Advertisement

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

09:44 PM Sep 14, 2024 | Team Udayavani |

ಬಾಲ್ಯದಲ್ಲೇ ಯಕ್ಷ ರಂಗವನ್ನು ಪ್ರವೇಶಿಸಿ ಸರಿಸುಮಾರು ಆರೂವರೆ ದಶಕಗಳ ಕಾಲ ಯಕ್ಷಗಾನ ಮೇಳಗಳಲ್ಲಿ ತಿರುಗಾಟ ನಡೆಸಿದ 80ರ ಹರೆಯದ ಹಿರಿಯ ಕಲಾವಿದ ಶಿವರಾಮ ಜೋಗಿ ಬಿ.ಸಿ.ರೋಡು ಅವರು ಹತ್ತು ಹಲವು ಯಕ್ಷ ದಿಗ್ಗಜರ ಒಡನಾಟದೊಂದಿಗೆ ಮೇರು ಕಲಾವಿದರಾಗಿ ಗುರುತಿಸಿಕೊಂಡವರು. ಸುರತ್ಕಲ್‌ ಮೇಳದಲ್ಲಿ ಬರೋಬ್ಬರಿ 40 ವರ್ಷಗಳ ಕಾಲ ತಿರುಗಾಟ ನಡೆಸಿದ ಹೆಗ್ಗಳಿಕೆಯನ್ನು ಹೊಂದಿರುವ ಇವರು ಪ್ರಸ್ತುತ ಬಿ.ಸಿ.ರೋಡಿನ ಪೂಂಜೆರೆಕೋಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

Advertisement

1941ರಲ್ಲಿ ಜನಿಸಿದ ಶಿವರಾಮ ಜೋಗಿಯವರು 13ನೇ ವಯಸ್ಸಿನಲ್ಲಿ ಯಕ್ಷಗಾನ ಪ್ರವೇಶಿಸಿದ್ದು, ಕುಡಾನ ಗೋಪಾಲಕೃಷ್ಣ ಭಟ್‌ ಅವರು ತನ್ನ ಯಕ್ಷಗಾನದ ಗುರುಗಳೆಂದು ಹೆಮ್ಮೆಯಿಂದ ಹೇಳುತ್ತಾರೆ. ಪ್ರಾರಂಭದಲ್ಲಿ ಕೂಡ್ಲು ಹಾಗೂ ಮೂಲ್ಕಿ ಮೇಳದಲ್ಲಿ ಒಂದೆರಡು ವರ್ಷಗಳ ಕಾಲ ತಿರುಗಾಟ ನಡೆಸಿ ಬಳಿಕ ಸುರತ್ಕಲ್‌ ಮೇಳಕ್ಕೆ ಸೇರ್ಪಡೆಗೊಂಡಿದ್ದರು. ಅಲ್ಲಿ 4 ದಶಕಗಳ ಕಾಲ ತಿರುಗಾಟ ನಡೆಸಿ, ಹನುಮಗಿರಿ ಮೇಳದಲ್ಲಿ 14 ವರ್ಷ, ಎಡನೀರು, ಮಂಗಳಾದೇವಿ, ಕರ್ನಾಟಕ ಮೊದಲಾದ ಮೇಳಗಳ ಸಹಿತ ಒಟ್ಟು 65 ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ.

