Advertisement

ಕರಾವಳಿ ಭಾಗದಲ್ಲಿ ಯಲ್ಲೋ ಅಲರ್ಟ್‌; ಮಳೆ ನಿರೀಕ್ಷೆ

02:53 AM Mar 23, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದೆ. ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆ “ಯಲ್ಲೋ ಅಲರ್ಟ್‌’ ಘೋಷಿಸಿದೆ. ದ.ಕ. ಜಿಲ್ಲೆಯ ಕೆಲವು ಭಾಗಗಳಲ್ಲಿ ಸೋಮವಾರ ಮಧ್ಯರಾತ್ರಿ ಮತ್ತು ಮಂಗಳವಾರ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣವಿತ್ತು.

Advertisement

ಧರ್ಮಸ್ಥಳ, ಗುರುವಾಯನಕರೆ, ನೆರಿಯ, ಬೆಳ್ತಂಗಡಿ, ಉಜಿರೆ, ಗಂಡಿಬಾಗಿಲು, ಮಂಗಳೂರು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಮಳೆ ಆರಂಭವಾಗಿತ್ತು. ಅಳದಂಗಡಿ, ನಾರಾವಿ ಸುತ್ತಮುತ್ತ ಮಂಗಳವಾರ ಮಳೆಯಾಗಿದೆ. ಬಂಟ್ವಾಳದ ಹಲವೆಡೆ ಸಾಧಾರಣ ಮಳೆಯಾಗಿದೆ. ರಾತ್ರಿ 1ರ ಸುಮಾರಿಗೆ ಹನಿ ಮಳೆ ಕಾಣಿಸಿ ಕೊಂಡು ನಿಂತಿದ್ದು, ಬಳಿಕ ಸ್ವಲ್ಪ ಹೊತ್ತು ಮಳೆ ಸುರಿದಿತ್ತು

ಕೆಲವು ದಿನಗಳಿಂದ ದ.ಕ.ದಲ್ಲಿ ಸೆಕೆಯ ಬೇಗೆ ಹೆಚ್ಚಿದ್ದು, ಗರಿಷ್ಠ ಉಷ್ಣಾಂಶವೂ ಏರಿಕೆ ಕಾಣುತ್ತಿದೆ. ಐಎಂಡಿ ಮಾಹಿತಿ ಯಂತೆ ಮಂಗಳೂರಿನಲ್ಲಿ ಮಂಗಳವಾರದಂದು 31.9 ಡಿ.ಸೆ. ಗರಿಷ್ಠ ಮತ್ತು 22.4 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಎಕ್ಕಾರು: ಸಿಡಿಲಿನಿಂದ 3 ಮನೆಗೆ ಹಾನಿ
ಬಜಪೆ: ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ 3.30ರ ವೇಳೆಗೆ ಮಿಂಚು ಸಿಡಿಲು
ಸಹಿತ ಉತ್ತಮ ಮಳೆಯಾಗಿದ್ದು ಮೂರು ಮನೆಗಳಿಗೆ ಹಾನಿಯಾಗಿದೆ.

ಕಟಾವು ಮಾಡಿದ ಭತ್ತ ವನ್ನು ಗೋಣಿಚೀಲದಲ್ಲಿ ತುಂಬಿಸಿ ಗದ್ದೆಯಲ್ಲೇ ಇರಿಸಿದ್ದ ಕೃಷಿಕನಿಗೆ ನಷ್ಟವಾಗಿದೆ. ತೆಂಕ ಎಕ್ಕಾರು ಗ್ರಾಮದ ತುಕಾರಾಮ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದಿದ್ದು, ಗೋಡೆ ಬಿರುಕು ಬಿಟ್ಟಿದೆ. ವಿದ್ಯುತ್‌ ವಯರಿಂಗ್‌, ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರಿಕಲ್‌ ಸಾಮಗ್ರಿಗಳು ಹಾನಿಗೀಡಾಗಿವೆ. ಸಿಡಿಲಿನಿಂದಾಗಿ ಸಮೀಪದ ಎರಡು ಮನೆಗಳಿಗೂ ಹಾನಿಯಾಗಿದೆ.

Advertisement

ತಾಂಗಾಡಿಯ ಕೃಷಿಕರಾದ ಗಂಪದ ಬೈಲು ಭಾಸ್ಕರ್‌ ಮೂಲ್ಯ, ಪಲ್ಲದ ಕೋಡಿ ನಾರಾಯಣ ಗೌಡ, ಸುಂದರ ಗೌಡ ಅವರು ಗದ್ದೆಗಳಲ್ಲಿ ಯಂತ್ರದ ಮೂಲಕ ಕಟಾವು ಮಾಡಿ ಭತ್ತವನ್ನು ಗೋಣಿ ಚೀಲದಲ್ಲಿ ತುಂಬಿಸಿ ಗದ್ದೆಯಲ್ಲಿಯೇ ಇಡಲಾಗಿತ್ತು. ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಸುಮಾರು 35 ಗೋಣಿ ಚೀಲಗಳು ಸಂಪೂರ್ಣ ಒದ್ದೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next