Advertisement

ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ; ಯಾಂತ್ರೀಕೃತ ಭತ್ತ ಬೇಸಾಯಕ್ಕೆ “ಯಂತ್ರಶ್ರೀ’

08:43 PM Nov 05, 2020 | mahesh |

ಉಡುಪಿ: ರೈತರ ಜೀವನಾಡಿಯಾಗಿರುವ ಕೃಷಿಯನ್ನು ಲಾಭದಾಯಕ, ರೈತಸ್ನೇಹಿಯಾಗಿ ಮಾಡುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು “ಯಂತ್ರಶ್ರೀ’ ಎಂಬ ಯಾಂತ್ರೀಕೃತ ಭತ್ತ ಬೇಸಾಯವನ್ನು ಪರಿಚಯಿಸಿದ್ದು, ಪ್ರಸ್ತುತ 97 ತಾಲೂಕುಗಳಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗಿದೆ.

Advertisement

ರಾಜ್ಯದಲ್ಲಿ 15.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೇಸಾಯ ಮಾಡಲಾಗುತ್ತಿದ್ದು, ಈ ಹಿಂದೆ ರಾಜ್ಯದ ಬಹಳಷ್ಟು ಪ್ರದೇಶಗಳಲ್ಲಿ ಭತ್ತ ಕೃಷಿಯಲ್ಲಿ ನಷ್ಟ ಉಂಟಾಗುತ್ತಿತ್ತು. ಇದಕ್ಕೆ ಕೂಲಿಯಾಳುಗಳ ಕೊರತೆ, ಸಮರ್ಪಕವಾಗಿ ತಂತ್ರಜ್ಞಾನಗಳನ್ನು ಅನುಸರಿಸದಿರುವುದು ಮತ್ತು ಲೆಕ್ಕಾಚಾರ ಇಟ್ಟು ಕೊಳ್ಳದಿರುವುದೇ ಕಾರಣವಾಗಿದ್ದವು. ಆದರೆ ಈಗ ರಾಜ್ಯದ 164 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಬಾಡಿಗೆ ಆಧಾರಿತ ಸೇವಾ ಕೇಂದ್ರವು ಸರಿಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ರೈತರಿಗೆ ಸುಲಭ ದರದಲ್ಲಿ ಬಾಡಿಗೆಗೆ ಲಭ್ಯವಾಗುತ್ತಿದೆ.

ಕ್ರಾಂತಿಕಾರಕ ಬದಲಾವಣೆ
ಮುಂದಿನ 3 ವರ್ಷಗಳಲ್ಲಿ ಭತ್ತ ಬೇಸಾಯದ ಕುರಿತಾಗಿ ರಾಷ್ಟ್ರದಲ್ಲಿಯೇ ಕ್ರಾಂತಿಕಾರಕ ಬದಲಾವಣೆ ತರುವ ಉದ್ದೇಶ ಹೊಂದಲಾಗಿದೆ. ಇದಕ್ಕೆ
ಹೆಚ್ಚಿನ ಬಲ ಬರಬೇಕಾದರೆ ಹಾಗೂ ಯಶಸ್ವಿಗೊಳಿಸ ಬೇಕಾದರೆ ಆಯಾ ತಾಲೂಕಿನಲ್ಲಿ ಉತ್ಸಾಹಿ ಹಾಗೂ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯುವ ಪಡೆ ತಯಾರಿ ಮಾಡಿ ಆ ಮೂಲಕ ಯಾಂತ್ರೀಕೃತ ಭತ್ತ ಬೇಸಾಯದ ಅನುಕೂಲತೆ ಹೆಚ್ಚಿನ ರೈತರಿಗೆ ಸಿಗಬೇಕು ಎಂಬ ಉದ್ದೇಶವಿದೆ.

