Advertisement

9ಕ್ಕೆ ಯಾತ್ರಾ ಪರ್ವ ಯೋಜನೆ ಆರಂಭ

02:31 PM Apr 05, 2022 | Team Udayavani |

ಬಾಗಲಕೋಟೆ: ಬಸವಕಲ್ಯಾಣ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಯಾತ್ರಾ ವಿಶೇಷ ಯೋಜನೆ ರೂಪಿಸಿದ್ದು, ಬಸವ ಕಲ್ಯಾಣದ ಥೇರ ಮೈದಾನದಲ್ಲಿ ಏ.9ರಂದು ಬೆಳಗ್ಗೆ 9 ಗಂಟೆಗೆ ಯಾತ್ರಾ ಪರ್ವ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಕಲಬುರಗಿ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಅಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ (ಸೇಡಂ) ಹೇಳಿದರು.

ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ಪ್ರವಾಸೋದ್ಯಮ ಹಬ್‌ ರಚನೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವರು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, 50 ಸಾವಿರ ಜನ ಆಗಮಿಸುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾತ್ರಿಗಳಿಗೆ ಊಟ, ವಸತಿ, ವಚನಗಳ ತರಬೇತಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಪರಿಕಲ್ಪ ಮಾಡಲಾಗಿದೆ. ಆದರೆ ವಚನಗಳನ್ನು ಆಧರಿಸಿ, ಶರಣರ ಪರಂಪರೆ ಉಳಿವಿಗಾಗಿ ಬಸವಕಲ್ಯಾಣದಲ್ಲಿ ವಿಶೇಷ ರೀತಿಯಲ್ಲಿ ಅನುಭವ ಮಂಟಪ ಸರ್ಕಾರದಿಂದ ನಿರ್ಮಿಸಲಾಗುತ್ತಿದೆ. 8 ಕಿ.ಮೀ ವ್ಯಾಪ್ತಿಯ ಚಾಲುಕ್ಯರ ಕೋಟೆ, ಶರಣ ನುಲಿಯ ಚಂದಯ್ಯನವರ ಗವಿಗಳು, ಬಸವ ಮಹಾಮನೆ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿವೆ. ಅವುಗಳನ್ನು ನಮ್ಮ ಸಂಸ್ಥೆಯಿಂದ 220 ಕೋಟಿ ರೂ. ದೇಣಿಗೆ ಸಂಗ್ರಹಿಸಿ ಅಭಿವೃದ್ಧಿಪಡಿಸಿ ಯಾತ್ರಾ ಸ್ಥಳಗಳಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು.

Advertisement

ನೂತನ ಅನುಭವ ಮಂಟಪ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ 500 ಕೋಟಿ ರೂ. ಯೋಜನೆ ರೂಪಿಸಿದ್ದು, ಈಗಾಗಲೇ 200 ಕೋಟಿ ಕಾಮಗಾರಿ ಟೆಂಡರ್‌ ಹಂತದಲ್ಲಿದೆ. ಬಸವ ಕಲ್ಯಾಣದಲ್ಲಿರುವ 6 ಸಾವಿರ ಜನ ಸೇರುವ ಸಭಾಭವನ ಸಾಮಾಜ ಪರಿವರ್ತನ ಕಾರ್ಯಕ್ಕೆ ಭರ್ತಿಯಾಗಿಲ್ಲ. 29 ಪ್ರೇಕ್ಷಣೀಯ ಸ್ಥಳಗಳು ಇದ್ದರೂ ಜನರಿಗೆ ಅರಿವು ಇಲ್ಲ. ಈ ಎಲ್ಲ ಕಾರಣಕ್ಕೆ ಬಸವಕಲ್ಯಾಣವನ್ನು ಯಾತ್ರಾ ಸ್ಥಳವಾಗಿ ಮಾರ್ಪಡಿಸಲು ದೊಡ್ಡ ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಿವರಿಸಿದರು.

ಈ ವೇಳೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ|ವೀರಣ್ಣ ಚರಂತಿಮಠ, ವಿಜಯಪುರದ ಚಾಣಾಕ್ಯ ಕರಿಯರ್‌ ಅಕಾಡೆಮಿ ಮುಖ್ಯಸ್ಥ ಎನ್‌.ಎಂ. ಬಿರಾದಾರ, ಬಿವಿವಿ ಸಂಘದ ಗೌರವ ಅಧ್ಯಕ್ಷ ಮಹೇಶ ಅಥಣಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್‌. ಪಾಟೀಲ, ಹಾಲಿ ಸದಸ್ಯ ಕುಮಾರ ಯಳ್ಳಿಗುತ್ತಿ ಇತರರಿದ್ದರು. ಎಸ್‌.ಆರ್‌. ಮನಹಳ್ಳಿ ಸ್ವಾಗತಿಸಿದರು. ವಿಜಯಕುಮಾರ ಕಟಗಿಹಳ್ಳಿಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next