ಪ್ರಾರಂಭದಲ್ಲಿ ಕೃಷ್ಣ, ಪರಶುರಾಮ, ಅಭಿಮನ್ಯು, ಬಬ್ರುವಾಹನ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು ಬಳಿಕ ಕರ್ಣ, ಅರ್ಜುನ, ಕಂಸ, ಹಿರಣ್ಯಕಶ್ಯಪ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು. ಇವರಿಗೆ 2017ರಲ್ಲಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು, ಉಳಿದಂತೆ ಶೇಣಿ ಪ್ರಶಸ್ತಿ, ಡಾ| ಕಿಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಉಡುಪಿ ಮಠದ ಪ್ರಶಸ್ತಿ, ಎಡನೀರು ಮಠದ ಪ್ರಶಸ್ತಿ ಮೊದಲಾದ ಹತ್ತಾರು ಪ್ರಶಸ್ತಿ, ಸಮ್ಮಾನಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ನೀವು ಯಕ್ಷಗಾನದಲ್ಲಿ ತೊಡಗಿಕೊಂಡ ಹಿನ್ನೆಲೆ ಏನು?
ಕಾಂಚನದಲ್ಲಿ ಶಾಲೆಗೆ ಹೋಗುವ ಸಂದರ್ಭ ಸಾಕಷ್ಟು ಯಕ್ಷಗಾನದವರ ಒಡನಾಟವಿತ್ತು. ಜತೆಗೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದುದರಿಂದ ಯಕ್ಷಗಾನಕ್ಕೆ ಹೋದರೆ ಬದುಕುಬಹುದು ಎಂಬ ಯೋಚನೆ ನನ್ನದಾಗಿತ್ತು. ಆಗ ನಮ್ಮ ಮನೆಯ ಪಕ್ಕ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಶಿಯವರ ಮನೆ ಇತ್ತು. ಅವರ ಮೂಲಕ ಕೂಡ್ಲು ಮೇಳಕ್ಕೆ ಬಾಲನಟನಾಗಿ ಸೇರಿಕೊಂಡೆ. ಆಗ ಶೇಣಿಯವರ ಹರಿಶ್ಚಂದ್ರನಿಗೆ ಜತೆಯಾಗಿ ತಾನು ಲೋಹಿತಾಶ್ವ ಪಾತ್ರ ಮಾಡಿದೆ. ಹೀಗೆ ಯಕ್ಷಗಾನದ ಪಯಣ ಆರಂಭಗೊಂಡು ಬಳಿಕ ದಿಗ್ಗಜ ಕಲಾವಿದರ ಒಡನಾಟದ ಫಲವಾಗಿ ಕಲಾವಿದನಾಗಿ ಬೆಳೆಯುವುದಕ್ಕೆ ಅನುಕೂಲವಾಯಿತು.

ಯಕ್ಷ ಪಯಣದಲ್ಲಿ ನೀವು ಇಷ್ಟಪಟ್ಟ ಪಾತ್ರ ಯಾವುದು?
ಕಂಸ, ಹಿರಣ್ಯಕಶ್ಯಪ ನಾನು ಹೆಚ್ಚು ಇಷ್ಟಪಟ್ಟ ಪಾತ್ರಗಳು. ಗುರು ಪುತ್ತೂರು ನಾರಾಯಣ ಹೆಗ್ಡೆ ಅವರು ಈ ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದರು. ಇದನ್ನು ನೋಡಿ ನನ್ನ ಮನಸ್ಸಿನಲ್ಲಿ ಈ ಪಾತ್ರಗಳು ಅಚ್ಚೊತ್ತಿ ಹೋಗಿತ್ತು. ಬಳಿಕ ಅವರ ಶೈಲಿಯನ್ನೇ ಯಥಾವತ್ತಾಗಿ ಅನುಸರಿಸಿ ಈ ಪಾತ್ರಗಳನ್ನು ನಾನು ಕೂಡ ನಿರ್ವಹಿಸಲಾರಂಭಿಸಿದೆ. ನನ್ನ ಈ ಪಾತ್ರಗಳನ್ನು ಜನರು ಕೂಡ ಮೆಚ್ಚಿದ್ದರು. ಜತೆಗೆ ಅದು ನನ್ನ ಮನಸ್ಸಿಗೂ ನೆಮ್ಮದಿಯನ್ನು ನೀಡಿತ್ತು.

