Advertisement

ಯಡಿಯೂರಪ್ಪ-ಈಶ್ವರಪ್ಪ ರಾಜೀನಾಮೆ ನೀಡಲಿ

07:36 PM Apr 07, 2021 | Team Udayavani |

ಬಳ್ಳಾರಿ: ಸಿಎಂ ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪರ ನಡುವೆ ಸಾಮರಸ್ಯವಿಲ್ಲ. ರಾಜ್ಯಪಾಲರಿಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಶ್ವರಪ್ಪ ನೀಡಿರುವ ದೂರು ನಿಜವೇ ಆಗಿದ್ದರೆ ಸಿಎಂ ಯಡಿಯೂಪ್ಪ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹೇಳಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಸಂವಿಧಾನದ ರೀತಿಯಲ್ಲಿ ನಡೆಯುತ್ತಿಲ್ಲ. ಸಚಿವ ಈಶ್ವರಪ್ಪ ಅವರ ಗಮನಕ್ಕೆ ಇಲ್ಲದೇ, ಅವರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ 1299 ಕೋಟಿ ರೂ. ಕಾನೂನು ಬಾಹಿರವಾಗಿ ದುರ್ಬಳಕೆಯಾಗುತ್ತಿದ್ದುದನ್ನು ತಡಹಿಡಿಯಲು ಕ್ರಮಕೈಗೊಂಡು ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ರಾಜ್ಯಪಾಲರು, ಕೇಂದ್ರದ ಗೃಹಸಚಿವ ಅಮಿತ್‌ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಕಾರ್ಯದರ್ಶಿ ಸಂತೋಷ್‌ ಅವರಿಗೆ ದೂರು ನೀಡಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಈಶ್ವರಪ್ಪರ ನಿಲುವು ಸ್ಪಷ್ಟವಾಗಿದ್ದಲ್ಲಿ ಸಿಎಂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ಅರ್ಹರಲ್ಲ.

ಅದೇ ರೀತಿ ಸಿಎಂ ಯಡಿಯೂರಪ್ಪರ ನಿಲುವು ಸ್ಪಷ್ಪವಾಗಿದ್ದಲ್ಲಿ ಸಚಿವ ಈಶ್ವರಪ್ಪನವರು ಸಚಿವರಾಗಿ ಮುಂದುವರೆಯಲು ಅರ್ಹರಲ್ಲ. ಇಬ್ಬರೂ ಕೂಡಲೇ ರಾಜೀನಾಮೆ ನೀಡಬೇಕು ಎಂದವರು ಒತ್ತಾಯಿಸಿದರು. ಬಿಜೆಪಿಗೆ ಪಕ್ಷಕ್ಕೆ ಸಂವಿಧಾನದ ಮೇಲೆ ಬದ್ಧತೆ ಇದ್ದಿದ್ದರೆ ಅಕ್ರಮ, ಭ್ರಷ್ಟಾಚಾರವೆಸಗಿದವರ ಮೇಲೆ ಕ್ರಮಕೈಗೊಂಡಿಲ್ಲವೇಕೆ? ಎಂದು ಪ್ರಶ್ನಿಸಿದ ಉಗ್ರಪ್ಪ, ಇವರದು ಕಮೀಷನ್‌ ರಾಜಕಾರಣನಾ, ಅಡ್ಜಸ್‌ಮೆಂಟ್‌ ರಾಜಕಾರಣನಾ ಅಥವಾ ಕಿಕ್‌ ಬ್ಯಾಕ್‌ ರಾಜಕಾರಣನಾ…? ವ್ಯಂಗ್ಯವಾಡಿದರು.

ಹಿಂದಿನ ಕಾಂಗ್ರೆಸ್‌ ಸರ್ಕಾರವನ್ನು ಕಮೀಷನ್‌ ಸರ್ಕಾರ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಸರ್ಕಾರ ಎಷ್ಟು ಪರ್ಸೆಂಟ್‌ ಕಮೀಷನ್‌ ಸರ್ಕಾರ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದವರು ಆಪಾದಿಸಿದರು. ಬಿಜೆಪಿಯವರು ಭ್ರಷ್ಟಾಚಾರವನ್ನು ಒಪ್ಪುವುದಾದರೆ ಸಿಎಂ ಯಡಿಯೂರಪ್ಪರನ್ನು ಮುಂದುವರೆಸಿ. ಅಥವಾ ಭ್ರಷ್ಟಾಚಾರ ವಿಷಯದಲ್ಲಿ ರಾಜೀಯಾಗಲ್ಲ ಎನ್ನುವುದಾದರೆ ಮುಖ್ಯಮಂತ್ರಿಗಳು ಯಾವ ಕಾರಣದಿಂದ ಮುಂದುವರೆಯುತ್ತೀರಿ ಎಂಬುದಕ್ಕೆ ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರೇ ಉತ್ತರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next