ಯುವ ಕೃಷಿಕರ ತಂಡ
“ಯಂತ್ರಶ್ರೀ ಯೋಧರು’ ಎಂಬ ಯುವ ಕೃಷಿಕರ ತಂಡವನ್ನು ಆಯಾ ಗ್ರಾಮ ಮಟ್ಟದಲ್ಲಿ ಆಯ್ಕೆ ಮಾಡಿ ಅವರಿಗೆ ನಿರಂತರ ತರಬೇತಿ, ತಾಂತ್ರಿಕ ಮಾಹಿತಿ ನೀಡಿ ಭತ್ತ ಬೇಸಾಯದಲ್ಲಿ ಇನ್ನಷ್ಟು ಬದಲಾವಣೆ ತರುವ ಪ್ರಯತ್ನ ಮಾಡಲಾಗುತ್ತದೆ. ಇದಕ್ಕಾಗಿ “ಯಂತ್ರಶ್ರೀ ಯೋಧರು’ ಭತ್ತ ಬೇಸಾಯದ ನಾಟಿಯಿಂದ ಕಟಾವಿನ ತನಕ ಸಂಪೂರ್ಣ ಯಾಂತ್ರೀಕರಣದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಾವಯವ ಕೃಷಿಗೆ ಪೂರಕವಾದ ಹಸುರೆಲೆ ಗೊಬ್ಬರ ಬಳಕೆ, ಸಕಾಲದಲ್ಲಿ ರೈತರ ಸಮಸ್ಯೆಗೆ ಮಾಹಿತಿ ನೀಡಲಿದ್ದಾರೆ. ಕೃಷಿ ಯಂತ್ರೋಪಕರಣ ಸಕಾಲದಲ್ಲಿ ನೀಡುವಿಕೆ, ರೈತರ ನೋಂದಣಿ, ಕನಿಷ್ಠ ಓರ್ವ ಯೋಧ 50 ರಿಂದ 75 ಎಕ್ರೆ ಪ್ರದೇಶದಲ್ಲಿ ಭತ್ತ ಬೇಸಾಯ ಮಾಡುವ ರೈತರ ಆಯ್ಕೆ ಮುಂತಾದ ವಿಚಾರಗಳೊಂದಿಗೆ ತಾಂತ್ರಿಕ ಮಾಹಿತಿಗಳನ್ನು ರೈತರಿಗೆ ನೀಡುವ ಮೂಲಕ ಅವರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿ ಹಾಗೂ ಕೃಷಿಯಲ್ಲಿ ಇನ್ನೂ ಹೆಚ್ಚಿನ ಆದಾಯಗಳಿಸುವಲ್ಲಿ ಯೋಧರು ಶ್ರಮಿಸುತ್ತಾರೆ. ಯೋಧರಿಗೆ ಯೋಜನೆಯಿಂದ ಪ್ರೋತ್ಸಾಹಧನವನ್ನೂ ನೀಡಲಾಗುತ್ತದೆ.

ಜಿಲ್ಲೆಯ ಹಡಿಲು ಬಿದ್ದ ಪ್ರದೇಶದಲ್ಲೂ ಅನುಷ್ಠಾನ
ಯಾಂತ್ರೀಕೃತ ಭತ್ತ ಬೇಸಾಯವನ್ನು ಉಡುಪಿ ಜಿಲ್ಲೆಯಾದ್ಯಂತ ಪ್ರಸ್ತುತ ಮುಂಗಾರಿನಲ್ಲಿ ಅನುಷ್ಠಾನಗೊಳಿಸಲಾಗಿದೆ. 6 ತಾಲೂಕುಗಳ 1920 ಎಕ್ರೆ ಪ್ರದೇಶಗಳಲ್ಲಿ ಹಾಗೂ ವಿಶೇಷವಾಗಿ ಹಡಿಲು ಬಿದ್ದಿರುವ 827 ಎಕ್ರೆ ಪ್ರದೇಶಗಳಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಯಾಂತ್ರೀಕೃತ ಭತ್ತ ಬೇಸಾಯ ಮಾಡಿದ ರೈತರು ಈಗಾಗಲೇ ಉತ್ತಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

Advertisement

ಗ್ರಾ.ಪಂ. ಮಟ್ಟದಲ್ಲಿ ತಂಡ
ಯುವ ಸಮುದಾಯ ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು ಎನ್ನುವ ಉದ್ದೇಶವನ್ನು ಹೊಂದಲಾಗಿದೆ. ಇದಕ್ಕಾಗಿ ಪ್ರತೀ ಗ್ರಾ.ಪಂ.ಮಟ್ಟದಲ್ಲಿ ಉತ್ಸಾಹಿ ಯೋಧರ ತಂಡವನ್ನು ಮಾಡಲಾಗುತ್ತದೆ. ಈಗಾಗಲೇ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಮುಂದಿನ ವರ್ಷದಿಂದ ಮತ್ತಷ್ಟು ಉತ್ತಮ ಇಳುವರಿಯ ನಿರೀಕ್ಷೆಯನ್ನು ಇಟ್ಟುಕೊಂಡು ಕಾರ್ಯಾಚರಿಸಲಾಗುವುದು.
-ಗಣೇಶ್‌ ಬಿ., ಹಿರಿಯ ನಿರ್ದೇಶಕರು, ಧ.ಗ್ರಾ.ಯೋಜನೆ, .ಬಿ.ಸಿ. ಟ್ರಸ್ಟ್‌ , ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next