Advertisement

ಯಕ್ಷಗಾನದಲ್ಲಿ ಕೆಲವೊಂದು ಹಾಸ್ಯಗಳಿಗೆ ಪ್ರಸ್ತುತ ಬರುತ್ತಿರುವ ಟೀಕೆಗಳ ಕುರಿತು ನಿಮ್ಮ ಅಭಿಪ್ರಾಯವೇನು?
ಈಗಿನ ಹಾಸ್ಯದ ಕುರಿತು ಟೀಕೆಗಳು ಇರುವುದು ಸತ್ಯ. ಹಿಂದಿನ ಮೇರು ಕಲಾವಿದರ ಹಾಸ್ಯಗಳನ್ನು ನೋಡಿದವರಿಗೆ ಈಗಿನದ್ದನ್ನು ನೋಡುವಾಗ ಅಯ್ಯೋ ಅನಿಸಬಹುದು. ಈಗ ಅದೊಂದು ಬೇರೇಯೇ ಆಗಿ ಕಾಣುತ್ತದೆ. ಹಾಗೆಂದು ಅದನ್ನು ಈಗಿನ ಕಲಾವಿದರ ತಪ್ಪೆಂದು ಕೂಡ ಹೇಳುವಂತಿಲ್ಲ. ಯಾಕೆಂದರೆ ಈಗಿನ ಪ್ರೇಕ್ಷಕ ಏನು ಬಯಸುತ್ತಾನೋ, ಅದನ್ನು ಅವರು ನೀಡುತ್ತಾರೆ. ಆದರೆ ಪಾತ್ರ ನಿರ್ವಹಣೆ, ಸಂಭಾಷಣೆ ವೇಳೆ ಕಲಾವಿದನಾದವ ಯಕ್ಷಗಾನ ಕಲೆಗೆ ಚ್ಯುತಿ ಬಾರದಂತೆ ಎಚ್ಚರ ವಹಿಸುವುದು ಬಲುಮುಖ್ಯ.

ಯಕ್ಷಗಾನದ ಮೇಳಗಳ ಬದಲಾವಣೆಯ ಕುರಿತು ಏನು ಹೇಳುತ್ತೀರಿ?
ಹಿಂದಿನ ಟೆಂಟಿನ ಮೇಳಗಳು ಹೌಸ್‌ಫ‌ುಲ್‌ ಆಗುತ್ತಿದ್ದವು. ಆದರೆ ಬಳಿಕದ ದಿನಗಳಲ್ಲಿ ಟೆಂಟಿನ ಮೇಳಗಳಿಗೆ ಕಲೆಕ್ಷನ್‌ ಇಲ್ಲದೆ ಅದನ್ನು ಕೇಳುವವರೇ ಇಲ್ಲವಾಯಿತು. ಈಗ ಬರೀ ಬಯಲಾಟಗಳಿಗೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಮೇಳಗಳ ಸಂಖ್ಯೆಯಲ್ಲಿ ಕಡಿಮೆಯಾಗುವ ಸಾಧ್ಯತೆಯೂ ಇರಬಹುದು. ಕಲಾವಿದರೂ ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಯಕ್ಷಗಾನದ ಆಯಾಮ ಬದಲಾಗುತ್ತಲೇ ಹೋಗುತ್ತಿದೆ.

ಕಾಲಮಿತಿ ಪ್ರಯೋಗದ ಬಗ್ಗೆ ನಿಮ್ಮ ಅಭಿಪ್ರಾಯ?
ಕಾಲಾಯ ತಸ್ಮೈ ನಮಃ ಎನ್ನುವ ಹಾಗೆ ಕಾಲ ಬದಲಾಗುತ್ತಾ ಸಾಗುತ್ತದೆ. ರಾತ್ರಿ 12 ಗಂಟೆಯ ಬಳಿಕ ಯಕ್ಷಗಾನ ನೋಡುವುದಕ್ಕೆ ಜನವೇ ಇಲ್ಲ ಎಂದಾದರೆ ಖಾಲಿ ಕುರ್ಚಿಗಳಿಗೆ ಪ್ರದರ್ಶನ ನೀಡಬೇಕಾದ ಸ್ಥಿತಿ ಇದೆ. ಹೀಗಿರುವಾಗ ಈ ಕಾಲಕ್ಕೆ ಕಾಲಮಿತಿ ಸರಿ ಎಂಬ ಅಭಿಪ್ರಾಯವಿದೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆ ರೀತಿಯ ಬದಲಾವಣೆಗಳು ಕೂಡ ನಡೆಯಬಹುದು. ಎಲ್ಲವೂ ಕಾಲದ ಮಹಿಮೆ ಎನ್ನಬಹುದು.

