೇಕಿದೆ. ಇದಕ್ಕೆ ಪೂರಕವಾಗಿ ಶಾಲಾ ಹಂತದಿಂದಲೇ ಮಕ್ಕಳಿಗೆ ಯೋಗಾಭ್ಯಾಸವನ್ನು ಕಲಿಸಬೇಕಿದೆ. 

– ಡಾ| ಆನಂದ್‌ ದೀಪ್‌ ಶುಕ್ಲಾ, 
ರೀಡರ್‌, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next