ಹೊಸ ಕಲಾವಿದರಿಗೆ ನಿಮ್ಮ ಕಿವಿಮಾತೇನು?
ಹಿಂದಿನ ಕಾಲಘಟ್ಟದಲ್ಲಿ ಶ್ರೇಣಿ, ಸಾಮಗರಂತಹ ಶ್ರೇಷ್ಠ ಕಲಾವಿದರಿದ್ದು, ಯುವ ಕಲಾವಿದರು ಅವರನ್ನು ನೋಡಿ ಕಲಿಯುತ್ತಿದ್ದರು. ಯಕ್ಷಗಾನದಲ್ಲಿ ಓದಿ ಕಲಿಯುವುದಕ್ಕಿಂತಲೂ ನೋಡಿ ಕಲಿಯುವುದು ಬಹಳಷ್ಟಿದೆ. ಆದರೆ ಈಗಿನ ವ್ಯವಸ್ಥೆ ಹೇಗಾಗಿದೆ ಎಂದರೆ, ತಮ್ಮ ಪಾತ್ರದ ಸಮಯಕ್ಕೆ ಹೋಗುತ್ತಾರೆ, ಪಾತ್ರ ನಿರ್ವಹಿಸಿ ಬರುತ್ತಾರೆ. ಹಿಂದೆ ಏನಾಗಿದೆ, ಮುಂದೆ ಏನಾಗುತ್ತದೆ ಎಂಬುದು ಕಲಾವಿದರಿಗೆ ಗೊತ್ತೇ ಇಲ್ಲದಾಗಿದೆ. ಈಗಲೂ ಉತ್ತಮ ಪ್ರೌಢಿಮೆಯ ಕಲಾವಿದರು ಇದ್ದಾರೆ, ಆದರೆ ವ್ಯವಸ್ಥೆಗಳು ಬದಲಾಗಿರುವುದರಿಂದ ಕಿರಿಯ ಕಲಾವಿದ ತನ್ನ ಸಮಯಕ್ಕೆ ಹೋದರೆ ಅವರಿಂದ ಕಲಿಯುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಜತೆಗೆ ಒಬ್ಬ ಕಲಾವಿದನಿಗೆ ಹೇಳುವಷ್ಟು ಜ್ಞಾನ ನನ್ನ ಬಳಿಯೂ ಇದೆ ಎಂದು ನಾನು ಹೇಳುವುದಿಲ್ಲ.

ಯಕ್ಷ ಪಯಣ ನಿಮಗೆ ನೆಮ್ಮದಿ ನೀಡಿದೆಯಾ?
ನನ್ನ ಯಕ್ಷಗಾನ ಪಯಣದ ಬಗ್ಗೆ ತೃಪ್ತಿ ಇದೆ. ಇಷ್ಟು ಸಮಯ ಉತ್ತಮ ರೀತಿಯಲ್ಲಿ ಜೀವನ ಸಾಗಿದೆ. ಮುಂದೆ ಏನು ಎಂಬುದು ಗೊತ್ತಿಲ್ಲ. ಉಳಿದಂತೆ ಕಲಾವಿದನಾಗಿದ್ದ ಸಂದರ್ಭ ನಾನು ಯಾವುದೇ ವಿಚಾರಕ್ಕೂ ತಲೆಕೆಡಿಸಿಕೊಂಡವನಲ್ಲ. ಹೀಗಾಗಿ ಯಕ್ಷಗಾನದ ಕುರಿತು ಯಾವತ್ತೂ ಬೇಸರಪಟ್ಟಿಲ್ಲ. ಕುಟುಂಬದವರ ಸಹಕಾರವನ್ನೂ ಹೆಚ್ಚು ಬಯಸ್ಸಿಲ್ಲ. ಹೀಗಾಗಿ ಅವರಿಂದಲೂ ಯಾವುದೇ ತೊಂದರೆಯಾಗಿಲ್ಲ. ಈಗ ನೆಮ್ಮದಿಯ ಜೀವನ ಇದೆ ಎಂಬುದಷ್ಟೇ ಹೇಳಬಲ್ಲೆ.

ಓರ್ವ ಪರಿಪೂರ್ಣ ಕಲಾವಿದ ಹೇಗಿರಬೇಕು.?
ಯಾರನ್ನೂ ಕೂಡ ಪರಿಪೂರ್ಣ ಕಲಾವಿದ ಎಂದು ಹೇಳುವುದು ಅಸಾಧ್ಯ. ಒಬ್ಬೊಬ್ಬರಲ್ಲಿ ಒಂದೊಂದು ವ್ಯತ್ಯಾಸಗಳಿರುತ್ತವೆ. ಒಬ್ಬರು ನಾಟ್ಯ ಉತ್ತಮವಾಗಿ ಮಾಡಿದರೆ ಅರ್ಥ ಹೇಳುವುದು ಸರಿ ಇಲ್ಲದೇ ಇರಬಹುದು, ಅರ್ಥ ಸರಿಯಾಗಿದ್ದರೆ ನಾಟ್ಯದಲ್ಲಿ ವ್ಯತ್ಯಾಸ ಇರಬಹುದು. ಹೀಗೆ ನಾಟ್ಯ, ಅರ್ಥ, ಭಾವನೆ, ವೇಷಗಾರಿಕೆ, ಸಹ ಕಲಾವಿದರ ಜತೆ ಹೊಂದಾಣಿಕೆ, ಹಿಮ್ಮೇಳ-ಮುಮ್ಮೇಳ ವ್ಯತ್ಯಾಸಗಳೆಲ್ಲ ಇರುತ್ತವೆ. ಹೀಗಾಗಿ ಓರ್ವ ಕಲಾವಿದನ್ನು ಪರಿಪೂರ್ಣ ಎಂದು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟಸಾಧ್ಯ.

ಭಾಷೆ-ಸಾಹಿತ್ಯದ ಬೆಳವಣಿಗೆಗೆ ಯಕ್ಷಗಾನ ಹೇಗೆ ಪೂರಕ?
ಸಾಹಿತ್ಯ ಎನ್ನುವುದಕ್ಕಿಂತಲೂ ಕನ್ನಡ ಭಾಷೆಯ ಬೆಳವಣಿಗೆಗೆ ಯಕ್ಷಗಾನದಿಂದ ಉತ್ತಮ ಕೊಡುಗೆ ಸಿಕ್ಕಿದೆ. ಇಂದು ಕನ್ನಡ ಬಹಳ ಶುದ್ಧವಾಗಿ ಬಳಕೆಯಾಗುವುದು ಅದು ಯಕ್ಷಗಾನದಲ್ಲಿ ಮಾತ್ರ. ಉಳಿದ ಯಾವುದೇ ಕ್ಷೇತ್ರದಲ್ಲಿ ನೋಡಿದರೆ ಕನ್ನಡದ ಜತೆಗೆ ಆಂಗ್ಲ ಅಥವಾ ಇತರ ಭಾಷೆಗಳ ಬಳಕೆಯನ್ನು ಕಾಣುತ್ತಿದ್ದೇವೆ. ಆದರೆ ಯಕ್ಷಗಾನದ ಸಂಭಾಷಣೆಯ ಸಂದರ್ಭ ಬರೀ ಕನ್ನಡವನ್ನೇ ಕಾಣಬಹುದು.

ಸರಕಾರ ಮಾಸಾಶನ ಹೆಚ್ಚಿಸಲಿ
ಸರಕಾರವು ನಿವೃತ್ತ ಕಲಾವಿದರಿಗೆ ಮಾಸಾಶನವಾಗಿ 2 ಸಾವಿರ ರೂ. ನೀಡುತ್ತಿದ್ದು, ಇದು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಅದನ್ನು ಹೆಚ್ಚು ಮಾಡಬೇಕು ಎನ್ನುವುದು ನನ್ನ ವಿನಂತಿ. ಈ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳು, ನಾಯಕರು ಗಮನಹರಿಸಿ ನಿವೃತ್ತ ಕಲಾವಿದರಿಗೆ ನೀಡಲಾಗುತ್ತಿರುವ ಮಾಸಾಶನವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹೇರಬೇಕು ಎನ್ನುವುದು ನನ್ನ ಮನವಿ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next